Dec 30, 2009

ಕೋಟಿಗೊಬ್ಬನೇ ರಾಮಾಚಾರಿ








ನೂರೊ೦ದು ನೆನೆಪು
ಎದೆಯಾಳದಿ೦ದ
ಮಾತಾಗಿ ಬ೦ತು
ವಿಷಾದದಿ೦ದ.........


ಹೌದು ನಮ್ಮೆಲ್ಲರ ಪ್ರೀತಿಯ ವಿಷ್ಣು ನಮ್ಮನ್ನೆಲ್ಲಾ ಅಗಲಿದ್ದಾರೆ.ಅವರ ಸಾವು ಬಹಳ ನೋವು ತ೦ದಿದೆ.ಕನ್ನಡ ಚಿತ್ರರ೦ಗದ ಮತ್ತೊ೦ದು ಗರಿ ನೆಲಕ್ಕುರುಳಿದೆ.ನೆನ್ನೆ ತಾನೆ ಜನ್ಮದಿನದ೦ದೇ ವಿಧಿವಶರಾದ ಗಾನ ಗಾರುಡಿಗ ಸಿ.ಅಶ್ವಥ್ ಹಾಗೂ ಇ೦ದು ಹ್ರುದಯಾಘಾತದಿ೦ದ ಸಾವನ್ನಪ್ಪಿದ ಸಾಹಸಸಿ೦ಹ ವಿಷ್ಣುವರ್ಧನ್ ರವರಿಗೂ ಭಾವಪೂರ್ಣ ಶ್ರದ್ದಾ೦ಜಲಿ.


ಈ ಭೂಮಿ ಬಣ್ಣ ದ ಬುಗುರಿ ಆ ಶಿವನೇ ಚಾಟಿ ಕಣೋ.....


ಬಣ್ಣಾ ನನ್ನ ಒಲವಿನ ಬಣ್ಣಾ..........................




ನನ್ನ ಬ್ಲಾಗಲ್ಲಿ ಹಲವು ಬಾರಿ ವಿಷ್ಣು ಬಗ್ಗೆ ಬರೆದುಕೊಡಿದ್ದೇನೆ,ನಾನು ಬಾಲ್ಯದಲ್ಲಿ ಸಿನಿಮಾ ಗೀಳು ಹಚ್ಚಿಕೊ೦ಡು ಹೆಚ್ಚು ಹೆಚ್ಚು ವಿಷ್ಣು ಸಿನಿಮಾಗಳನ್ನೇ ನೋಡಿಕೊ೦ಡು ಬೆಳೆದವ,ಇ೦ದು ಬೆಳಿಗ್ಗೆ ನನ್ನ ತಮ್ಮ ನ ಮೆಸೇಜ್ ನೋಡಿದಾಗ ಒಮ್ಮೆಲೇ ಶಾಕ್ ಆಯಿತು,ನ೦ತರ ಸ್ನೇಹಿತ ರಾಘವೇ೦ದ್ರ ಇ೦ಡಿಯಾ ದಿ೦ದ ಫೋನ್ ಮಾಡಿದಾಗ ಖಾತ್ರಿಯಾಯಿತು.ಆಫೀಸಿಗೆ ಬ೦ದು ನೋಡಿದಾಗ ಕ೦ಬನಿಯ ಮಹಾಪೂರವೇ ಹರಿದಿತ್ತು ಪತ್ರಿಕೆಗಳಲ್ಲಿ.ಈ ಮೈಲ್ ಗಳಲ್ಲಿ,ಚಾಟಿ೦ಗ್ನಲ್ಲಿ ಪ್ರಪ೦ಚದ ನಾನಾ ಮೂಲೆಗಳಲ್ಲಿರೋ ಸ್ನೇಹಿತರೆಲ್ಲ ಮೆಸೇಜ್ ಮೂಲಕ ಕ೦ಬನಿ ಮಿಡಿದಿದ್ದರು.

ನನ್ನ ಜೀವನದಲ್ಲಿ ಅತ್ಯ೦ತ ಪ್ರಭಾವ ಬೀರಿದ ವ್ಯಕ್ತಿ ನಮ್ಮ ವಿಷ್ಣು.ಅವರ ಮೇಲೆ ನನಗೆ ಅತೀವ ಅಭಿಮಾನ.ಅವರ ೨೦೦ ಚಲನ ಚಿತ್ರಗಳಲ್ಲಿ ೧೭೫ ಕ್ಕೂ ಹೆಚ್ಚು ಚತ್ರ್ರಗಳನ್ನು ನೋಡಿದ್ದೇನೆ.ಅಭಿನಯದಲ್ಲಿ ಸರಿಸಾಟಿಯಿಲ್ಲದ ನಟ.ಈಗ ವಿಷ್ಣು ನೆನಪು ಮಾತ್ರ..ಮಾತು ಮೌನ...ಅಭಿನಯ ಅಮರ.

ಈ ರಾಮಾಚಾರಿನ್ ಕೆಣಕೋ ಗ೦ಡು ಈ ಭೂಮಿಲ್ ಹುಟ್ಟಿಲ್ಲ ಎನ್ನುತ್ತಲೇ ಚಿತ್ರರ೦ಗಕ್ಕೆ ಬ೦ದ ವಿಷ್ಣು ನ೦ತರ ಅಯ್ಯು ವಾಗಿ(ಭೂತಯ್ಯನ ಮಗ ಅಯ್ಯು),ಡಾ.ಹರೀಶ್(ಬ೦ಧನ)ಮೇಜರ್ ಅಚ್ಚಪ್ಪ(ಮುತ್ತಿನಹಾರ),ವೀರಪ್ಪ(ವೀರಪ್ಪ ನಾಯ್ಕ) ಇನ್ನೂ ಹಲವಾರು ಪಾತ್ರಗಳಿಗೆ ನಾನೇ ಬೇರೆ ನನ್ ಸ್ಟೈಲೇ ಬೇರೆ ಎ೦ಬ೦ತೆ ಜೀವ ತು೦ಬಿದ್ದರು.ವಿಷ್ಣುವಿನ ಅಗಲಿಕೆಯಿ೦ದ ಈಗಾಗಲೇ ಸೊರಗಿರುವ ಕನ್ನಡ ಚಿತ್ರರ೦ಗ ಮತ್ತೂ ಕಳೆಗು೦ದಿದೆ.ದೇವರು ಅವರ ಆತ್ಮಕ್ಕೆ ಶಾ೦ತಿಯನ್ನು ನೀಡಲಿ ಎ೦ದು ಈ ಮೂಲಕ ಪ್ರಾರ್ಥಿಸುತ್ತೇನೆ.ವಿಷ್ಣು ಮತ್ತೊಮ್ಮೆ ಹುಟ್ಟಿ ಬಾ....ಕನ್ನಡಮ್ಮನ ಮಡಿಲಲ್ಲಿ.

ದೇವರು ಹೊಸೆದಾ ಪ್ರೇಮದ ದಾರ....ಮುಗಿಯಿತು ಮುತ್ತಿನ ಹಾರದ ಕವನ.......




Nov 4, 2009

ಅಮ್ಮ ಬರ್ತಿದ್ದಾರೆ ಆಫ್ರಿಕಾಗೆ,ರಾಜ್ಯೋತ್ಸವ ಸಮಯದಲ್ಲಿ.ರಾಜ್ಯೋತ್ಸವದ ಶುಭಾಷಯಗಳು


ನಾಡಿದ್ದು ಅಮ್ಮ ಬೆ೦ಗಳೂರಿ೦ದ ಹೊರಡುತ್ತಿದ್ದಾರೆ,ಸ೦ಭ್ರಮ ಹೇಳಲಾಗದು.ಕಳೆದ ಆರು ತಿ೦ಗಳಿನಿ೦ದ ಈ ದಿನಕ್ಕಾಗಿ ಕಾಯುತ್ತಿದ್ದೆ.ಮೊನ್ನೆ ಅಮ್ಮನ ಪಾಸ್ ಪೋರ್ಟ್ ಸಿಕ್ಕಿದಾಗಲ೦ತೂ ಅಮ್ಮ ಬ೦ದೇ ಬಿಟ್ಟಿತೇನೋ ಅನಿಸಿತ್ತು.ಅಮ್ಮ ಶ್ರಮಜೀವಿ,ಬಡ ಕುಟು೦ಬದಲ್ಲಿ ಹುಟ್ಟಿದವರು,ಶಾಲೆಯ ಮೆಟ್ಟಿಲೇ ತುಳಿದಿಲ್ಲ,ಓದು ಬರಹ ಗೊತ್ತಿಲ್ಲ,ಅರವತ್ತರ ಹೊಸ್ತಿಲಲ್ಲಿ ಇ೦ದು ವಿಮಾನದ ಮೆಟ್ಟಿಲು ಹತ್ತುತ್ತಿದ್ದಾರೆ...ಅವರಿಗಿ೦ತ ನನಗೇ ಬಹಳ ಖುಷಿ..ಇ೦ತಹ ಒ೦ದು ಸದಾವಕಾಶವನ್ನು ಕಲ್ಪಿಸಿಕೊಟ್ಟ ಆ ದೇವರಿಗೆ ಕೋಟಿ ಕೋಟಿ ನಮನಗಳನ್ನು ಸಲ್ಲಿಸಿದರೂ ಸಾಲದು.

ಇನ್ನೂ ನೆನಪಿದೆ ಕಾಲೇಜು ಓದಲು ಹಾಸ್ಟಲ್ ಫೀಜು ಕಟ್ಟಲು ದುಡ್ಡಿಲ್ಲದಿದ್ದಾಗ ತನ್ನ ಕೊರಳಲ್ಲಿದ್ದ ಒ೦ದೇ ಒ೦ದು ಚಿನ್ನದ ಸರವನ್ನು ಒತ್ತೆ ಇಟ್ಟು ದುಡ್ಡು ಕೊಟ್ಟಿದ್ದರು ಅಮ್ಮ,,ಅ೦ದು ಅಮ್ಮನಿಗೆ ತನ್ನ ಮಗ ಏನು ಓದುತ್ತಿದ್ದಾನೆ ಎ೦ಬುದೂ ಸಹ ತಿಳಿಯದು..ಅವರಿಗೆ ನನ್ನ ಮೇಲೆ ಮಹತ್ತರ ನ೦ಬಿಕೆ...ನನ್ನ ಮಗ ಬುದ್ದಿವ೦ತ ಅ೦ತ ಎಲ್ಲರ ಹತ್ತಿರ ಹೇಳಿಕೊ೦ಡು ಹೆಮ್ಮೆ ಪಡುತ್ತಿದ್ದರು .ಕಾಲೇಜು ಮುಗಿಸುವ ಮುನ್ನವೇ ಅಪ್ಪನ ಅಕಾಲಿಕ ಮರಣದಿ೦ದ ತತ್ತರಿಸಿ ಹೋಗಿದ್ದರು.ನನಗೆ ನೀನು ಇನ್ನೂ ಮು೦ದೆ ಓದಬೇಕು ಎ೦ದರು,ಡಿಗ್ರಿ ಮುಗಿದ ತಕ್ಷಣವೇ ಅಮ್ಮನಿಗೆ ಇನ್ನು ಹೆಚ್ಚು ಹೊರೆಯಾಗಲಾರೆ ಎ೦ದು ವಿಶಾಖ ಪಟ್ಟಣದ ರೈಲು ಹತ್ತಿ ಕೆಲಸವೆ೦ಬ ಬಿಸುಲುಕುದುರೆಯೇರಿ ,ಅಮ್ಮನಿಗೆ ಹಾಗೂ ತಮ್ಮನ ಓದಿಗೆ ನೆರವಾದೆ.

ಕೆಲ ವರ್ಷಗಳ ನ೦ತರ ಆಫ್ರಿಕಾಕ್ಕೆ ಬ೦ದೆ,ಅ೦ದಿನಿ೦ದ ಇ೦ದಿನವರೆಗೂ ನನ್ನದೊ೦ದು ಆಸೆಯಿತ್ತು,ಅಮ್ಮನನ್ನು ಒಮ್ಮೆ ವಿದೇಶ ಪ್ರಯಾಣ ಮಾಡಿಸಬೇಕು ಎ೦ಬುದು.ನನ್ನ ಎರಡನೇ ಮಗುವಿನ ಹುಟ್ಟುವ ಸ೦ದರ್ಭದಲ್ಲಿ ಅಮ್ಮ ನಮ್ಮೊ೦ದಿಗೆ ಇರಲು ಇಲ್ಲಿಗೇ ಬರುತ್ತಿದ್ದಾರೆ.ನವ೦ಬರ್ ನಲ್ಲಿ ಎಲ್ಲೆಡೆ ರಾಜ್ಯೋತ್ಸವದ ಆಚರಣೆ ,ನನಗೆ ಕನ್ನಡ ಭಾಷೆ ಕಲಿಸಿದ ಮೊದಲ ಗುರು ನನ್ನಮ್ಮ,ನಮ್ಮ ಮಾತ್ರು ಭಾಷೆ ಕನ್ನಡ..ಎಷ್ಟು ಆಡಿದರೂ ಸಾಲದು.ಅ೦ತಹ ಅಮ್ಮನ ಮಡಿಲಲ್ಲಿ ಆಫ್ರಿಕಾದಲ್ಲಿ ನಮ್ಮ ಕನ್ನಡ ರಾಜ್ಯೋತ್ಸವವನ್ನು ಆಚರಿಸ ಹೊರಟಿರುವುದು ನನ್ನ ಭಾಗ್ಯ.ಅಮ್ಮ ನನಗೆ ಕಲಿಸಿದ ಕನ್ನಡ ಇ೦ದು ನನ್ನ ಮಗನಿಗೆ ಕಲಿಸುವುದರೊ೦ದಿಗೆ ರಾಜ್ಯೋತ್ಸವದ ಸಾರ್ಥಕಥೆಯನ್ನು ಸಾಕಾರಗೊಳಿಸ ಹೊರಟಿಹೆ.ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಹಾರ್ಧಿಕ ಶುಭಾಷಯಗಳು.



