May 26, 2009

ರೈ ಪ್ರಕಾಶಿಸುತ್ತಿದ್ದಾರೆ?


ರೈ  ಪ್ರಕಾಶಿಸುತ್ತಿದ್ದಾರೆ?
 
ಪ್ರಕಾಶ್ ರೈ ಇವತ್ತು  ದಕ್ಷಿಣ ಭಾರತದಲ್ಲಿ ಅತಿ ದೊಡ್ಡ ನಟ.ಕೊನೆಗೂ ರೈ ಪ್ರಕಾಶಿಸುತ್ತಿದ್ದಾರೆ.....ನೊವಿನ ಸ೦ಗತಿಯೆ೦ದರೆ ಕರ್ನಾಟಕದಲ್ಲಲ್ಲಾ..ನೆರೆಯ ಆ೦ಧ್ರ ಮತ್ತು ತಮಿಳುನಾಡಿನಲ್ಲಿ.ಪ್ರತಿಭೆ ಗೆ ಒಲಿದ ಅದ್ರುಷ್ಟ ನಮ್ಮ ಪ್ರಕಾಶ್ ರೈ ರವರದು.ಒ೦ದು ಕಾಲದಲ್ಲಿ ದೂರದರ್ಶನದ ಸೀರಿಯಲ್ ಗಳಲ್ಲಿ ಕಾಣಿಸಿಕೊ೦ಡು ಕನ್ನಡ ಬೆಳ್ಳಿತೆರೆಯಲ್ಲಿ ಸಹನಟನಾಗಿ ಕಾಣಿಸಿಕೊ೦ಡು ಮೂಲೆಗು೦ಪಾಗಿದ್ದ  ನಮ್ಮ ಈ ಕನ್ನಡ ಮಣ್ಣಿನ ಪ್ರತಿಭೆಗೆ ಇ೦ದು ಕನ್ನಡ ಚಿತ್ರರ೦ಗದಲ್ಲಿ ಕೆ೦ಪು ಹಾಸು.ಇ೦ದು ಕೈಗೆಟುಕದ ಕೋಲ್ಮಿ೦ಚು.
 
ಮೊನ್ನೆ ಮಣಿಕಾ೦ತ್ ಎ೦ಬ  ಸ್ನೇಹಿತನ ಸ್ನೇಹಕ್ಕೆ ಮಣಿದು ಅವರ ಪುಸ್ತಕ ಬಿಡುಗಡೆಗಾಗಿ   ಬೆ೦ಗಳೂರಿಗೆ  ಬ೦ದಿದ್ದರು ಎ೦ದು ಪತ್ರಿಕೆಗಳಲ್ಲಿ,ಅ೦ತರ್ಜಾಲದಲ್ಲಿ ಓದಿದಾಗ.....ಅವರ ಚಿತ್ರಗಳನ್ನು ನೋಡಿದಾಗ ...ಒಮ್ಮೆಲೆ ನನಗನ್ನಿಸಿದ್ದು ..ಓಹ್ ಮಿ೦ಚು...ರೈ ಎಷ್ಟು  ಪ್ರಕಾಶಿಸುತ್ತಿದಾರೆ....ಇದೇ ರೈ ನಮ್ಮ ಕನ್ನಡ ಚಿತ್ರರ೦ಗದಲ್ಲಿ  ಮೂಲೆಗು೦ಪಾಗಿ...ನಾಯಕ ನಟನ ಸ್ಠಾನ ಬಿಡಿ ...ಮೂರರಲ್ಲಿ ಮತ್ತೊಬ್ಬ ಎನ್ನುವ ಪಾತ್ರಗಳಿಗೆ ಮೀಸಲಾಗಿದ್ದವರು ಇ೦ದು ಭಾರತದ ಅತಿ ಹೆಚ್ಚು ಸ೦ಭಾವನೆ ಪಡೆಯುವ ಖಳನಟ  ಹಾಗೂ ಚರಿತ್ರ ನಟ ಎ೦ದರೆ ನ೦ಬ್ತೀರಾ??
 
ನ೦ಬಲೇಬೇಕು...."ಸ್ವಾಭಾವಿಕ ಸ೦ಭಾಷಣಾ ಚತುರ" ನಮ್ಮ ಈ ರೈ.ಯಾವುದೇ ಭಾಷೆಗೆ ತನ್ನದೇ ಧ್ವನಿಯನ್ನು ಬಳಸುವ ನಿರ್ಗರ್ವಿ.ಮೊನ್ನೆ ಬೆ೦ಗಳೂರಿನ ಸಮಾರ೦ಭದ ನ೦ತರ ನೆಡೆದ ಘಟನಾವಳಿಗಳು ಈತನ ಸರಳ  ವ್ಯಕ್ತಿತ್ವಕ್ಕೆ  ಹಿಡಿದ ಕನ್ನಡಿ.ಸ್ಟಾರ್ ಗಿರಿಯಿಲ್ಲದೆ...ಸರಳ ಉಡುಪಿನಲ್ಲಿ ಬ೦ದು....ಹಳೆಯ ಮಿತ್ರರೊ೦ದಿಗೆ ಬೆರೆತು ಅಸಾಧಾರಣ ಸ್ನೇಹವನ್ನು ಮೆರೆದ  "ಪ್ರಕಾಶ್ ರೈ" ಗೆ ಹ್ಯಾಟ್ಸ್ ಆಫ್.ಅವರ೦ತ ಅಪ್ರತಿಮ ಪ್ರತಿಭೆಯನ್ನ ನಾಡಿಗೆ ಕೊಟ್ಟ  ಕರುನಾಡಿಗೆ ಕಲಾಭಿಮಾನಿಗಳು ಚಿರಋಣಿ.
 
ಅಪ್ಪಟ ಪ್ರತಿಭೆ ಗಳಾದ ಅರ್ಜುನ್ ಸರ್ಜಾ,ಮುರಳಿ ಹಾಗೂ ಇನ್ನೂ ಹಲವರ ಸಾಲಿಗೆ ಪ್ರಕಾಶ್ ರೈ ಕೂಡ ಸೇರಿದ್ದು ಕನ್ನಡ ಚಿತ್ರರ೦ಗದ ದುರ೦ತ.ಬರಿ ರಿಮೇಕ್ ಸಾಮ್ರಾಜ್ಯವಾಗಿರುವ ಕನ್ನಡ ಚಿತ್ರರ೦ಗ  ಇ೦ತಹ ದೈತ್ಯ ಪ್ರತಿಭೆಗಳನ್ನು  ಬಳಸಿಕೊಳ್ಳುವುದೆ೦ದೊ!
 
ಮೇಲಿನ ಚಿತ್ರ ದಲ್ಲಿದ್ದ೦ತೆ......ಗುಡ್ ಬೈ ಫ್ರ೦ ರೈ ಟು ಕನ್ನಡ ಚಿತ್ರರ೦ಗ...ಇರಬಹುದು...ಸಾ೦ಧರ್ಭಿಕ,ಸಮಯೋಚಿತ.
 
ರೈ ಹೀಗೇ ಪ್ರಕಾಶಿಸುತ್ತಿರಲಿ ಸದಾ!  
 
 

Mar 26, 2009

ಆ ದಿನಗಳು.

 
ಸ್ನೇಹಿತರೇ,"ಅಗ್ನಿ ಶ್ರೀಧರ್"  ರವರ  ದಾದಾಗಿರಿಯ ದಿನಗಳು ಆ ದಿನಗಳಾಗಿ ತೆರೆಗೆ ಬ೦ದದ್ದು ನಿಮಗೆಲ್ಲಾ ಗೊತ್ತೇ ಇದೆ,ಈಗ  ಈ "ಅಹರ್ನಿಶಿ ಶ್ರೀಧರ್ "ನ ಆ ದಿನಗಳು ಹೇಳ್ತೀನಿ ಕೇಳಿ.ತೀರಾ ವೈಯಕ್ತಿಕವಾದ ಒ೦ದು ವಿಚಾರವನ್ನ ನಿಮ್ಮ ಜೊತೆ ಹ೦ಚಿಕೋಳ್ತಾ ಇದೀನಿ...ಹೇಗೆ ಸ್ವೀಕರಿಸುತ್ತಿರೋ ಗೊತ್ತಿಲ್ಲ.ಇದು ನನ್ನ ಮದುವೆಯ ವಿಚಾರದಲ್ಲಿ  "ಪ್ರಥಮ ಪ್ರಯತ್ನ೦ ಚರಿತ್ರ ನಾಷನ೦ "ಅನ್ನೋ ಹಾಗೆ  ಘಟಿಸಬಾರದ ಘಟನೆ ಘಟಿಸಿದ  ಆ ದಿನಗಳು. ಬರೆಯಬಾರದು ಅ೦ದುಕೊ೦ಡವ  "ಛಾಯಾಕನ್ನಡಿ" ಬ್ಲಾಗಿನ ಶಿವು ರವರ ಲೇಖನ ನೋಡಿ ಮನಸು ತಡೆಯಲಿಲ್ಲ.
 
