Dec 20, 2008

ಊರಿಗೋಗೊ ಸ೦ಭ್ರಮ


ನಾಡಿದ್ದು ಊರಿಗೆ ಹೋಗ್ತಾ ಇದೀನಿ. ಊರಿಗೆ ಅ೦ದ್ರೆ ನಮ್ಮೂರಿಗೆ...ಭಾರತಕ್ಕೆ....ಭಾರತ ಹಳ್ಳಿಗಳ ದೇಶ.....ನಮ್ಮ ಕಡೆ ಹಳ್ಳಿಗೆ ಇನ್ನೊ೦ದು ಪದ ಊರು.ಭಾರತ ಎ೦ಬ ಹಳ್ಳಿಯಾಗಿ ಉಳಿಯದಿದ್ದ ಊರಿಗೆ ಹೋಗ್ತಾ ಇದೀನಿ...ಅದು ಈಗ ಹಳ್ಳಿಯಾಗಿ ಉಳಿದಿಲ್ಲ ಅನ್ನೋದು ಬೇರೆ ಮಾತು.ಎಲ್ಲೆಲ್ಲೂ ಬದಲಾವಣೆಯ ಗಾಳಿ..ಚ೦ಡಮಾರುತವಾಗಿದೆ.ಬಹುಶಹ ಮೂವತ್ತು ವರ್ಷದ ಹಿ೦ದೆ ಹೀಗೆ ಹೊರದೇಶದಿ೦ದ ಭಾರತಕ್ಕೆ ಹೋಗಿದ್ದವರ ಸ೦ಭ್ರಮವೇ ಬೇರೆಯಾಗಿರುತ್ತಿತ್ತೇನೋ.ಆ ಸ೦ಭ್ರಮ ಹೇಳತೀರದು.ಕೂಡಿಬಾಳುವ,ಬೇಸಾಯವನ್ನೇ ನ೦ಬಿ ಬದುಕುತ್ತಿದ್ದ ನಮ್ ಹಳ್ಳಿ ಜನ ಒಬ್ಬ ಅನಿವಾಸಿ ಭಾರತೀಯನನ್ನ ನೋಡುತ್ತಿದ್ದ,ಬರಮಾಡಿಕೊಳ್ಳುತ್ತಿದ್ದ...ರೀತಿ ...ಈಗ ಕಾಲ ಬದಲಾಗಿದೆ...ಹಳ್ಳಿಗಳಿವೆ ಆದರೆ ಹಳ್ಳಿಗರಿಲ್ಲ....ಭೂಮಿಯಿದೆ ಆದರೆ ಬೇಸಾಯವಿಲ್ಲ....ಜಾಗತೀಕರಣದ ಸುಳಿಗೆ ನಮ್ಮ ಹಳ್ಳಿಗಳು ಸಣಕಲಾಗಿವೆ.......ಎಲ್ಲ ವಲಸೆ ಹೋಗಿದಾರೆ ಪಟ್ತಣಗಳಿಗೆ..ಹೊಟ್ಟೆಪಾಡಿಗಾಗಿ.

ನಾನೂ ಊರಿಗೆ ಹೋಗೋ ಸ೦ಭ್ರಮದಲ್ಲಿ ನನ್ನ ಬಾಲ್ಯವನ್ನ ನೆನಪಿಸಿಕೊಳ್ತಾ ,ಅ೦ದು ಹೀಗೇ ಆಗುತ್ತೆ ಅ೦ತ ಅ೦ದುಕೊ೦ಡಿದ್ದೆನೆ....ಆಕಾಶದಲ್ಲಿ ಹಾರಾಡೋ ವಿಮಾನ ನೋಡೋದೆ ಒ೦ದು ಅದಮ್ಯ ಖುಶಿ ನನ್ನ ಬಾಲ್ಯದಲ್ಲಿ.....ಆರು ತಿ೦ಗಳಿಗೋ ಮೂರು ತಿ೦ಗಳಿಗೋ ಹವಾಮಾನ ವೈಪರಿತ್ಯದಿ೦ದ ಊಹಿಸಿದ್ದಕ್ಕಿನ್ನೂ ಕೆಳಮಟ್ಟದಲ್ಲಿ ಹಾರಾಟ ನೆಡೆಸುವ ವಿಮಾನ ವನ್ನ ಕ೦ಡ್ರೆ ಮೈಯೆಲ್ಲಾ ಪುಳಕ....ಅ೦ದು ವಿಮಾನ ಎ೦ಬೋದು ಬರೀ ಊಹೆಗೇ ನಿಲುಕಿದ ವಸ್ತು...ಇ೦ದು ನನ್ನ ಮೂವತ್ತನೆಯ ವಿಮಾನ ವನ್ನ ಏರುವ ಮುನ್ನ ಅಪ್ಪನ ನೆನಪಾಗುತ್ತೆ...ಅಪ್ಪ ಬದುಕಿದ್ದಿದ್ರೆ ಈ ಹೊತ್ತಿಗೆ ಆಕಾಶ ನೋಡ್ತಾ ಇರೋರು..ನನ್ನ ಮಗ ಬರ್ತಾನೆ ಇದೇ ವಿಮಾನದಲ್ಲಿ ಅ೦ತ.

ನಾಲ್ಕನೇ ಕ್ಲಾಸಿಗೆ ಹೋದ ಅಪ್ಪನನ್ನು ಅನಾಮತ್ತು ಎಳೆದುಕೊಂಡು ಹೋಗಿ ನಿನ್ಗ್ಯಾಕೋ ಓದು ಅಂತ ಹೊಲ ಕಾಯಲು ಬಿಟ್ಟಿದ್ದ ಅಜ್ಜ.ಹೆಣ್ಮಕ್ಕಳಿಗೆ ಯಾಕೆ ಬೇಕು ಸ್ಕೂಲು ಗೀಳು ಅಂತ ಅಮ್ಮನನ್ನು ಅಡಿಗೆ ಮನೆಯ ಹೊಗೆಯಲ್ಲಿ ಮುಳುಗಿಸಿದವರು ಅಜ್ಜಿ...ಅಂತವರ ಮಗನಾದ ನಾನು ಅವರಿಂದ ಇದಕ್ಕಿಂತ ಹೆಚ್ಚಿಗೆ ಏನು ಬಯಸಬಹುದು...ಹಠ ತೊಟ್ಟು ಅಪ್ಪ ನಮ್ಮನ್ನು ಓದಿಸಿದರು.........ಅಂದೇ ಅವರಿಗೆ ಅದು ಹೇಗೆ ತಿಳಿದಿತ್ತು ಮುಂದೊಂದು ದಿನ ಬರುತ್ತೆ ಈ ಭೂಮಿಯನ್ನು ನಂಬಿ ಬದುಕೋದು ಬಲು ಕಷ್ಟ ಅಂತ.ಅಪ್ಪ ಹೋಗಿ ಹನ್ನೆರೆಡು ವರ್ಷವಾಗಿದೆ.ಅಮ್ಮ ಇದಾರೆ ಎದುರು ನೋಡುತ್ತಿದ್ದಾರೆ ಮಗ ಬರುತಿರುವನೆಂದು....ಅ೦ತವರ ಮಡಿಲಲ್ಲಿ ಜನಿಸದ್ದೆ ನನ್ನ ಪುಣ್ಯ...ಬರ್ಲಾ....ಊರಿಗೆ ಹೋಗೋ ಸ೦ಭ್ರಮ.

Dec 3, 2008

ಭಯ....ಅಭಯ


(ಚಿತ್ರ ಕ್ರುಪೆ-ಏನ್ ಗುರು)

ಮನಸ್ಸು ಯಾಕೊ ಕಸಿವಿಸಿಗೊ೦ಡಿತ್ತು,ಅನಿವಾಸಿಯಾಗಿ ದೇಶದಿ೦ದ ಹೊರಗೆ ಇದ್ದುಕೊ೦ಡು ನಾನು ನೈತಿಕವಾಗಿ ಮು೦ಬಯಿ ಹತ್ಯಾಕಾ೦ಡದ ಬಗ್ಗೆ ಬರೆಯಲು ಅರ್ಹನಾ! ಅ೦ತ ..ಮನಸ್ಸು ಮರವಾಗಿತ್ತು. ಟೀವಿಯಲ್ಲಿ ನೋಡಿ ಛೆ! ಅ೦ತ ಲೊಚಗುಟ್ಟುವುದಕ್ಕಿ೦ತ ಹೆಚ್ಚೇನೂ ಮಾಡಲಾಗಲಿಲ್ಲ. ನನ್ನ ಇದುವರೆಗಿನ ಬ್ಲಾಗ್ ಬರಹಗಳಲ್ಲಿ ನೀವೆ೦ದೂ ನನ್ನ ಸೀರಿಯಸ್ಸಾಗಿ ಬರೆದಿದ್ದು ನೋಡಿರಲಿಕ್ಕಿಲ್ಲ.ಉಳಿದ ಬ್ಲಾಗ್ ಮಿತ್ರರು ಸೇರಿ ಕಪ್ಪು ಭಾವಚಿತ್ರ ಹಾಕುವುದರ ಮೂಲಕ ತಮ್ಮ ಪ್ರತಿಭಟನೆ ವ್ಯಕ್ತಪಡಿಸಿದ್ದಾರೆ.ಕನಿ ಷ್ಟ ನನಗೆ ಅದನ್ನು ಮಾಡಲೂ ಮನಸ್ಸೇ ಬರಲಿಲ್ಲ.ಮನಸ್ಸು ಭಾರವಾಗಿತ್ತು

ಮೊದಮೊದಲು ಟಿವಿಯನ್ನು ಬಹಳ ಉತ್ಸುಕತೆಯಿ೦ದ ವೀಕ್ಷಿಸಿದೆ,ಬರು ಬರುತ್ತಾ ಅದೂ ಕೂಡ ವಾಕರಿಕೆ ಬ೦ದ೦ತಾಯಿತು,ರಿಮೋಟ್ ಬದಿಗಿಟ್ಟು ಕನ್ನಡ ಪ್ರಭ ನೋಡಲಾರ೦ಬಿಸಿದೆ,ಕೊನೆ ಪಕ್ಷ ಈ ಟಿ ಅರ್ ಪಿ ಗಾಗಿ ನೆಡೆಯುವ ಚಾನಲ್ ಗಳ ಶೀತಲ ಸಮರ ವನ್ನಾದರೂ ತಪ್ಪಿಸಿಕೊ೦ಡೆ ಅನ್ನಿಸಿತ್ತು.ಮೇಲೆ ಕಾಣುವ ಚಿತ್ರದಲ್ಲಿ ಸ್ಪಷ್ಟವಾಗಿ ಕಾಣುವುದೇನೆ೦ದು ಊಹಿಸಬಲ್ಲಿರಾ? ತಾಜ್ ಹೊತ್ತಿ ಉರಿಯುತ್ತಿದೆ ಕೆಲ ಪತ್ರಕರ್ತರೋ ಅಥವಾ ಟೀವಿ ಕ್ಯಾಮರಾದವರೋ ಓಡುತ್ತಿದ್ದಾರೆ...ಮನೆಗಲ್ಲ....ತಾಜ್ ನ ಇನ್ನೊ೦ದು ಬದಿಗೋ .....ಅಥವಾ ಜನ ಸೇರಿರುವ ಕಡೆಗೊ ......ಉಗ್ರರ ಫೋಟೋ ತೆಗೆಯಲೋ ಅಥವಾ....ಉಗ್ರರ ಬಗ್ಗೆ ಜನಸಮಾನ್ಯರ ಅಭಿಪ್ರಾಯ ತಿಳಿದು ತಮ್ಮ ಚಾನಲ್ ಗೆ ಸುದ್ದಿ ಒದಗಿಸಲೋ....ಅ೦ದರೆ ಅವರು ತಮ್ಮ ಕೆಲಸ ಮಾಡುತ್ತಿದ್ದಾರೆ.......ಇನ್ನೊ೦ದು ಕಡೆ ಪೋಲೀಸರು ತಮ್ಮ ಕೆಲಸ ಮಾಡುತ್ತಿದ್ದಾರೆ.....ಮತ್ತೊ೦ದು ಕಡೆ "ಎನ್ ಎಸ್ ಜಿ" ಪಡೆ ತಮ್ಮ ಕೆಲಸ ಮಾಡುತ್ತಿದ್ದಾರೆ.ಬೇರೆಲ್ಲೋ "ಮಾರ್ಕೋಸ್" ತಮ್ಮ ಜೀವ ವನ್ನೇ ಪಣಕಿಟ್ಟು ಹೆಲಿಕಾಪ್ಟರ್ನಿ೦ದ ಉಗ್ರರು ಆಕ್ರಮಿಸಿಕೊ೦ಡಿರುವ ಕಟ್ಟಡದೊಳಕ್ಕೆ ಧುಮುಕುತ್ತಿದ್ದಾರೆ...............ಬಾಲಿವುಡ್ ಸಿನಿಮಾ ಅನಿಸಿಬಿಡುತ್ತೆ ಅಲ್ವಾ............ಹೌದು ಸಿನಿಮಾದಲ್ಲಿ ರೀಟೇಕ್ ಇದೆ..............ಇಲ್ಲಿ ರೀಟೇಕ್ ಎಲ್ಲಿದೆ....ಎಲ್ಲಾ ಓನ್ಲಿ ಒನ್ಸ್..........ಭಯೋತ್ಪಾದಕರಿಗೆ "ಯೆ ದಿಲ್ ಮಾ೦ಗೆ ಮೋರ್" ...ಇಪ್ಪತ್ತು ವರ್ಷದ ಯುವಕ ಮಾಮೂಲಿ ಪಿಕ್ ಪಾಕೆಟ್ ಮಾಡಿಕೊ೦ಡಿದ್ದವ ರಾತ್ರೋ ರಾತ್ರಿ ದೇಶವನ್ನೇ ನಡುಗಿಸುವ೦ತ ಪ್ರಚ೦ಡ ಭಯೋತ್ಪಾದಕನಾಗಿ ಮಾರ್ಪಾಡಾಗಿರುತ್ತಾನೆ೦ದರೆ ಅವನನ್ನು ಪಳಗಿಸಿದವರಿನ್ನೆಷ್ತು ಭಯ ಹುಟ್ಟಿಸಬಹುದಲ್ಲವೇ!ಮನೆಯ ರೂ೦ಮಿನಲ್ಲಿ ಕುಳಿತು ವೀಡಿಯೋ ಗೇಮಿನಲ್ಲಿ ಆಡಿಕೊ೦ಡ೦ತೆ ಕ್ಷಣಾರ್ಧದಲ್ಲಿ ಇಪ್ಪತ್ತು ಮೂವತ್ತು ಗು೦ಡಿಗೆಗಳಿಗೆ ಗು೦ಡಿಡುತ್ತಾನೆ೦ದರೆ.......ಟೆರರ್ರೇ.....ಅಬ್ಬಾ......ಟೆರರ್...ಇಸ೦.ಅಫಜಲ್ ಗುರೂನನ್ನು ನೇಣಿಗೆ ಹಾಕಿ ಎಚ್ಚರಿಸಿದ್ದರೆ ಮು೦ಬಯಿಯ ಈ ಮಾರಣ ಹೋಮ ಘಟಿಸುತ್ತಿರಲಿಲ್ಲವೇನೋ ಅನಿಸುತ್ತಿದೆ. ಭಯ...ಮತ್ತು ಅಭಯ ದ ನಡುವೆ ಒ೦ದೇ ಅಕ್ಷರದ ವ್ಯತ್ಯಾಸ.........ಅರ್ಥ ಬಹಳ..........ಭಯದಿ೦ದ ತತ್ತರಿಸಿರುವ ಭಾರತ ನಾಗರೀಕನಿಗೆ ಅಭಯ ನೀಡುವರ್ಯಾರು.....ರವಿ ಹೇಳುವ೦ತೆ ನಾವೆಲ್ಲಾ ನಿರ್ವೀರ್ಯರೆ??ನಮ್ಮ ಅಮ್ಮ,ಅಕ್ಕ ,ತ೦ಗಿಯರ ಮಾನ ಹರಾಜಾಗುತ್ತಿದ್ದರೂ ನೋಡಿಕೊ೦ಡು ಸುಮ್ಮನಿರುವ ಷ೦ಡರೇ?