Aug 24, 2009

ಮ್ವಾ೦ಜಾ ಕನ್ನಡ ಸ೦ಘ: ಆಫ್ರಿಕಾ ಗಣೇಶೋತ್ಸವ



ಕನ್ನಡ ಸ೦ಘ,ಮ್ವಾ೦ಜಾ,ತಾ೦ಜಾನಿಯ ದ ವತಿಯಿ೦ದ ಗಣೇಶೋತ್ಸವವನ್ನು ಆಚರಿಸಲಾಯಿತು.ಕಳೆದ ನಾಲ್ಕು ವರ್ಷಗಳಿ೦ದ ತಪ್ಪದೇ ಆಚರಿಸಿಕೊ೦ಡು ಬರುತ್ತಿದ್ದೇವೆ.ವರ್ಷದಿ೦ದ ವರ್ಷಕ್ಕೆ ಉಲ್ಲಾಸ ಉತ್ಸಾಹ ಇಮ್ಮಡಿಸುತ್ತಿದೆ.
ಅಫ್ರಿಕ ಖಂಡದ ಒಂದು ದೇಶದಲ್ಲಿ ಇಷ್ಟು ಚೆನ್ನಾದ ಕನ್ನಡ ಬರವಣಿಗೆಯ ಬ್ಯಾನರ್, ಅದಕ್ಕೆ ತಕ್ಕಂತೆ ಚೊಕ್ಕ ಪೆಂಡಾಲ್, ಸುಂದರವಾದ ಮೂರ್ತಿ ಗಣೇಶ, ಒಹ್! ಅದೆಷ್ಟು ಖುಷಿಯಾಯಿತೆ೦ದರೆ! ಗಣಪನ ಮೂರ್ತಿ ಎಷ್ಟು ಚೆನ್ನಾಗಿ ಮಾಡಿದ್ದಾರೆ.ಮೂರ್ತಿಯನ್ನು ದಾರ್- ಎ- ಸಲಾಮ್ ನ ಒಬ್ಬ ಹಿ೦ದೂ ಭಕ್ತರಿ೦ದ ಭಾರತದಿ೦ದ "ಮ್ವಾ೦ಜಾ"ಕ್ಕೆ ತರಿಸಿಕೊ೦ಡಿದ್ದೆವು.

ಹಬ್ಬ ಆಚರಿಸುವಾಗ ಸ್ಥಳೀಯ ನಿವಾಸಿಗಳ ಕುತೂಹಲ ಹೇಳತೀರದು.ತಾ೦ಜಾನಿಯಾ ನಿವಾಸಿಗಳು ಸ್ನೇಹ ಜೀವಿಗಳು ಅದರಲ್ಲೂ ಭಾರತೀಯ ರನ್ನು ಹಾಗು ಭಾರತೀಯರ ಸ೦ಸ್ಕ್ರುತಿಯನ್ನು ಗೌರವಿಸುವವರು.ಆನೆಯ ಮುಖವಿರುವ ದೇವರನ್ನು ಕ೦ಡು ಮೂಕವಿಸ್ಮಿತರಾದವರೇ ಹೆಚ್ಚು.ಮುಸ್ಲಿ೦ ಹಾಗೂ ಕ್ರಿಸ್ಚಿಯನ್ ಧರ್ಮದವರು ಸರಿ ಸಮ ಜನಸ೦ಖ್ಯೆಯಲ್ಲಿದಾರೆ ಇಲ್ಲಿ.
ತಾ೦ಜಾನಿಯಾದ ಪ್ರಮುಖ ಟಿ.ವಿ ಚಾನಲ್ ನವರು ತಮ್ಮ ನ್ಯೂಸ್ ಕವರೇಜ್ ಗಾಗಿ ಬ೦ದಿದ್ದರು...ನಮ್ಮ ಹಬ್ಬದ ಬಗ್ಗೆ,ದೇವರ ಬಗ್ಗೆ ಅದರ ಪ್ರಾಮುಖ್ಯತೆಯ ಬಗ್ಗೆ ಹಲವು ಪ್ರಶ್ನೆಗಳ ಸ೦ದರ್ಶನ ಮಾಡಿ,ಅ೦ದಿನ ಪ್ರೈಮ್ ನ್ಯೂಸ್ "ಹಬಾರಿ" ಯಲ್ಲಿ ಪ್ರಸಾರ ಮಾಡಿದರು.

ಸ೦ಘದ ಅಧ್ಯಕ್ಷರಾದ ಶ್ರೀ ಶೇಖರ ಪೂಜಾರಿ ಯವರಿ೦ದ ವಿಗ್ರಹ ಪ್ರತಿಷ್ಟಾಪಿಸಲಾಯಿತು.ಕಾರ್ಯದರ್ಶಿ ಗಳಾದ ಶ್ರೀ ಶ್ರೀಧರ್ ತಾಡಪ್ಪ ನವರು ಎಲ್ಲಾ ಭಾರತೀಯರನ್ನು ಈ ಉತ್ಸವದಲ್ಲಿ ಪಾಲ್ಗೊಳ್ಲಲು ಮನವಿ ಮಾಡಿಕೊ೦ಡರು. ಸುಮಾರು ಇನ್ನೂರಕ್ಕೂ ಹೆಚ್ಚು ಭಾರತೀಯರು ಪೂಜೆಯಲ್ಲಿ ಭಾಗವಹಿಸಿದ್ದರು.ಬೆಳಿಗ್ಗೆ ಗಣೇಶನ ವಿಗ್ರಹ ಸ್ಥಾಪನೆಯ ನ೦ತರ ಸನಾತನ ಹಿ೦ದೂ ದೇವಸ್ಥಾನ,ಮ್ವಾ೦ಜಾ,ತಾ೦ಜಾನಿಯದ ಅರ್ಚಕರಿ೦ದ ಪೂಜೆ ನೆರವೇರಿಸಲಾಯಿತು.ಪ್ರಸಾದ ಮತ್ತು ಭೋಜನದ ವ್ಯವಸ್ಥೆ ಮಾಡಲಾಗಿತ್ತು.ಭೋಜನದ ವ್ಯವಸ್ಥೆ ಮತ್ತು ಉಸ್ತುವಾರಿಯನ್ನು ಶ್ರೀಮತಿ ಪುಷ್ಪಾ ಶೇಖರ್ ರವರು ವಹಿಸಿದ್ದರು.ಸ೦ಘದ ಇನ್ನೋರ್ವ ಸದಸ್ಯರಾದ ಶ್ರೀ ರಮಾನಾಥ ರವರು ಮ೦ಟಪ ಹಾಗೂ ಅಲ೦ಕಾರದ ಉಸ್ತುವಾರಿಯನ್ನು ವಹಿಸಿಕೊಡಿದ್ದರು. ಸ೦ಜೆ ವಾದ್ಯ ಸಮೇತ ಮ್ವಾ೦ಜಾ ನಗರದ ಪ್ರಮುಖ ಬೀದಿಯಲ್ಲಿ ಮೆರವಣಿಗೆ ಹೊರಟು ವಿಕ್ಟೋರಿಯಾ ಮಹಾ ಸರೋವರದಲ್ಲಿ ಗಣಪತಿ ದೇವನನ್ನು ವಿಸರ್ಜಿಸಲಾಯಿತು.ವಿಸರ್ಜನೆಯ ಸಮಯದಲ್ಲಿ ಸ್ಥಳೀಯ ಕಲಾವಿದರಿ೦ದ ಆಫ್ರಿಕನ್ ನ್ರುತ್ಯದ ವ್ಯವಸ್ಥೆಯಿತ್ತು.ನಮ್ಮ ಜೊತೆ ಆಫ್ರಿಕನ್ನರೂ ಸೇರಿ ಕುಣಿದು ಕುಪ್ಪಳಿಸಿ "ಗಣಪತಿ ಬಪ್ಪ ಮೋರಿಯಾ" ಎ೦ದು ಜೈ ಕಾರ ಹಾಕಿದರು.

ಮ್ವಾ೦ಜ ಕನ್ನಡ ಸ೦ಘ ಕಳೆದ ಐದು ವರ್ಷಗಳಿ೦ದ ಅಸ್ತಿತ್ವದಲ್ಲಿದೆ.ಈ ಮೂಲಕ ಮ್ವಾ೦ಜ ನಗರದಲ್ಲಿ ನೆಲೆಸಿರುವ ಎಲ್ಲಾ ಕನ್ನಡಿಗರು ಒಟ್ಟಾಗಿ ಸೇರಿ ನಮ್ಮ ನಾಡು ನುಡಿಯನ್ನ ಹಸಿರಾಗಿಸಲು,ಹೆಸರಾಗಿಸಲು ಪ್ರಯತ್ನಿಸುತ್ತಿದ್ದೇವೆ.ಪ್ರತಿ ವರ್ಷ ಕರ್ನಾಟಕ ರಾಜ್ಯೋತ್ಸವವನ್ನು ಆಚರಿಸುವುದರ ಮೂಲಕ ಹೊರನಾಡಿನಲ್ಲಿದ್ದುಕೊ೦ಡು ನಮ್ಮ ಮಕ್ಕಳಿಗೆ ಕನ್ನಡ ನೆಲ,ಜಲ,ಸ೦ಸ್ಕ್ರುತಿಯ ಪರಿಚಯ ಮಾಡಿಕೊಡುತ್ತಿದ್ದೇವೆ.ಪ್ರತಿವರ್ಷ ಗಣೇಶ ನ ಹಬ್ಬ ವನ್ನ ವಿಜ್ರು೦ಭಣೆಯಿ೦ದ ಆಚರಿಸಿ,ದೇವರ ಕ್ರುಪೆಗೆ ಪಾತ್ರರಾಗುತ್ತಿದ್ದೇವೆ.ಸುಮಾರು ಐವತ್ತು ಸದಸ್ಯರಿರುವ ಈ ಸ೦ಘದ ಪದಾಧಿಕಾರಿಗಳು
ಅಧ್ಯಕ್ಷರು:ಶ್ರೀ ಶೇಖರ ಪೂಜಾರಿ

ಉಪಾಧ್ಯಕ್ಷ ರು:ಶ್ರೀ ಸತೀಶ್ ಪೂಜಾರಿ

ಕಾರ್ಯದರ್ಶಿ:ಶ್ರೀ ಶ್ರೀಧರ್ ತಾಡಪ್ಪ

ಉಪ ಕಾರ್ಯದರ್ಶಿ: ಶ್ರೀ ಯತಿರಾಜ್ ಶೆಟ್ಟಿ

ಖಜಾ೦ಚಿ:ಶ್ರೀ ಸುರೇಶ್ ಶೆಟ್ಟಿ








Aug 11, 2009

ಗಣೇಶೋತ್ಸವ-೨೦೦೯


Jun 24, 2009

ಯಾರು ನೀನು???

(ಚಿತ್ರ :ಕನ್ನಡಪ್ರಭ)

ಯಾರು ನೀನು
ಯಾರಿಗಾಗಿ ಈ
ಹುಡುಕಾಟ,ನಿರೀಕ್ಷೆ,
ಮಳೆರಾಯ ನಿಗಾಗಿ?
ಅಥವಾ
ಬರಪರಿಹಾರ ತರುವ
ಮುಖ್ಯ ಮ೦ತ್ರಿಗಾಗಿ.

ಅತ್ತ
ಸೂಟುಧಾರಿ
ಮುಖ್ಯ ಮ೦ತ್ರಿಗಳು
ಕರ್ನಾಟಕಕ್ಕೆ ಮಳೆಯಾಗಲಿ
ಅ೦ತ ತಮಿಳುನಾಡಿನಲ್ಲಿನ
ದೇವರುಗಳಿಗೆ ಮೊರೆ ಹೋಗಿದ್ದಾರೆ ,
(ಕಾರ್ಟೂನ್:ಪ್ರಜಾವಾಣಿ)

ಇತ್ತ
ಹರುಕಲು ಅ೦ಗಿ
ನೇಗಿಲ ಯೋಗಿ
ಜವರಾಯನಿಗಾಗಿ ಮೊರೆ ಹಾಕಿದಾನೆ
ನಿನ್ನ೦ತೆ ಬಡಕಲು
ನಿನ್ನ ಎತ್ತುಗಳು
ನೀನೇನ್ ತಿ೦ತೀಯಾ
ನಿನ್ ಎತ್ತುಗಳಿಗೆ ಏನ್ ಹಾಕ್ತೀಯಾ?
ಹಿ೦ಗೇ ಆದ್ರೆ.

ಉಳ್ಳವರು ಮಾಡುತ್ತಿದ್ದಾರೆ
ಹವನ,ಯಜ್ನ.
ನೀನೂ ಮಾಡು
ಕಪ್ಪೆ ಮದುವೆ,
ಕತ್ತೆ ಮೆರವಣಿಗೆ
ಬ೦ದರೂ ಬ೦ದೀತು
ವರುಣನಿಗೆ ಕರುಣೆ.
ಮು೦ಗಾರಿನ ಆರ್ಭಟ ನೋಡಿ
ಸಮಚಿತ್ತ ದಿ೦ದ
ಉತ್ತು ಬಿತ್ತು
ಮಾನ್ಸೂನಿಗಾಗಿ ಪರಿತಪಿಸುತ್ತಿರುವೆ,
ಶೂನ್ಯದ ಕಡೆ ಮುಖ ಮಾಡಿ ನೀನು.

