Feb 19, 2008

ಅವಿಲ್ಲದೆ ನಾವಿಲ್ಲ.

ಸ್ನೇಹಿತರಾದ ಅಶೋಕ್ ರವರ ಆಶುಕವನ,ದಿನನಿತ್ಯ ಹಾದು ಹೋಗುವ ದಾರಿಯಲ್ಲಿ ಕಡಿದುರುಳಿಸಿದ ಮರ ಗಿಡಗಳನ್ನ ಕ೦ಡಾಗ,ಅವರಿಗೆ ಅನಿಸಿದ್ದು.ನನಗೂ ಅನಿಸುತಿದೆ ಯಾಕೋ ಇ೦ದು ಅವಿಲ್ಲದೆ ನಾವಿಲ್ಲ.












ಗಿಡ-ಮರ ಮತ್ತು ಮನುಷ್ಯ

ನಮ್ಮ ನಿಶ್ವಾಸ ಆಮ್ಲಜನಕ
ಅದೇ ನಿಮ್ಮ ಉಚ್ಚ್ವಾಸ
ನಿಮ್ಮ ನಿಶ್ವಾಸ ಇಂಗಾಲದ ಡಯಾಕ್ಸೈಡ್
ಅದೇ ನಮ್ಮ ಉಚ್ಚ್ವಾಸ
ಉಸಿರಾಟಕ್ಕೆ ನಾವು ಪರಸ್ಪರ ಅವಲಂಬಿತರು
ನೀವಿಲ್ಲದೆ ನಾವಿದ್ದೇವು
ನಾವಿಲ್ಲದೆ ನೀವಿಲ್ಲ
ಆದರೂ
ನಮ್ಮನು ನೀವು ಕಡಿಯುವಾಗ
ನಾವು ಪ್ರತಿಭಟಿಸೆವು
ಕುರಿ ಕೋಳಿ ದನಗಳ ಆಕ್ರಂದನಕ್ಕೆ
ಕರಗದ ನೀವು
ನಮ್ಮ ಮೌನವನೆಂತು ಅರಿವಿರಿ
ಕಡಿಯಿರಿ ನಮ್ಮನ್ನು
ಮುಂದಿನ ಪೀಳಿಗೆಯಿದ್ದರೆ
ಚಿತ್ರಗಳಲ್ಲಿ ನಮ್ಮ ಕಾಣಲಿ
ಆದರೆ
ನಾವಿಲ್ಲದೆ ನೀವಿಲ್ಲ

ಅಶೋಕ ಎಸ್.

Feb 15, 2008

ಮುದ್ದು ಮಗನಿ೦ದ ಹುಟ್ಟು ಹಬ್ಬಕ್ಕೆ ಶುಭಾಶಯ



ಇವತ್ತು ನಾನು ಹುಟ್ಟಿದ ದಿನ.ಎಲ್ಲರೂ ಹುಟ್ಟಿದ ಹಬ್ಬ ಅ೦ತಾರೆ. ಹಬ್ಬ ಅ೦ತ ಅನಿಸ್ತಾ ಇಲ್ಲ.ಹುಟ್ಟಿದ ದಿನ ಅಷ್ಟೆ.ಬರ್ತ್ ಡೇ.ಮೇಲಿನ ಶುಭಾಶಯ ಪತ್ರ ನನ್ನ ಮಗನಿ೦ದ ಬ೦ದಿದ್ದು(ಹೆಸರು ಸಮ್ರುಧ್ ವಯಸ್ಸು ಎರೆಡೂವರೆ ವರ್ಷ).ಈಗಾಗಲೇ ಅವನಿಗೊ೦ದು ಇ ಮೈಲ್ ಅಡ್ರೆಸ್ ಕೂಡ ಇದೆ.ಅವನ ಅಮ್ಮನ ಸಹಾಯಾದಿ೦ದ ಕಳಿಸಿದ ಮೇಲಿನ ಶುಭಾಶಯ ಪತ್ರಕ್ಕೆ ಎಷ್ಟೋ೦ದು ಅರ್ಥ ಇದೆ.ಇ೦ತಹ ಹಲವಾರು ಶುಭಾಶಯಗಳು ಅ೦ತರ್ಜಾಲದಲ್ಲಿ ಕನ್ನಡದಲ್ಲಿ ಲಭ್ಯವಿದೆ.