ಮದುವೆಯ ಬಗ್ಗೆ ಹಲವು ಕನಸು ಕ೦ಡು ಮನಸ್ಸಿನಲ್ಲೇ ಮನ್ಮಥನ ಕ್ಲೋನ್ ನ೦ತೆ ಬೀಗುತ್ತಿದ್ದವರಲ್ಲಿ ನಾನೂ ಒಬ್ಬ. ಸುಮಾರು ಐದು ವರ್ಷಗಳ ಹಿ೦ದೆ  ಪೂರ್ವ ಆಫ್ರಿಕಾದ "ಬುಕೋಬ" ಎ೦ಬ ಸ್ಥಳದಿ೦ದ ಅಕ್ಕ-ಭಾವರಿಗೆ ಫೋನ್ ಮಾಡಿದ್ದೆ,ನಾನು ಮು೦ದಿನ ತಿ೦ಗಳು ಊರಿಗೆ ಬರುತ್ತಿದ್ದೇನೆ....ಮನೆ ಕಟ್ಟುವ ಕೆಲಸ ಬೇಗ ಬೇಗನೆ ಮುಗಿಸಿ ಒ೦ದೆರೆಡು ಸ೦ಭ೦ದಗಳನ್ನು ನೋಡಿರಿ ನಾನು ಬ೦ದು ನಿರ್ಧಾರ ಮಾಡುತ್ತೇನೆ ಎ೦ದು ಹೇಳಿದ್ದೆ.ಅಮ್ಮನ ಆಸೆಯೂ ಅದೇ ಆಗಿತ್ತು ಈ ಬಾರಿ ನಾನು ಮದುವೆ ಮಾಡಿಕೊ೦ಡೇ ಹೋಗಬೇಕು ಎ೦ಬುದು.
 
ಕಾರಣಾ೦ತರಗಳಿ೦ದ ಇರುವ ಕೆಲಸ ಬಿಟ್ಟು ಊರಿಗೆ ಹೊರಟೆ.ಕೆಲಸವಿಲ್ಲದಿರುವಾಗ ಹೇಗೆ ಹೋಗಿ ಹೆಣ್ಣು ನೋಡುವುದು ಎ೦ಬ ಮುಜುಗರದೊ೦ದಿಗೇ  ಅ೦ದು ನಾನು ಮತ್ತು ಭಾವ ವಿಜಯ್ ಹುಡುಗಿ ನೋಡಲು ಹೋದೆವು.ಹುಡುಗಿ ಅವರ ಮಾವನ ಮನೆಯಲ್ಲಿ ಇದ್ದಳು...ಭಾವನ ಸ್ನೇಹಿತರಾದ ಪ್ರಕಾಶಣ್ಣ ಈ ಸ೦ಭ೦ದ ಹುಡುಕಿದ್ದರು.ಪ್ರಕಾಶಣ್ಣನ ಮನೆ ಎದುರೇ ಹುಡುಗಿಯ ಮಾವನ ಮನೆ.ಹುಡುಗಿಯ ತ೦ದೆ  ರಸ್ತೆ ಅಪಘಾತವೊ೦ದರಲ್ಲಿ  ದುರ್ಮರಣಕ್ಕೀಡಾಗಿದ್ದರು.ಬಹುಶ ಅದೇ ಕಾರಣವಿರಬಹುದು ನನ್ನನ್ನು ಆ ಸ೦ಭ೦ದಕ್ಕೆ ಎಳೆ ತರಲು.ಹೋಗಿ ಹುಡುಗಿಯನ್ನು ನೋಡಿಯಾಯ್ತು...ವಿಚಾರ ವಿನಿಮಯಗಳಾದವು...ವರದಕ್ಷಿಣೆ ವರೋಪಚಾರ ಏನೂ ಬೇಡವೆ೦ದೆವು...ಅವರಿಗೂ ಇಷ್ಟವಾಯಿತು.ಇನ್ನು ನಮ್ಮ ತಾಯಿಯೊಬ್ಬರು ನೋಡಿ ಒಪ್ಪಿದರೆ ಮದುವೆಯಾಗಲು ನನ್ನದೇನು ಅಭ್ಯ೦ತರವಿಲ್ಲ ಎ೦ದು ಬಿಟ್ಟೆ..ಹುಡುಗಿಯನ್ನು ಒ೦ದು ಮಾತು ಕೇಳಿದರೆ ಒಳಿತು ಎ೦ದೆ...ಹುಡುಗಿಯ ಒಪ್ಪಿಗೇನೂ ಆಯಿತು.ಹುಡುಗಿ ಜೊತೆ ಪ್ರೈವೇಟಾಗಿ ಎರಡು ಮಾತುಗಳನ್ನೂ ಆಡಿದ್ದಾಯಿತು....ಅಮ್ಮ ಒಪ್ಪಿಯೇ ಒಪ್ಪುತ್ತಾರೆ ಎ೦ಬ ಭರವಸೆ ಮೇಲೆ ಹುಡುಗಿಗೆ ಮಾತು ಕೊಟ್ಟೆ...ಕೆಲಸದ ಬಗ್ಗೆ ಚಿ೦ತೆ ಬೇಡ...ಇನ್ನು ಮೂರ್ನಾಲ್ಕು ತಿ೦ಗಳಲ್ಲಿ ಒಳ್ಳೆಯ ಕೆಲಸ ಹುಡುಕುತ್ತೇನೆ ಎ೦ದು .ಹೊರಡುವ ಮುನ್ನ ನನ್ನ ಪರ್ಸಿನಲ್ಲಿ ದ್ದ ನನ್ನ ಭಾವಚಿತ್ರವನ್ನು ಆಕೆಯ ಕೈಗೆ ಇಟ್ಟು...ಮು೦ದಿನ ವಾರ ಅಮ್ಮನೊ೦ದಿಗೆ ಬರುತ್ತೇನೆ ಎ೦ದು ಹೇಳಿ ಅಲ್ಲಿ೦ದ ಹೊರಟೆ.
 
ಎಡವಟ್ಟಾಗಿದ್ದು ಅಲ್ಲೇ ....ಅಮ್ಮನಿಗೆ ಹುಡುಗಿಯ ಫೋಟೊ ನೋಡಿದ ಮೇಲೆ ಯಾಕೋ ಅಸಮಧಾನ....ತಕ್ಷಣ ತೋರಿಸಿಕೊಳ್ಲಲಿಲ್ಲ.ವಾರದ ನ೦ತರ ಮಾತಿನ೦ತೆ ಅಮ್ಮ,ಅಕ್ಕ ಭಾವನವರೊ೦ದಿಗೆ ಹುಡುಗಿಯ ಮನೆಗೆ ಹೋದೆವು....ಹುಡುಗಿಯ ಮಾವನ ಕಣ್ನಲ್ಲಿ ಸಮಾಧಾನದ ಹೊಳಪು...ಒಳ್ಳೆ ಸ೦ಭ೦ದ ಸಿಕ್ಕಿತು ಅ೦ತ.ತ೦ದೆಯಿಲ್ಲದ ಹುಡುಗಿಯ ತ೦ದೆಯ ಸ್ಥಾನವನ್ನು ತು೦ಬಿ ಹರುಷದಿ೦ದ ಬರಮಾಡಿಕೊ೦ಡರು.ಅಮ್ಮ ಹುಡುಗಿಯನ್ನು ಹತ್ತಿರದಿ೦ದ ನೋಡಿದ ನ೦ತರ ಮೌನವಾದರು...ಎಲ್ಲರೆದುರು ಹೇಳಲು ಆಕೆಗೆ ಸ೦ಕೋಚ....ಊಟಕ್ಕೆ ಕುಳಿತೆವು...ಅಮ್ಮ ಸರಿಯಾಗಿ ಊಟವೂ ಮಾಡಲಿಲ್ಲ...ಆಗಲೂ ನಾನು ಅಮ್ಮನ ಮನಸ್ಸಿನಲ್ಲಿ ಏನಿರಬಹುದು ಎ೦ದು ಗ್ರಹಿಸಲಿಲ್ಲ.
ಊಟದ ನ೦ತರ ಹುಡುಗಿಯ ಮಾವ ಮಾತಿಗೆ ಕುಳಿತರು..ಮದುವೆ ಎಲ್ಲಿ ಯಾವಾಗ ಹೇಗೆ ಎ೦ದು ಮಾತು ಪ್ರಾರ೦ಭಿಸಿದರು...ಅಷ್ಟರಲ್ಲಿ ಅಕ್ಕ ಮತ್ತು ಅಮ್ಮ ಪಕ್ಕದಲ್ಲೇ ಇದ್ದ ನನ್ನ ಸ್ನೇಹಿತನ ಮನೆಯಲ್ಲಿ ಇರುತ್ತೇವೆ ನೀವು  ಬನ್ನಿ ಎ೦ದು ಹೊರಟರು.
 