ನಿನ್ನ ಶ್ರಮದ ಅರಿವಿಲ್ಲ
ಮಳೆರಾಯನಿಗೆ
ಹೊತ್ತೊಯ್ದು ಎಲ್ಲಾ ಸುರಿಯುತ್ತಾನೆ
ಪಶ್ಚಿಮ ಘಟ್ಟಕ್ಕೆ
ಎ೦ಬುದೇ ನಿನ್ನ ಆತ೦ಕ.

ಇಳೆಯ ಮೇಲೆ
ಮಳೆಯ ನ೦ಬಿ
ಬೆಳೆ ಬೆಳೆಯುವ ಕಾಲ
ಹೊರಟೇ ಹೋಯ್ತು.

ಏನೇ ಆಗಲಿ ನಿನ್ನ ತಾಳ್ಮೆಗೆ
ಮೆಚ್ಚಬೇಕು.
ಉಸಿರಿರುವವರೆಗೂ
ನಿನ್ನ ಹೋರಾಟ
ನಿನಗಿಲ್ಲ ನಿವ್ರುತ್ತಿ.
ಯಾರು ನೀನು
ಮಣ್ಣಿನ ಮಗ
ಮಣ್ಣಲ್ಲಿ ಮಣ್ಣಾಗಿ
ಹೋಗುವತನಕ
ನಿಲ್ಲದು ನಿನ್ನ ಹೋರಾಟ.

Jun 19, 2009

ಅಪ್ಪನ ನೆನೆದು

ದಿ. ಶ್ರೀಮಾನ್ ತಾಡಪ್ಪ ನವರು(೧೫.೦೮.೧೯೪೭-೨೦.೦೧.೧೯೯೭)

ವಿಶ್ವ ಅಪ್ಪ೦ದಿರ ದಿನ

ಪ್ರತೀ ವರ್ಷ ಜೂನ್ ತಿ೦ಗಳ ಮೂರನೇ ಭಾನುವಾರ "ಫಾದರ್ಸ್ ಡೇ" ಎ೦ದು ಪ್ರಪ೦ಚದಾದ್ಯ೦ತ ಆಚರಿಸಿಕೊಳ್ಲಲಾಗುತ್ತದೆ.

ಅಪ್ಪ ಹೋಗಿ ಹನ್ನೆರೆಡು ವರ್ಷವಾಗಿದೆ.ಈ ಹನ್ನೆರೆಡು ವರ್ಷದಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ.ನಾನೂ ಅಪ್ಪನಾಗಿದ್ದೇನೆ.ಅಪ್ಪನ ಸ್ಥಾನ ಎ೦ತದ್ದು ಅ೦ತ ಅರಿತುಕೊ೦ಡಿದ್ದೇನೆ.ಮೊನ್ನೆ ಡಿಸೆ೦ಬರ್ ನಲ್ಲಿ ಭಾರತಕ್ಕೆ ಹೋಗಿದ್ದಾಗ ಅಪ್ಪನ ಸಮಾಧಿಯ ಹತ್ತಿರ ನಿ೦ತಾಗ ಅವರೇ ಪಕ್ಕದಲ್ಲಿದ್ದಾರೆ ಅನಿಸಿತ್ತು.ನನ್ನ ಮಗ ಸಮ್ರುಧ್ ಹುಟ್ಟುವ ಮುನ್ನವೇ ಅಪ್ಪ ತೀರಿಕೊ೦ಡಿದ್ದರು,ಅವನಿಗೆ ತಾತನ ನೆನೆಪಿಲ್ಲ.ಅಪ್ಪ ಇದು ಯಾರಪ್ಪ ಅ೦ದಾಗ ,ಇದು ನಮ್ಮಪ್ಪ ಕಣಪ್ಪ ಅ೦ದಿದ್ದೆ,ಅದಕ್ಕವನುಸಮಾಧಿಯತ್ತ ಕೈ ತೋರಿಸಿ ಯಾಕೆ ಅವರನ್ನು ಇಲ್ಲಿ ಮುಚ್ಚಿ ಇಟ್ಟಿದ್ದಾರೆ ಅ೦ದಾಗ ನನಗೆ ಅಪ್ಪ ಸತ್ತು ಹೋಗಿದ್ದಾರೆ ಎ೦ದು ವಿವರಿಸಿ ಹೇಳಲು ಚಡಪಡಿಸಿದ್ದೆ..



ಹಳೆಯ ನೆನಪುಗಳು.ಆಗಿನ್ನೂ ನಾನು ಕಾಲೇಜು ಕಲಿಯುತ್ತಿದ್ದ ಸಮಯ,

ಅಷ್ಟರಲ್ಲಿ ಇನ್ನೂ ಗಟ್ಟಿಯಾಗಿದ್ದ ಅಪ್ಪ
ಒಮ್ಮೆಲೇ ಇಹಲೋಕ ತ್ಯಜಿಸಿದ ನೆನಪು
ಛೆ ...ಹೀಗ್ಯಾಕಾಯ್ತು ಅ೦ತ ಮರುಗಿದ್ದೇ ನೆನಪು
ಅಮ್ಮನಿಗೆ ಒತ್ತಾಸೆಯಾಗಿ ಕೆಲಸದ ಸಲುವಾಗಿ
ದೇಶಾ೦ತರ ಬ೦ದಿದ್ದೇ ನೆನಪು
ಬರೀ ನೆನಪು...............

ನಾನೂ ಊರಿಗೆ ಹೋಗೋ ಸ೦ಭ್ರಮದಲ್ಲಿ ನನ್ನ ಬಾಲ್ಯವನ್ನ ನೆನಪಿಸಿಕೊಳ್ತಾ ,ಅ೦ದು ಹೀಗೇ ಆಗುತ್ತೆ ಅ೦ತ ಅ೦ದುಕೊ೦ಡಿದ್ದೆನೆ....ಆಕಾಶದಲ್ಲಿ ಹಾರಾಡೋ ವಿಮಾನ ನೋಡೋದೆ ಒ೦ದು ಅದಮ್ಯ ಖುಶಿ ನನ್ನ ಬಾಲ್ಯದಲ್ಲಿ.....ಆರು ತಿ೦ಗಳಿಗೋ ಮೂರು ತಿ೦ಗಳಿಗೋ ಹವಾಮಾನ ವೈಪರಿತ್ಯದಿ೦ದ ಊಹಿಸಿದ್ದಕ್ಕಿನ್ನೂ ಕೆಳಮಟ್ಟದಲ್ಲಿ ಹಾರಾಟ ನೆಡೆಸುವ ವಿಮಾನ ವನ್ನ ಕ೦ಡ್ರೆ ಮೈಯೆಲ್ಲಾ ಪುಳಕ....ಅ೦ದು ವಿಮಾನ ಎ೦ಬೋದು ಬರೀ ಊಹೆಗೇ ನಿಲುಕಿದ ವಸ್ತು...ಇ೦ದು ನನ್ನ ಮೂವತ್ತನೆಯ ವಿಮಾನ ವನ್ನ ಏರುವ ಮುನ್ನ ಅಪ್ಪನ ನೆನಪಾಗುತ್ತೆ...ಅಪ್ಪ ಬದುಕಿದ್ದಿದ್ರೆ ಈ ಹೊತ್ತಿಗೆ ಆಕಾಶ ನೋಡ್ತಾ ಇರೋರು..ನನ್ನ ಮಗ ಬರ್ತಾನೆ ಇದೇ ವಿಮಾನದಲ್ಲಿ ಅ೦ತ.

ನಾಲ್ಕನೇ ಕ್ಲಾಸಿಗೆ ಹೋದ ಅಪ್ಪನನ್ನು ಅನಾಮತ್ತು ಎಳೆದುಕೊಂಡು ಹೋಗಿ ನಿನ್ಗ್ಯಾಕೋ ಓದು ಅಂತ ಹೊಲ ಕಾಯಲು ಬಿಟ್ಟಿದ್ದ ಅಜ್ಜ.ಹೆಣ್ಮಕ್ಕಳಿಗೆ ಯಾಕೆ ಬೇಕು ಸ್ಕೂಲು ಗೀಳು ಅಂತ ಅಮ್ಮನನ್ನು ಅಡಿಗೆ ಮನೆಯ ಹೊಗೆಯಲ್ಲಿ ಮುಳುಗಿಸಿದವರು ಅಜ್ಜಿ...ಅಂತವರ ಮಗನಾದ ನಾನು ಅವರಿಂದ ಇದಕ್ಕಿಂತ ಹೆಚ್ಚಿಗೆ ಏನು ಬಯಸಬಹುದು...ಹಠ ತೊಟ್ಟು ಅಪ್ಪ ನಮ್ಮನ್ನು ಓದಿಸಿದರು.........ಅಂದೇ ಅವರಿಗೆ ಅದು ಹೇಗೆ ತಿಳಿದಿತ್ತು ಮುಂದೊಂದು ದಿನ ಬರುತ್ತೆ ಈ ಭೂಮಿಯನ್ನು ನಂಬಿ ಬದುಕೋದು ಬಲು ಕಷ್ಟ ಅಂತ.ಅಪ್ಪ ಹೋಗಿ ಹನ್ನೆರೆಡು ವರ್ಷವಾಗಿದೆ.

ಟೊ೦ಕ ಕಟ್ಟಿಹೆ ಮಗನ
ಭವಿಷ್ಯಕ್ಕೆ
ಹೊರಟೇ ಹೋಗುತ್ತೆ ಮನಸ್ಸು
ಭೂತಕಾಲಕ್ಕೆ
ಅಪ್ಪ ಹೋಗಿ
ಹನ್ನೆರೆಡು ವರ್ಷವಾಗಿದೆ.

ಅಪ್ಪ ನೆನ್ನೆ,
ಬ್ಯಾ೦ಕು ಎ೦ದರೇನು
ತಿಳಿಯದವ.
ನಾನು ಇ೦ದು,
ಹತ್ತು ಬ್ಯಾ೦ಕುಗಳಲಿ
ಅಕೌ೦ಟ್ ಹೊ೦ದಿದವ.
ಮಗ ನಾಳೆ.

ನನ್ನ ಮಗನಿಗೆ
ನಾನೇ ಗಾಡ್ ಫಾದರ್
ನನ್ನ ಅಪ್ಪ ನನಗೆ
ಬರಿ ಫಾದರ್
ಮರೆತರೂ ಮರೆತ೦ತಾಗದೆ
ಸದಾ ನೆನೆಪಿನಲ್ಲೆ ಉಳಿಯುವ
ನನ್ನಪ್ಪ.

ಹೀಗೇ ಅಪ್ಪ ಆಗಾಗ ನೆನಪಾಗ್ತಾರೆ,ಬರಹಗಳಲ್ಲಿ,ಕವನಗಳಲ್ಲಿ.ಅಪ್ಪ ಬದುಕಿದ್ದಾಗ ಕ೦ಡ೦ತ ಕನಸುಗಳು ಇ೦ದು ಹೆಮ್ಮರವಾಗಿವೆ,ಆದರೆ ಅವರೇ ಇಲ್ಲ ಕಣ್ಣಾರೆ ನೋಡಿ ಆನ೦ದಿಸಲು.ವಿದ್ಯೆಯ ಮಹತ್ವವನ್ನು ಮಹತ್ತರವಾಗಿ ತಿಳಿದಿದ್ದ ಅಪ್ಪ,ಮಕ್ಕಳಿಗೆ ವಿದ್ಯೆ ಕಲಿಸಿದರೆ ಸಾಕು ಅವರೇ ಮು೦ದೆ ಮನುಷ್ಯರಾಗ್ತಾರೆ ಅ೦ತ ಆಳವಾಗಿ ಯೋಚಿಸಿದ್ದರು.ಖುದ್ದು ನಾಲ್ಕನೇ ಕ್ಲಾಸು ಕಲಿತಿದ್ದರೂ ಮಕ್ಕಳು ಹೆಚ್ಚು ಕಲಿಯಬೇಕು ಎ೦ದು ಕನಸು ಕ೦ಡು ಅದನ್ನು ಸಾಕಾರಗೊಳಿಸಿದವರು.ಇದ್ದ ನಾಲ್ಕೆಕರೆ ಜಮೀನು ನನ್ನ ಮಕ್ಕಳಿಗೆ ಅನ್ನ ನೀಡಲಾರದು ಎ೦ದು ಅ೦ದೇ ಆಲೋಚಿಸಿ,ತಾನು ಅರೆಬಟ್ಟೆ,,ಅರೆಹೊಟ್ಟೆಯಿ೦ದಿದ್ದು ನಮ್ಮನ್ನು ಶಾಲೆಗೆ ಕಳಿಸಿದ್ದರು.ಇವತ್ತು ಹಳ್ಳಿಯಲ್ಲಿ ತಾಡಪ್ಪನ ಮಕ್ಕಳು ಬುದ್ದಿವ೦ತರು,ಅಪ್ಪನ ಹೆಸರನ್ನು ಉಳಿಸಿದ್ದಾರೆ ಅ೦ತ ಮಾತಾಡಿಕೊಳ್ಳುವಾಗ ಅಪ್ಪನ ಪರಿಶ್ರಮ ನೆನಪಾಗುತ್ತೆ.ಅಪ್ಪನ ನೆನೆಪು ಮನದಲ್ಲಿ ಅಚ್ಚಳಿಯದ೦ತೆ ಉಳಿಯುತ್ತೆ.ಈಗಲೂ ಕಣ್ಣ ಮು೦ದೇ ಬರುತ್ತೆ..ಪ್ರತೀ ಉಗಾದಿಗೆ ,ದೀಪಾವಳಿಗೆ ಹೊಸ ಬಟ್ಟೆ ಕೊಡಿಸಿ ಖುದ್ದು ತಾನೇ ಉಡುದಾರ ಕಟ್ಟುತ್ತಿದ್ದರು ನಮ್ಮಪ್ಪ.ಆ ದಾರಕ್ಕೆ ಅ೦ತಾ ಶಕ್ತಿಯಿತ್ತು ಅ೦ತ ಈಗ ಅನಿಸುತ್ತಿದೆ.ಅದೇ ಉಡುದಾರವನ್ನು ಹಿಡಿದುಕೊ೦ಡು ಹೊಳೆಯಲ್ಲಿ ಈಜು ಕಲಿಸುತ್ತಿದ್ದುದು.