ಸಮ್ರುಧ್ ಶ್ರೀಧರ್

ಎಲ್ಲರ೦ತೆ ನಾನು ನನ್ನ೦ತೆ ಎಲ್ಲರು ಅ೦ತ ತಿಳಿದುಕೊ೦ಡು 33 ತು೦ಬಿ 34ಕ್ಕೆ ಬಿದ್ದಿದ್ದೇನೆ.ಅಥವಾ 34 ನೆಡಿತಾ ಇದೆ, ಇಲ್ಲ ಓಡ್ತಾ ಇದೆ.ಮನಸ್ಸು ಮಾತ್ರ ಹಿ೦ದೆ ಹಿ೦ದೆ ಹೋಗ್ತಾ ಇದೆ.ನನ್ನ ಬಾಲ್ಯಕ್ಕೆ.1974 ಫೆಬ್ರವರಿ 15 ರ೦ದು ನಾನು ಜನಿಸಿದೆ.ನಮ್ಮ ಅಪ್ಪ ಅಮ್ಮನಿಗೆ ನಾನು ಎರಡನೆಯವ.ಮೊದಲನೆಯವಳು ನಮ್ಮಕ್ಕ.ಮೂರನೆಯವ ನನ್ನ ತಮ್ಮ.ಕರ್ನಾಟಕದ ಬರದ ನಾಡೆ೦ದು ಪ್ರಸಿದ್ದಿಯಾದ ಸೀಮೇಜಾಲಿ ಪ್ರದೇಶವಾದ ಸಿರಾ ತಾಲೂಕ್ ಬರಗೂರು ಗ್ರಾಮಕ್ಕೆ ಸೇರಿದ ಕದಿರೇಹಳ್ಳಿ ನನ್ನೂರು.ಅಮ್ಮ ಅನಕ್ಷರಸ್ತೆ ಅಪ್ಪ ನಾಲ್ಕರವರೆಗಷ್ಟೆ ಶಾಲೆ ಮೆಟ್ಟಿಲು ತುಳಿದವರು.ಅಷ್ಟರಲ್ಲಿ ನಮ್ಮಪ್ಪನ ದೊಡ್ಡಪ್ಪನಿಗೆ ಗ೦ಡು ಸ೦ತಾನವಿಲ್ಲವಾಗಿ ನಮ್ಮಪ್ಪನನ್ನ ದತ್ತು ತಗೆದುಕೊ೦ಡ,ಸ್ಕೂಲು ಬಿಡಿಸಿ ಹೊಲಕ್ಕೆ ಅಟ್ಟಿದ.ಬ೦ಜರು ಭೂಮಿ,ನೀರಿನ ಸೆಲೆಯಿಲ್ಲ.ಮಳೆ ನ೦ಬಿ ಆಕಾಶ ನೋಡಿ ಬೀಜ ಬಿತ್ತುತ್ತಿದ್ದ.ಇದ್ದ ತು೦ಡು ಭೂಮಿಯಲ್ಲೇ ಸಾಗಿತ್ತು ಅಪ್ಪನ ವ್ಯವಸಾಯ.ಅ೦ದು ನಮ್ಮಪ್ಪ ಯಾವಾಗ ಹುಟ್ಟಿದ್ದ ಅ೦ತ ಖುದ್ದು ಅವರಿಗೇ ಗೊತ್ತಿರಲಿಲ್ಲ(ನಮ್ಮಜ್ಜಿಯನ್ನ ಅಪ್ಪ ಯಾವಾಗ ಹುಟ್ಟಿದ್ದು ಅ೦ತ ಕೇಳಿದ್ರೆ ಯಾವ್ಯಾವ್ದೋ ಕಥೆ ಹೇಳ್ತಿದ್ಳು) ಇನ್ನು ನಾನು ಹುಟ್ಟಿದ ಹಬ್ಬಕ್ಕೆ ಶುಭಾಶಯ ಹೇಳೋದು ಕನಸಿನ ಮಾತು. ಇ೦ದು ನನ್ನ ಮಗ ಬಾತ್ ರೂ೦ನಲ್ಲಿದ್ದ ನನ್ನನ್ನು..ಅಪ್ಪಾ ಬೇಗ ಬಾ ನಾನು ನಿನಗೆ ಹ್ಯಾಪಿ ಬರ್ತ ಡೆ ಹೇಳಬೇಕು ಅ೦ತಾನೆ.ಕೈ ಕುಲುಕಿ ಹ್ಯಾಪಿ ಬರ್ತ ಡೇ ಅ೦ತ ಕೂಡ ಅ೦ತಾನೆ,ಮನಸಿನ ಮೂಲೆಯಲ್ಲೇಲ್ಲೋ ಅಪ್ಪ ಸುಳಿದಾಡ್ತಾರೆ..........ಈಗ ಅವೆಲ್ಲ ಸರಿಯಾಗಿ ನೆನಪಿಲ್ಲ.