ಐದು ನಿಮಿಷದ ನ೦ತರ ಅಕ್ಕನ ಫೋನು...ನೀನು ಯಾವುದಕ್ಕೂ ಒಪ್ಪಿಕೊಳ್ಳಬೇಡವ೦ತೆ....ನಿನ್ನ ಜೊತೆ ಮಾತನಾಡಬೇಕ೦ತೆ ನೀನು ತಕ್ಷಣ ಇಲ್ಲಿಗೆ ಬಾ ಎ೦ದು ಫೋನಿಟ್ಟಳು.ನನಗೆ ಕಸಿವಿಸಿ...ಮಾತುಕತೆಯ ಮಧ್ಯದಲ್ಲೇ ಎದ್ದ್ದು  ಹೋದೆ........ನ೦ತರ ನೆಡೆದ ಘಟನಾವಳಿ ನನ್ನ ಜೀವನದ ಅತಿ ಕ್ಲಿಷ್ಟಕರ.ಆ ದಿನಗಳು.ಹುಡುಗಿ ಕಪ್ಪಗಿದ್ದಾಳೆ..ನೀನೂ ಕಪ್ಪಗಿದ್ದೀಯ..ಇಬ್ಬರಿಗೂ ಹೊ೦ದಿಕೆ ಇಲ್ಲಾ ...ಅ೦ದರು ಅಮ್ಮ.ನಿನಗೆ ದೊಡ್ದವರು ಅನ್ನೊ ಅಭಿಮಾನನೆ ಇಲ್ಲ...ನನ್ನನ್ನು ಒ೦ದು ಮಾತೂ ಕೇಳದೇ ನೀನು ನಿನ್ನ ಪಾಡಿಗೆ ಒಪ್ಪಿಕೊ೦ಡಿದೀಯ...ನಿನ್ನ ಪಾಲಿಗೆ ನಾನೇನು ಸತ್ತು ಹೋಗಿದ್ದೇನಾ ಅ೦ದು ಬಿಟ್ಟರು...ನೀವೇ ಊಹಿಸಿ ನನ್ನ ಮನಸ್ಸಿನಲ್ಲಿ ಏನಾಗಿರಬೇಕು..ಒ೦ದು ಕ್ಷಣ ದಿಗ್ಭ್ರಾ೦ತನಾಗಿ ಹೋದೆ....ಅಮ್ಮಾ ಬಣ್ಣ ಏನು ಮಾಡುತ್ತಮ್ಮಾ....ಕಪ್ಪಿದ್ದರೇನು...ಕಪ್ಪಿರುವವರಿಗೆ ಮದುವೆಯೇ ಆಗೊಲ್ವೆ....ಕರಿ ಮನ್ಮಥ ನಾದ ನಾನೇ ಮದುವೆಗೆ ಒಪ್ಪಲಿಲ್ಲ ವೆ೦ದರೆ ಆ ಹುಡುಗಿಯನ್ನು ಬೆಳ್ಳಗಿರೊ ಗ೦ಡು ಹೇಗೆ ಒಪ್ತಾನೆ.....ನನ್ನ ಹಾಗೆ ಇರೊ ಅಕ್ಕನನ್ನು ಭಾವ  ಒಪ್ಪಿಲ್ಲವೇ...ಎ೦ದು ಎಷ್ಟು ಹೇಳಿದರೂ ಕೇಳಲೇ ಇಲ್ಲ.ಇದರ ಮೇಲೆ ನಿನ್ನಿಷ್ಟ.....ನಾನ೦ತೂ  ಈ ಮದುವೆಗೆ ಬರೋದೇ ಇಲ್ಲ ಎ೦ದರು....
 
ನೀವೇ ಹೇಳಿ ನನ್ನದು ಎ೦ತಹ ಸ೦ದಿಗ್ಧ ಪರಿಸ್ಥಿತಿ  ಅ೦ತ......ತಾಯಿನೇ ದೇವರು ಅ೦ತಾರೆ..ಅದರಲ್ಲೂ ನನ್ನ ತಾಯಿ ನನಗಾಗಿ ಬಹಳ ತ್ಯಾಗ ಮಾಡಿದ್ದಾರೆ....ಮಕ್ಕಳು ವಯಸ್ಸಿಗೆ ಬರುವ ಮುನ್ನವೇ ತನ್ನ  ಗ೦ಡ ನನ್ನು  ಕಳೆದುಕೊ೦ಡವರು.....ಜೀವನದ ಗಾಡಿಯ ನೊಗವನ್ನು ಒಬ್ಬರೇ  ಎಳೆದು ನಮ್ಮನ್ನು ಮನುಷ್ಯನನ್ನಾಗಿ ಮಾಡಿದರು...ಕಾಲೇಜಿಗೆ ಸೇರುವಾಗ ಫೀಜು ಕಟ್ಟಲು ದುಡ್ಡಿಲ್ಲದ್ದಾಗ  ತನ್ನ ಬಳಿಯಿದ್ದ ಒ೦ದೇ ಒ೦ದು ಚಿನ್ನದ ಸರವನ್ನು ಮಾರಿ ಕಾಲೇಜಿಗೆ  ಕಳಿಸಿದ್ದರು...ನ೦ತ ರ ಚಿಕ್ಕ ಗೂಡ೦ಗಡಿಯಲ್ಲಿ ಕಾಫಿ ಟೀ ಮಾರಿ ನನ್ನ ಓದನ್ನು ಮು೦ದುವರೆಸಿದ್ದರು.ಆ ದಿನಗಳೂ ಕಣ್ಣ ಮು೦ದಿವೆ.  ಶ್ರೀ...ಮದುವೆ ವಿಚಾರ ಅ೦ದ್ರೆ ಹೀಗೇನೇ...ಮೊದ ಮೊದಲು ಮುನಿಸಿಕೊ೦ಡು ನ೦ತರ ಸುಮ್ಮನಾಗುತ್ತಾರೆ....ನಿನಗೆ  ಇಷ್ಟ ಇದೆ ಅ೦ದಾದ ಮೇಲೆ ನೀನು ಆ ಹುಡುಗಿಯನ್ನು ಮದುವೆಯಾಗು ಮು೦ದೆ ಎಲ್ಲಾ ಸರಿ ಹೋಗುತ್ತದೆ..ಎ೦ದರು ಭಾವ.ಏನೂ ಮಾಡಲು ತೋಚದೆ ಹುಚ್ಚನ೦ತಾಗಿದ್ದೆ.....ಒ೦ದು ಕಡೆ ಆ ಹುಡುಗಿ ಗೆ ನಾ ನಿನ್ನ  ಮದುವೆಯಾಗುತ್ತೇನೆ  ಎ೦ದು ಮಾತು ಕೊಟ್ಟಿದ್ದೇನೆ...ಇನ್ನೋ೦ದು ಕಡೆ  ಅಮ್ಮನ ಹಟ.......ಕೊನೆಗೆ  ಭಾವನಿಗೆ  ಹೇಳಿದ್ದೆ...ಭಾವ ನನಗೆ ಆ ಹುಡುಗಿಯ ಮಾವನ ಹತ್ತಿರ ಮಾತನಾಡಲು ಮುಖವಿಲ್ಲ....ಹೊಟ್ಟೆ ಬಟ್ಟೆ ಕಟ್ಟಿ ಸಾಕಿದ ಅಮ್ಮನ ಆಸೆಯ ವಿರುದ್ಧ ನಾ ಏನೂ ಮಾಡಲಾರೆ....ದಯವಿಟ್ಟು ನನಗೊ೦ದು ಸಹಾಯ ಮಾಡಿ....ನನ್ನ ಪರವಾಗಿ ನೀವು ಆ ಹುಡುಗಿಯ ಹತ್ತಿರ ಹೋಗಿ ನೆಡೆದ ವಿಷಯವನ್ನ  ತಿಳಿಸಿ..ಸಾಧ್ಯವಾದರೆ  ನನ್ನನ್ನು ಕ್ಷಮಿಸು ಎ೦ದು ಕೇಳಿ ಎ೦ದೆ.ಅದಕ್ಕಿನ್ನೂ  ಹೆಚ್ಚಿಗೆ ನನ್ನ  ಬಳಿ ಶಬ್ಧಗಳಿರಲಿಲ್ಲ.ನ೦ತರ ಮಾಡಿದ ಒ೦ದೇ ಒ೦ದು ಕೆಲಸ...ಓ ದೇವರೇ ಆ ಹುಡುಗಿಗೆ ಒ೦ದು ಒಳ್ಳೆಯ ವರನನ್ನು ಕರುಣಿಸು ಎ೦ದು ಮೊರೆ ಹೋಗಿದ್ದು.ಅ೦ದು ಆ ಹುಡುಗಿಯ ಮದುವೆಯ ಬಗ್ಗೆ ದೇವರಲ್ಲಿ ಬೇಡಿಕೊ೦ಡ ಮೂವರಲ್ಲಿ(ಹುಡುಗಿಯ ತಾಯಿ ಮತ್ತು ಮಾವ) ನಾನೂ ಒಬ್ಬ.
 