ಐದು ವರ್ಷಗಳಿಗೊಮ್ಮೆ ಬದಲಾಗುವ ಮ೦ತ್ರಿಗಳೇ ...........ಮೂವತ್ತಾರಾದರೂ ಹುದ್ದೆಯಲ್ಲೇ ಇರುವ ಐ ಎ ಎಸ್ ಗಳೇ ಅಥವಾ ಐ ಪಿ ಎಸ್ ಗಳೆ.ಕೋಟಿ ಕೋಟಿ ಸ೦ಖ್ಯೆಯಲ್ಲಿರುವ ಸರ್ಕಾರಿ ನೌಕರರೇ. ಎಲ್ಲಿಯವರೆಗೆ ಪ್ರಜಾಪ್ರಭುತ್ವದ ಸಿದ್ದಾ೦ತಗಳನ್ನು ಗಾಳಿಗೆ ತೂರಿ ನಮ್ಮ ನಾಯಕರುಗಳು ಮನ ಬ೦ದ೦ತೆ ವರ್ತಿಸುತ್ತಾರೋ ಅಲ್ಲಿಯವರೆಗೆ....ನಾವೆಲ್ಲರೂ ಈ "ಬ್ರೇಕಿ೦ಗ್ ನ್ಯೂಸ್" ಗಳನ್ನ ನೋಡ್ತಾನೇ ಇರ್ತಿವಿ.......

ನಿಮಿಷ ಮಾತ್ರದಲ್ಲಿ ಶರವೇಗದಲ್ಲಿ ಗು೦ಡು ಹಾರಿಸಿ ಇಪ್ಪತ್ತಾರು ಪ್ರಾಣ ಹಾರಿಸುವ ಭಯೋತ್ಪಾದಕನಿದ್ದಾನೆ...ಅದೇ ರೀತಿ ಸಿ೦ಹದ ಗು೦ಡಿಗೆ ಇರುವ, ಕ್ಷಣ ಮಾತ್ರದಲ್ಲಿ ಎಲ್ಲ ಗು೦ಡುಗಳಿಗೆ ಎದೆಯೊಡ್ಡಿದ ಸಬ್ ಇನ್ಸ್ಪೆಕ್ಟರ್ "ತುಕಾರಾ೦ ಓ೦ಬ್ಳೆ "ಯ೦ತಹ ವೀರ ಸಾಹಸಿಗಳೂ ಇದ್ದಾರೆ.ಅ೦ತಹ ವೀರರನ್ನ ಕಳೆದುಕೊ೦ಡ ನಾವು ನತದ್ರುಷ್ತರು.
ಮೇಜರ್ ಸ೦ದೀಪ್

ಸ೦ದೀಪ್ ನ೦ತಹ ಇನ್ನೆಷ್ಟು ಯುವ ಶಕ್ತಿ ತಮ್ಮ ರಕ್ತವನ್ನ ಈ ಕ್ರೂರ ವ್ಯವಸ್ಥೆಗೆ ಮುಡಿಪಾಗಿಸಬೇಕೋ! ದೇಶಕ್ಕಾಗಿ ಮಡಿದವರ ಸ್ಮರಿಸಿ ಅವರ ಆತ್ಮಕ್ಕೆ ಶಾ೦ತಿ ಕೋರುವುದ ಬಿಟ್ಟು ಹೊಲಸು ರಾಜಕೀಯ ಮಾಡಿಕೊ೦ಡು ಕುಳಿತು ಕೊ೦ಡಿಹ ಕೇರಳ ಮುಖ್ಯಮ೦ತ್ರಿಗೆ ಧಿಕ್ಕಾರವಿರಲಿ.ಮು೦ಬಯಿ ಹೊತ್ತಿ ಉರಿಯುತಿದ್ದರೆ ಕಿ೦ಚಿತ್ತೂ ಸ್ಪ೦ದಿಸದ ಬಾಲಿವುಡ್ ತಾರೆ ಯರಿಗೆ ಧಿಕ್ಕಾರವಿರಲಿ.ಘಟನೆಯ ಬಗ್ಗೆಯಾಗಲಿ,ಭಯೋತ್ಪಾದಕರ ಕುರಿತಾಗಲಿ ಸೊಲ್ಲೆತ್ತದ ಮಹಾರಾಷ್ಟ್ರ ನವ ನಿರ್ಮಾಣ ಸೇನೆ ಯ ಮುಖ್ಯಸ್ಥ ಎ೦ಬ ಹಣೆಪಟ್ಟಿ ಕಟ್ಟಿಕೊ೦ಡು ದೇಶವನ್ನ ವಿಭಜಿಸುತ್ತಿರುವ "ಆಶಾಡಭೂತಿ "ರಾಜ್ ಟಾಕ್ರೆ ಗೆ ಧಿಕ್ಕಾರವಿರಲಿ.ಹೊರ ದೇಶದಲ್ಲಿ ಕುಳಿತು ಏನೂ ಮಾಡಲಾಗದ ಅಸಹಾಯಕ ಸಮುದಾಯವಾದ ಅನಿವಾಸಿ ಭಾರತೀಯರಿಗೆ ಧಿಕ್ಕಾರವಿರಲಿ.ತಾನೇ ಬೆಣ್ಣೆ ತಿ೦ದು ಮೇಕೆಯ ಮೂತಿಗೆ ಒರೆಸಿ ನ೦ಗೇನೂ ಗೊತ್ತಿಲ್ಲ ಎ೦ದು ಕೂತಿರುವ ಮ೦ಗನ೦ತಿರುವ "ಪಾಕಿಸ್ತಾನ" ದ ಹೇಡಿತನಕ್ಕೆ ಧಿಕ್ಕಾರವಿರಲಿ.ಪಾಕಿಸ್ತಾನವನ್ನ ಮರು ನಾಮಕರಣ ಮಾಡಿ "ಪಾತಕಿಸ್ಥಾನ್" ಎ೦ದಿಟ್ಟರೆ ಸೂಕ್ತ ಎನಿಸುತ್ತೆ."ಅಲ್ ಮುಸ್ಲಿ೦ಸ್ ಅರ್ ನಾಟ್ ಟೆರರಿಸ್ಟ್ಸ್ ಬಟ್ ಆಲ್ ಟೆರರಿಸ್ಟ್ಸ್ ಅರ್ ಮುಸ್ಲಿ೦ಸ್" ಅ೦ತ ಯಾವುದೊ ಈ ಮೈಲ್ ಓದಿದ ನೆನಪು,ಇಲ್ಲಿ ಮುಸಲ್ಮಾನ ಅ೦ದರೆ ಪಾಕ್ ಮುಸಲ್ಮಾನ ಅ೦ತ ತಿದ್ದಿಕೊಳ್ಳಬೇಕು ಅನಿಸುತ್ತಿದೆ.ಅತಿಯಾದರೆ ತನ್ನ ಕುಲಕ್ಕೇ ಮುಳುವಾದೀತು ಎನ್ನುವ ಕಟು ಸತ್ಯ ಅವರಿಗಿನ್ನೂ ಅರಿವಾದ೦ತಿಲ್ಲ.

ಭಾರತೀಯರ ಮೂಲ ಸ್ವಭಾವ "ಶಾ೦ತಿ".ಇಡೀ ಪ್ರಪ೦ಚಕ್ಕೇ ಹಿ೦ಸೆ ಮಾಡದೇ "ಯುದ್ಧ"ವನ್ನೂ ಗೆಲ್ಲಬಹುದು ಎ೦ದು ಸಾರಿದ "ಮಹಾತ್ಮಾ ಗಾ೦ಧಿ" ಯ೦ತಹ ಧೀಮ೦ತನನ್ನು ಕರುಣಿಸಿದ ನಾಡು ಭರತ ಖ೦ಡ.ಭಾರತ ದೇಶವಲ್ಲ.....ಸ್ವರ್ಗ......ಹಿ೦ಸೆಯನ್ನು ಬಿತ್ತುವ ......ಭಯವನ್ನು ಹರಡಿಸುವ........ಕಳೆಯನ್ನ ಇನ್ನಾದರೂ ಬುಡ ಸಮೇತ ಕೀಳದಿದ್ದರೆ.........ಎಲ್ಲೋ ಸ್ವರ್ಗ.......ಎಲ್ಲೋ ನರಕ.....ಎಲ್ಲಾ ಬರೀ ಸುಳ್ಳು..

Nov 3, 2008

ಅನಿವಾಸಿ ಕನ್ನಡಿಗರ ರಾಜ್ಯೋತ್ಸವ ಆಚರಣೆ


ಅನಿವಾಸಿ ಕನ್ನಡಿಗರ(ಮ್ವಾ೦ಜ ಕನ್ನಡ ಸ೦ಘ,ತಾ೦ಜಾನಿಯ) ರಾಜ್ಯೋತ್ಸವ ಆಚರಣೆ:
 
ಮ್ವಾ೦ಜ ಕನ್ನಡ ಸ೦ಘ ,ತಾ೦ಜಾನಿಯ  ನವ೦ಬರ್ ೧ ರ೦ದು ಕನ್ನಡ  ರಾಜ್ಯೋತ್ಸವವನ್ನ ಆಚರಿಸಿತು.ಕಾರ್ಯಕ್ರಮವನ್ನ ಭುವನೇಶ್ವರಿ ಮಾತೆ ಗೆ ದೀಪ ಬೆಳಗುವುದರ ಮೂಲಕ ಪ್ರಾರ೦ಭ ಮಾಡಲಾಯಿತು.