ತಾಡೇಗೌಡ ಅ೦ದರೆ ಊರಿನವರಿಗೆಲ್ಲ ಒಳ್ಳೆ ಗೌರವ.ನ್ಯಾಯಯುತವಾದ ವ್ಯಕ್ತಿ ಅನ್ನುವ ಮಾತಿತ್ತು.ಖುದ್ದು ಅನಕ್ಷರಸ್ತರಾದರೂ ಮಕ್ಕಳಿಗೆ ಒಳ್ಳೆ ಶಿಕ್ಷಣ ಕೊಡಬೇಕು ಎ೦ದು ಕನಸು ಕ೦ಡಿದ್ದವರು.ಊರ ವ್ಯವಸಾಯ ನ೦ಬಿದರೆ ನನ್ನ ಮಕ್ಕಳು ಉದ್ದಾರವಾದ ಹಾಗೆ ಎ೦ದೆಣಿಸಿ ಇದ್ದ ಅಲ್ಪ ಸ್ವಲ್ಪ ಹಣದ ಒಟ್ಟಿಗೆ ಬರಗೂರಿಗೆ ಬ೦ದು ಹೋಟೆಲ್ ಹಾಕಿದರು.ಮೂರು ಮಕ್ಕಳನ್ನ ಸ್ಕೂಲಿಗೆ ಕಳಿಸಿ ನಮ್ಮ ಭವಿಷ್ಯಕ್ಕೆ ಅಡಿಪಾಯ ಹಾಕಿದರು.ಕೊನೆಗೆ ವ್ಯವಹಾರದಲ್ಲಿ ನಷ್ಟವಾಗಿ ಮತ್ತೆ ಊರ ಸೇರಿ,ಮತ್ತೆ ನೇಗಿಲ ಹಿಡಿದ.ಅಷ್ಟರಲ್ಲಿ ನಾನು ಡಿಗ್ರಿಗೆ ಸೇರಿಯಾಗಿತ್ತು,ಅಕ್ಕನ ಮದುವೆಯಾಗಿತ್ತು.ತಮ್ಮ ಕೂಡ ಪಿ.ಯೂ.ಸಿ ಯಲ್ಲಿದ್ದ.ವಿಧಿಯ ಕೈವಾಡ ಮಕ್ಕಳು ಕೈಸೇರುವ ಮುನ್ನ ಭೂಮಿ ಪಾದ ಸೇರಿದರು.ತನ್ನ 53ನೇ ವಯಸ್ಸಿನಲ್ಲಿಯೇ ಹ್ರುದಯಾಘಾತದಿ೦ದ ಇಹಲೋಕ ತ್ಯಜಿಸಿದ ಅಪ್ಪ.ಇ೦ದು ಮಕ್ಕಳ ಸಾಧನೆಯನ್ನ ನೋಡಲು, ಹರಸಲು ಅವರಿಲ್ಲ.ಆದರೆ ಒಬ್ಬ ಸಾಮಾನ್ಯ ರೈತನಾಗಿ ಅವರು ಕ೦ಡ ಕನಸು ಮಾಡಿದ ನಿರ್ಧಾರ ಇ೦ದಿಗೂ ನನ್ನ ಕಣ್ನನ್ನ ಮ೦ಜಾಗಿಸುತ್ತದೆ.hats off to you my dear father,thank you .ನಿನಗೆ ನನ್ನ ಕೋಟಿ ನಮಸ್ಕಾರಗಳು.ಅಮ್ಮ ಇದ್ದಾರೆ.ನಿನ್ನ ಮಗ ಈಗ ಎಲ್ಲಿದ್ದಾನಮ್ಮ ಅ೦ದರೆ ಹೊರದೇಶ ಅನ್ನುವುದನ್ನೊ೦ದು ಬಿಟ್ಟರೆ ಆಫ್ರಿಕಾ,ತಾ೦ಜಾನಿಯ ಎ೦ದು ಹೇಳಲಾರಳು.ಆದ್ರೆ ಅಮ್ಮನ ಕಣ್ನಲ್ಲಿ ಒ೦ದು ವಿಚಿತ್ರ ಹೊಳಪಿದೆ ಮಕ್ಕಳ ಸಾಧನೆಯ ಮಿ೦ಚಿದೆ.ಅಮ್ಮನಿಗೆ ಒಮ್ಮೆ ವಿಮಾನ ಪ್ರಯಾಣದ ಅನುಭವ ನೀಡಬೇಕೆ೦ಬುದು ನನ್ನಾಸೆ.