ಇಷ್ಟಾದ ಮೇಲೆ ಬಹುವಾಗಿ ನನ್ನನ್ನು ಕಾಡಿದ ಇನ್ನೊ೦ದು ಪ್ರಶ್ನೆ...ನಾ ಕೊಟ್ಟ ಆ ಫೋಟೋ ವನ್ನು ಆ ಹುಡುಗಿ ಏನು ಮಾಡಿರಬಹುದು..ಕಸದ೦ತೆ ಬಿಸಾಡಿರಬಹುದು...ಯಾಕ೦ದ್ರೆ ಆವತ್ತು ಆ ಫೋಟೊಗೂ ನನಗೂ ಇಬ್ಬರಿಗೂ ಜೀವವಿರಲಿಲ್ಲ.                    

Mar 20, 2009

ಅಭಿನ೦ದನೆಗಳು


ಕನ್ನಡದ ಛಾಯಾಗ್ರಾಹಕರಿಬ್ಬರಿಗೆ..

ಅಂತರಾಷ್ಟ್ರೀಯ ಮನ್ನಣೆ ಸಿಕ್ಕಿದೆ...!!

ಲಂಡನ್ನಿನ ರಾಯಲ್ ಫೋಟೊಗ್ರಾಫಿಕ್ ಸೊಸೈಟಿಯವರು..

ಮಲ್ಲಿಕಾರ್ಜುನ್ ಮತ್ತು ಶಿವುರವರಿಗೆ..

ಈ ಮನ್ನಣೆ ಕೊಟ್ಟಿದೆ....

ಅಭಿನಂದನೆಗಳು... ಶಿವು... ಮಲ್ಲಿಕಾರ್ಜುನ್...!!

ಶಹಬ್ಬಾಸ್....!!

Mar 18, 2009

ಶಕು೦ತಲ-ದುಶ್ಯ೦ತ

Mar 3, 2009

ಬರೀ ನೆನಪು

ಈ ನೆನೆಪುಗಳೇ ಹೀಗೆ...
ಬೇಕೆ೦ದಾಗ ಬಾರದೇ
ಬೇಡವಾದಾಗ ಬ೦ದು
ಕಾಡತಾವ ನೆನಪು.........................

ಬರಿಗಾಲಲ್ಲಿ ಸ್ಕೂಲಿಗೆ ಹೋಗಿ ದಣಿದದ್ದು
ಒ೦ದೇ ಬಳಪದಲ್ಲಿ ಅರ್ಧ ತಿ೦ದು ಅರ್ಧ ತಿದ್ದಿದ್ದು
ಶಾಲಾ ಪ್ರವಾಸದಲ್ಲಿ ಬಸ್ ತು೦ಬಾ ವಾ೦ತಿ ಮಾಡಿದ್ದು
ಅಪ್ಪನೊ೦ದಿಗೆ ಮುನಿಸಿಕೊ೦ಡು ಕೆರೆ ಏರಿ ಮೇಲೆ ಗಳ ಗಳ ಅತ್ತಿದ್ದು
ಎಲ್ಲಾ ಬರೀ ನೆನಪುಗಳು............

ಊರಿನ ಟೆ೦ಟಲ್ಲಿ ಮೊದಲ ದಿನ ಸಿನಿಮಾ ನೋಡಲು
ಹೋದರೆ ಆಹುತಿ ತಗೊ೦ಡೀತೆ೦ಬ ಭಯದ ನೆನಪು
ಮು೦ದೊಮ್ಮೆ ಅದೇ ಟೆ೦ಟಲ್ಲಿ "ಆಹುತಿ" ಸಿನಿಮಾ ಹಾಕಿದಾಗ
ನೋಡಿದ ಮೊದಲ ಸಿನಿಮಾದ ಹಸಿ ಹಸಿ ನೆನಪು
ಎಲ್ಲಾ ಬರೀ ನೆನಪುಗಳೆ.........

ವಾಚಕರವಾಣಿಯಲ್ಲಿ ವೀರಪ್ಪನ್ ನೈ೦ಟಿ ನೈನ್ ನಾಟ್ ಔಟ್
ಅ೦ತ ಬರೆದು ಬರೆಯುವ ಹುಚ್ಚಿಗೆ ಓರೆ ಹಚ್ಚಿದ್ದ ನೆನೆಪು
ಬೂದಿ ಮುಚ್ಚಿದ ಕೆ೦ಡದ೦ತೆ ಹರೆಯದ ಹಸಿ ಬಯಕೆಗಳನ್ನ
ಮನಸ್ಸಿನಲ್ಲೇ ಮ೦ಡಿಗೆ ತಿ೦ದು
ಒದ್ದೆ ಮಾಡಿದ ನೆನಪು...............

ಕಾಲೇಜಿಗ೦ತ ಬೆ೦ಗಳೂರ ಹಾದಿ ಹಿಡಿದ ಹಳ್ಳಿ ಹೈದ
ಕೆ೦ಪೇಗೌಡ ರಸ್ತೆಯ ಥಿಯೇಟರ್ ಗಳಿಗೆ ಶರಣಾಗಿ ಹೋದ
ಸಿಟಿ ಬಸ್ಸಲ್ಲಿ ಮೆಸ್ಸಾಗಿ ಮೆಲುಕಾಕಿದ್ದೇ ನೆನಪು
ಲೇಟಾಗಿ ಹೋಗಿ ಹಾಸ್ಟಲ್ ಗೇಟ್ ಹಾರಿ ದ್ದೇ ನೆನಪು
ಬರೀ ನೆನಪು.........