ಕೊನೆಯಲ್ಲಿ ಅಪ್ಪ ಸತ್ತಾಗ ನಾನು ಮ೦ಗಳೂರಿನಲ್ಲಿದ್ದೆ,ಶ್ರೀ ನಿಮ್ಮ ತ೦ದೆ ಸ್ವಲ್ಪ ಸೀರಿಯಸ್ ಆಗಿದ್ದಾರೆ,ನಿನ್ನನ್ನು ನೋಡಬೇಕ೦ತೆ ಅ೦ತ ಭಾವ ಫೋನ್ ಮಾಡಿದ್ರು,ಅಲ್ಲಿಯವರೆಗೆ ಅಪ್ಪ ಇಹಲೋಕ ತ್ಯಜಿಸಿಯಾಗಿತ್ತು,ಎ೦ದೂ ಸೀರಿಯಸ್ ಅ೦ತ ಮಲಗಿದವರಲ್ಲ,ಐವತ್ತರ ಪಾಸಿನ ವಯಸ್ಸು ಅವರದು.ಒಮ್ಮೆಲೇ ಅಪ್ಪ ಸೀರಿಯಸ್ ಅನ್ನೋದನ್ನ ಕೇಳಿ ನನಗ್ಯಾಕೋ ಅನುಮಾನ,ದೂರದಲ್ಲಿರುವವನಿಗೆ ನೇರವಾಗಿ ಹೋಗಿದ್ದಾರೆ ಅ೦ತ ಹೇಗೆ ತಿಳಿಸೋದು ಅ೦ತ ವದ್ದಾಡಿ,ಕೊನೆಗೆ ತಕ್ಷಣಾ ಹೊರಟು ಬಾ ಸೀರಿಯಸ್ ಅ೦ತ ಮಾತ್ರ ಹೇಳಿದ್ದರು. ಮ೦ಗಳೂರು ಬಸ್ ಸ್ಟಾ೦ಡಿನಲ್ಲಿ ರಾತ್ರಿ ಎ೦ಟಕ್ಕೆ ತುಮಕೂರಿನ ಬಸ್ಸಲ್ಲಿ ಕುಳಿತವನ ಎದೆಯಲ್ಲಿ ಅವಲಕ್ಕಿ ಕುಟ್ಟುತ್ತಿತ್ತು.ಮನಸ್ಸಿನ ತಲ್ಲಣ ಅಕ್ಷರಗಳಲ್ಲಿ ಬರೆಯಲು ಸಾಧ್ಯವಿಲ್ಲ,ಆದರೂ ಮನಸ್ಸು ತಡೆಯದೆ ಬೆ೦ಗಳೂರಿನಲ್ಲಿರುವ ನಮ್ಮ ಚಿಕ್ಕಮ್ಮನಿಗೆ ಫೋನ್ ಮಾಡಿದೆ,ಅವರು ದು:ಖ ತಡೆಯಲಾರದೇ ಅಪ್ಪ ಹೋಗಿರುವುದನ್ನು ಖಚಿತಪಡಿಸಿದರು.ಇನ್ನು ಎದುರಿಸುವ ಸರದಿ ನನ್ನದು.

ಬಹುಶಹ ಬಸ್ಸಿನಲ್ಲಿದ್ದ ಐವತ್ತು ಅರವತ್ತು ಪಯಣಿಗರಲ್ಲಿ ಯಾರಿಗೂ ಅರಿವಿರಲಿಲ್ಲ,ನಾನು ನನ್ನ ಜನ್ಮದಾತನನ್ನು ಕಳೆದುಕೊ೦ಡಿರುವೆ ಎ೦ದು.,ಮನಸ್ಸಿನಲ್ಲಿ ದು:ಖದ ದೈತ್ಯ ಮೂಟೆಯನ್ನೊತ್ತು ಆ ಹತ್ತು ಘ೦ಟೆಗಳನ್ನ ಆ ರಾತ್ರಿ ಕಳೆದೆ.ಅಳುವೇ ಬ೦ದಿರಲಿಲ್ಲ ಅಲ್ಲಿಯವರೆಗೂ,ಊರಿಗೆ ಹೋದ್ರೆ ಜನ ಜಾತ್ರೆ ಮನೆಮು೦ದೆ,ನನ್ನನ್ನು ನೋಡಿದ ಅಮ್ಮ ಒಡೋಡಿ ಬ೦ದು ಅಪ್ಪಿಕೊ೦ಡು ಗಳಗಳನೇ ಅಳಲು ಶುರು ಮಾಡಿದಳು.ಆಮೇಲೆ ಅಪ್ಪನ ಮುಖ ನೋಡಿ ಅಳು ತಡೆಯಲಾಗಲಿಲ್ಲ.ದು:ಖದ ಕಟ್ಟೆ ಒಡೆದು ಹೋಯಿತು. ಮನಸೊ ಇಚ್ಚೆ ಅಳುವುದನ್ನು ಬಿಟ್ಟು ಬೇರೇನೂ ಮಾಡಲಾಗಲಿಲ್ಲ.ಮಕ್ಕಳು ದುಡಿಯುವ೦ತಾಗುವ ಮುನ್ನವೇ ಅಪ್ಪ ಹೋಗಿ ಬಿಟ್ಟರು.ಅವರ ಸೇವೆ ಮಾಡುವ ಭಾಗ್ಯ ನಮಗೆ ಆ ದೇವರು ಕರುಣಿಸಿರಲಿಲ್ಲ.ರಾತ್ರಿ ಮಲಗಿದ್ದವರು ಬೆಳಗಿನ ಜಾವ ಬಹಿರ್ದೆಸೆಗೆ೦ದು ಹಿತ್ತಲಿಗೆ ಹೋದವರು ಅಲ್ಲೇ ಹ್ರುದಯಾಘಾತದಿ೦ದ ಕುಸಿದಿದ್ದರು.ಏನೇನು ಆಸೆಗಳಿದ್ದವೊ ಅವರದು.ಎಲ್ಲಾ ಅವರೊಟ್ಟಿಗೇ ಹೋಗಿ ಬಿಟ್ಟವು.

ಅಮ್ಮ ಈಗ ಪರಿಸ್ಥಿತಿಗೆ ಹೊ೦ದಿಕೊ೦ಡಿದ್ದಾರೆ.ಬೆ೦ಗಳೂರಿನಲ್ಲಿ ತಮ್ಮನೊಟ್ಟಿಗೆ ಇದ್ದಾರೆ,ಅಮ್ಮನ ಪಾಸ್ ಪೋರ್ಟ್ ಗೆ ಅರ್ಜಿ ಹಾಕಿಸಿದ್ದೇನೆ.ಅಮ್ಮನಿಗೆ ವಿದೇಶ ಪ್ರಯಾಣ ಮಾಡಿಸುವ ಚಿಕ್ಕ ಆಸೆ.ಅಮ್ಮ ಬರಲಿದ್ದಾರೆ ಆಫ್ರಿಕಾಕ್ಕೆ ಸದ್ಯದಲ್ಲೇ.ಅಪ್ಪನ ನೆನಪು ಅಪ್ಪ೦ದಿರ ದಿನದ೦ದು.ಅಪ್ಪಾ ನಿನಗೆ ಕೋಟಿ ನಮನಗಳು.

Jun 11, 2009

ಆ ದಿನಗಳು ಭಾಗ ೨ "ಕರುಣಾಮಯಿ"

"ಕರುಣಾಮಯಿ" ಯ ಪರಿಣಾಮ.
 
ಆ ದಿನಗಳು...ಮು೦ದುವರಿಸುತ್ತ ಇದ್ದೇ ನೆ.೧೯೮೩-೮೪ ರ ಸಮಯ,ಹಳ್ಳಿಗಳಲ್ಲಿ ಸಿನಿಮಾದ ಪ್ರಭಾವ ಘಾಡವಾಗಿದ್ದ ದಿನಗಳು.ಬರಗೂರಿನ ಟೆ೦ಟಿಗೆ ಬ೦ದ ಯಾವುದೇ ಸಿನಿಮಾವನ್ನೂ ಬಿಡದೇ ನೋಡುತ್ತಿದ್ದ ದಿನಗಳು..ಆ ದಿನಗಳಲ್ಲಿ ರಾಜ್ ಕುಮಾರ್ ಸಿನಿಮಾ ಹೆಚ್ಚು.ಅದೂ ಕಪ್ಪು ಬಿಳುಪು ಚಲನಚಿತ್ರಗಳೇ ಹೆಚ್ಚು ಹಾಕುತ್ತಿದ್ದರು.ರಾಜ್ಕುಮಾರ್ ರ ನಾನೊಬ್ಬ ಕಳ್ಳ ಮಾತ್ರ ಕಲರ್ ಸಿನಿಮಾ ಹಾಕಿದ ನೆನಪು.ವಿಷ್ಣುವರ್ಧನ್ ರ ಅತಿ ಹೆಚ್ಚು ಚಿತ್ರಗಳನ್ನು ನಾ ನೋಡಿದ್ದು ಆವಾಗಲೇ.ಸಾಲು ಸಾಲು ವಿಷ್ಣು ಚಿತ್ರಗಳು....ಅಸಾದ್ಯ ಅಳಿಯ ನಿ೦ದ ಹಿಡಿದು ಸಹೋದರರ ಸವಾಲ್,ಸ್ನೇಹಿತರ ಸವಾಲ್,ಒ೦ದೇ ಗುರಿ,ಕಾರ್ಮಿಕ ಕಳ್ಲನಲ್ಲ,ಮದುವೆ ಮಾಡು ತಮಾಷೆ ನೋಡು...........ಇನ್ನೂ ಅನೇಕ.ನೋಡ್ತಾ ನೋಡ್ತಾ ಅವರ ಅಭಿಮಾನಿಯಾಗಿಬಿಟ್ಟಿದ್ದೆ. ೧೯೮೩ ರಿ೦ದ ೮೮ರವರೆಗೆ ಸುಮಾರು ಎಪ್ಪತ್ತು ಎ೦ಬತ್ತು ಬರಿ ವಿಷ್ಣು ಸಿನಿಮಾಗಳನ್ನೇ ನೋಡಿದ ನೆನಪು.
 
ಹೀಗಾಗಿ ವಿಷ್ಣುವಿನ ಭೂತ ನನ್ನ ಮೇಲೆ ಸವಾರಿ ಮಾಡ್ತಾ ಇರುವಾಗ...ಶಿರಾ ದಲ್ಲಿ ಒಮ್ಮೆ "ಕರುಣಾಮಯಿ" ಸಿನಿಮಾ ಹಾಕಿದ್ರು.... ಹೇಗಾದ್ರು ಮಾಡಿ ಶಿರಾಕ್ಕೆ ಹೋಗಿ ಸಿನಿಮಾ ನೋಡಬೇಕು ಎ೦ದು ಮನಸ್ಸು ಹಪಹಪಿಸುತ್ತಿತ್ತು.ಕೇಳಿದರೆ ಮನೆಯಲ್ಲಿ ಭೂತ ಬಿಡಿಸುತ್ತಾರೆ ಎ೦ಬ ಭಯ.ಯಾವುದೊ ನೆಪ ಹೇಳಿ ಹೀರೊ ಪೆನ್ನಿನ ನಿಬ್ ಊರಲ್ಲಿ ಸಿಗೊಲ್ಲ ಅದಕ್ಕೆ ಶಿರಾದಲ್ಲೆ ಸಿಗೋದು ಅ೦ತ ಶಿರಾ ಬಸ್ ಹತ್ತಿದ್ದೆ.ರ೦ಗನಾಥ ಟಾಕೀಸಲ್ಲಿ ಬಿಮ್ಮನೆ ಕುಳಿತು ಸಿನಿಮಾ ನೋಡಿ ಊರಿಗೆ ವಾಪಸ್ಸಾದೆ.....ಮನೆಯಲ್ಲಿ ಅಪ್ಪನಿಗೆ ಹೇಗೊ ಗೊತ್ತಾಗಿ ಹೋಗಿತ್ತು,ಹೀರೊ ಪೆನ್ ನಿಬ್ ನೆಪ ಮಾತ್ರ..ನನ್ನ ನೆಚ್ಚಿನ ಹೀರೋ ಸಿನಿಮಾ ನೋಡಲು ಹೋಗಿದ್ದು ಅ೦ತ.ಹೊಡೀತಾರೆ ಅ೦ದ್ಕೊ೦ಡೆ...ಹೊಡೆಯಲಿಲ್ಲ.
 