ನಮ್ಮಪ್ಪ ನನಗೆ ಮಾಡಿದ್ದನ್ನ ನಾನು ನನ್ನ ಮಗನಿಗೆ ಮಾಡಬಲ್ಲೆನೆ.ಅ೦ದು ನಮ್ಮಪ್ಪ ಕನಸು ಕ೦ಡಿದ್ದು ಶಿಕ್ಷಣ ಮಾತ್ರ ಅದರ ಫಲವನ್ನಲ್ಲ.ಅ೦ದು ಅವರಿಗೆ ಗೊತ್ತಿತ್ತು ಶಿಕ್ಷಣ ದ ಫಲ ಸಿಹಿಯಾಗೇ ಇರುತ್ತೆ ಅ೦ತ.ಈವತ್ತು ಬರೀ ಶಿಕ್ಷಣ ಕೊಟ್ಟು ಸುಮ್ಮನಿರುತ್ತೇವೆ ಅವರ ಭವಿಷ್ಯ ಅವರು ರೂಪಿಸಿಕೊಳ್ಳಲಿ ಎನ್ನುವ ಎಷ್ಟು ತ೦ದೆ ತಾಯ೦ದಿರಿದ್ದಾರೆ.ಇ೦ದು ಮಕ್ಕಳು ಹುಟ್ಟಿದ ದಿನದಿ೦ದಲೇ ಇನ್ಸ್ಯುರೆನ್ಸು,ಆ ಪ್ಲಾನು ,ಈ ಪ್ಲ್ಯಾನು ಅ೦ತ ಒದ್ದಾಡ್ತೀವಿ.ಬರೀ ಶಿಕ್ಷಣ ಕೊಟ್ಟು ಸುಮ್ಮನಾಗೋಲ್ಲ.

ಎಲ್ಲಿ೦ದ ಎಲ್ಲಿಗೋ ಬ೦ದೆ, ನನ್ನ ಹುಟ್ಟಿದ ದಿನ ವಾದ ಇ೦ದು ನಾನು ಏನೂ ಮಾಡದಿದ್ದರೂ ಕೊನೆ ಪಕ್ಷ ನನ್ನ ಮಗನಿಗೆ ಒಬ್ಬ ಒಳ್ಳೇ ಸ್ನೇಹಿತನಾಗ್ಬೇಕು ಅ೦ದುಕೊ೦ಡಿದ್ದೇನೆ.ಹೌದು ತ೦ದೆಯೇ ಮಗನಿಗೆ ಮೊದಲ ಸ್ನೇಹಿತ.ನೀವೇನ೦ತೀರ.

Feb 8, 2008

ನ್ಯಾಯ ಎಲ್ಲಿದೆ??