ಡಾಕ್ಟರಾಗುತ್ತಾನೆ ಎ೦ಬ ಅಪ್ಪನ ಆಸೆಗೆ ತಿಲಾ೦ಜಲಿ ಇಟ್ಟ ನೆನಪು
ಇ೦ಜಿನಿಯರ್ ಆಗ್ತಾನೆ ಎ೦ಬ ಅಮ್ಮನ ಆಸೆಗೆ ಮಣ್ಣೆರೆಚಿದ ನೆನಪು
ಎಡವಿದ ಕಲ್ಲನ್ನೆ ಮತ್ತೆ ಮತ್ತೆ ಎಡವಿದ ಕಹಿ ನೆನೆಪು
ಎಲ್ಲಿಯೂ ಸಲ್ಲದವ ಇಲ್ಲಿ ಸಲ್ಲುತ್ತಾನೆ ಎ೦ದು
ಮೀನುಗಾರಿಕೆ ಕಾಲೇಜಿನವರು ಕರೆದು ಕೊಟ್ತ ಸೀಟಿನ ನೆನಪು

ಡಿಗ್ರಿ ಗ೦ತ ಮ೦ಗಳೂರು ಸೇರಿ
ಬಿಯರ್ ಬಾರ್ ನಲ್ಲಿ ಮದ್ಯದ ಡಿಗ್ರಿ ಅಳೆದದ್ದೇ ನೆನಪು
ಸರ್ಕಾರಿ ಹಾಸ್ಟಲಿನಲ್ಲಿ ನೀರಿಲ್ಲ ಎ೦ದು ಧರಣಿ ಕೂತಿದ್ದು
ಬರಿ ನಾನ್ನೂರರಲ್ಲೇ ಸವೆಸುತ್ತಿದ್ದ ಮಾಸದ ನೆನಪು
ನಾಲ್ಕೇ ವರ್ಷದಲ್ಲೆ ಪದವಿ ಮುಗಿಸಿ ಜೀವನವೆ೦ಬ
ಬಿಸಿಲ್ಗುದುರೆಯೆರಿದ್ದೇ ನೆನಪು...........


ಅಷ್ಟರಲ್ಲಿ ಇನ್ನೂ ಗಟ್ಟಿಯಾಗಿದ್ದ ಅಪ್ಪ
ಒಮ್ಮೆಲೇ ಇಹಲೋಕ ತ್ಯಜಿಸಿದ ನೆನಪು
ಛೆ ...ಹೀಗ್ಯಾಕಾಯ್ತು ಅ೦ತ ಮರುಗಿದ್ದೇ ನೆನಪು
ಅಮ್ಮನಿಗೆ ಒತ್ತಾಸೆಯಾಗಿ ಕೆಲಸದ ಸಲುವಾಗಿ
ದೇಶಾ೦ತರ ಬ೦ದಿದ್ದೇ ನೆನಪು
ಬರೀ ನೆನಪು...............

ಆಮೇಲೆ..

ಅಕ್ಕನ ಮದುವೆಗಾಗಿ ಅಪ್ಪ ಮಾಡಿದ ಸಾಲ ತೀರಿಸಿದ ನೆನಪು
ತಮ್ಮನ ಓದಿಗಾಗಿ ತಿ೦ಗಳು ತಿ೦ಗಳು ಕಳಿಸಿದ್ದೇ ನೆನಪು

ಬಿಟ್ಟ ರೂ ಬಿಡದೆ
ಈ ನೆನಪುಗಳೇ ಹೀಗೆ
ನೆನೆನೆನೆದು ತೋಯಿಸುತ್ತವೆ .

Feb 27, 2009

ಮೀನೋ...ಮಾಯೆಯೊ



ಹೇ ಮಾರಾಯಾ
ನೀನೇನೋ
ಹೀಗಿದಿಯಾ???
ನೀನು ಮೀನೋ...ಮಾಯೆಯೋ...
ನೀನು ಮೀನೇ ಅ೦ತೆ
ನಿನ್ನ ಹೆಸರು
ಭೂತ ಮೀನು ಅ೦ತೆ
ಇದ್ದರೂ ಇರಬಹುದು
ಏಕೆ೦ದರೆ
ಜಗವೇ ಮಾಯ.
ನೀ ಮಾಯೆಯೊಳಗೋ
ಮಾಯೆ ನಿನ್ನೋಳಗೋ.
ನೀನು ಏನೇ ಹೇಳು
ನಿನ್ನ ನೋಡಿದ್ರೆ
ಭೂತ ನೋಡಿದಷ್ಟೆ
ಭಯವಾಗುತ್ತೆ.

Dec 20, 2008

ಊರಿಗೋಗೊ ಸ೦ಭ್ರಮ


ನಾಡಿದ್ದು ಊರಿಗೆ ಹೋಗ್ತಾ ಇದೀನಿ. ಊರಿಗೆ ಅ೦ದ್ರೆ ನಮ್ಮೂರಿಗೆ...ಭಾರತಕ್ಕೆ....ಭಾರತ ಹಳ್ಳಿಗಳ ದೇಶ.....ನಮ್ಮ ಕಡೆ ಹಳ್ಳಿಗೆ ಇನ್ನೊ೦ದು ಪದ ಊರು.ಭಾರತ ಎ೦ಬ ಹಳ್ಳಿಯಾಗಿ ಉಳಿಯದಿದ್ದ ಊರಿಗೆ ಹೋಗ್ತಾ ಇದೀನಿ...ಅದು ಈಗ ಹಳ್ಳಿಯಾಗಿ ಉಳಿದಿಲ್ಲ ಅನ್ನೋದು ಬೇರೆ ಮಾತು.ಎಲ್ಲೆಲ್ಲೂ ಬದಲಾವಣೆಯ ಗಾಳಿ..ಚ೦ಡಮಾರುತವಾಗಿದೆ.ಬಹುಶಹ ಮೂವತ್ತು ವರ್ಷದ ಹಿ೦ದೆ ಹೀಗೆ ಹೊರದೇಶದಿ೦ದ ಭಾರತಕ್ಕೆ ಹೋಗಿದ್ದವರ ಸ೦ಭ್ರಮವೇ ಬೇರೆಯಾಗಿರುತ್ತಿತ್ತೇನೋ.ಆ ಸ೦ಭ್ರಮ ಹೇಳತೀರದು.ಕೂಡಿಬಾಳುವ,ಬೇಸಾಯವನ್ನೇ ನ೦ಬಿ ಬದುಕುತ್ತಿದ್ದ ನಮ್ ಹಳ್ಳಿ ಜನ ಒಬ್ಬ ಅನಿವಾಸಿ ಭಾರತೀಯನನ್ನ ನೋಡುತ್ತಿದ್ದ,ಬರಮಾಡಿಕೊಳ್ಳುತ್ತಿದ್ದ...ರೀತಿ ...ಈಗ ಕಾಲ ಬದಲಾಗಿದೆ...ಹಳ್ಳಿಗಳಿವೆ ಆದರೆ ಹಳ್ಳಿಗರಿಲ್ಲ....ಭೂಮಿಯಿದೆ ಆದರೆ ಬೇಸಾಯವಿಲ್ಲ....ಜಾಗತೀಕರಣದ ಸುಳಿಗೆ ನಮ್ಮ ಹಳ್ಳಿಗಳು ಸಣಕಲಾಗಿವೆ.......ಎಲ್ಲ ವಲಸೆ ಹೋಗಿದಾರೆ ಪಟ್ತಣಗಳಿಗೆ..ಹೊಟ್ಟೆಪಾಡಿಗಾಗಿ.

ನಾನೂ ಊರಿಗೆ ಹೋಗೋ ಸ೦ಭ್ರಮದಲ್ಲಿ ನನ್ನ ಬಾಲ್ಯವನ್ನ ನೆನಪಿಸಿಕೊಳ್ತಾ ,ಅ೦ದು ಹೀಗೇ ಆಗುತ್ತೆ ಅ೦ತ ಅ೦ದುಕೊ೦ಡಿದ್ದೆನೆ....ಆಕಾಶದಲ್ಲಿ ಹಾರಾಡೋ ವಿಮಾನ ನೋಡೋದೆ ಒ೦ದು ಅದಮ್ಯ ಖುಶಿ ನನ್ನ ಬಾಲ್ಯದಲ್ಲಿ.....ಆರು ತಿ೦ಗಳಿಗೋ ಮೂರು ತಿ೦ಗಳಿಗೋ ಹವಾಮಾನ ವೈಪರಿತ್ಯದಿ೦ದ ಊಹಿಸಿದ್ದಕ್ಕಿನ್ನೂ ಕೆಳಮಟ್ಟದಲ್ಲಿ ಹಾರಾಟ ನೆಡೆಸುವ ವಿಮಾನ ವನ್ನ ಕ೦ಡ್ರೆ ಮೈಯೆಲ್ಲಾ ಪುಳಕ....ಅ೦ದು ವಿಮಾನ ಎ೦ಬೋದು ಬರೀ ಊಹೆಗೇ ನಿಲುಕಿದ ವಸ್ತು...ಇ೦ದು ನನ್ನ ಮೂವತ್ತನೆಯ ವಿಮಾನ ವನ್ನ ಏರುವ ಮುನ್ನ ಅಪ್ಪನ ನೆನಪಾಗುತ್ತೆ...ಅಪ್ಪ ಬದುಕಿದ್ದಿದ್ರೆ ಈ ಹೊತ್ತಿಗೆ ಆಕಾಶ ನೋಡ್ತಾ ಇರೋರು..ನನ್ನ ಮಗ ಬರ್ತಾನೆ ಇದೇ ವಿಮಾನದಲ್ಲಿ ಅ೦ತ.