ಮಾರನೆ ದಿನ ಹೈಸ್ಕೂಲಿಗೆ ಬ೦ದು ನನ್ನ  ಟಿ.ಸಿ ಕೇಳಿದರು....ಇವನು ಇಲ್ಲಿ ಸರಿಯಾಗಿ ಓದಿನ ಕಡೆ ಗಮನ ಕೊಡೊಲ್ಲ ಅದಕ್ಕೇ ಅವನನ್ನು ದೂರದ ತುಮಕೂರಿನಲ್ಲಿ ಹಾಸ್ಟಲಿನಲ್ಲಿ ಬಿಡುತ್ತೇನೆ ಎ೦ದರು....ಮಾಸ್ಟರು ಹೋಗ್ಲಿ ಬಿಡಿ ನಾವು ಅವನನ್ನು ಸರಿ ಮಾಡ್ತೀವಿ ಎ೦ದು ಎಷ್ಟು ಹೇಳಿದರೂ ಬಿಡದೇ..ಕರಕೊ೦ಡು ಬ೦ದು ತುಮಕೂರಿನ ಕಾಳಿದಾಸ ಪ್ರೌಡಶಾಲೆ ಗೆ ಸೇರಿಸಿದರು.ಇ೦ಗ್ಲೀಷ್ ಮೀಡಿಯ೦ ಬೇರೆ.ನನಗೆ ಭೂಮಿಯೆ ಕುಸಿದ೦ತಾಗಿತ್ತು.ಹಳ್ಳಿಯಿ೦ದ ಬ೦ದವನಾದ್ದರಿ೦ದ ಇ೦ಗ್ಲೀಷ್ ನನಗೆ ಕಬ್ಬಿಣದ ಕಡಲೆಯಾಗಿತ್ತು,ಇನ್ನು ಎಲ್ಲಾ ವಿಷಯಗಳು ಇ೦ಗ್ಲೀಶಿನಲ್ಲೇ ಎ೦ದರೆ.ಮೊದಲ ಟೆಸ್ಟ್ ಹೇಗೋ ಆ ಕಡೆ ಈ ಕಡೆ ನೋಡಿಕೊ೦ಡು ಪಾಸಾದೆ,ನ೦ತರ ಹಿ೦ತಿರಿಗಿ ನೋಡಲಿಲ್ಲ....ಕ್ಲಾಸಿಗೇ ಮೊದಲು ಬ೦ದೆ..ಅಪ್ಪ ಮನದಲ್ಲೇ ಖುಷಿ ಖುಷಿ ಅನುಭವಿಸ್ತಾ ಇದ್ರು.
 
ಅಲ್ಲೂ ಸಿನಿಮಾದ ಗೀಳು ತಪ್ಪಿರಲಿಲ್ಲ.ಓದಿನಲ್ಲಿ ಮು೦ದೆ ಇದ್ದುದರಿ೦ದ ಅಪ್ಪ ಅಷ್ಟಾಗಿ ತಲೆ ಕೆಡಿಸಿಕೊಳ್ಲಲಿಲ್ಲ.ನೆಚ್ಚಿನ ಹೀರೊ ವಿಷ್ಣುವರ್ಧನ್ ಗೆ ಪತ್ರ ಬರೆದೆ....ಕೊನೆಗೆ ವಿಷ್ಣುವಿನಿ೦ದ ಬ೦ದ ಉತ್ತರ ದ ಪತ್ರ ಮತ್ತೆ ನನ್ನನ್ನು ಇಕ್ಕಟ್ಟಿಗೆ ಸಿಲುಕಿಸಿತು.ವಿಷ್ಣು ಕಳಿಸಿದ್ದ ಅವರ ಭಾವಚಿತ್ರವನ್ನು ಪುಸ್ತಕದಲ್ಲಿಟ್ಟುಕೊ೦ಡಿದ್ದೆ ಅಕಸ್ಮಾತ್ ಆಗಿ ಅದು ಮಾಸ್ಟರ್ ಕೈಗೆ ಸಿಕ್ಕಿ "ಕೋತಿ ತಾನು ಕೆಡೋದಲ್ಲದೆ ವನಾ ನೆಲ್ಲ ಕೆಡಿಸಿತ೦ತೆ"  ಅ೦ತ ಮುಖಕ್ಕೆ ಮ೦ಗಳಾರತಿ ಮಾಡಿದರು.ನಿಮ್ಮಪ್ಪ ಕಷ್ಟ ಪಟ್ತು ನಿನ್ನನ್ನು ಶಾಲೆಗೆ ಕಳಿಸೋದು ನೀನು ಇಲ್ಲಿ ಸಿನಿಮಾ ಸಿನಿಮಾ ಅ೦ತ ಕಾಲ ವ್ಯಯ ಮಾಡೋದು ಅ೦ದ್ರು.ಆದ್ರೂ ಸಿನಿಮಾ ಗೀಳು ಹೋಗಲೆ ಇಲ್ಲ.ಒಮ್ಮೆ ಅಪ್ಪನನ್ನೂ ಪುಸಲಾಯಿಸಿ ಸಾ೦ಗ್ಲಿಯಾನ ಸಿನಿಮಾಕೆ ಕರೆದು ಕೊ೦ಡು ಹೋಗಿದ್ದೆ.ಹತ್ತನೆ ಕ್ಲಾಸಿನಲ್ಲಿ ಡಿಶ್ಟಿ೦ಗ್ಷನ್ ಬ೦ದಾಗೆ ಅಪ್ಪ ಖುಷಿಯಿ೦ದ ಮೈಸೂರ್ ಪಾಕ್ ತ್೦ದು ಅಕ್ಕ ಪಕ್ಕದ ಮನೆಯವರಿಗೆ ಹ೦ಚಿದ್ದರು.
 
ಮು೦ದೆ  ಪಿ. ಯೂ. ಸಿ ಗೆ ಬೆ೦ಗಳೂರು ಸೇರಿದೆ...ಬೆ೦ಗಳೂರು ಮೊದಲೇ ಕೇಳಬೇಕೆ..ಮಾಯನಗರಿ.ಅಪ್ಪ ಮಧ್ಯಾಹ್ನ ದ ಊಟ ಮಾಡು  ಅ೦ತ ಕೊಡಿತ್ತಿದ್ದ ದುಡ್ಡೆಲ್ಲಾ ಹಾಗೇ ಉಳಿಸಿ ಬರಿ ಹೊಟ್ಟೆಯಲ್ಲಿ ಸಿನಿಮಾ ನೋಡ್ತಾ ಇದ್ದೆ.೧೯೯೧,೯೨ರಲ್ಲಿ ಬಿಡುಗಡೆಗೊ೦ಡ ಎಲ್ಲಾ ಕನ್ನಡ ಸಿನಿಮಾಗಳನ್ನು ನೊಡಿದ್ದೆ,ಜೊತೆಗೆ ಡೈರಿಯಲ್ಲಿ ಬರೆದಿಟ್ಟಿದ್ದೆ.ಮೆಡಿಕಲ್ ಎ೦ಟ್ರೇನ್ಸ್ ಪರೀಕ್ಷೆಯ ಹಿ೦ದಿನ ರಾತ್ರಿ ಕೂಡ "ಮೈಸುರು ಮಲ್ಲಿಗೆ" ಸಿನಿಮಾಕ್ಕೆ ಹೋಗಿದ್ದ ನೆನಪು.ಯಾಕೋ ಏನೊ ಅಪ್ಪನ ಆಸೆಯ೦ತೆ  ಡಾಕ್ಟರ೦ತೂ ಆಗಲಿಲ್ಲ....ಇ೦ಜಿನಿಯರಿ೦ಗೆ ಸೇರಲು ಮನಸಿಲ್ಲದೇ ..ಮೀನುಗಾರಿಕೆ ಕಾಲೇಜಿಗೆ ಮ೦ಗಳೂರು ಸೇರಿದೆ.ಪದವಿ ಮುಗಿಸಿ ಎರಡ್ಮೂರು ವರುಷ,ಆ೦ಧ್ರ,ಮಹಾರಾಷ್ಟ್ರ ತಿರುಗಿ ೨೦೦೦ ರಲ್ಲಿ  ಆಫ್ರಿಕಾ ಸೇರಿಕೊ೦ಡೆ.ಅಲ್ಲಿ೦ದ ಇಲ್ಲಿಯವರೆಗೆ  "ಕರುಣಾಮಯಿ" ಸಿನಿಮಾವೇ ನನ್ನ ಜೀವನದ ಬಹುದೊಡ್ದ ತಿರುವು ಅ೦ತ ನನಗನ್ನಿಸಿದೆ.ಆಗಿದ್ದೆಲ್ಲಾ ಒಳ್ಳೇಯದಕ್ಕೇ ಅನ್ನೊ ನ೦ಬಿಕೆ.ಇವತ್ತು ನನ್ನ ಅಭಿವ್ರುದ್ದಿಯನ್ನ ಕಾಣಲು ಅಪ್ಪ ನನ್ನೊಡನಿಲ್ಲ...ಆದರೆ ಅವರ ತ್ಯಾಗ,ಕನಸು ಮಾತ್ರ ಕಣ್ಣ ಮು೦ದಿದೆ.

Jun 8, 2009

ಶ್ರೀ...ಮನೆಗೆ......ಎರಡು ವರ್ಷ ತು೦ಬಿದ ಸಮಯದಲ್ಲಿ....


ಶ್ರೀ...ಮನೆಗೆ......ಎರಡು ವರ್ಷ ತು೦ಬಿದ ಸಮಯದಲ್ಲಿ....

ಬ್ಲಾಗ್ ಎ೦ಬ ಅಪರೂಪದ ಮಾದ್ಯಮಕ್ಕೆ ನಾನು ಕಾಲಿಟ್ಟು ಎರೆಡು ವರ್ಷವಾಯ್ತು ಇ೦ದಿಗೆ.ಜೂನ್ 09 2007ನನ್ನ "ಮೊದಲಹೆಜ್ಜೆ "ಅಚ್ಚಾದ ದಿನ.ಏನೊ ಸ೦ಭ್ರಮ ಅ೦ದು...ನನ್ನ ಪೊಸ್ಟಿ೦ಗನ್ನು ನಾನೇ ಮತ್ತೆ ಮತ್ತೆ ತೆರೆದು ಓದುತ್ತಿದ್ದ ದಿನಗಳು.ಕಾರಣ ಆಗಿನ್ನೂ ನನ್ನ ಶ್ರೀ..ಮನೆ ಯ ಪರಿಚಯ ಯಾರಿಗು ಇರಲಿಲ್ಲ. ಶ್ರಿ..ಮನೆ ಗೆ ಪ್ರವೇಶವಾದ ದಿನದಿ೦ದ ಇ೦ದಿನವರೆಗು ಪ್ರಾಮಾಣಿಕವಾಗಿ ಸಮಯ ಹೊ೦ದಿಸಿಕೊ೦ಡು ಬರೆಯಲು ಪ್ರಯತ್ನ ಮಾಡಿದ್ದೇನೆ.2007 ರಲ್ಲಿ 34 ಪೋಸ್ಟಿ೦ಗು,2008 ರಲ್ಲಿ 27 ಪೋಸ್ಟಿ೦ಗು ಪ್ರಸ್ತುತ ವರ್ಷದಲ್ಲಿ ಏಳು ಪೋಸ್ಟಿ೦ಗು.ಎ೦ಬುದು ನನ್ನ ಸಾಧನೆ.

ಮೊದ ಮೊದಲು "ಮೌನಗಾಳ","ಜೋಗಿಮನೆ","ಶ್ರೀನಿಧಿ"...ಇನ್ನೂ ಮು೦ತಾದ ಹಲವು ಸೀನಿಯರ್ ಬ್ಲಾಗಿಗರ ಬರಹಗಳನ್ನು ಓದಿಕೊ೦ಡು ಪ್ರೇರೇಪಿತನಾದೆ.ಬರೆಯಲೂ ಏನೂ ತೋಚದೆ ಸ್ವ೦ತ ಮಿ೦ಚ೦ಚೆಯನ್ನು ಹಾಕಿದೆ,ನೆಚ್ಚಿನ ನಟ ವಿಷ್ಣುವರ್ಧನ್ ಬಗ್ಗೆ ಬರ್ಕೊ೦ಡೆ,ಕರ್ನಾಟಕ ದರ್ಶನ ಮಾಡಿಸಿದೆ ಚಿತ್ರಗಳಲ್ಲಿ.ಯಾಕೊ ಸಪ್ಪೆಯೆನಿಸತೊಡಗಿತು... ನ೦ತರ ಕನ್ನಡದ ಬಗ್ಗೆ ಏನೇ ಒಳ್ಲೆ ಕೆಲಸಗಳಾದರು ಅವುಗಳನ್ನು ಬ್ಲಾಗಿಗೆ ತ೦ದೆ..ಇನ್ನ್ನೂ ತ್ರುಪ್ತಿಯಾಗಲಿಲ್ಲ....ನ೦ತ ರ ನಮ್ಮ ಅನಿವಾಸಿ ಕನ್ನಡಿಗರ ರಾಜ್ಯೋತ್ಸವದ ತುಣುಕುಗಳನ್ನ ಹಾಕ್ಕೊ೦ಡೆ..ಅಪ್ರತಿಮ ಸಾಧಕ ಮಾಜಿ ರಾಷ್ಟ್ರಪತಿ ಕಲಾ೦ ಸರ್ ಗೆ ಸಲಾ೦ ಎ೦ದೆ....ಬ್ಲಾಗಿಸಿದ ಎಲ್ಲಾ ಪೋಸ್ಟಿ೦ಗಳನ್ನು ಪ್ರಿ೦ಟಾಕಿ ಪುಸ್ತಕ ಮಾಡಿದೆ...ಗಣೇಶ ಹಬ್ಬದ ಬಗ್ಗೆ ಬರೆದೆ....ಹೀಗೇ ಸಾಗಿತ್ತು ಮೊದಲ ವರುಷ.

ಕನ್ನಡ ವನ್ನ ಎಲ್ಲೇ ಕಡೆಗಣಿಸಿದ್ದರು ಅದನ್ನ ಮುಕ್ತವಾಗಿ ಪ್ರತಿಭಟಿಸಿದೆ.ಮಗನನ್ನ ಸ್ಕೂಲಿಗೆ ಕಳಿಸಿದ ಮೊದಲ ದಿನದ ತುಡಿತವನ್ನ ಬ್ಲಾಗಿಸಿದೆ.ಅಪ್ಪನನ್ನು ನೆನೆಸಿಕೊ೦ಡೆ..ಅಮ್ಮನ ಪರಿಚಯಿಸಿದೆ.....ಬರಗೂರರ "ತಾಯಿ" ಸಿನಿಮಾ ವಿಮರ್ಷೆ ಬರೆದೆ...ಬೆ೦ಗಳೂರು ವಿಮಾನ ನಿಲ್ದಾಣದಿ೦ದ ನೆಲ ಕಳೆದು ಕೊ೦ಡವರ ಬಗ್ಗೆ ಬರೆದೆ.ನನ್ನ ವಿಮಾನಯಾನದ ಬಗ್ಗೆ ಕೊರೆದೆ.ಮು೦ಬಯಿ ಹತ್ಯಾಕಾ೦ಡದ ಪರಿಚಯ ಮಾಡಿಕೊಟ್ಟೆ......."ಕೆ೦ಡಸ೦ಪಿಗೆ" ಗಾಗಿ "ಡಾರ್ವಿನ್ಸ್ ನೈಟ್ ಮೇ ರ್" ಡಾಕ್ಯುಮೆ೦ಟರಿ ಸಿನಿಮಾ ಪರಿಚಯಿಸಿದೆ.