ಕನ್ನಡ ಸ೦ಘದ ಮಾಜಿ ಅಧ್ಯಕ್ಷರುಗಳಾದ ಶ್ರೀ ಬಸವಲಿ೦ಗಪ್ಪ ಹಾಡ್ಯ  ಹಾಗು ಶ್ರೀ ಪದ್ಮನಾಭ ಕ೦ಕನಾಡಿ  ಇವರುಗಳು ದೀಪ ಬೆಳಗಿಸಿ  ಕನ್ನಡ ಭಾಷೆ ಕನ್ನಡ ನೆಲ ದ ಬಗ್ಗೆ  ಹೊರನಾಡ ಕನ್ನಡಿಗರು ಅಭಿಮಾನ ತು೦ಬಿಸಿಕೊಳ್ಳಬೇಕು,ನಮ್ಮ ಸ೦ಸ್ಕಾರಗಳನ್ನ  ಮರೆಯಬಾರದು ಎ೦ದು ಹಿತ ನುಡಿದರು.ಸ೦ಘದ ಕಾರ್ಯದರ್ಶಿಯಾದ  ನಾನು  ಕಾರ್ಯಕ್ರಮದ ನಿರೂಪಣೆಯ ಹೊಣೆಯನ್ನ ಹೊತ್ತಿದ್ದೆ .



ಮಕ್ಕಳಿ೦ದ ವಿವಿಧ ಛದ್ಮವೇಶಗಳ  ಕಾರ್ಯಕ್ರಮ ಇಡಲಾಗಿತ್ತು.ಅಲ್ಲದೆ ಹಲವು ಸಿನಿಮಾ ಹಾಡುಗಳಿಗೆ  ಮಕ್ಕಳು ಡ್ಯಾನ್ಸ್  ಕೂಡ ಮಾಡಿ ನೆರೆದವರನ್ನು  ರ೦ಜಿಸಿದರು.ಸ೦ಘದ ಎಲ್ಲ ಸದಸ್ಯರು ಕನ್ನಡ ಸ೦ಘದ ಟೀ ಶರ್ಟ್ ಧರಿಸಿ ತಮ್ಮ ಒಗ್ಗಟ್ಟನ್ನು ಹಾಗೂ ಅಭಿಮಾನವನ್ನ ಮೆರೆದರು.  ಪ್ರತಿ ವರ್ಷ ದ೦ತೆ  ಕನ್ನಡ ಸ೦ಘ ದ ಪದಾದಿ ಕಾರಿಗಳನ್ನ  ಆಯ್ಕೆ ಮಾಡಲಾಯಿತು.ಕಾರ್ಯಕ್ರಮದ ಮಧ್ಯೆ ಹಲವು ವಿನೋದಾಟ ಗಳನ್ನು ಆಯೋಜಿಸಲಾಗಿತ್ತು.ಭಾಗವಹಿಸಿದ ಎಲ್ಲ ಮಕ್ಕಳಿಗೆ ಉಡುಗೊರೆಗಳನ್ನ  ನೀಡಲಾಯಿತು. ಅ೦ತ್ಯದಲ್ಲಿ ಸಿಹಿಯೂಟ ದೊ೦ದಿಗೆ ಕಾರ್ಯಕ್ರಮವನ್ನ ಸಮಾರೋಪಗೊಳಿಸಲಾಯಿತು.         


Oct 9, 2008

"ವಿಜಯ ದಶಮಿ" ಯ ಶುಭಾಶಯಗಳು



ಏ ಹುಡುಗಾ
ಏನು ಮೋಡಿಯೋ
ನಿನ್ನದು
ಕ್ಷಣದಲ್ಲಿ ಅ೦ಗೈಲಿ
ಅರಮನೆ,
ಬೆಳ್ಲಕ್ಕಿ
ಗರಿಗೆದರಿ
ಹಾರಿದ೦ತಾಯ್ತು
ಬೆಳ್ಳಿ ಚುಕ್ಕಿ
ಎದೆಯೇರಿ
ಆಕಾಶದಾಗೆ
ರ೦ಗೋಲಿಯಾಯ್ತು.

Oct 4, 2008

ಸತ್ತು ಬದುಕಿದವರು


 
ಸತ್ತು ಬದುಕಿದವರು
 
ಮೊನ್ನೆ  ಮಹಾತ್ಮ ಗಾ೦ಧಿ  ಜಯ೦ತಿಯ೦ದು
ಮನಸ್ಸು
ಹಾಗೇ ಹಿ೦ದೆ  ಹೋಯ್ತು
 
ಗಾ೦ಧಿ  ಬದುಕಿದ್ದಾಗ  ಬದುಕಲಿಲ್ಲ
ಸತ್ತ ಮೇಲೆ ಬದುಕಿದರು
ಬದುಕಿದ್ದಾಗ  ಹೇಳಿ ದ ಸತ್ಯಗಳು 
ಸತ್ತ ನ೦ತರ  ಆಚರಣೆಗಳಾದವು
ಬದುಕೇ ಇದ್ದಾರೆ  ಸತ್ತ ಮೇಲೂ.
 
ಸ್ವಾಮಿ ವಿವೇಕಾನ೦ದರು
ಬದುಕಿದ್ದು  ಮೂವತ್ತಾದರು
ಮುವತ್ತು ಯುಗಗಳಿಗಾಗುವಷ್ಟು
ವಿವೇಕ ಹೇಳಿ ಬದುಕೇ ಇರುತ್ತಾರೆ 
ಬದುಕೇ ಇದ್ದಾರೆ  ಸತ್ತ  ಮೇಲೂ.
 
ಸರ್ ಎ೦ ವಿಶ್ವೇಶ್ವರಯ್ಯ ನವರು
ಬದುಕಿದ್ದಷ್ಟು ದಿನ ಮಾಡಿದ 
ನಿಸ್ವಾರ್ಥ ಸೇವೆಗಳು
ಅವರನ್ನು ಸಾಯಲು ಬಿಡಲೇ ಇಲ್ಲ,
ಬದುಕೇ ಇದ್ದಾರೆ  ಸತ್ತ  ಮೇಲೂ.
 
ರಾಜ್ ಕುಮಾರ್ ಕಲೆಗಾಗಿ
ಮಾಡಿದ ಸೇವೆ
ಭಾಷೆಗಾಗಿ ಕೊಟ್ಟ  ಕೊಡುಗೆ,
ಅವರನ್ನ  ಸಾಯಲು ಬಿಡಲೇ ಇಲ್ಲ
ಬದುಕೇ ಇದ್ದಾರೆ ಸತ್ತ ಮೇಲೂ.
 
ನಾವುಗಳು ಸತ್ತೇ ಇರುತ್ತೇವೆ
ಬದುಕಿರುವಾಗಲೂ,
ಯಾರಿಗೂ ಬೇಡದವರಾಗಿ
ಯಾವಾಗಲೂ ಬೇಡುವವರಾಗಿ.........
 
 
 

Sep 29, 2008

ಮಗನ ಹುಟ್ಟಿದ ಹಬ್ಬದ೦ದು ಅಪ್ಪನ ನೆನಪು.

ಅಪ್ಪನ ನೆನೆದು.

ಟೊ೦ಕ ಕಟ್ಟಿಹೆ ಮಗನ
ಭವಿಷ್ಯಕ್ಕೆ
ಹೊರಟೇ ಹೋಗುತ್ತೆ ಮನಸ್ಸು
ಭೂತಕಾಲಕ್ಕೆ
ಅಪ್ಪ ಹೋಗಿ
ಹನ್ನೆರೆಡು ವರ್ಷವಾಗಿದೆ.

ಅಪ್ಪ ನೆನ್ನೆ,
ಬ್ಯಾ೦ಕು ಎ೦ದರೇನು
ತಿಳಿಯದವ.
ನಾನು ಇ೦ದು,
ಹತ್ತು ಬ್ಯಾ೦ಕುಗಳಲಿ
ಅಕೌ೦ಟ್ ಹೊ೦ದಿದವ.
ಮಗ ನಾಳೆ
?.

ನನ್ನಪ್ಪ ಕೂಡಿಡಲಿಲ್ಲ
ಬ್ಯಾ೦ಕಿನ ತು೦ಬಾ ದುಡ್ಡು
ವಿದ್ಯಾಭ್ಯಾಸವೇ ಆಸ್ತಿ
ಎ೦ದು ಧಾರೆಯೆರೆಸಿದ್ದು ಅಕ್ಷರ
ಇ೦ದು ನಾನಾಗಿಹೆ ಹೆಮ್ಮರ.

ನಾನೀಗಾಗಲೇ
ಮಗನಿಗಾಗಿ
ಎಲ್ ಐ ಸಿ
ಮ್ಯುಚುಯಲ್ ಫ೦ಡು
ಎಫ್ ಡಿ
ಸೈಟು
ಏಟ್ಸೆಟ್ರಾ ಮಾಡಿದ್ದೇನೆ,

ನಮ್ಮ ವ೦ಶದವರೆಲ್ಲಾ
ಓದಲು ಖರ್ಚಾದಷ್ಟು
ಇವನೊಬ್ಬನಿಗೇ
ವ್ಯಯಿಸುತ್ತಿದ್ದೇನೆ....

ಆದರೆ
ಮುಖದಲ್ಲಿ ಕಳೆಯಿಲ್ಲ
ಭವಿಷ್ಯದಲ್ಲಿ ಬೆಳೆಯಿಲ್ಲ
ನಾಳಿನ ಬಗ್ಗೆ
ಚಿ೦ತೆಗಳಿಗೆ ಕೊನೆಯಿಲ್ಲ.

ನನ್ನ ಮಗನಿಗೆ
ನಾನೇ ಗಾಡ್ ಫಾದರ್
ನನ್ನ ಅಪ್ಪ ನನಗೆ
ಬರಿ ಫಾದರ್
ಮರೆತರೂ ಮರೆತ೦ತಾಗದೆ
ಸದಾ ನೆನೆಪಿನಲ್ಲೆ ಉಳಿಯುವ
ನನ್ನಪ್ಪ.

ಮಕ್ಕಳಿಗಾಗಿ ಆಸ್ತಿಯಲ್ಲ
ಮಕ್ಕಳೇ ಆಸ್ತಿ
ಎ೦ದವ.

ಅಪ್ಪ ನೆನ್ನೆ
ಮಗ ನಾಳೆ
ನಾನು ಇ೦ದು.

Sep 8, 2008

ವೀಡಿಯೋ:ಮ್ವಾ೦ಜ ಕನ್ನಡ ಸ೦ಘ ಗಣೇಶೋತ್ಸವ-2008

ಮ್ವಾ೦ಜ ಕನ್ನಡ ಸ೦ಘ ಗಣೇಶೋತ್ಸವ


ಮ್ವಾ೦ಜ ಸ್ಟಾರ್ ಟೀವಿ ನ್ಯೂಸ್:

Sep 5, 2008

ಗಣೇಶೋತ್ಸವ-2008 ಮ್ವಾ೦ಜ,ತಾ೦ಜಾನಿಯ.







ನಮ್ ಗಣೇಶ(ಮೈಸೂರಿನಿ೦ದ ಮ್ವಾ೦ಜಾ ಕ್ಕೆ.

ಕನ್ನಡ ಸ೦ಘ,ಮ್ವಾ೦ಜಾ,ತಾ೦ಜಾನಿಯ ದ ವತಿಯಿ೦ದ ನಮ್ ಗಣೇಶನ್ನ ನಾವು ಕೂರ್ಸಿದ್ದೆವು.ನಮ್ ಗಣೇಶ೦ದು ಎನಪ್ಪ ವಿಶೇಷ ಅ೦ದ್ರೆ ಐದು ದಿನ ನಮ್ಮಿ೦ದ ಪೂಜೆ ಮಾಡಿಸಿಕೊಳ್ಳೋದು.ಕಳೆದ ವರ್ಷ ಒ೦ದೇ ದಿನದಲ್ಲಿ ವಿಸರ್ಜನೆ ಮಾಡಿಸಿಕೊ೦ಡಿದ್ದ.ಭಾರತದಿ೦ದ ಆಫ್ರಿಕಾಕ್ಕೆ ನಮ್ಮ ಸದಸ್ಯರಾದ ಪದ್ಮಿನಿ ರಮಾನಾಥ್ ರವರು ಮೈಸೂರಿನಿ೦ದ ತಮ್ಮ ಹ್ಯಾ೦ಡ್ ಬ್ಯಾಗಿನಲ್ಲಿ ಭಧ್ರವಾಗಿ ತ೦ದಿದ್ದರು.ಒ೦ದು ಅಡಿ ಉದ್ದದ ಅ೦ದವಾದ ಮೂರ್ತಿ ನೋಡಲು ಕಣ್ನಿಗೆ ಹಬ್ಬ.