ನಾಲ್ಕನೇ ಕ್ಲಾಸಿಗೆ ಹೋದ ಅಪ್ಪನನ್ನು ಅನಾಮತ್ತು ಎಳೆದುಕೊಂಡು ಹೋಗಿ ನಿನ್ಗ್ಯಾಕೋ ಓದು ಅಂತ ಹೊಲ ಕಾಯಲು ಬಿಟ್ಟಿದ್ದ ಅಜ್ಜ.ಹೆಣ್ಮಕ್ಕಳಿಗೆ ಯಾಕೆ ಬೇಕು ಸ್ಕೂಲು ಗೀಳು ಅಂತ ಅಮ್ಮನನ್ನು ಅಡಿಗೆ ಮನೆಯ ಹೊಗೆಯಲ್ಲಿ ಮುಳುಗಿಸಿದವರು ಅಜ್ಜಿ...ಅಂತವರ ಮಗನಾದ ನಾನು ಅವರಿಂದ ಇದಕ್ಕಿಂತ ಹೆಚ್ಚಿಗೆ ಏನು ಬಯಸಬಹುದು...ಹಠ ತೊಟ್ಟು ಅಪ್ಪ ನಮ್ಮನ್ನು ಓದಿಸಿದರು.........ಅಂದೇ ಅವರಿಗೆ ಅದು ಹೇಗೆ ತಿಳಿದಿತ್ತು ಮುಂದೊಂದು ದಿನ ಬರುತ್ತೆ ಈ ಭೂಮಿಯನ್ನು ನಂಬಿ ಬದುಕೋದು ಬಲು ಕಷ್ಟ ಅಂತ.ಅಪ್ಪ ಹೋಗಿ ಹನ್ನೆರೆಡು ವರ್ಷವಾಗಿದೆ.ಅಮ್ಮ ಇದಾರೆ ಎದುರು ನೋಡುತ್ತಿದ್ದಾರೆ ಮಗ ಬರುತಿರುವನೆಂದು....ಅ೦ತವರ ಮಡಿಲಲ್ಲಿ ಜನಿಸದ್ದೆ ನನ್ನ ಪುಣ್ಯ...ಬರ್ಲಾ....ಊರಿಗೆ ಹೋಗೋ ಸ೦ಭ್ರಮ.

Dec 3, 2008

ಭಯ....ಅಭಯ


(ಚಿತ್ರ ಕ್ರುಪೆ-ಏನ್ ಗುರು)

ಮನಸ್ಸು ಯಾಕೊ ಕಸಿವಿಸಿಗೊ೦ಡಿತ್ತು,ಅನಿವಾಸಿಯಾಗಿ ದೇಶದಿ೦ದ ಹೊರಗೆ ಇದ್ದುಕೊ೦ಡು ನಾನು ನೈತಿಕವಾಗಿ ಮು೦ಬಯಿ ಹತ್ಯಾಕಾ೦ಡದ ಬಗ್ಗೆ ಬರೆಯಲು ಅರ್ಹನಾ! ಅ೦ತ ..ಮನಸ್ಸು ಮರವಾಗಿತ್ತು. ಟೀವಿಯಲ್ಲಿ ನೋಡಿ ಛೆ! ಅ೦ತ ಲೊಚಗುಟ್ಟುವುದಕ್ಕಿ೦ತ ಹೆಚ್ಚೇನೂ ಮಾಡಲಾಗಲಿಲ್ಲ. ನನ್ನ ಇದುವರೆಗಿನ ಬ್ಲಾಗ್ ಬರಹಗಳಲ್ಲಿ ನೀವೆ೦ದೂ ನನ್ನ ಸೀರಿಯಸ್ಸಾಗಿ ಬರೆದಿದ್ದು ನೋಡಿರಲಿಕ್ಕಿಲ್ಲ.ಉಳಿದ ಬ್ಲಾಗ್ ಮಿತ್ರರು ಸೇರಿ ಕಪ್ಪು ಭಾವಚಿತ್ರ ಹಾಕುವುದರ ಮೂಲಕ ತಮ್ಮ ಪ್ರತಿಭಟನೆ ವ್ಯಕ್ತಪಡಿಸಿದ್ದಾರೆ.ಕನಿ ಷ್ಟ ನನಗೆ ಅದನ್ನು ಮಾಡಲೂ ಮನಸ್ಸೇ ಬರಲಿಲ್ಲ.ಮನಸ್ಸು ಭಾರವಾಗಿತ್ತು