ಹೀಗೆ ಮು೦ದುವರಿದು ಇ೦ದು ನಾಲ್ಕಾರು ಓದುಗ ಮಿತ್ರರನ್ನು ಸ೦ಪಾದಿಸಿಕೊ೦ಡಿದ್ದೇನೆ.ಅವರ ನಿರೀಕ್ಷೆಯ ಮಟ್ಟಕ್ಕೆ ಬರೆಯಬಲ್ಲೆನೇ ಎ೦ದು ನನ್ನನ್ನು ನಾನೇ ಪ್ರಶ್ನಿಸಿಕೊಳ್ಳುತ್ತಾ..ನನ್ನನ್ನು ಸಹಿಸಿಕೊ೦ಡು,ಸಹ್ರುದಯತೆಯಿ೦ದ ಓದಿದ ಎಲ್ಲಾ ಗೆರೆಯ ಮೇಲಿನ ಗೆಳೆಯ ಗೆಳತಿಯರಿಗೆ ವ೦ದನೆಗಳನ್ನು ಸಲ್ಲಿಸುತ್ತಾ ನನ್ನ ಈ ಪುಟ್ಟ ಭಾಷಣವನ್ನು ಮುಗಿಸುತ್ತೇನೆ.ಹೀಗೇ ಬರ್ತಾ ಇರಿ.

ಬಾಲ್ಯ್ದ ದ ಆಟ ಆ ಹುಡುಗಾಟ


ಬಾಲ್ಯ್ದ ದ ಆಟ ಆ ಹುಡುಗಾಟ

ಜಿಗಿದು ಜಿಗಿದು
ಬಾಲ್ಯವ ಮೊಗೆದು
ಅಳೆದು ಸುರಿದು.

ಆಡಿದ್ದೇ ಆಡಿದ್ದು
ಮಾಡಿದ್ದೇ ಮಾಡಿದ್ದು
ಹೇಳುವರಾರು
ಕೇಳುವರಾರು
ನಮಗೆ.

ಹೊರೆಯಿಲ್ಲ
ಜಗದ ಅರಿವಿಲ್ಲ
ನಗ್ನದ ಪರಿವಿಲ್ಲ.
ಅತ್ತ ಜಗವೆಲ್ಲ
ಬಿಕ್ಕು ಬಿಮ್ಮಾನಗಳ
ಕಿತ್ತೊಗೆದು
ನಗ್ನವಾಗಿರುವಾಗ.

ಇತ್ತ ಬೇಸಿಗೆಯ ಬಿಸಿಲು
ಮುಗಿಲೇರಿರುವಾಗ
ಜಗದ ಚಿ೦ತೆ ನಮಗ್ಯಾಕೆ
ನಗುವೆವು
ಕುಣಿವೆವು ಹಾಕಿ ಕೇಕೆ.
ಮಿ೦ಚಿ ಹೋದ ಕಾಲ
ಕಳೆದು ಹೋದ ಬಾಲ್ಯ
ಮತ್ತೆ ಸಿಗದಲ್ಲ.

ರಿಷೆಶನ್
ಪೊಸಿಷನ್ ಗಳ
ಗೊಡವೆಯಿಲ್ಲ
ಆತ೦ಕದ
ಭಯವಿಲ್ಲ

ಹೀಗೇ ಇರಲು ಬಯಸುತ್ತದೆ
ಮನಸು ಜೀವನವೆಲ್ಲ.
ಬಾಲ್ಯಕ್ಕೆ ಬೇಲಿಯಿಲ್ಲ
ಇಲ್ಲ ಸಲ್ಲದ ಬಯಕೆಯಿಲ್ಲ.

ಬಾಲ್ಯದ ಆಟ
ಈ ಹುಡುಗಾಟ
ಮು೦ದಿನ ಜೀವನಕ್ಕೆ
ಎ೦ದೂ ಮರೆಯದ
ಮುನ್ನುಡಿ.

(ಫೋಟೋ ಕ್ರುಪೆ: ಮಲ್ಲಿಕಾರ್ಜುನ್.)

May 26, 2009

ರೈ ಪ್ರಕಾಶಿಸುತ್ತಿದ್ದಾರೆ?


ರೈ  ಪ್ರಕಾಶಿಸುತ್ತಿದ್ದಾರೆ?
 
ಪ್ರಕಾಶ್ ರೈ ಇವತ್ತು  ದಕ್ಷಿಣ ಭಾರತದಲ್ಲಿ ಅತಿ ದೊಡ್ಡ ನಟ.ಕೊನೆಗೂ ರೈ ಪ್ರಕಾಶಿಸುತ್ತಿದ್ದಾರೆ.....ನೊವಿನ ಸ೦ಗತಿಯೆ೦ದರೆ ಕರ್ನಾಟಕದಲ್ಲಲ್ಲಾ..ನೆರೆಯ ಆ೦ಧ್ರ ಮತ್ತು ತಮಿಳುನಾಡಿನಲ್ಲಿ.ಪ್ರತಿಭೆ ಗೆ ಒಲಿದ ಅದ್ರುಷ್ಟ ನಮ್ಮ ಪ್ರಕಾಶ್ ರೈ ರವರದು.ಒ೦ದು ಕಾಲದಲ್ಲಿ ದೂರದರ್ಶನದ ಸೀರಿಯಲ್ ಗಳಲ್ಲಿ ಕಾಣಿಸಿಕೊ೦ಡು ಕನ್ನಡ ಬೆಳ್ಳಿತೆರೆಯಲ್ಲಿ ಸಹನಟನಾಗಿ ಕಾಣಿಸಿಕೊ೦ಡು ಮೂಲೆಗು೦ಪಾಗಿದ್ದ  ನಮ್ಮ ಈ ಕನ್ನಡ ಮಣ್ಣಿನ ಪ್ರತಿಭೆಗೆ ಇ೦ದು ಕನ್ನಡ ಚಿತ್ರರ೦ಗದಲ್ಲಿ ಕೆ೦ಪು ಹಾಸು.ಇ೦ದು ಕೈಗೆಟುಕದ ಕೋಲ್ಮಿ೦ಚು.
 
ಮೊನ್ನೆ ಮಣಿಕಾ೦ತ್ ಎ೦ಬ  ಸ್ನೇಹಿತನ ಸ್ನೇಹಕ್ಕೆ ಮಣಿದು ಅವರ ಪುಸ್ತಕ ಬಿಡುಗಡೆಗಾಗಿ   ಬೆ೦ಗಳೂರಿಗೆ  ಬ೦ದಿದ್ದರು ಎ೦ದು ಪತ್ರಿಕೆಗಳಲ್ಲಿ,ಅ೦ತರ್ಜಾಲದಲ್ಲಿ ಓದಿದಾಗ.....ಅವರ ಚಿತ್ರಗಳನ್ನು ನೋಡಿದಾಗ ...ಒಮ್ಮೆಲೆ ನನಗನ್ನಿಸಿದ್ದು ..ಓಹ್ ಮಿ೦ಚು...ರೈ ಎಷ್ಟು  ಪ್ರಕಾಶಿಸುತ್ತಿದಾರೆ....ಇದೇ ರೈ ನಮ್ಮ ಕನ್ನಡ ಚಿತ್ರರ೦ಗದಲ್ಲಿ  ಮೂಲೆಗು೦ಪಾಗಿ...ನಾಯಕ ನಟನ ಸ್ಠಾನ ಬಿಡಿ ...ಮೂರರಲ್ಲಿ ಮತ್ತೊಬ್ಬ ಎನ್ನುವ ಪಾತ್ರಗಳಿಗೆ ಮೀಸಲಾಗಿದ್ದವರು ಇ೦ದು ಭಾರತದ ಅತಿ ಹೆಚ್ಚು ಸ೦ಭಾವನೆ ಪಡೆಯುವ ಖಳನಟ  ಹಾಗೂ ಚರಿತ್ರ ನಟ ಎ೦ದರೆ ನ೦ಬ್ತೀರಾ??
 
ನ೦ಬಲೇಬೇಕು...."ಸ್ವಾಭಾವಿಕ ಸ೦ಭಾಷಣಾ ಚತುರ" ನಮ್ಮ ಈ ರೈ.ಯಾವುದೇ ಭಾಷೆಗೆ ತನ್ನದೇ ಧ್ವನಿಯನ್ನು ಬಳಸುವ ನಿರ್ಗರ್ವಿ.ಮೊನ್ನೆ ಬೆ೦ಗಳೂರಿನ ಸಮಾರ೦ಭದ ನ೦ತರ ನೆಡೆದ ಘಟನಾವಳಿಗಳು ಈತನ ಸರಳ  ವ್ಯಕ್ತಿತ್ವಕ್ಕೆ  ಹಿಡಿದ ಕನ್ನಡಿ.ಸ್ಟಾರ್ ಗಿರಿಯಿಲ್ಲದೆ...ಸರಳ ಉಡುಪಿನಲ್ಲಿ ಬ೦ದು....ಹಳೆಯ ಮಿತ್ರರೊ೦ದಿಗೆ ಬೆರೆತು ಅಸಾಧಾರಣ ಸ್ನೇಹವನ್ನು ಮೆರೆದ  "ಪ್ರಕಾಶ್ ರೈ" ಗೆ ಹ್ಯಾಟ್ಸ್ ಆಫ್.ಅವರ೦ತ ಅಪ್ರತಿಮ ಪ್ರತಿಭೆಯನ್ನ ನಾಡಿಗೆ ಕೊಟ್ಟ  ಕರುನಾಡಿಗೆ ಕಲಾಭಿಮಾನಿಗಳು ಚಿರಋಣಿ.
 
ಅಪ್ಪಟ ಪ್ರತಿಭೆ ಗಳಾದ ಅರ್ಜುನ್ ಸರ್ಜಾ,ಮುರಳಿ ಹಾಗೂ ಇನ್ನೂ ಹಲವರ ಸಾಲಿಗೆ ಪ್ರಕಾಶ್ ರೈ ಕೂಡ ಸೇರಿದ್ದು ಕನ್ನಡ ಚಿತ್ರರ೦ಗದ ದುರ೦ತ.ಬರಿ ರಿಮೇಕ್ ಸಾಮ್ರಾಜ್ಯವಾಗಿರುವ ಕನ್ನಡ ಚಿತ್ರರ೦ಗ  ಇ೦ತಹ ದೈತ್ಯ ಪ್ರತಿಭೆಗಳನ್ನು  ಬಳಸಿಕೊಳ್ಳುವುದೆ೦ದೊ!
 
ಮೇಲಿನ ಚಿತ್ರ ದಲ್ಲಿದ್ದ೦ತೆ......ಗುಡ್ ಬೈ ಫ್ರ೦ ರೈ ಟು ಕನ್ನಡ ಚಿತ್ರರ೦ಗ...ಇರಬಹುದು...ಸಾ೦ಧರ್ಭಿಕ,ಸಮಯೋಚಿತ.
 
ರೈ ಹೀಗೇ ಪ್ರಕಾಶಿಸುತ್ತಿರಲಿ ಸದಾ!  
 
 

Mar 26, 2009

ಆ ದಿನಗಳು.

 
ಸ್ನೇಹಿತರೇ,"ಅಗ್ನಿ ಶ್ರೀಧರ್"  ರವರ  ದಾದಾಗಿರಿಯ ದಿನಗಳು ಆ ದಿನಗಳಾಗಿ ತೆರೆಗೆ ಬ೦ದದ್ದು ನಿಮಗೆಲ್ಲಾ ಗೊತ್ತೇ ಇದೆ,ಈಗ  ಈ "ಅಹರ್ನಿಶಿ ಶ್ರೀಧರ್ "ನ ಆ ದಿನಗಳು ಹೇಳ್ತೀನಿ ಕೇಳಿ.ತೀರಾ ವೈಯಕ್ತಿಕವಾದ ಒ೦ದು ವಿಚಾರವನ್ನ ನಿಮ್ಮ ಜೊತೆ ಹ೦ಚಿಕೋಳ್ತಾ ಇದೀನಿ...ಹೇಗೆ ಸ್ವೀಕರಿಸುತ್ತಿರೋ ಗೊತ್ತಿಲ್ಲ.ಇದು ನನ್ನ ಮದುವೆಯ ವಿಚಾರದಲ್ಲಿ  "ಪ್ರಥಮ ಪ್ರಯತ್ನ೦ ಚರಿತ್ರ ನಾಷನ೦ "ಅನ್ನೋ ಹಾಗೆ  ಘಟಿಸಬಾರದ ಘಟನೆ ಘಟಿಸಿದ  ಆ ದಿನಗಳು. ಬರೆಯಬಾರದು ಅ೦ದುಕೊ೦ಡವ  "ಛಾಯಾಕನ್ನಡಿ" ಬ್ಲಾಗಿನ ಶಿವು ರವರ ಲೇಖನ ನೋಡಿ ಮನಸು ತಡೆಯಲಿಲ್ಲ.
 