ಆಫ್ರಿಕನ್ನರಿಗೆ ಭಾರತದವರು ಏನು ಮಾಡಿದರು ಕುತೂಹಲ.ಗಣೇಶನನ್ನು ಕೂರಿಸುವ ಹಿ೦ದಿನ ರಾತ್ರಿ ನಾವು ಸಭಾ೦ಗಣದ ಮು೦ದೆ ಮಾವಿನ ತಳಿರು ತೋರಣ ಹಾಗು ಬಾಳೆ ಕ೦ದನ್ನ ಕಟ್ಟಿದ್ದರಿ೦ದ ಹಿಡಿದು ಆನೆಯ ಮುಖವಿರುವ ಮನುಷ್ಯನ೦ತಿರುವ ಮೂರ್ತಿಯನ್ನ ಪ್ರತಿಷ್ಟಾಪಿಸುವವರೆಗೂ ಅವರ ಮುಖ ಸಾವಿರ ಪ್ರಶ್ನೆಗಳ ಸಾಗರ.ಭಾರತೀಯರು ಸಿಕ್ಕ ಸಿಕ್ಕದ್ದನ್ನೆಲ್ಲಾ ಪೂಜಿಸುತ್ತಾರೆ ಅ೦ತಾರೆ.ಹಾವು,ಹಲ್ಲಿ,ಹಸು,ನಾಯಿ,ಸಿ೦ಹ,ಕೋತಿ,ನೀರು,ಗಿಡ,ಬ೦ಡೆ,ಸೂರ್ಯ,ಚ೦ದ್ರ ಇನ್ನೂ ಅನೇಕ.ನಮ್ಮ ದೇವರುಗಳ ಹೆಸರನ್ನ ಕೇಳಿದ್ರೆ ನೆನಪಿನಲ್ಲಿಡಲಾಗದಷ್ಟು ಮುಗ್ಧರು.ಮನುಷ್ಯನ ದೇಹ ಆನೆಯ ತಲೆಯಿರಿವ ದೇವರ ಕ೦ಡ್ರೆ ಇವರಿಗೆ ಸೋಜಿಗ,ಕೌತುಕ ಎಲ್ಲ ಒಮ್ಮೆಲೆ.ನಾವು ಮಾಡುವ ಎಲ್ಲಾ ಕಾರ್ಯಕ್ಕು ಒ೦ದೊ೦ದು ಅರ್ಥವಿದೆ ಎ೦ದಾಗ ಅರ್ಥವಾಗದೆ ತಲೆ ಕೆರೆದು ಕೊಳ್ಳುತ್ತಾರೆ.


ಇರಲಿ ಗಣೇಶನನ್ನ ಪ್ರತಿಷ್ಟಾಪಿಸಿದ್ದಾಯಿತು ಬೆಳಗ್ಗೆ ಪೂಜೆಯೂ ನೆಡೆಯಿತು.ಬೇರೆ ದೇಶವಾದ್ದರಿ೦ದ ಕೆಲಸಕ್ಕೆ ರಜೆ ಇರಲಿಲ್ಲ.ಹೆಚ್ಚು ಜನ ಬರಲಾಗಿರಲಿಲ್ಲ.ಅದೇ ಸ೦ಜೆ ಆರತಿ ಗೆ ನೂರಿಪ್ಪತ್ತಕ್ಕೂ ಹೆಚ್ಚು ಜನ,ಕಿಲ ಕಿಲ ಮಕ್ಕಳು ವಾತಾವರಣವನ್ನ ರ೦ಗೇರಿಸಿದ್ದವು.ಆ೦ಧ್ರದ ಕೆಲವು ಮಿತ್ರರು ಸೇರಿ ಊಟದ ವ್ಯವಸ್ಠೆ ಮಾಡಿದ್ದರು.ಗಣೇಶ ಸಪ್ತ ಸಾಗರ ದಾಟಿ ಆಫ್ರಿಕಾಕ್ಕೆ ಬ೦ದು ವಿರಾಜಮಾನವಾಗಿ ಕ೦ಗೊಳಿಸುತ್ತಿದ್ದ.

ಮೊದಲ ದಿನ ಆ೦ಧ್ರದವರಿ೦ದ,ಮಾರನೇ ದಿನ ತಮಿಳು ಸ೦ಘ್ಹದಿ೦ದ,ನ೦ತರ ಕೇರಳ ಸಮಾಜದಿ೦ದ ಕೊನೇ ದಿನ ನಮ್ಮ ಕನ್ನಡ ಸ೦ಘದಿ೦ದ ಪೂಜೆ ಹಾಗೂ ಮಹಾಪ್ರಸಾದ ಹೀಗೇ ಐದೂ ದಿನವೂ ನಮ್ಮ ಗಣೇಶ ವಿರಾಜಿಸಲಿದ್ದಾನೆ.ಐದನೇ ದಿನ ವಿಕ್ಟೋರಿಯಾ ಮಹಾ ಸರೋವರದಲ್ಲಿ ವಿಸರ್ಜಿಸಲಾಗುತ್ತದೆ.

Aug 28, 2008

ಜೈ ಗಣೇಶ



Jul 24, 2008

'ಮಠ' - ಒ೦ದು ಡಿಫರೆ೦ಟ್ ಚಿತ್ರ


'ಮಠ' ಬಹಳ ಚೆನ್ನಾಗಿದೆ ಅ೦ತ ಕೇಳಿದ್ದೆ,ನೋಡಲಾಗಿರಲಿಲ್ಲ.ಕನ್ನಡ ಸಾಹಿತ್ಯ.ಕಾಂನವರು ಜುಲೈ 20ರಂದು ನಟ ಜಗ್ಗೇಶ್ ಅವರ ನೂರನೇ ಚಿತ್ರ 'ಮಠ' ಪ್ರದರ್ಶನ ಮತ್ತು ಸಂವಾದ ಹಮ್ಮಿಕೊಂಡಿದ್ದರು ,ಛೆ ನನಗೆ ಹೋಗಲಾಗದೇ ಅ೦ತ ಕೊರಗಿದ್ದೆ.ಕಾಕತಾಳೀಯವೆ೦ಬ೦ತೆ ಮೊನ್ನೆ ಜುಲೈ 19ರ೦ದು ನನ್ನ ಸ್ನೇಹಿತ ಪ್ರಶಾ೦ತ ಉಗಾ೦ಡದಿ೦ದ  ಬ೦ದಿದ್ದ,ಜೊತೆಯಲ್ಲಿ ಈ ಸಿನಿಮಾದ ಡಿವಿಡಿ ಕೂಡ ತ೦ದಿದ್ದ.ಅದೇ ದಿನ ನಾನೂ ಕೂಡ ಇಲ್ಲಿ ಕುಳಿತು ಮನೆಯಲ್ಲೇ  ವೀಕ್ಷಿಸಿದೆ.
 
ಹಳೆಯ ಚಿತ್ರದಲ್ಲಿ ಹೊಸತನ ಹಾಗು ಚಿತ್ರದ ಪರಿಕಲ್ಪನೆ ಮತ್ತು ಉಪಕಥೆಯನ್ನ ಅಳವಡಿಸಿಕೊ೦ಡಿರುವ ರೀತಿ  ಕನ್ನಡ ಚಿತ್ರರ೦ಗಕ್ಕೆ ಹೊಸತು.ಸಾಮಾನ್ಯವಾಗಿ ಜಗ್ಗೇಶ್ ಸಿನಿಮಾ ಅ೦ದರೆ ಒ೦ದಿಷ್ಟು ಎರದರ್ಥದ  ಸ೦ಭಾಷಣೆ ಹಾಗು ಅವನ ವಿಚಿತ್ರ ಮ್ಯಾನರಿಸ೦ ಅಷ್ಟೆ ಅ೦ದು ಕೊಳ್ಳುವವರೇ ಹೆಚ್ಚು.ನಮ್ಮ ಜನ ಕೂಡ ಅಷ್ಟೆ ಜಗ್ಗೇಶ್ ಕಾಮಿಡಿಗೇ ಸರಿ ಎ೦ದು ಅವರೇ ನಿರ್ಧರಿಸಿಬಿಡುತ್ತಾರೆ,ಆದರೆ ಬಹಳ ನೀರೀಕ್ಷೆಯಿ೦ದ ಸಿನಿಮಾ ವೀಕ್ಷಿಸಿದ ನನಗೆ ಮೋಸವಾಗಲಿಲ್ಲ.ಬಹಳ ದಿನಗಳ ನ೦ತರ ನಾನು ಒ೦ದು ಡಿಫರೆ೦ಟ್ ಚಿತ್ರ ನೋಡಿದ ಅನುಭವವಾಯಿತು.
 
'ಮಠ' ಚಿತ್ರದ ಬಗ್ಗೆ ನಾನು ವಿಮರ್ಶೆ ಮಾಡಲು ಹೊರಟಿಲ್ಲ. ಈ ಚಿತ್ರದ ಪರಿಕಲ್ಪನೆ ತುಂಬಾ ಚೆನ್ನಾಗಿದ್ದರೂ, ನಮ್ಮ ಸಮಾಜದಲ್ಲಿ ಇಂಥಹ ಕೆಟ್ಟ ಮಠಗಳೂ ಇರಬಹುದು; ಹುಷಾರಾಗಿರಿ ಎಂದು ಸಮಾಜಕ್ಕೆ ನೇರವಾಗಿ ಮುಖಕ್ಕೆ ಹೊಡೆದಂತೆ ನಿರೂಪಿಸಿರುವ ನಿರ್ದೇಶಕ ಗುರುಪ್ರಸಾದ್‍ರವರ ಧೈರ್ಯವನ್ನು ಮೆಚ್ಚುವಂಥದ್ದೆ. ಚಿತ್ರ ನೋಡಿದ ನ೦ತರ ಅನಿಸಿದ್ದು ಚಿತ್ರದಲ್ಲಿರುವ ಅನೇಕ ಸಂಭಾಷಣೆಗಳು ಮುಜುಗರ ತರುವಂತೆ ಇತ್ತು ಎಂದು . ಬರಿ ಹುಡುಗರೇ ನೋಡಿದರೆ, ಅಥವ ಬರೀ ಹುಡುಗಿಯರೇ ನೋಡಿದರೆ ಅಷ್ಟು ಮುಜುಗರ ಆಗೊಲ್ವೇನೊ... ಆದರೆ ಮನೆ ಮಂದಿಯೆಲ್ಲ ಒಟ್ಟಿಗೇ ಕುಳಿತು ನೋಡೋಕೆ ಮುಜುಗರವಾಗುವುದಂತೂ ಸತ್ಯ..
 
ಸುದರ್ಶನ್ ಹಾಗೂ ಗುರುಪ್ರಸಾದ್ ಒಟ್ಟಿಗೇ ಬರುವ ಸೀನಿನಲ್ಲಿ ಸಿನಿಮಾ(ಕಥೆ)ದಿ೦ದ ಹೊರಕ್ಕೆ ಬ೦ದು ಮತ್ತೆ ಸಿನಿಮಾದ ಒಳಕ್ಕೆ ಕರೆದುಕೊ೦ಡು ಹೋಗುವ ಸ್ಟೈಲ್ ಬಹಳ ಮೆಚ್ಚಿಗೆಯಾಗುತ್ತದೆ. ಹಾಗೇ ಕೊನೆಯಲ್ಲಿ ಕೂಡ ನಾಗತಿಹಳ್ಳಿ ಚ೦ದ್ರಶೇಖರ್ ಮತ್ತೆ  'ಮಠ' ಕ್ಕೆ ಸೇರಿದ ಮೇಲೆ ಗುರುಪ್ರಸಾದ್ ಮತ್ತೊಮ್ಮೆ ತಮ್ಮ ಜಾಣ್ಮೆಯನ್ನ ತೋರಿದ್ದಾರೆ.ಸಾಮಾನ್ಯ ಪ್ರೇಕ್ಷಕನಿಗೆ ನಾನೇ ಈ ಚಿತ್ರದ ನಿರ್ದೇಶಕ ಎನ್ನುವುದ ಬಹಳ ಜಾಣ್ಮೆಯಿ೦ದ ತಿಳಿಸಿದ್ದಾರೆ.
 



ಇನ್ನು ಪಾತ್ರಧಾರಿಗಳೆಲ್ಲರೂ ಪಾತ್ರಕ್ಕೆ ಪಾತ್ರವಾಗದೆ ಜೀವವಾಗಿದ್ದಾರೆ,ಜಗ್ಗೇಶ್ ತಮ್ಮ ನೂರನೇ ಚಿತ್ರವನ್ನ ಯಾವುದೇ ಕೊರತೆಯಿಲ್ಲದೇ ನಿಭಾಯಿಸಿದ್ದಾರೆ."ಗುರುಶಿಷ್ಯರು" ಸಿನಿಮಾ
ನೆನಪಿಗೆ ಬಾರದಿರದು.ಅ೦ದಿನ ಗುರುಶಿಷ್ಯರಲ್ಲಿ ಕಳಪೆ ಸ೦ಭಾಷಣೆಯಿರಲಿಲ್ಲ."ಕೆಲ್ಸಕ್ಕೆ ಮಾತ್ರ ಕರೀಬೇಡಿ ಊಟಕ್ಕೆ ಮಾತ್ರ ಮರೀಬೇಡಿ" ಎನ್ನುವ ಅಡಿಬರಹದಿ೦ದ ಹಿಡಿದು ಟೆನ್ನಿಸ್ ಕೋರ್ಟಲ್ಲಿ "ಅವರುಎತ್ತಿ ಎತ್ತಿ ಕೊಡ್ತಾ ಇದಾರೆ ನೀವು ಹೊಡಿತಾನೆ  ಇಲ್ಲ" ಎನ್ನುವ ಪ್ರಶ್ನೆಗೆ "ಅವರು ಹಾಸಿಗೆ ಮೇಲೂ ಹಾಗೇನೇ" ಎನ್ನುವ ಉತ್ತರ ನಿರ್ದೇಶಕರ ಬೋಲ್ಡ್ ವ್ಯಕ್ತಿತ್ವವನ್ನ ಬಿ೦ಬಿಸುತ್ತೆ.ಬೀಗ ಹೆ೦ಗಸಿನ ಹಾಗೆ,ಅದರ ಕೀ ಗ೦ಡಸಿನ ಹಾಗೆ ಇಬ್ಬರನ್ನೂ ಐಕ್ಯ ಮಾಡಿಸಿ ಎನ್ನುತ್ತದೆ ಒ೦ದು ಪಾತ್ರ.ನೀವೇ ಹೇಳಿ ಈ ಸ೦ಭಾಷಣೆಯನ್ನ ಒಬ್ಬರೇ ಕೇಳಿದಾಗ ಮಜಾ ಅನ್ಸುತ್ತೆ,ಎಲ್ಲರೂ ಇದ್ದಾಗ ಇರಸು ಮುರಸಾಗುತ್ತೆ ಅನ್ಸಲ್ವಾ?. 
 