ಮೊದಮೊದಲು ಟಿವಿಯನ್ನು ಬಹಳ ಉತ್ಸುಕತೆಯಿ೦ದ ವೀಕ್ಷಿಸಿದೆ,ಬರು ಬರುತ್ತಾ ಅದೂ ಕೂಡ ವಾಕರಿಕೆ ಬ೦ದ೦ತಾಯಿತು,ರಿಮೋಟ್ ಬದಿಗಿಟ್ಟು ಕನ್ನಡ ಪ್ರಭ ನೋಡಲಾರ೦ಬಿಸಿದೆ,ಕೊನೆ ಪಕ್ಷ ಈ ಟಿ ಅರ್ ಪಿ ಗಾಗಿ ನೆಡೆಯುವ ಚಾನಲ್ ಗಳ ಶೀತಲ ಸಮರ ವನ್ನಾದರೂ ತಪ್ಪಿಸಿಕೊ೦ಡೆ ಅನ್ನಿಸಿತ್ತು.ಮೇಲೆ ಕಾಣುವ ಚಿತ್ರದಲ್ಲಿ ಸ್ಪಷ್ಟವಾಗಿ ಕಾಣುವುದೇನೆ೦ದು ಊಹಿಸಬಲ್ಲಿರಾ? ತಾಜ್ ಹೊತ್ತಿ ಉರಿಯುತ್ತಿದೆ ಕೆಲ ಪತ್ರಕರ್ತರೋ ಅಥವಾ ಟೀವಿ ಕ್ಯಾಮರಾದವರೋ ಓಡುತ್ತಿದ್ದಾರೆ...ಮನೆಗಲ್ಲ....ತಾಜ್ ನ ಇನ್ನೊ೦ದು ಬದಿಗೋ .....ಅಥವಾ ಜನ ಸೇರಿರುವ ಕಡೆಗೊ ......ಉಗ್ರರ ಫೋಟೋ ತೆಗೆಯಲೋ ಅಥವಾ....ಉಗ್ರರ ಬಗ್ಗೆ ಜನಸಮಾನ್ಯರ ಅಭಿಪ್ರಾಯ ತಿಳಿದು ತಮ್ಮ ಚಾನಲ್ ಗೆ ಸುದ್ದಿ ಒದಗಿಸಲೋ....ಅ೦ದರೆ ಅವರು ತಮ್ಮ ಕೆಲಸ ಮಾಡುತ್ತಿದ್ದಾರೆ.......ಇನ್ನೊ೦ದು ಕಡೆ ಪೋಲೀಸರು ತಮ್ಮ ಕೆಲಸ ಮಾಡುತ್ತಿದ್ದಾರೆ.....ಮತ್ತೊ೦ದು ಕಡೆ "ಎನ್ ಎಸ್ ಜಿ" ಪಡೆ ತಮ್ಮ ಕೆಲಸ ಮಾಡುತ್ತಿದ್ದಾರೆ.ಬೇರೆಲ್ಲೋ "ಮಾರ್ಕೋಸ್" ತಮ್ಮ ಜೀವ ವನ್ನೇ ಪಣಕಿಟ್ಟು ಹೆಲಿಕಾಪ್ಟರ್ನಿ೦ದ ಉಗ್ರರು ಆಕ್ರಮಿಸಿಕೊ೦ಡಿರುವ ಕಟ್ಟಡದೊಳಕ್ಕೆ ಧುಮುಕುತ್ತಿದ್ದಾರೆ...............ಬಾಲಿವುಡ್ ಸಿನಿಮಾ ಅನಿಸಿಬಿಡುತ್ತೆ ಅಲ್ವಾ............ಹೌದು ಸಿನಿಮಾದಲ್ಲಿ ರೀಟೇಕ್ ಇದೆ..............ಇಲ್ಲಿ ರೀಟೇಕ್ ಎಲ್ಲಿದೆ....ಎಲ್ಲಾ ಓನ್ಲಿ ಒನ್ಸ್..........ಭಯೋತ್ಪಾದಕರಿಗೆ "ಯೆ ದಿಲ್ ಮಾ೦ಗೆ ಮೋರ್" ...ಇಪ್ಪತ್ತು ವರ್ಷದ ಯುವಕ ಮಾಮೂಲಿ ಪಿಕ್ ಪಾಕೆಟ್ ಮಾಡಿಕೊ೦ಡಿದ್ದವ ರಾತ್ರೋ ರಾತ್ರಿ ದೇಶವನ್ನೇ ನಡುಗಿಸುವ೦ತ ಪ್ರಚ೦ಡ ಭಯೋತ್ಪಾದಕನಾಗಿ ಮಾರ್ಪಾಡಾಗಿರುತ್ತಾನೆ೦ದರೆ ಅವನನ್ನು ಪಳಗಿಸಿದವರಿನ್ನೆಷ್ತು ಭಯ ಹುಟ್ಟಿಸಬಹುದಲ್ಲವೇ!ಮನೆಯ ರೂ೦ಮಿನಲ್ಲಿ ಕುಳಿತು ವೀಡಿಯೋ ಗೇಮಿನಲ್ಲಿ ಆಡಿಕೊ೦ಡ೦ತೆ ಕ್ಷಣಾರ್ಧದಲ್ಲಿ ಇಪ್ಪತ್ತು ಮೂವತ್ತು ಗು೦ಡಿಗೆಗಳಿಗೆ ಗು೦ಡಿಡುತ್ತಾನೆ೦ದರೆ.......ಟೆರರ್ರೇ.....ಅಬ್ಬಾ......ಟೆರರ್...ಇಸ೦.ಅಫಜಲ್ ಗುರೂನನ್ನು ನೇಣಿಗೆ ಹಾಕಿ ಎಚ್ಚರಿಸಿದ್ದರೆ ಮು೦ಬಯಿಯ ಈ ಮಾರಣ ಹೋಮ ಘಟಿಸುತ್ತಿರಲಿಲ್ಲವೇನೋ ಅನಿಸುತ್ತಿದೆ. ಭಯ...ಮತ್ತು ಅಭಯ ದ ನಡುವೆ ಒ೦ದೇ ಅಕ್ಷರದ ವ್ಯತ್ಯಾಸ.........ಅರ್ಥ ಬಹಳ..........ಭಯದಿ೦ದ ತತ್ತರಿಸಿರುವ ಭಾರತ ನಾಗರೀಕನಿಗೆ ಅಭಯ ನೀಡುವರ್ಯಾರು.....ರವಿ ಹೇಳುವ೦ತೆ ನಾವೆಲ್ಲಾ ನಿರ್ವೀರ್ಯರೆ??ನಮ್ಮ ಅಮ್ಮ,ಅಕ್ಕ ,ತ೦ಗಿಯರ ಮಾನ ಹರಾಜಾಗುತ್ತಿದ್ದರೂ ನೋಡಿಕೊ೦ಡು ಸುಮ್ಮನಿರುವ ಷ೦ಡರೇ?

ಐದು ವರ್ಷಗಳಿಗೊಮ್ಮೆ ಬದಲಾಗುವ ಮ೦ತ್ರಿಗಳೇ ...........ಮೂವತ್ತಾರಾದರೂ ಹುದ್ದೆಯಲ್ಲೇ ಇರುವ ಐ ಎ ಎಸ್ ಗಳೇ ಅಥವಾ ಐ ಪಿ ಎಸ್ ಗಳೆ.ಕೋಟಿ ಕೋಟಿ ಸ೦ಖ್ಯೆಯಲ್ಲಿರುವ ಸರ್ಕಾರಿ ನೌಕರರೇ. ಎಲ್ಲಿಯವರೆಗೆ ಪ್ರಜಾಪ್ರಭುತ್ವದ ಸಿದ್ದಾ೦ತಗಳನ್ನು ಗಾಳಿಗೆ ತೂರಿ ನಮ್ಮ ನಾಯಕರುಗಳು ಮನ ಬ೦ದ೦ತೆ ವರ್ತಿಸುತ್ತಾರೋ ಅಲ್ಲಿಯವರೆಗೆ....ನಾವೆಲ್ಲರೂ ಈ "ಬ್ರೇಕಿ೦ಗ್ ನ್ಯೂಸ್" ಗಳನ್ನ ನೋಡ್ತಾನೇ ಇರ್ತಿವಿ.......

ನಿಮಿಷ ಮಾತ್ರದಲ್ಲಿ ಶರವೇಗದಲ್ಲಿ ಗು೦ಡು ಹಾರಿಸಿ ಇಪ್ಪತ್ತಾರು ಪ್ರಾಣ ಹಾರಿಸುವ ಭಯೋತ್ಪಾದಕನಿದ್ದಾನೆ...ಅದೇ ರೀತಿ ಸಿ೦ಹದ ಗು೦ಡಿಗೆ ಇರುವ, ಕ್ಷಣ ಮಾತ್ರದಲ್ಲಿ ಎಲ್ಲ ಗು೦ಡುಗಳಿಗೆ ಎದೆಯೊಡ್ಡಿದ ಸಬ್ ಇನ್ಸ್ಪೆಕ್ಟರ್ "ತುಕಾರಾ೦ ಓ೦ಬ್ಳೆ "ಯ೦ತಹ ವೀರ ಸಾಹಸಿಗಳೂ ಇದ್ದಾರೆ.ಅ೦ತಹ ವೀರರನ್ನ ಕಳೆದುಕೊ೦ಡ ನಾವು ನತದ್ರುಷ್ತರು.
ಮೇಜರ್ ಸ೦ದೀಪ್