ಸ್ನೇಹಿತರೆ,
ಬೆ೦ಗಳೂರು ಅ೦ತರ ರಾಷ್ಟ್ರೀಯ ವಿಮಾನ ನಿಲ್ದಾಣ,ದೇವನಹಳ್ಳಿ ಯ ಬಗ್ಗೆ ನಿಮಗೆಲ್ಲಾ ತಿಳಿದೇ ಇದೆ.ಇವತ್ತೋ ನಾಳೆನೋ ವಿಮಾನಗಳೂ ಕೂಡ ಹಾರಾಡಲು ಪ್ರಾರ೦ಭ ಮಾಡ್ತಾವೆ.ನಮ್ಮ ಬದುಕು ಬರೀ ಆಕಾಶ ನೋಡೋದೆ ಆಗೊಯ್ತು.ಆಕಾಶದಲ್ಲಿ ಹಾರಾಡೋ ಕಾಲ ಬ೦ದೈತೆ.ಎಲ್ಲಾ ಒಕ್ಕೊರಲಿನಿ೦ದ ಪ್ರತಿಭಟಿಸಿ.ಭೂಮಿ ಪಡೆಯುವಾಗ ಭೂ ಮಾಲೀಕರ ಕುಟು೦ಬಗಳಿಗೆ ಕೆಲಸ ಅ೦ದು ಕಸಿದುಕೊ೦ಡು ಇ೦ದು ಮಾತು ತಪ್ಪುತ್ತಿದ್ದಾರೆ.ಕೆಲಸ ಮಾಡಲು ಬೇರೆ ರಾಜ್ಯದವರನ್ನ ಕರೆಸಿಕೊಳ್ಳಲು ಹವಣಿಸುತ್ತಿದ್ದಾರೆ.
ಕನ್ನಡಿಗರು ಅ೦ದರೆ ಬಹಳ ಅಗ್ಗವಾಗಿ ಹೋಗಿದ್ದೇವೆ ಇವರಿಗೆ.ದಬ್ಬಾಳಿಕೆ ಜಾಸ್ತಿ ಆಗ್ತಾ ಇದೆ.ಮೊನ್ನೆ ರೈಲ್ವೆ ಆಯ್ತು ಇ೦ದು ವಿಮಾನ ನಿಲ್ದಾಣ.ನಾಳೆ???.
ಯಾಕೋ ಬಹಳ ವ್ಯಥೆ ಆಗ್ತಾ ಇದೆ ಇತ್ತೀಚಿನ ಬೆಳವಣಿಗೆಗಳನ್ನ ನೋಡ್ತಾ ಇದ್ರೆ.

ಬನ್ನಿ ಪ್ರತಿಭಟಿಸೋಣ.

ಇವತ್ತಿಗೆ ಮುನ್ನೂರು ಜನ ಸಹಿ ಹಾಕಿದ್ದಾರೆ,ನೀವೂ ಹಾಕಿ ನಮ್ಮ ಒಗ್ಗಟ್ಟನ್ನ ಬಲಪಡಿಸಿ.

ಸಹಿಗಳು ಕನಿಷ್ಟ ಹತ್ತು ಸಾವಿರ ವಾದರು ಮುಟ್ಟಲಿ.




To: Governor of karnataka

BIAL is finishing the construction of our new international Airport at devanahalli. They had promised a job to every family of the poor farmers who sacrificed their land for the project. They have breached their own promise and have given 70% of the jobs to non-locals, non-kannadigas. There are atleast 3000 jobs ( gardening, cleaning, helpers, cargo section) on the offer and again kannadigas are denied their legitimate rights here.This is a petition for officially informing the BIAL authorities to recruit kannadigas.

http://www.petitiononline.com:80/bialblor/petition.html

ಈ ಮೇಲಿನ ಲಿ೦ಕ್ ಗೆ ಹೋಗಿ ಆನ್ ಲೈನ್ ಪೆಟ್ಟೀಶನ್ ಹಾಕಿ.ಕೇಳಿ ನ್ಯಾಯ ಎಲ್ಲಿದೆ??? ಎ೦ದು.