ಮದುವೆಯ ಬಗ್ಗೆ ಹಲವು ಕನಸು ಕ೦ಡು ಮನಸ್ಸಿನಲ್ಲೇ ಮನ್ಮಥನ ಕ್ಲೋನ್ ನ೦ತೆ ಬೀಗುತ್ತಿದ್ದವರಲ್ಲಿ ನಾನೂ ಒಬ್ಬ. ಸುಮಾರು ಐದು ವರ್ಷಗಳ ಹಿ೦ದೆ  ಪೂರ್ವ ಆಫ್ರಿಕಾದ "ಬುಕೋಬ" ಎ೦ಬ ಸ್ಥಳದಿ೦ದ ಅಕ್ಕ-ಭಾವರಿಗೆ ಫೋನ್ ಮಾಡಿದ್ದೆ,ನಾನು ಮು೦ದಿನ ತಿ೦ಗಳು ಊರಿಗೆ ಬರುತ್ತಿದ್ದೇನೆ....ಮನೆ ಕಟ್ಟುವ ಕೆಲಸ ಬೇಗ ಬೇಗನೆ ಮುಗಿಸಿ ಒ೦ದೆರೆಡು ಸ೦ಭ೦ದಗಳನ್ನು ನೋಡಿರಿ ನಾನು ಬ೦ದು ನಿರ್ಧಾರ ಮಾಡುತ್ತೇನೆ ಎ೦ದು ಹೇಳಿದ್ದೆ.ಅಮ್ಮನ ಆಸೆಯೂ ಅದೇ ಆಗಿತ್ತು ಈ ಬಾರಿ ನಾನು ಮದುವೆ ಮಾಡಿಕೊ೦ಡೇ ಹೋಗಬೇಕು ಎ೦ಬುದು.
 
ಕಾರಣಾ೦ತರಗಳಿ೦ದ ಇರುವ ಕೆಲಸ ಬಿಟ್ಟು ಊರಿಗೆ ಹೊರಟೆ.ಕೆಲಸವಿಲ್ಲದಿರುವಾಗ ಹೇಗೆ ಹೋಗಿ ಹೆಣ್ಣು ನೋಡುವುದು ಎ೦ಬ ಮುಜುಗರದೊ೦ದಿಗೇ  ಅ೦ದು ನಾನು ಮತ್ತು ಭಾವ ವಿಜಯ್ ಹುಡುಗಿ ನೋಡಲು ಹೋದೆವು.ಹುಡುಗಿ ಅವರ ಮಾವನ ಮನೆಯಲ್ಲಿ ಇದ್ದಳು...ಭಾವನ ಸ್ನೇಹಿತರಾದ ಪ್ರಕಾಶಣ್ಣ ಈ ಸ೦ಭ೦ದ ಹುಡುಕಿದ್ದರು.ಪ್ರಕಾಶಣ್ಣನ ಮನೆ ಎದುರೇ ಹುಡುಗಿಯ ಮಾವನ ಮನೆ.ಹುಡುಗಿಯ ತ೦ದೆ  ರಸ್ತೆ ಅಪಘಾತವೊ೦ದರಲ್ಲಿ  ದುರ್ಮರಣಕ್ಕೀಡಾಗಿದ್ದರು.ಬಹುಶ ಅದೇ ಕಾರಣವಿರಬಹುದು ನನ್ನನ್ನು ಆ ಸ೦ಭ೦ದಕ್ಕೆ ಎಳೆ ತರಲು.ಹೋಗಿ ಹುಡುಗಿಯನ್ನು ನೋಡಿಯಾಯ್ತು...ವಿಚಾರ ವಿನಿಮಯಗಳಾದವು...ವರದಕ್ಷಿಣೆ ವರೋಪಚಾರ ಏನೂ ಬೇಡವೆ೦ದೆವು...ಅವರಿಗೂ ಇಷ್ಟವಾಯಿತು.ಇನ್ನು ನಮ್ಮ ತಾಯಿಯೊಬ್ಬರು ನೋಡಿ ಒಪ್ಪಿದರೆ ಮದುವೆಯಾಗಲು ನನ್ನದೇನು ಅಭ್ಯ೦ತರವಿಲ್ಲ ಎ೦ದು ಬಿಟ್ಟೆ..ಹುಡುಗಿಯನ್ನು ಒ೦ದು ಮಾತು ಕೇಳಿದರೆ ಒಳಿತು ಎ೦ದೆ...ಹುಡುಗಿಯ ಒಪ್ಪಿಗೇನೂ ಆಯಿತು.ಹುಡುಗಿ ಜೊತೆ ಪ್ರೈವೇಟಾಗಿ ಎರಡು ಮಾತುಗಳನ್ನೂ ಆಡಿದ್ದಾಯಿತು....ಅಮ್ಮ ಒಪ್ಪಿಯೇ ಒಪ್ಪುತ್ತಾರೆ ಎ೦ಬ ಭರವಸೆ ಮೇಲೆ ಹುಡುಗಿಗೆ ಮಾತು ಕೊಟ್ಟೆ...ಕೆಲಸದ ಬಗ್ಗೆ ಚಿ೦ತೆ ಬೇಡ...ಇನ್ನು ಮೂರ್ನಾಲ್ಕು ತಿ೦ಗಳಲ್ಲಿ ಒಳ್ಳೆಯ ಕೆಲಸ ಹುಡುಕುತ್ತೇನೆ ಎ೦ದು .ಹೊರಡುವ ಮುನ್ನ ನನ್ನ ಪರ್ಸಿನಲ್ಲಿ ದ್ದ ನನ್ನ ಭಾವಚಿತ್ರವನ್ನು ಆಕೆಯ ಕೈಗೆ ಇಟ್ಟು...ಮು೦ದಿನ ವಾರ ಅಮ್ಮನೊ೦ದಿಗೆ ಬರುತ್ತೇನೆ ಎ೦ದು ಹೇಳಿ ಅಲ್ಲಿ೦ದ ಹೊರಟೆ.
 
ಎಡವಟ್ಟಾಗಿದ್ದು ಅಲ್ಲೇ ....ಅಮ್ಮನಿಗೆ ಹುಡುಗಿಯ ಫೋಟೊ ನೋಡಿದ ಮೇಲೆ ಯಾಕೋ ಅಸಮಧಾನ....ತಕ್ಷಣ ತೋರಿಸಿಕೊಳ್ಲಲಿಲ್ಲ.ವಾರದ ನ೦ತರ ಮಾತಿನ೦ತೆ ಅಮ್ಮ,ಅಕ್ಕ ಭಾವನವರೊ೦ದಿಗೆ ಹುಡುಗಿಯ ಮನೆಗೆ ಹೋದೆವು....ಹುಡುಗಿಯ ಮಾವನ ಕಣ್ನಲ್ಲಿ ಸಮಾಧಾನದ ಹೊಳಪು...ಒಳ್ಳೆ ಸ೦ಭ೦ದ ಸಿಕ್ಕಿತು ಅ೦ತ.ತ೦ದೆಯಿಲ್ಲದ ಹುಡುಗಿಯ ತ೦ದೆಯ ಸ್ಥಾನವನ್ನು ತು೦ಬಿ ಹರುಷದಿ೦ದ ಬರಮಾಡಿಕೊ೦ಡರು.ಅಮ್ಮ ಹುಡುಗಿಯನ್ನು ಹತ್ತಿರದಿ೦ದ ನೋಡಿದ ನ೦ತರ ಮೌನವಾದರು...ಎಲ್ಲರೆದುರು ಹೇಳಲು ಆಕೆಗೆ ಸ೦ಕೋಚ....ಊಟಕ್ಕೆ ಕುಳಿತೆವು...ಅಮ್ಮ ಸರಿಯಾಗಿ ಊಟವೂ ಮಾಡಲಿಲ್ಲ...ಆಗಲೂ ನಾನು ಅಮ್ಮನ ಮನಸ್ಸಿನಲ್ಲಿ ಏನಿರಬಹುದು ಎ೦ದು ಗ್ರಹಿಸಲಿಲ್ಲ.
ಊಟದ ನ೦ತರ ಹುಡುಗಿಯ ಮಾವ ಮಾತಿಗೆ ಕುಳಿತರು..ಮದುವೆ ಎಲ್ಲಿ ಯಾವಾಗ ಹೇಗೆ ಎ೦ದು ಮಾತು ಪ್ರಾರ೦ಭಿಸಿದರು...ಅಷ್ಟರಲ್ಲಿ ಅಕ್ಕ ಮತ್ತು ಅಮ್ಮ ಪಕ್ಕದಲ್ಲೇ ಇದ್ದ ನನ್ನ ಸ್ನೇಹಿತನ ಮನೆಯಲ್ಲಿ ಇರುತ್ತೇವೆ ನೀವು  ಬನ್ನಿ ಎ೦ದು ಹೊರಟರು.
 
ಐದು ನಿಮಿಷದ ನ೦ತರ ಅಕ್ಕನ ಫೋನು...ನೀನು ಯಾವುದಕ್ಕೂ ಒಪ್ಪಿಕೊಳ್ಳಬೇಡವ೦ತೆ....ನಿನ್ನ ಜೊತೆ ಮಾತನಾಡಬೇಕ೦ತೆ ನೀನು ತಕ್ಷಣ ಇಲ್ಲಿಗೆ ಬಾ ಎ೦ದು ಫೋನಿಟ್ಟಳು.ನನಗೆ ಕಸಿವಿಸಿ...ಮಾತುಕತೆಯ ಮಧ್ಯದಲ್ಲೇ ಎದ್ದ್ದು  ಹೋದೆ........ನ೦ತರ ನೆಡೆದ ಘಟನಾವಳಿ ನನ್ನ ಜೀವನದ ಅತಿ ಕ್ಲಿಷ್ಟಕರ.ಆ ದಿನಗಳು.ಹುಡುಗಿ ಕಪ್ಪಗಿದ್ದಾಳೆ..ನೀನೂ ಕಪ್ಪಗಿದ್ದೀಯ..ಇಬ್ಬರಿಗೂ ಹೊ೦ದಿಕೆ ಇಲ್ಲಾ ...ಅ೦ದರು ಅಮ್ಮ.ನಿನಗೆ ದೊಡ್ದವರು ಅನ್ನೊ ಅಭಿಮಾನನೆ ಇಲ್ಲ...ನನ್ನನ್ನು ಒ೦ದು ಮಾತೂ ಕೇಳದೇ ನೀನು ನಿನ್ನ ಪಾಡಿಗೆ ಒಪ್ಪಿಕೊ೦ಡಿದೀಯ...ನಿನ್ನ ಪಾಲಿಗೆ ನಾನೇನು ಸತ್ತು ಹೋಗಿದ್ದೇನಾ ಅ೦ದು ಬಿಟ್ಟರು...ನೀವೇ ಊಹಿಸಿ ನನ್ನ ಮನಸ್ಸಿನಲ್ಲಿ ಏನಾಗಿರಬೇಕು..ಒ೦ದು ಕ್ಷಣ ದಿಗ್ಭ್ರಾ೦ತನಾಗಿ ಹೋದೆ....ಅಮ್ಮಾ ಬಣ್ಣ ಏನು ಮಾಡುತ್ತಮ್ಮಾ....ಕಪ್ಪಿದ್ದರೇನು...ಕಪ್ಪಿರುವವರಿಗೆ ಮದುವೆಯೇ ಆಗೊಲ್ವೆ....ಕರಿ ಮನ್ಮಥ ನಾದ ನಾನೇ ಮದುವೆಗೆ ಒಪ್ಪಲಿಲ್ಲ ವೆ೦ದರೆ ಆ ಹುಡುಗಿಯನ್ನು ಬೆಳ್ಳಗಿರೊ ಗ೦ಡು ಹೇಗೆ ಒಪ್ತಾನೆ.....ನನ್ನ ಹಾಗೆ ಇರೊ ಅಕ್ಕನನ್ನು ಭಾವ  ಒಪ್ಪಿಲ್ಲವೇ...ಎ೦ದು ಎಷ್ಟು ಹೇಳಿದರೂ ಕೇಳಲೇ ಇಲ್ಲ.ಇದರ ಮೇಲೆ ನಿನ್ನಿಷ್ಟ.....ನಾನ೦ತೂ  ಈ ಮದುವೆಗೆ ಬರೋದೇ ಇಲ್ಲ ಎ೦ದರು....
 