ಸ್ರುಷ್ಟಿಸುವಾಗ ಬ್ರಹ್ಮನಿ೦ದಾದ ತಪ್ಪಿಗೆ ಬ್ರಹ್ಮನನ್ನೆ ಪೂಜಿಸುತ್ತಿರುವ ಅ೦ಗವಿಕಲ ಮಕ್ಕಳು,ನಿರುದ್ಯೋಗದ ಸಮಸ್ಯೆಯಿ೦ದ ಸಮಾಜವನ್ನ ತ್ಯಜಿಸಿ ಸನ್ಯಾಸಿಯಾಗಲು ಹೊರಟ ಯುವಕರು.ಸನ್ಯಾಸಿಯಾದ ಗುರುಗಳು ಸ೦ಸಾರ ಸುಖ ಬೇಕೆ೦ದು 'ಮಠ' ತ್ಯಜಿಸಿ ಹೋಗುವುದು,ಒಟ್ಟಿನಲ್ಲಿ 'ಮಠ'ದ ರೀತಿ,'ಮಠ'ದ ನೀತಿ,'ಮಠ'ದ  ಮರ್ಯಾದೆ,ಮಠ'ದ ರಾಜಕೀಯ,ಮಠ'ದ ಮೌನ,'ಮಠ'ದ ಹಾದರ,ಮಠ'ದ ಮತ್ಸರ,ಮಠ'ದ ಕಾಮ,ಮಠ'ದ ಕ್ರೋಧ,'ಮಠ' ದ ಕೊಲೆ ................ಈ ಎಲ್ಲದಕ್ಕೂ ಒ೦ದೇ ಉತ್ತರ ಗುರುಪ್ರಸಾದ್ ರವರ 'ಮಠ'.
 

Jun 20, 2008

ಕನ್ನಡ-ಕನ್ನಡಿಗ-ಕಿಲಿಮ೦ಜಾರೋ


ಎಲ್ಲರ೦ತೆ ಬೆಟ್ಟ ಹತ್ತಿ ಇಳಿದ೦ತಲ್ಲ ಮೌ೦ಟ್ ಕಿಲಿಮ೦ಜಾರೋವನ್ನು ಹತ್ತಿ ಇಳಿಯುವುದು.ಆಫ್ರಿಕಾದಲ್ಲಿದ್ದೂ ತಾ೦ಜಾನಿಯದಲ್ಲೇ ಇದ್ದು ನಮಗೆ ದಕ್ಕದ ಭಾಗ್ಯ ನಮ್ಮ ಪ್ರಶಾ೦ತ್ ಗೆ ದಕ್ಕಿದೆ.ಬೀರೂರಿನವರಾದ ಇವರು ತಾ೦ಜಾನಿಯಾದ ಅರುಶ ಎ೦ಬ ನಗರದಲ್ಲಿ ನೌಕರಿಯಲ್ಲಿದ್ದಾರೆ.ಪರ್ವತವನ್ನ ಹತ್ತಿದ್ದಲ್ಲದೆ ಅಲ್ಲಿ ಕನ್ನಡ ಬಾವುಟವನ್ನ ಹಾರಿಸಿದ್ದು ಅವರ ಕನ್ನಡ  
ಪ್ರೇಮವನ್ನ ಸಾರಿ ಹೇಳುತ್ತೆ.ಇದು ಪ್ರತಿಯೊಬ್ಬ ಕನ್ನಡಿಗನೂ ಹೆಮ್ಮೆಪಡಬೇಕಾದ ವಿಷಯ.ಕರುನಾಡಿನ ಹೆಮ್ಮೆಯನ್ನು ಆಫ್ರಿಕಾದ ಅತೀ ಎತ್ತರದಲ್ಲಿ ಹಾರಿಸಿದ ಸಂತಸದೊಂದಿಗೆ ವಾಪಸ್ ಬಂದೆ.ಇದು ಕನ್ನಡಿಗನ ಸಾಧನೆ.
ಮರಗಟ್ಟುವ ಚಳಿಯಲ್ಲಿ ಆಫ್ರಿಕಾದ ಅತಿ ಎತ್ತರದ, ವಿಶ್ವದ ಅತಿ ವಿಶಾಲವಾದ ಜ್ವಾಲಾಮುಖಿ ಪರ್ವತ ಕಿಲಿಮಾಂಜರೊ ತುದಿ ತಲುಪುವುದು ಸಾಮಾನ್ಯದ ಮಾತಲ್ಲ. ಆದರೆ, ಪ್ರಯಾಸದಿಂದ ತುತ್ತತುದಿ ತಲುಪಿದಾಗ ಸ್ವರ್ಗ ಮೂರೇ ಗೇಣು. ಅಂಥ ಪ್ರಯಾಸದ ಚಾರಣ ಯಶಸ್ವಿಯಾಗಿ ಮುಗಿಸಿ, ಕಿಲಿಮಾಂಜರೊ ತುದಿಯ ಮೇಲೆ ಪ್ರಪ್ರಥಮ ಬಾರಿಗೆ ಕನ್ನಡ ಧ್ವಜ ಹಾರಿಸಿದ ಸಂತಸವನ್ನು ಪ್ರಶಾಂತ್ ಅಕ್ಷರಗಳಲ್ಲಿ ಹಿಡಿದಿಟ್ಟಿದ್ದಾರೆ. ಮೈನವಿರೇಳಿಸುವ ಅನುಭವದ ಓದು ನಿಮ್ಮದಾಗಲಿ.



ಲೇಖನ : ಪ್ರಶಾಂತ್ ಬೀಚಿ, ತಾನ್ಜಾನಿಯ(ದಟ್ಸ್ ಕನ್ನಡದಿ೦ದ)

ಕಿಲಿಮಂಜರೊ ಆಫ್ರಿಕಾದಲ್ಲೇ ಅತೀ ಎತ್ತರವಾದ ಪರ್ವತ. ಇದು ಪ್ರಪಂಚದ ಅತೀ ವಿಶಾಲವಾದ ಜ್ವಾಲಾಮುಖಿ ಪರ್ವತ, ಅಷ್ಟೆ ಅಲ್ಲ ಸ್ವಂತ ಶಕ್ತಿಯಮೇಲೆ ನಿಂತಿರುವ ಅತೀ ಎತ್ತರವಾದ ಪರ್ವತ ಕೂಡ. ಇಷ್ಟೆಲ್ಲಾ ವಿಪರೀತಗಳನ್ನು ಹೊಂದಿರುವ ಪರ್ವತ ಏರಲು ಪ್ರಪಂಚದ ಮೂಲೆ ಮೂಲೆಗಳಿಂದ ಪರ್ವತರೋಹಿಗಳು ಬರುತ್ತರೆ. ನಾನು ಈ ಪರ್ವತದ ಪಕ್ಕದಲ್ಲೆ ಇದ್ದು ಹತ್ತದಿದ್ದರೆ ಎಂತಹ ಅನಾಹುತ ಅಲ್ಲವೆ?

ಈ ಪರ್ವತ ಹತ್ತಲು ಸುಮಾರು ಅರವತ್ತರಿಂದ ಎಪ್ಪತ್ತು ಸಾವಿರ ರೂಪಾಯಿ ಬೇಕಾಗುತ್ತದೆ, ಸುಮ್ಮನೆ ಅಷ್ಟೊಂದು ದುಡ್ಡು ಸುರಿದು ಶ್ರಮ ಪಡುವುದು ಒಳಿತೆ ಎಂದು ನನ್ನ ಯೋಜನೆಯನ್ನು ಮುಂದೂಡುತ್ತಲೆ ಬಂದಿದ್ದೆ. ನನ್ನ ಅದೃಷ್ಟವೆನ್ನುವಂತೆ, ನನ್ನ ಹೆಂಡತಿ ಕೆಲಸ ಮಾಡುತ್ತಿದ್ದ ಶಾಲೆಯಿಂದ ಕೆಲವು ಮಕ್ಕಳನ್ನು ಕರೆದುಕೊಂಡು ಆ ಪರ್ವತ ಹತ್ತಲು ಹೊರಟಿದ್ದರು. ನನ್ನ ಆಸೆ ತಿಳಿದಿದ್ದ ನನ್ನ ಹೆಂಡತಿ ಶಾಲೆಯಿಂದ ಏನೆನೊ ಸುಬೂಬು ಹೇಳಿ ಅವಳೊಂದಿಗೆ ನನ್ನನ್ನು ಕರೆದುಕೊಂಡು ಹೋಗುವ ವ್ಯವಸ್ಥೆ ಮಾಡಿದಳು. ಎಪ್ಪತ್ತು ಸಾವಿರ ಆಗುತ್ತಿದ್ದ ಖರ್ಚನ್ನು ಕೇವಲ ಇಪ್ಪತ್ತು ಸಾವಿದರಲ್ಲಿ ಸರಿದೂಗಿಸಿದಳು.

ಎಲ್ಲವೂ ಸರಿ, ಆದರೆ ನಾವು ಆ ಪರ್ವತವನ್ನು ಹತ್ತಲು ಸಮರ್ಥರೆ? ನಮ್ಮಲ್ಲಿ ಆ ಮಟ್ಟದ ಸಾಮರ್ಥ್ಯ ಇದೆಯೆ? ನಮ್ಮ ಆರೋಗ್ಯ ಆ ಪರ್ವತಾರೋಹಣಕ್ಕೆ ಯೋಗ್ಯವಾಗಿದೆಯೇ? ಹೀಗೆ ಹಲವಾರು ಪ್ರಶ್ನೆಗಳು ಹುಟ್ಟಿಕೊಂಡವು. ಅದನ್ನೆಲ್ಲ ಸರಿದೂಗಿಸಲು ಎರಡು ತಿಂಗಳು ಪೂರ್ವ ತಯಾರಿ ನೆಡೆಸಿಕೊಂಡೆವು. ಹತ್ತಿರದಲ್ಲಿ ಇದ್ದ ಸಣ್ಣ ಸಣ್ಣ ಬೆಟ್ಟಗಳನ್ನು ಹತ್ತಿ ಇಳಿದೆವು. ದಿನಕ್ಕೆ ಇಪ್ಪತ್ತು ಕಿಲೋ ಮೀಟರ್‌ಗಳಂತೆ ನೆಡೆದೆವು. ಪ್ರರ್ವತದ ಮೇಲಿನ ಚಳಿಗೆ ಹೊಂದಿಕೊಳ್ಳುವಂತಹ ಬಟ್ಟೆಗಳು, ಪರ್ವತ ಹತ್ತಲು ಅನುಕೂಲವಾಗುವಂತಹ ಶೂ, ಹೀಗೆ ನಮ್ಮ ತಯಾರಿ ಬಹಳ ಜೋರಾಗೆ ನೆಡೆಯಿತು.

ಪ್ರವಾಸ ಪ್ರಯಾಸ : ಐದು ಸಾವಿರದ ಎಂಟುನೂರ ತೊಂಬತ್ತೈದು ಮೀಟರ್, ತುದಿಯ ಮೇಲೆ ಮೈನಸ್ ಹದಿನೈದು ಡಿಗ್ರಿ ಸೆಂಟಿಗ್ರೇಡ್ ತಾಪಮಾನದ ಚಳಿಯಲ್ಲಿ ಮಂಜುಗಡ್ಡೆಯ ಮೇಲೆ ನಮ್ಮ ಆಟ ನೆಡೆಯುವುದಿಲ್ಲ. ಹತ್ತುವಾಗ ಆಮ್ಲಜನಕ ಕಡಿಮೆ ಇರುತ್ತದೆ, ಉಸಿರಾಟಕ್ಕೆ ಬಹಳ ತೊಂದರೆ ಆಗುತ್ತದೆ, HAS (High Altitude Sickness) ಎಂಬ ಖಾಯಿಲೆ ನಮ್ಮಿಂದ ವಾಂತಿ ಮಾಡಿಸುತ್ತದೆ,  ಸುಸ್ತಾಗಿ ಕುಳಿತರೆ ಮೈ  ಕೈಗಳು ಹಾಗೆ ಸೆಟೆದುಕೊಳ್ಳುತ್ತವೆ, ಕೊರೆಯುವ ಚಳಿಯಲ್ಲಿ ನಡೆಯಲು ಆಗದ ಕೂರಲು ಆಗದ ಪರಿಸ್ಥಿತಿ ನಮ್ಮದಾಗುತ್ತದೆ. ಇಷ್ಟೆಲ್ಲಾ ವಿಪರೀತಗಳ ನಡುವೆ ನಾವು ಹೋಗಲು ನಿರ್ಧರಿಸಿದ್ದೆವು. ಸುಮಾರು ಆರು ದಿನಗಳ ಈ ಪ್ರವಾಸ ಒಂದು ಪ್ರಯಾಸವೆ.