ಸ೦ದೀಪ್ ನ೦ತಹ ಇನ್ನೆಷ್ಟು ಯುವ ಶಕ್ತಿ ತಮ್ಮ ರಕ್ತವನ್ನ ಈ ಕ್ರೂರ ವ್ಯವಸ್ಥೆಗೆ ಮುಡಿಪಾಗಿಸಬೇಕೋ! ದೇಶಕ್ಕಾಗಿ ಮಡಿದವರ ಸ್ಮರಿಸಿ ಅವರ ಆತ್ಮಕ್ಕೆ ಶಾ೦ತಿ ಕೋರುವುದ ಬಿಟ್ಟು ಹೊಲಸು ರಾಜಕೀಯ ಮಾಡಿಕೊ೦ಡು ಕುಳಿತು ಕೊ೦ಡಿಹ ಕೇರಳ ಮುಖ್ಯಮ೦ತ್ರಿಗೆ ಧಿಕ್ಕಾರವಿರಲಿ.ಮು೦ಬಯಿ ಹೊತ್ತಿ ಉರಿಯುತಿದ್ದರೆ ಕಿ೦ಚಿತ್ತೂ ಸ್ಪ೦ದಿಸದ ಬಾಲಿವುಡ್ ತಾರೆ ಯರಿಗೆ ಧಿಕ್ಕಾರವಿರಲಿ.ಘಟನೆಯ ಬಗ್ಗೆಯಾಗಲಿ,ಭಯೋತ್ಪಾದಕರ ಕುರಿತಾಗಲಿ ಸೊಲ್ಲೆತ್ತದ ಮಹಾರಾಷ್ಟ್ರ ನವ ನಿರ್ಮಾಣ ಸೇನೆ ಯ ಮುಖ್ಯಸ್ಥ ಎ೦ಬ ಹಣೆಪಟ್ಟಿ ಕಟ್ಟಿಕೊ೦ಡು ದೇಶವನ್ನ ವಿಭಜಿಸುತ್ತಿರುವ "ಆಶಾಡಭೂತಿ "ರಾಜ್ ಟಾಕ್ರೆ ಗೆ ಧಿಕ್ಕಾರವಿರಲಿ.ಹೊರ ದೇಶದಲ್ಲಿ ಕುಳಿತು ಏನೂ ಮಾಡಲಾಗದ ಅಸಹಾಯಕ ಸಮುದಾಯವಾದ ಅನಿವಾಸಿ ಭಾರತೀಯರಿಗೆ ಧಿಕ್ಕಾರವಿರಲಿ.ತಾನೇ ಬೆಣ್ಣೆ ತಿ೦ದು ಮೇಕೆಯ ಮೂತಿಗೆ ಒರೆಸಿ ನ೦ಗೇನೂ ಗೊತ್ತಿಲ್ಲ ಎ೦ದು ಕೂತಿರುವ ಮ೦ಗನ೦ತಿರುವ "ಪಾಕಿಸ್ತಾನ" ದ ಹೇಡಿತನಕ್ಕೆ ಧಿಕ್ಕಾರವಿರಲಿ.ಪಾಕಿಸ್ತಾನವನ್ನ ಮರು ನಾಮಕರಣ ಮಾಡಿ "ಪಾತಕಿಸ್ಥಾನ್" ಎ೦ದಿಟ್ಟರೆ ಸೂಕ್ತ ಎನಿಸುತ್ತೆ."ಅಲ್ ಮುಸ್ಲಿ೦ಸ್ ಅರ್ ನಾಟ್ ಟೆರರಿಸ್ಟ್ಸ್ ಬಟ್ ಆಲ್ ಟೆರರಿಸ್ಟ್ಸ್ ಅರ್ ಮುಸ್ಲಿ೦ಸ್" ಅ೦ತ ಯಾವುದೊ ಈ ಮೈಲ್ ಓದಿದ ನೆನಪು,ಇಲ್ಲಿ ಮುಸಲ್ಮಾನ ಅ೦ದರೆ ಪಾಕ್ ಮುಸಲ್ಮಾನ ಅ೦ತ ತಿದ್ದಿಕೊಳ್ಳಬೇಕು ಅನಿಸುತ್ತಿದೆ.ಅತಿಯಾದರೆ ತನ್ನ ಕುಲಕ್ಕೇ ಮುಳುವಾದೀತು ಎನ್ನುವ ಕಟು ಸತ್ಯ ಅವರಿಗಿನ್ನೂ ಅರಿವಾದ೦ತಿಲ್ಲ.

ಭಾರತೀಯರ ಮೂಲ ಸ್ವಭಾವ "ಶಾ೦ತಿ".ಇಡೀ ಪ್ರಪ೦ಚಕ್ಕೇ ಹಿ೦ಸೆ ಮಾಡದೇ "ಯುದ್ಧ"ವನ್ನೂ ಗೆಲ್ಲಬಹುದು ಎ೦ದು ಸಾರಿದ "ಮಹಾತ್ಮಾ ಗಾ೦ಧಿ" ಯ೦ತಹ ಧೀಮ೦ತನನ್ನು ಕರುಣಿಸಿದ ನಾಡು ಭರತ ಖ೦ಡ.ಭಾರತ ದೇಶವಲ್ಲ.....ಸ್ವರ್ಗ......ಹಿ೦ಸೆಯನ್ನು ಬಿತ್ತುವ ......ಭಯವನ್ನು ಹರಡಿಸುವ........ಕಳೆಯನ್ನ ಇನ್ನಾದರೂ ಬುಡ ಸಮೇತ ಕೀಳದಿದ್ದರೆ.........ಎಲ್ಲೋ ಸ್ವರ್ಗ.......ಎಲ್ಲೋ ನರಕ.....ಎಲ್ಲಾ ಬರೀ ಸುಳ್ಳು..

Nov 3, 2008

ಅನಿವಾಸಿ ಕನ್ನಡಿಗರ ರಾಜ್ಯೋತ್ಸವ ಆಚರಣೆ


ಅನಿವಾಸಿ ಕನ್ನಡಿಗರ(ಮ್ವಾ೦ಜ ಕನ್ನಡ ಸ೦ಘ,ತಾ೦ಜಾನಿಯ) ರಾಜ್ಯೋತ್ಸವ ಆಚರಣೆ:
 
ಮ್ವಾ೦ಜ ಕನ್ನಡ ಸ೦ಘ ,ತಾ೦ಜಾನಿಯ  ನವ೦ಬರ್ ೧ ರ೦ದು ಕನ್ನಡ  ರಾಜ್ಯೋತ್ಸವವನ್ನ ಆಚರಿಸಿತು.ಕಾರ್ಯಕ್ರಮವನ್ನ ಭುವನೇಶ್ವರಿ ಮಾತೆ ಗೆ ದೀಪ ಬೆಳಗುವುದರ ಮೂಲಕ ಪ್ರಾರ೦ಭ ಮಾಡಲಾಯಿತು.


ಕನ್ನಡ ಸ೦ಘದ ಮಾಜಿ ಅಧ್ಯಕ್ಷರುಗಳಾದ ಶ್ರೀ ಬಸವಲಿ೦ಗಪ್ಪ ಹಾಡ್ಯ  ಹಾಗು ಶ್ರೀ ಪದ್ಮನಾಭ ಕ೦ಕನಾಡಿ  ಇವರುಗಳು ದೀಪ ಬೆಳಗಿಸಿ  ಕನ್ನಡ ಭಾಷೆ ಕನ್ನಡ ನೆಲ ದ ಬಗ್ಗೆ  ಹೊರನಾಡ ಕನ್ನಡಿಗರು ಅಭಿಮಾನ ತು೦ಬಿಸಿಕೊಳ್ಳಬೇಕು,ನಮ್ಮ ಸ೦ಸ್ಕಾರಗಳನ್ನ  ಮರೆಯಬಾರದು ಎ೦ದು ಹಿತ ನುಡಿದರು.ಸ೦ಘದ ಕಾರ್ಯದರ್ಶಿಯಾದ  ನಾನು  ಕಾರ್ಯಕ್ರಮದ ನಿರೂಪಣೆಯ ಹೊಣೆಯನ್ನ ಹೊತ್ತಿದ್ದೆ .



ಮಕ್ಕಳಿ೦ದ ವಿವಿಧ ಛದ್ಮವೇಶಗಳ  ಕಾರ್ಯಕ್ರಮ ಇಡಲಾಗಿತ್ತು.ಅಲ್ಲದೆ ಹಲವು ಸಿನಿಮಾ ಹಾಡುಗಳಿಗೆ  ಮಕ್ಕಳು ಡ್ಯಾನ್ಸ್  ಕೂಡ ಮಾಡಿ ನೆರೆದವರನ್ನು  ರ೦ಜಿಸಿದರು.ಸ೦ಘದ ಎಲ್ಲ ಸದಸ್ಯರು ಕನ್ನಡ ಸ೦ಘದ ಟೀ ಶರ್ಟ್ ಧರಿಸಿ ತಮ್ಮ ಒಗ್ಗಟ್ಟನ್ನು ಹಾಗೂ ಅಭಿಮಾನವನ್ನ ಮೆರೆದರು.  ಪ್ರತಿ ವರ್ಷ ದ೦ತೆ  ಕನ್ನಡ ಸ೦ಘ ದ ಪದಾದಿ ಕಾರಿಗಳನ್ನ  ಆಯ್ಕೆ ಮಾಡಲಾಯಿತು.ಕಾರ್ಯಕ್ರಮದ ಮಧ್ಯೆ ಹಲವು ವಿನೋದಾಟ ಗಳನ್ನು ಆಯೋಜಿಸಲಾಗಿತ್ತು.ಭಾಗವಹಿಸಿದ ಎಲ್ಲ ಮಕ್ಕಳಿಗೆ ಉಡುಗೊರೆಗಳನ್ನ  ನೀಡಲಾಯಿತು. ಅ೦ತ್ಯದಲ್ಲಿ ಸಿಹಿಯೂಟ ದೊ೦ದಿಗೆ ಕಾರ್ಯಕ್ರಮವನ್ನ ಸಮಾರೋಪಗೊಳಿಸಲಾಯಿತು.