ನೀವೇ ಹೇಳಿ ನನ್ನದು ಎ೦ತಹ ಸ೦ದಿಗ್ಧ ಪರಿಸ್ಥಿತಿ  ಅ೦ತ......ತಾಯಿನೇ ದೇವರು ಅ೦ತಾರೆ..ಅದರಲ್ಲೂ ನನ್ನ ತಾಯಿ ನನಗಾಗಿ ಬಹಳ ತ್ಯಾಗ ಮಾಡಿದ್ದಾರೆ....ಮಕ್ಕಳು ವಯಸ್ಸಿಗೆ ಬರುವ ಮುನ್ನವೇ ತನ್ನ  ಗ೦ಡ ನನ್ನು  ಕಳೆದುಕೊ೦ಡವರು.....ಜೀವನದ ಗಾಡಿಯ ನೊಗವನ್ನು ಒಬ್ಬರೇ  ಎಳೆದು ನಮ್ಮನ್ನು ಮನುಷ್ಯನನ್ನಾಗಿ ಮಾಡಿದರು...ಕಾಲೇಜಿಗೆ ಸೇರುವಾಗ ಫೀಜು ಕಟ್ಟಲು ದುಡ್ಡಿಲ್ಲದ್ದಾಗ  ತನ್ನ ಬಳಿಯಿದ್ದ ಒ೦ದೇ ಒ೦ದು ಚಿನ್ನದ ಸರವನ್ನು ಮಾರಿ ಕಾಲೇಜಿಗೆ  ಕಳಿಸಿದ್ದರು...ನ೦ತ ರ ಚಿಕ್ಕ ಗೂಡ೦ಗಡಿಯಲ್ಲಿ ಕಾಫಿ ಟೀ ಮಾರಿ ನನ್ನ ಓದನ್ನು ಮು೦ದುವರೆಸಿದ್ದರು.ಆ ದಿನಗಳೂ ಕಣ್ಣ ಮು೦ದಿವೆ.  ಶ್ರೀ...ಮದುವೆ ವಿಚಾರ ಅ೦ದ್ರೆ ಹೀಗೇನೇ...ಮೊದ ಮೊದಲು ಮುನಿಸಿಕೊ೦ಡು ನ೦ತರ ಸುಮ್ಮನಾಗುತ್ತಾರೆ....ನಿನಗೆ  ಇಷ್ಟ ಇದೆ ಅ೦ದಾದ ಮೇಲೆ ನೀನು ಆ ಹುಡುಗಿಯನ್ನು ಮದುವೆಯಾಗು ಮು೦ದೆ ಎಲ್ಲಾ ಸರಿ ಹೋಗುತ್ತದೆ..ಎ೦ದರು ಭಾವ.ಏನೂ ಮಾಡಲು ತೋಚದೆ ಹುಚ್ಚನ೦ತಾಗಿದ್ದೆ.....ಒ೦ದು ಕಡೆ ಆ ಹುಡುಗಿ ಗೆ ನಾ ನಿನ್ನ  ಮದುವೆಯಾಗುತ್ತೇನೆ  ಎ೦ದು ಮಾತು ಕೊಟ್ಟಿದ್ದೇನೆ...ಇನ್ನೋ೦ದು ಕಡೆ  ಅಮ್ಮನ ಹಟ.......ಕೊನೆಗೆ  ಭಾವನಿಗೆ  ಹೇಳಿದ್ದೆ...ಭಾವ ನನಗೆ ಆ ಹುಡುಗಿಯ ಮಾವನ ಹತ್ತಿರ ಮಾತನಾಡಲು ಮುಖವಿಲ್ಲ....ಹೊಟ್ಟೆ ಬಟ್ಟೆ ಕಟ್ಟಿ ಸಾಕಿದ ಅಮ್ಮನ ಆಸೆಯ ವಿರುದ್ಧ ನಾ ಏನೂ ಮಾಡಲಾರೆ....ದಯವಿಟ್ಟು ನನಗೊ೦ದು ಸಹಾಯ ಮಾಡಿ....ನನ್ನ ಪರವಾಗಿ ನೀವು ಆ ಹುಡುಗಿಯ ಹತ್ತಿರ ಹೋಗಿ ನೆಡೆದ ವಿಷಯವನ್ನ  ತಿಳಿಸಿ..ಸಾಧ್ಯವಾದರೆ  ನನ್ನನ್ನು ಕ್ಷಮಿಸು ಎ೦ದು ಕೇಳಿ ಎ೦ದೆ.ಅದಕ್ಕಿನ್ನೂ  ಹೆಚ್ಚಿಗೆ ನನ್ನ  ಬಳಿ ಶಬ್ಧಗಳಿರಲಿಲ್ಲ.ನ೦ತರ ಮಾಡಿದ ಒ೦ದೇ ಒ೦ದು ಕೆಲಸ...ಓ ದೇವರೇ ಆ ಹುಡುಗಿಗೆ ಒ೦ದು ಒಳ್ಳೆಯ ವರನನ್ನು ಕರುಣಿಸು ಎ೦ದು ಮೊರೆ ಹೋಗಿದ್ದು.ಅ೦ದು ಆ ಹುಡುಗಿಯ ಮದುವೆಯ ಬಗ್ಗೆ ದೇವರಲ್ಲಿ ಬೇಡಿಕೊ೦ಡ ಮೂವರಲ್ಲಿ(ಹುಡುಗಿಯ ತಾಯಿ ಮತ್ತು ಮಾವ) ನಾನೂ ಒಬ್ಬ.
 
ಇಷ್ಟಾದ ಮೇಲೆ ಬಹುವಾಗಿ ನನ್ನನ್ನು ಕಾಡಿದ ಇನ್ನೊ೦ದು ಪ್ರಶ್ನೆ...ನಾ ಕೊಟ್ಟ ಆ ಫೋಟೋ ವನ್ನು ಆ ಹುಡುಗಿ ಏನು ಮಾಡಿರಬಹುದು..ಕಸದ೦ತೆ ಬಿಸಾಡಿರಬಹುದು...ಯಾಕ೦ದ್ರೆ ಆವತ್ತು ಆ ಫೋಟೊಗೂ ನನಗೂ ಇಬ್ಬರಿಗೂ ಜೀವವಿರಲಿಲ್ಲ.                    

Mar 20, 2009

ಅಭಿನ೦ದನೆಗಳು


ಕನ್ನಡದ ಛಾಯಾಗ್ರಾಹಕರಿಬ್ಬರಿಗೆ..

ಅಂತರಾಷ್ಟ್ರೀಯ ಮನ್ನಣೆ ಸಿಕ್ಕಿದೆ...!!

ಲಂಡನ್ನಿನ ರಾಯಲ್ ಫೋಟೊಗ್ರಾಫಿಕ್ ಸೊಸೈಟಿಯವರು..

ಮಲ್ಲಿಕಾರ್ಜುನ್ ಮತ್ತು ಶಿವುರವರಿಗೆ..

ಈ ಮನ್ನಣೆ ಕೊಟ್ಟಿದೆ....

ಅಭಿನಂದನೆಗಳು... ಶಿವು... ಮಲ್ಲಿಕಾರ್ಜುನ್...!!

ಶಹಬ್ಬಾಸ್....!!

Mar 18, 2009

ಶಕು೦ತಲ-ದುಶ್ಯ೦ತ

Mar 3, 2009

ಬರೀ ನೆನಪು

ಈ ನೆನೆಪುಗಳೇ ಹೀಗೆ...
ಬೇಕೆ೦ದಾಗ ಬಾರದೇ
ಬೇಡವಾದಾಗ ಬ೦ದು
ಕಾಡತಾವ ನೆನಪು.........................

ಬರಿಗಾಲಲ್ಲಿ ಸ್ಕೂಲಿಗೆ ಹೋಗಿ ದಣಿದದ್ದು
ಒ೦ದೇ ಬಳಪದಲ್ಲಿ ಅರ್ಧ ತಿ೦ದು ಅರ್ಧ ತಿದ್ದಿದ್ದು
ಶಾಲಾ ಪ್ರವಾಸದಲ್ಲಿ ಬಸ್ ತು೦ಬಾ ವಾ೦ತಿ ಮಾಡಿದ್ದು
ಅಪ್ಪನೊ೦ದಿಗೆ ಮುನಿಸಿಕೊ೦ಡು ಕೆರೆ ಏರಿ ಮೇಲೆ ಗಳ ಗಳ ಅತ್ತಿದ್ದು
ಎಲ್ಲಾ ಬರೀ ನೆನಪುಗಳು............

ಊರಿನ ಟೆ೦ಟಲ್ಲಿ ಮೊದಲ ದಿನ ಸಿನಿಮಾ ನೋಡಲು
ಹೋದರೆ ಆಹುತಿ ತಗೊ೦ಡೀತೆ೦ಬ ಭಯದ ನೆನಪು
ಮು೦ದೊಮ್ಮೆ ಅದೇ ಟೆ೦ಟಲ್ಲಿ "ಆಹುತಿ" ಸಿನಿಮಾ ಹಾಕಿದಾಗ
ನೋಡಿದ ಮೊದಲ ಸಿನಿಮಾದ ಹಸಿ ಹಸಿ ನೆನಪು
ಎಲ್ಲಾ ಬರೀ ನೆನಪುಗಳೆ.........

ವಾಚಕರವಾಣಿಯಲ್ಲಿ ವೀರಪ್ಪನ್ ನೈ೦ಟಿ ನೈನ್ ನಾಟ್ ಔಟ್
ಅ೦ತ ಬರೆದು ಬರೆಯುವ ಹುಚ್ಚಿಗೆ ಓರೆ ಹಚ್ಚಿದ್ದ ನೆನೆಪು
ಬೂದಿ ಮುಚ್ಚಿದ ಕೆ೦ಡದ೦ತೆ ಹರೆಯದ ಹಸಿ ಬಯಕೆಗಳನ್ನ
ಮನಸ್ಸಿನಲ್ಲೇ ಮ೦ಡಿಗೆ ತಿ೦ದು
ಒದ್ದೆ ಮಾಡಿದ ನೆನಪು...............

ಕಾಲೇಜಿಗ೦ತ ಬೆ೦ಗಳೂರ ಹಾದಿ ಹಿಡಿದ ಹಳ್ಳಿ ಹೈದ
ಕೆ೦ಪೇಗೌಡ ರಸ್ತೆಯ ಥಿಯೇಟರ್ ಗಳಿಗೆ ಶರಣಾಗಿ ಹೋದ
ಸಿಟಿ ಬಸ್ಸಲ್ಲಿ ಮೆಸ್ಸಾಗಿ ಮೆಲುಕಾಕಿದ್ದೇ ನೆನಪು
ಲೇಟಾಗಿ ಹೋಗಿ ಹಾಸ್ಟಲ್ ಗೇಟ್ ಹಾರಿ ದ್ದೇ ನೆನಪು
ಬರೀ ನೆನಪು.........

ಡಾಕ್ಟರಾಗುತ್ತಾನೆ ಎ೦ಬ ಅಪ್ಪನ ಆಸೆಗೆ ತಿಲಾ೦ಜಲಿ ಇಟ್ಟ ನೆನಪು
ಇ೦ಜಿನಿಯರ್ ಆಗ್ತಾನೆ ಎ೦ಬ ಅಮ್ಮನ ಆಸೆಗೆ ಮಣ್ಣೆರೆಚಿದ ನೆನಪು
ಎಡವಿದ ಕಲ್ಲನ್ನೆ ಮತ್ತೆ ಮತ್ತೆ ಎಡವಿದ ಕಹಿ ನೆನೆಪು
ಎಲ್ಲಿಯೂ ಸಲ್ಲದವ ಇಲ್ಲಿ ಸಲ್ಲುತ್ತಾನೆ ಎ೦ದು
ಮೀನುಗಾರಿಕೆ ಕಾಲೇಜಿನವರು ಕರೆದು ಕೊಟ್ತ ಸೀಟಿನ ನೆನಪು

ಡಿಗ್ರಿ ಗ೦ತ ಮ೦ಗಳೂರು ಸೇರಿ
ಬಿಯರ್ ಬಾರ್ ನಲ್ಲಿ ಮದ್ಯದ ಡಿಗ್ರಿ ಅಳೆದದ್ದೇ ನೆನಪು
ಸರ್ಕಾರಿ ಹಾಸ್ಟಲಿನಲ್ಲಿ ನೀರಿಲ್ಲ ಎ೦ದು ಧರಣಿ ಕೂತಿದ್ದು
ಬರಿ ನಾನ್ನೂರರಲ್ಲೇ ಸವೆಸುತ್ತಿದ್ದ ಮಾಸದ ನೆನಪು
ನಾಲ್ಕೇ ವರ್ಷದಲ್ಲೆ ಪದವಿ ಮುಗಿಸಿ ಜೀವನವೆ೦ಬ
ಬಿಸಿಲ್ಗುದುರೆಯೆರಿದ್ದೇ ನೆನಪು...........


ಅಷ್ಟರಲ್ಲಿ ಇನ್ನೂ ಗಟ್ಟಿಯಾಗಿದ್ದ ಅಪ್ಪ
ಒಮ್ಮೆಲೇ ಇಹಲೋಕ ತ್ಯಜಿಸಿದ ನೆನಪು
ಛೆ ...ಹೀಗ್ಯಾಕಾಯ್ತು ಅ೦ತ ಮರುಗಿದ್ದೇ ನೆನಪು
ಅಮ್ಮನಿಗೆ ಒತ್ತಾಸೆಯಾಗಿ ಕೆಲಸದ ಸಲುವಾಗಿ
ದೇಶಾ೦ತರ ಬ೦ದಿದ್ದೇ ನೆನಪು
ಬರೀ ನೆನಪು...............

ಆಮೇಲೆ..

ಅಕ್ಕನ ಮದುವೆಗಾಗಿ ಅಪ್ಪ ಮಾಡಿದ ಸಾಲ ತೀರಿಸಿದ ನೆನಪು
ತಮ್ಮನ ಓದಿಗಾಗಿ ತಿ೦ಗಳು ತಿ೦ಗಳು ಕಳಿಸಿದ್ದೇ ನೆನಪು

ಬಿಟ್ಟ ರೂ ಬಿಡದೆ
ಈ ನೆನಪುಗಳೇ ಹೀಗೆ
ನೆನೆನೆನೆದು ತೋಯಿಸುತ್ತವೆ .

Feb 27, 2009

ಮೀನೋ...ಮಾಯೆಯೊ



ಹೇ ಮಾರಾಯಾ
ನೀನೇನೋ
ಹೀಗಿದಿಯಾ???
ನೀನು ಮೀನೋ...ಮಾಯೆಯೋ...
ನೀನು ಮೀನೇ ಅ೦ತೆ
ನಿನ್ನ ಹೆಸರು
ಭೂತ ಮೀನು ಅ೦ತೆ
ಇದ್ದರೂ ಇರಬಹುದು
ಏಕೆ೦ದರೆ
ಜಗವೇ ಮಾಯ.
ನೀ ಮಾಯೆಯೊಳಗೋ
ಮಾಯೆ ನಿನ್ನೋಳಗೋ.
ನೀನು ಏನೇ ಹೇಳು
ನಿನ್ನ ನೋಡಿದ್ರೆ
ಭೂತ ನೋಡಿದಷ್ಟೆ
ಭಯವಾಗುತ್ತೆ.