ಮೊದಲನೇ ದಿನದ ಮಧ್ಯಾನ್ಹ ಒಂದು ಘಂಟೆಗೆ ಶುರುಮಾಡಿದ ನಾವು ಆರನೆ ದಿನದ ಸಂಜೆ ಐದು ಗಂಟೆಯವರೆಗೂ ನೆಡೆಯುತ್ತಲೆ ಇದ್ದೆವು. ದಿನಕ್ಕೆ ಹದಿನೈದು ಕಿಲೋಮೀಟರ್‌ನಂತೆ ಆರು ದಿನಗಳು ನೆಡೆದೆವು. ಸಮತಟ್ಟಾದ ನೆಲವಾಗಿದ್ದರೆ ಏನೂ ತೊಂದರೆ ಇಲ್ಲ, ಆದರೆ ಪರ್ವತ ಹತ್ತುವುದು ಇದೆಯಲ್ಲಾ ಅದರಂತಹ ನರಕಯಾತನೆ ಇನ್ನೊಂದಿಲ್ಲ. ಮೊದಲ ಮೂರು ದಿನ ಏನೂ ಅನ್ನಿಸಲಿಲ್ಲ, ಏಕೆಂದರೆ ಅದು ಪೂರ್ತಿಯಾಗಿ ಏರಿಕೆ ಇರಲಿಲ್ಲ. ಅಲ್ಲಲ್ಲಿ ಸಮತಟ್ಟಾದ ಭೂಮಿಯೂ ಇತ್ತು. ನಾಲ್ಕನೆ ದಿನದ ರಾತ್ರಿ ಹನ್ನೊಂದು ಗಂಟೆಗೆ ಹತ್ತಲು ಶುರುಮಾಡಿದ ಯಾತ್ರೆ ಮಾತ್ರ ಮರೆಯಲಾಗುವುದಿಲ್ಲ. ಒಂದು ಮೀಟರ್ ಮೇಲೆ ಹೋಗಲು ಸುಮಾರು ನಾಲ್ಕು ಮೀಟರ್‌ನಷ್ಟು ನೆಡೆಯಬೇಕಿತ್ತು. ಜಿಗ್-ಜಾಗ್ ಮಾದರಿಯಲ್ಲಿ ನಾವು ನೆಡೆಯುತ್ತಿದ್ದೆವು. ನೇರವಾಗಿ ನೇಡೆಯುವುದು ಅಸಾಧ್ಯವಾಗಿತ್ತು, ನಾವು ಹೆಜ್ಜೆ ಇಟ್ಟರೆ ಕಾಲುಗಳು ಹಾಗೆ ಕೆಳಕ್ಕೆ ಬರುತ್ತಿದ್ದವು, ಪರ್ವತದ ಆ ಮಣ್ಣು ನಮ್ಮನ್ನು ಹತ್ತಲು ಬಿಡುತ್ತಿರಲಿಲ್ಲ. ನಿಧಾನವಾಗಿ ಹೆಜ್ಜೆಯ ಮೇಲೆ ಹೆಜ್ಜೆ ಇಡುತ್ತಾ, ಪರ್ವತವನ್ನು ಹತ್ತಲು ಬಂದಿದ್ದಕ್ಕೆ ನಮ್ಮನ್ನು ನಾವೆ ಶಪಿಸಿಕೊಳ್ಳುತ್ತಾ ನೆಡೆಯುತ್ತಿದೆವು. ಸುಮಾರು ನಾಲ್ಕು ತಾಸುಗಳ ನಂತರ ಒಂದು ಗುಹೆ ಸಿಕ್ಕಿತು. ಅಲ್ಲಿ ಕೇವಲ ಹತ್ತುನಿಮಿಷ ಕುಳಿತುಕೊಳ್ಳಲು ಅವಕಾಶ. ಮಲಗಿಕೊಂಡರೆ ಆಮ್ಲಜನಕ ಕಡಿಮೆಯಾಗಿ ನಮಗೆ ಗೊತ್ತಾಗದೆ ನಮ್ಮ ಪ್ರಾಣ ಹಾರಿಹೋಗುತ್ತದೆ ಎಂದು ಎಲ್ಲರಿಗೂ ಎಚ್ಚರಿಕೆ ಕೊಟ್ಟಿದ್ದರಿಂದ ಯಾರೂ ಮಲಗಲು ಹೋಗಲಿಲ್ಲ. ಅಲ್ಪ ವಿರಾಮದ ನಂತರ ಮತ್ತೆ ನಮ್ಮ ಪ್ರಯಾಣ ಮುಂದುವರೆಯಿತು.  

ಎಲ್ಲರ ಕಾಲು ಪದ ಹೇಳುತ್ತಿದ್ದವು, ಯಾರಿಗೂ ಪರ್ವತ ಏರುವ ಆಸಕ್ತಿ ಇಲ್ಲದಾಗಿತ್ತು. ಆದರೂ ಇಷ್ಟು ಕಷ್ಟ ಪಟ್ಟಿರುವ ನಾವು ಇನ್ನು ಸ್ವಲ್ಪ ಕಷ್ಟಪಟ್ಟರೆ ಪೂರ್ತಿ ಪರ್ವತದ ತುಟ್ಟ ತುದಿಗೆ ತಲುಪಬಹುದು ಎನ್ನುವ ಆಸೆ ಎಲ್ಲರನ್ನು ಹತ್ತಲು ಪ್ರೋತ್ಸಾಹಿಸುತ್ತಿತ್ತು. ಅಲ್ಲಲ್ಲಿ ಕೆಲವರು ವಾಂತಿ ಮಾಡಿಕೊಳ್ಳುವುದು, ಕೈ  ಕಾಲು ಹಿಚುಕಿಕೊಳ್ಳುವುದು, ಅಳುವ ಮುಖ ಮಾಡಿ ಕುಳಿತುಕೊಂಡಿರುವುದು ಸಾಮಾನ್ಯದೃಶ್ಯವಾಗಿತ್ತು. ಯಾರಿಗೂ ಇನ್ನೊಬ್ಬರ ಮೇಲೆ ಕರುಣೆ ಅನ್ನುವುದು ಬರುತ್ತಿರಲಿಲ್ಲ. ನಿಂತಲ್ಲೆ ಕೈ ಎತ್ತಿ, ಇಲ್ಲೆ ಇದೆ ಬನ್ನಿ ಎಂದು ನಮ್ಮ ಗೈಡ್ ಪ್ರತಿ 10 ನಿಮಿಷಕ್ಕೆ ಒಮ್ಮೆ ಹೇಳುತ್ತಿದ್ದ. ನಾವು ಎಲ್ಲಿದ್ದೇವೆ? ಇನ್ನು ಎಷ್ಟು ದೂರ ಇದೆ? ಎನ್ನುವುದು ತಿಳಿದಿರಲಿಲ್ಲ. ರಾತ್ರಿಯ ಕತ್ತಲಲ್ಲಿ ಚಂದ್ರನ ಬೆಳಕಲ್ಲಿ ಅಲ್ಲಲ್ಲಿ ಬಿಳಿ ಬಣ್ಣದ ತೇಪೆ ಕಾಣಿಸುತ್ತಿತ್ತು.

ಈ ಪರ್ವತವನ್ನು ಹತ್ತುವ ಮೊದಲು ಮಂಜನ್ನು ನೈಸರ್ಗಿಕವಾಗಿ ನಾನು ನೋಡಿರಲಿಲ್ಲ. ಯಾವಾಗ ಮಂಜು ಸಿಗುತ್ತದೊ ಅದರ ಮೇಲೆ ಹತ್ತು ಕುಣಿಯುತ್ತೇನೆ, ಅದನ್ನು ಉಂಡೆ ಮಾಡಿ ಆಟವಾಡುತ್ತೇನೆ, ಅದರ ಮೇಲೆ ಮಲಗಿ ಉರುಳಾಡುತ್ತೇನೆ ಎಂದು ಏನೇನೊ ಊಹೆಗಳನ್ನು ಮಾಡಿಕೊಂಡಿದ್ದೆ. ಬೆಳಗಿನ ಜಾವ ಸುಮಾರು ಮೂರು ಗಂಟೆಯ ಸಮಯ, ಹತ್ತುವಾಗ ಒಂದು ಕಡೆ ಹತ್ತಿಯನ್ನು ಹಾಸಿದ ಹಾಗೆ ಕಾಣಿಸುತ್ತಿತ್ತು. ನನ್ನ ಹಿಂದೆ ಬರುತ್ತಿದ್ದವನು ನಿಧಾನವಾಗಿ ಉಸಿರು ಎಳೆದುಕೊಳ್ಳುತ್ತಾ ಅಲ್ಲಿ ಐಸ್ ಬಿದ್ದೆದೆ ಅಂದ, ನನಗೆ ಸರಿಯಾಗಿ ಕೇಳಿಸಲಿಲ್ಲ. ನಾನು ಹತ್ತಿರ ಹೋದಮೇಲೆ ತಿಳಿಯಿತು ಅದು ಮಂಜುಗಡ್ಡೆಯ ಹಾಸಿಗೆ ಎಂದು. ಹಿಂದೆ ತಿರುಗಿ ನಿಧಾನವಾಗಿ ಹೇಳಿದೆ ನೋಡು ಇಲ್ಲಿ ಮಂಜು ಬಿದ್ದಿದೆ, ನಿನಗೆ ಆಸೆ ಇದ್ದರೆ ಮುಟ್ಟಿ ನೋಡು, ನನಗಂತೂ ಅದರನ್ನು ಮುಟ್ಟುವ ಆಸಕ್ತಿಯೂ ಇಲ್ಲ, ಕೂತರೆ ಏಳುವ ಶಕ್ತಿಯೂ ಇಲ್ಲ ಎಂದು ಹೇಳಿ ನನ್ನ ಆಮೆ ವೇಗದ ಪ್ರಯಾಣವನ್ನು ಮುಂದುವರೆಸಿದೆ. ನಮ್ಮ ಜೊತೆಗಾರರು ಬಹಳ ಜನ ಹಿಂದುಳಿದ ಕಾರಣ ನಾನು ಬೇರೊಬ್ಬ ಗೈಡನ್ನು ಹಿಂಬಾಲಿಸಿ ಹೊರಟೆ. ಒಬ್ಬಳು ಚೈನಿ ಹುಡುಗಿಯನ್ನು ಆತ ಕರೆದುಕೊಂಡು ಹೋಗುತ್ತಿದ್ದ. ಎಲ್ಲೆಲ್ಲಿ ಆ ಹುಡುಗಿ ಕುಳಿತಿಕೊಳ್ಳುತ್ತಾಳೊ ಅಲ್ಲೆ ನಾನು ಕೂಡ ಸುಧಾರಿಸಿಕೊಳ್ಳುತ್ತಿದ್ದೆ. ಕೆಲವು ಕಡೆ ಅವಳು ವಾಂತಿಮಾಡಿಕೊಂಡಳು. ಆದರೂ ಅವಳು ತನ್ನ ಪ್ರಯಾಣವನ್ನು  ನಿಲ್ಲಿಸದೆ ಮುಂದುವರೆಸುತ್ತಿದ್ದಳು. ಈ ರೀತಿಯ ಪರ್ವತ ಹತ್ತುವಾಗ ಸುಧಾರಿಸಿಕೊಳ್ಳಲು ಕೂತರೆ ಇನ್ನೂ ಜಾಸ್ತಿ ಸುಸ್ತಾಗುತ್ತದೆ. ಆಮ್ಲಜನಕ ಕಡಿಮೆ, ಚಳಿ ಜಾಸ್ತಿ ಇದೆ, ಕೊರೆಯುವ ಚಳಿಯಲ್ಲೂ ಕೈ  ಕಾಲು ಉರಿಯುತ್ತಿತ್ತು. ಹಾಗಾಗಿ ಸುಧಾರಿಸಿಕೊಳ್ಳದೆ ಪ್ರಯಾಣವನ್ನು ಮುಂದುವರೆಸುತ್ತಿದ್ದೆವು.

ಹಾರಾಡಿದ ಕನ್ನಡ ಬಾವುಟ : ಕಲ್ಲು ಬಂಡೆಗಳು ಜಾಸ್ತಿಯಾಗುತ್ತ ಬಂತು, ಈಗ ನಾವು ತೆವಳಿಕೊಂಡು ಹೋಗುವ ಪರಿಸ್ಥಿತಿ. ಕೈಲಿದ್ದ ಕೋಲನ್ನು ಸಣ್ಣದಾಗಿ ಮಡಿಚಿಕೊಂಡೆವು, ಕೂತು ನಿಧಾನವಾಗಿ ಬಂಡೆ ಹಿಡಿದು ಹತ್ತಲು ಶುರುಮಾಡಿದೆವು. ಸುಮಾರು ಒಂದು ಗಂಟೆಯ ಈ ಪ್ರಯಾಣದ ಬಳಿಕ ನಾವು ತಲುಪಿದೆವು ಗಿಲ್ಮನ್ಸ್ ಪಾಯಿಂಟ್. ಇಲ್ಲಿಯ ತನಕ ತಲುಪುವುದು ಕೂಡ ಒಂದು ಸಾಹಸವೇ ಸರಿ. ನನ್ನ ಪತ್ನಿ ನವ್ಯ (ನಾಗರತ್ನ) ಇಲ್ಲಿಯವರೆಗು ತಲುಪಿ, ಸೂರ್ಯ ಮೇಲೆ ಬಂದಿದ್ದರಿಂದ ಮುಂದೆ ಬರಲಾಗದೆ ಹಿಂತಿರುಗಿದ್ದಳು.  ಇಲ್ಲಿಂದ ಮುಂದೆ ಸುಮಾರು ಎರಡು ಗಂಟೆಗಳ ಮಂಜಿನ ಮೆರವಣಿಗೆಯ ನಂತರ ನಮಗೆ ಸಿಕ್ಕಿದ್ದು ಉಹುರು ತುಟ್ಟ ತುದಿ. ಅದು ಆಫ್ರಿಕಾದ ಅತೀ ಎತ್ತರವಾದ ಪ್ರದೇಶ, ಪ್ರಪಂಚದ ಅತೀ ಎತ್ತರವಾದ ಜ್ವಾಲಾಮುಖಿ ಹಾಗು ಪ್ರಪಂಚದ ಸ್ವಂತ ಶಕ್ತಿಯ ಮೇಲೆ ನಿಂತ ಅತೀ ಎತ್ತರವಾದ ಪರ್ವತದ ತುಟ್ಟ ತುದಿ.

ನಾನು ತೆಗೆದುಕೊಂಡು ಹೋಗಿದ್ದ ಕರ್ನಾಟಕದ ಬಾವುಟವನ್ನು ಅಲ್ಲಿ ಹಾರಿಸಿ, ಸುತ್ತ ಮುತ್ತಲಿನ ಚಿತ್ರೀಕರಣ ಮಾಡಿಕೊಂಡೆ. ಬಿಸಿಲು ಬರುವುದರೊಳಗೆ ಅಲ್ಲಿಂದ ಕಾಲು ಕೀಳಬೇಕು, ಇಲ್ಲದಿದ್ದರೆ ಅದಕ್ಕಿಂತ ಕಠಿಣ ಮಾರ್ಗ ಇನ್ನೊಂದಿಲ್ಲ. ಹಾಗಾಗಿ ಬೇಗ ಬೇಗ ಎಲ್ಲ ಕೆಲಸ ಮುಗಿಸಿ, ಕರುನಾಡಿನ ಹೆಮ್ಮೆಯನ್ನು ಆಫ್ರಿಕಾದ ಅತೀ ಎತ್ತರದಲ್ಲಿ ಹಾರಿಸಿದ ಸಂತಸದೊಂದಿಗೆ ವಾಪಸ್ ಬಂದೆ. ಸ್ವರ್ಗ ಎಂದರೆ ಹೇಗಿರುತ್ತದೆ ಎಂದು ಪರ್ವತದ ಮೇಲೆ ಕಾಣಿಸುತ್ತದೆ. ಪರ್ವತದ ವಿಶೇಷ ಮತ್ತು ಇದರ ಪೂರ್ಣ ಕಥೆಯನ್ನು ಮತ್ತೊಮ್ಮೆ ಹೇಳುತ್ತೇನೆ. ಸದ್ಯಕ್ಕೆ ಕರ್ನಾಟಕದ ಬಾವುಟ ಆಫ್ರಿಕಾದ ತುಟ್ಟ ತುದಿಯಲ್ಲಿ ಹಾರಿಸಿದ ಸಂತಸವನ್ನು ಚಿತ್ರಗಳ ಮೂಲಕ ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.prashanth@bol.co.tz
ಹೆಚ್ಚಿನ ಚಿತ್ರಗಳಿಗೆ ಈ ಕೊಂಡಿಯನ್ನು ಕ್ಲಿಕ್ಕಿಸಿ.


Jun 12, 2008

ಮೊದಲ ದಿನ ಮೌನ


ನಿನ್ನೆ ಜೂನ್ ೧೧ ರ೦ದು ಸಮ್ರುಧ್ ಶಾಲೆಗೆ ಹೋಗಲಾರ೦ಬಿಸಿದ್ದು.ಅವನು ಶಾಲೆಗೆ ಸೇರಿದ ಕಥೆಯನ್ನ ನಿಮಗೆ ವಿವರಿಸುತ್ತೇನೆ.
ಹೊಸ ವರ್ಷದಲ್ಲೇ ನನ್ನಾಕೆ ಈ ಸಾರಿ ಅಪ್ಪು(ಸಮ್ರುಧ್)ವನ್ನು ಶಾಲೆಗೆ ಸೇರಿಸಬೇಕು ಎ೦ದು ಕಟ್ಟಪ್ಪಣೆ ಮಾಡಿದ್ದರು,ಆಗ ಅವನಿಗಿನ್ನೂ ಎರೆಡು ವರ್ಷ ಮೂರು ತಿ೦ಗಳು.ಇಷ್ಟು ಚಿಕ್ಕ ವಯಸ್ಸಿಗೇ ಬೇಡಮ್ಮ ಅ೦ತ ಎಷ್ಟೇ ಹೇಳಿದರೂ ಕೇಳಲಿಲ್ಲ.ನಮ್ಮ ಅಪ್ಪ ಅಮ್ಮ ನನ್ನನ್ನ ಆರು ವರ್ಷಕ್ಕೆ ಶಾಲೆಗೆ ಸೇರಿಸಿದ್ದರು ಎನ್ನುವುದು ನನಗೆ ನೆನಪು.ಆದ್ದರಿ೦ದ ನನ್ನ ಮಗನಿಗೆ ಕನಿಷ್ಟ ಮೂರಾದರೂ ತು೦ಬಲಿ ಎ೦ದು ಕಾಯುತ್ತಿದ್ದೆ.ಮೂರು ತು೦ಬುವ ಮುನ್ನವೇ ನೆನ್ನೆ ಸೇರಿಸಿಬಿಟ್ಟೆ.

ಮೊದಲ ದಿನ ಶಾಲೆಯಲಿ ಅಪ್ಪುವನ್ನ ಬಿಟ್ಟ ನ೦ತರ ಮೌನ.ಬಿಟ್ಟು ಬರುವಾಗ ನನ್ನಾಕೆ ಅನುಭವಿಸಿದ ವೇದನೆ,ಹೇಳದೇ ಜಾರಿದ ಕಣ್ಣ ಹನಿಗಳು.ಮೊದಲ ಬಾರಿ ಸತತ ನಾಲ್ಕು ಘ೦ಟೆ ಮಗನನ್ನು ಬಿಟ್ಟಿರುತ್ತಿದ್ದೇನಲ್ಲಾ ಎನ್ನುವ ತಳಮಳ.ಶಾಲೆಯ ಹೆಡ್ ಮಿಸ್ ರವರ ಧೈರ್ಯದ ಮೇಲೆ ಒಲ್ಲದ ಮನಸ್ಸಿನಿ೦ದಲೇ ಬಿಟ್ಟು ಮನೆಗೆ ಬ೦ದೆವು.ಆ ನಾಲ್ಕು ಘ೦ಟೆಗಳು ನನಗೂ ಮತ್ತು ನನ್ನಾಕೆಗೂ ನಾಲ್ಕು ನವ ಅನುಭವಗಳನ್ನ ಕೊಟ್ಟಿವೆ.ಎ೦ದಾದರೂ ಮಗು ಶಾಲೆಗೆ ಹೋಗಲೇಬೇಕು ಎನ್ನುವ ವಾಸ್ತವ ದ ಅರಿವಾಗಿ ಈಗ ಎಲ್ಲ ಸುಖಮಯವಾಗಿದೆ.ತಳಮಳ ಎರಡನೇ ದಿನಕ್ಕೆ ಕಮ್ಮಿಯಾಗಿದೆ.

ಶಾಲೆಯ ಬಗ್ಗೆ ನನ್ನಾಕೆಯ ಹಾಗು ಮಗನ ದಿನನಿತ್ಯದ ರಿಹರ್ಸಲ್ ಈಗ ಜೀವನವಾಗಿದೆ,ನಮ್ಮ ಅಪ್ಪ ಅಮ್ಮ ನಮಗೇನು ಮಾಡಿದ್ದರೊ ಗೊತ್ತಿಲ್ಲ,ಪ್ರಪ೦ಚದ ಯಾವ ತ೦ದೆ ತಾಯಿಯರು ಮಾಡಲಾರದ್ದನ್ನ ನಮ್ಮ ಮಗುವಿಗೆ ನಾವು ಮಾಡಬೇಕು ಎನ್ನುವ ಆಕಾ೦ಕ್ಷೆಯೊ೦ದಿಗೆ ಜೀವನ ಸಾಗ್ತಾ ಇದೆ.ಅ೦ದ ಹಾಗೆ ನನ್ನ ಮಗ ಸೇರಿರುವ ಶಾಲೆಯ ವಿವರ ಬ್ಲಾಗಿನ ಕೊನೆಯಲ್ಲಿ ನಾವಡರ ಪ್ರತಿಕ್ರಿಯೆಯಲ್ಲಿ ಅನಿಮೋದಿಸಿದ್ದೇನೆ.ಅ೦ದ ಹಾಗೆ ಇನ್ನೊ೦ದು ಸ್ವಾರಸ್ಯಕರ ವಿಷಯ ಏನು ಅ೦ದ್ರೆ ನನ್ನ ಮಗ ನ ಪಪ್ಪಿ(Toddlers Play Group)ಕ್ಲಾಸಿಗೆ ತಗಲುವ ವೆಚ್ಚ ನನ್ನ ಜೀವನದ ಅಷ್ಟೂ ವಿದ್ಯೆಗೆ ಖರ್ಚು ಮಾಡಿದಕ್ಕಿನ್ನೂ ಹೆಚ್ಚು!!!!

ನಾವಡರ(ಚೆ೦ಡೆಮದ್ದಳೆ)ಮಗ ಋತುಪರ್ಣ ಶಾಲೆಗೆ ಸೇರಿದ ದಿನ ಅವರ ಅನುಭವವನ್ನ ಅವರ ಬಾಯಿ೦ದಲೇ ಕೇಳಿ.

ಮನಸ್ಸಿನೊಳಗೆ ಖುಷಿ ಕುಣಿದಾಡುತ್ತಿದೆ ; ಹಾಗೇ ಸುಮ್ಮನೆ ಬೀಸಿ ಬರುವ ಗಾಳಿಗೆ ಸಂಪಿಗೆ ಎಸಳುಗಳು ತೂಗಾಡಿದ ಹಾಗೆ.ಜೂ. ೧೧ ರಂದು ನನ್ನ ಮಗ ಶಾಲೆಗೆ ಹೋಗುತ್ತಿದ್ದಾನೆ. ಪಾಠಶಾಲೆಯ ಮೊದಲ ದಿನವದು. ನನ್ನೊಳಗೆ ಸಂಭ್ರಮದ ಹಕ್ಕಿಯ ರೆಕ್ಕೆ ಹಾರಿಸುತ್ತಿರುವ ಸದ್ದು ವರ್ಣಿಸಲಾಗದು. ಬ್ರಹ್ಮಾವರ ಬಳಿಯ ಸಾಲಿಕೇರಿಯ ಶಾಲೆಯೊಂದಕ್ಕೆ ಅವನ ಪ್ರವೇಶ.

ನನ್ನ ಅಮ್ಮ, ಅಪ್ಪ ಇಂಥದೊಂದು ಸಂಭ್ರಮವನ್ನು ಕಂಡಿದ್ದರೋ, ಉಂಡಿದ್ದರೋ ತಿಳಿದಿಲ್ಲ. ನನಗೊಂದು ಅಂಥ ಅವಕಾಶ ಬಂದಿದೆ. ಸಾಲಿಗ್ರಾಮದಲ್ಲಿ ಅವನ ಅಜ್ಜನ ಮನೆಯಲ್ಲಿದ್ದು, ಓದುತ್ತಾನೆ ನನ್ನ ಮಗ.

ಒಂದು ಮಗುವಿನ ಬೆಳವಣಿಗೆಯನ್ನು ಕಣ್ತುಂಬಿಕೊಳ್ಳುತ್ತಲೇ ನಾವು ಬೆಳೆದು ಬಂದ ಪರಿಯನ್ನು ಹೋಲಿಸುತ್ತಾ ಹೋಗುವುದಿದೆಯಲ್ಲ, ಅದೇ ಬದುಕಿಗೊಂದು ಉತ್ಸಾಹ ತುಂಬುವ ನೆಲೆ ಎನಿಸುತ್ತದೆ ಆಗಾಗ್ಗೆ. ಹೀಗೆ ಎನಿಸಿಕೊಂಡು ನನ್ನ ಅಮ್ಮನನ್ನು ಇಂಥ ದಿನದ ಅಂದಿನ ಸಂಭ್ರಮದ ಬಗ್ಗೆ ಕೇಳಿದೆ. ಅಂದರೆ ನಾನು ಮೊದಲ ದಿನ ಶಾಲೆಗೆ ಹೋದ ಕ್ಷಣಗಳನ್ನು. ಅಮ್ಮ ನೆನೆಸಿಕೊಂಡು ಹೇಳಿದಳು. ಆದರೆ ಅವಳ ಜ್ಞಾಪಕಚಿತ್ರಶಾಲೆಯಲ್ಲೂ ಆ ಚಿತ್ರಗಳೆಲ್ಲಾ ಮಸುಕಾಗಿವೆ.

ನಾನು ಬೆಳೆದದ್ದು ನನ್ನ ದೊಡ್ಡಮ್ಮನ ಮನೆಯಲ್ಲಿ. ಅಂದರೆ ದೊಡ್ಡಮ್ಮ ಎಂದರೆ ತಾಯಿಯ ಅಕ್ಕ ಅಲ್ಲ. ನನ್ನಪ್ಪ ನನ್ನೂರನ್ನು ತ್ಯಜಿಸಿ ಭದ್ರಾವತಿಗೆ ಬಂದಾಗ ಯಾರದೋ ಒಬ್ಬ ಪರಿಚಯಸ್ಥರ ಆಶ್ರಯ ಬೇಕಿತ್ತು. ಆಗ ಸಿಕ್ಕಿದ್ದು ಇವರ ಮನೆ. ಪರಿಚಯವೂ ಆದದ್ದು ನಂತರವೇ. ಆದರೆ ಇಬ್ಬರೂ ಒಂದೇ ಊರಿನವರೆಂಬುದೇ ಪರಿಚಯಕ್ಕೆ ಮೂಲವಾಗಿತ್ತಂತೆ. ಹೀಗಿರುವಾಗ ನನ್ನ ಮನೆಯ ಮಾಲೀಕಿಣಿಗೆ ಮಕ್ಕಳಿರಲಿಲ್ಲ. ನಾನು ಅಲ್ಲಿಗೆ ಹೋಗಿ ಬರ್‍ತಾ ಇದ್ದದ್ದರಿಂದ ಅವರೇ ನೋಡಿಕೊಳ್ಳಲು ನಿರ್ಧರಿಸಿದರು. ನಂತರ ನನ್ನ ಅಪ್ಪ ಮನೆ ಸ್ಥಳಾಂತರಿಸಿದರೇನೋ ನಿಜ. ಆದರೆ ನಾನು ಆ ಮಾಲೀಕಿಣಿ ಮನೆಯಲ್ಲೇ ಉಳಿದೆ. ಹಾಗೆ ಆದದ್ದು ದೊಡ್ಡಮ್ಮ.

ಹಾಲು ಸಕ್ಕರೆ ಕರಗಿಸಿಕೊಂಡು ಚಪಾತಿ ಅದ್ದಿ ತಿನ್ನುವುದು ಬಹಳ ಇಷ್ಟ. ಹೀಗೆ ಮಕ್ಕಳನ್ನು ಹಿಡಿದುಕೊಂಡು ಹೋಗುವ ಗುಮ್ಮಯ್ಯನ ಹಾಗೆ ಒಂದು ಹೆಂಗಸು ಬರ್‍ತಿತ್ತಂತೆ. ಅವಳು ಹತ್ತಿರದ ಅಂಗನವಾಡಿಯವಳು. ಮಕ್ಕಳನ್ನೆಲ್ಲ ಕರೆದೊಯ್ದು ಸೇರಿಸುವವಳು. ಆಗ ಇದ್ದದ್ದು ಶಿಶುವಿಹಾರ, ಬಾಲವಾಡಿ ಅಂತ. ಇಂಥದ್ದೇ ಒಂದು ಜೂನ್‌ನಲ್ಲಿ ಆ ಹೆಂಗಸು ನಮ್ಮ ಮನೆಯ ಮುಂದೆಯೂ ನಿಂತಳಂತೆ. “ನಿಮ್ಮಲ್ಲಿ ಏನಾದ್ರೂ ಮಕ್ಕಳಿದ್ದವಾ, ಶಾಲೆ ಹೋಗಲಿಕ್ಕೆ’ ಎಂದು ಕೇಳಿದಳಂತೆ. ಅದಕ್ಕೆ ಈ ದೊಡ್ಡಮ್ಮ “ಹೌದು, ಇದ್ದಾನೆ. ಬಹಳ ಗಲಾಟೆ ಮಾಡ್ತಾನೆ. ಆದರೆ ಇನ್ನೂ ವಯಸ್ಸು ಕಡಿಮೆ’ ಎಂದರಂತೆ. ಅದಕ್ಕೆ ಆಕೆ ಎಷ್ಟಾಗಿರಬಹುದು ಎಂದದ್ದಕ್ಕೆ ಐದು ಇನ್ನೂ ತುಂಬಿಲ್ಲ ಎಂದರಂತೆ ಅಮ್ಮ. ವಾಸ್ತವವಾಗಿ ನನಗೆ ಐದು ತುಂಬಲು ಎಂಟು ತಿಂಗಳು ಬಾಕಿಯಿತ್ತು. ಆಕೆ “ಇರಲಿ, ನೋಡೋಣ’ ಎಂದು ಕರೆದೊಯ್ದಳಂತೆ. ಅದೇ ನನ್ನ ಮೊದಲ ದಿನ.

ಬಿಡಿ, ಆಗ ಈ ಅಂಕಗಳ ಲೆಕ್ಕಾಚಾರ ಇರಲಿಲ್ಲ. ಶಾಲೆಗೆ ಹೋಗೋ ಅಭ್ಯಾಸ ಮಾಡಿಕೊಂಡರೆ ಸಾಕು ಎಂದು ಬಯಸುತ್ತಿದ್ದ ಪೋಷಕರೇ ಬಹುಪಾಲು. ಈಗಿನದ್ದು ಹಾಗಲ್ಲ. ಎಲ್‌ಕೆಜಿ ಅಂದರೆ ಮೂರೂವರೆ ವರ್ಷಕ್ಕೇ ಆತನಿಗೆ ಅದು, ಇದು ಎಲ್ಲಾ ಬರಬೇಕು. ನಾವು ಎರಡನೇ ತರಗತಿಗೆ ಬಂದಾಗ ಹತ್ತರ ಮಗ್ಗಿ ದಾಟಿ ಹನ್ನೊಂದಕ್ಕೆ ಬರುತ್ತಿದ್ದವು. ಪುಣ್ಯಕ್ಕೆ ನನ್ನ ಹೆಂಡತಿಗೂ ಇಂದಿನ ಒತ್ತಡದ ಕಲಿಕೆ ಅಷ್ಟೊಂದು ಇಷ್ಟವಿಲ್ಲ. ಹಾಗಾಗಿ ನಾಲ್ಕು ವರ್ಷಕ್ಕೆ ಅವನನ್ನು ಶಾಲೆಗೆ ಸೇರಿಸುತ್ತಿದ್ದೇವೆ. ಅಲ್ಲಿಯವರೆಗೆ ಯಾವ ಬಾಲವಾಡಿಗೂ ಕಳಿಸಲಿಲ್ಲ. ಇದು ನನ್ನ ಹೆಗ್ಗಳಿಕೆ ಎಂದೇನೂ ಅಲ್ಲ. ಬಾಲ್ಯವನ್ನು ಅನುಭವಿಸಲಿ ಎಂದು ಸುಮ್ಮನಿದ್ದೆವು.
ಹೀಗೆ ಶಾಲೆಗೆ ಸೇರಿಸಿಕೊಂಡಾಕೆಗೆ ನನ್ನ ಮೇಲೆ ವಿಶ್ವಾಸ ಬಂದಿತ್ತಂತೆ. ಒಂದು ವಾರ ನನ್ನ “ಚಲನವಲನ’ ಕಂಡ ಆಕೆ ಮತ್ತೊಂದು ದಿನ ದೊಡ್ಡಮ್ಮನ ಎದುರು ಬಂದು “ಇರಲಿ ಬಿಡಿ’ ಎಂದಳಂತೆ. “ಅಲ್ಲಮ್ಮಾ, ಅವನಿಗೆ ಐದು ವರ್ಷವಾಗಿಲ್ಲ’ ಎಂದದ್ದಕ್ಕೆ ಅವಳೇ ಒಂದು ಲೆಕ್ಕ ಬರೆದು ವರ್ಷ ಪೂರ್ಣಗೊಳಿಸಿ ಹಾಕಿದಳು. ಅದರ ಪರಿಣಾಮ ನನ್ನ ಜನ್ಮ ದಿನಾಂಕ ಒಂದೂವರೆ ವರ್ಷ ಹೆಚ್ಚೂ ಕಡಿಮೆಯಾಗಿದೆ !

ಆಗ ನಾನೂ ಸ್ವಲ್ಪ ದಪ್ಪಗೆ, ಎತ್ತರಕ್ಕೆ ( ಆ ವಯಸ್ಸಿಗೆ) ಇದ್ದನಂತೆ. ಯಾವ ಎಜುಕೇಷನ್ ಇನ್ಸ್‌ಪೆಕ್ಟರ್‌ಗಳೂ ಕೇಳಿರಲಿಲ್ಲ. ನಾನು ಶಾಲೆಗೆ ಹೋಗಿ ಕುಳಿತುಕೊಳ್ಳಲು ಕಲಿತೆ. ಅಕ್ಷರವೆಲ್ಲಾ ಕಲಿತದ್ದು ಎಷ್ಟೋ ಗೊತ್ತಿಲ್ಲ. ನನ್ನ ಅಮ್ಮನೂ ಅಷ್ಟೊಂದು ತಲೆ ಕೆಡಿಸಿಕೊಂಡಿರಲಿಲ್ಲ. ದೊಡ್ಡಮ್ಮ ಸಹ ಓದದ ದಿನ ಎರಡು ಚಪಾತಿ ಕಡಿಮೆ ಕೊಡುತ್ತಿದ್ದರಷ್ಟೇ !

ಒಂದೂ ಬೈಗುಳ ಉಡುಗೊರೆಯಾಗಿ ಕೊಡುತ್ತಿರಲಿಲ್ಲ. ತೀರಾ ಮಿತಿ ಮೀರಿದರೆ ಅಪ್ಪನಿಗೆ ದೂರು ಹೇಳುತ್ತಿದ್ದರು. ನಂತರ ನಾನೂ ದೊಡ್ಡವನಾಗುತ್ತಿದ್ದಂತೆಯೇ ನನ್ನ ತಲೆ ಹರಟೆ ಹೆಚ್ಚಾಯಿತೋ, ಅವರ ದೂರು ಹೇಳುವ ಪ್ರವೃತ್ತಿ ಹೆಚ್ಚಾಯಿತೋ ಗೊತ್ತಿಲ್ಲ. ಪ್ರತಿ ಭಾನುವಾರ ಅಪ್ಪನ ಎದುರು ವಿಚಾರಣೆ ನಡೆಯುತ್ತಿತ್ತು. ನಾನು ತಲೆತಗ್ಗಿಸಿಕೊಂಡು ನಿಲ್ಲುತ್ತಿದ್ದೆ. ನನ್ನ ದೊಡ್ಡಮ್ಮ ನನ್ನನ್ನು ಕರೆದುಕೊಂಡು ಹೋಗಿ “ಪೂಜೆ’ ಮಾಡಿಸಿಕೊಂಡು ಮನೆಗೆ ವಾಪಸ್ಸಾಗುತ್ತಿದ್ದರು. ನಾನೂ ಸುಮ್ಮನೆ ಹಿಂಬಾಲಿಸಿಕೊಂಡು ಬರುತ್ತಿದ್ದೆ. ಇದು ಪ್ರತಿ ವಾರದ ಕಾರ್‍ಯಕ್ರಮ.

ಹೀಗೆ ಸಾಗಿ ಹೋಗುವ ನನ್ನ ಶಾಲಾ ದಿನಗಳ ನೆನಪು ನನ್ನ ಮಗನನ್ನು ನೆನಪಿಸುತ್ತಿದೆ. ಶಾಲಾ ಸಂಭ್ರಮದ ಕ್ಷಣ ಕಣ್ತುಂಬಿಕೊಳ್ಳಲು ಇರುವ ಅವಕಾಶ ಅತ್ಯಂತ ಕಡಿಮೆಯೆನ್ನುವುದೂ ಹೌದು. ಅವನು ಅಜ್ಜನ ಮನೆಯಲ್ಲಿ ಓದಿದರೆ, ನಾನಿರುವುದು ಮೈಸೂರಿನಲ್ಲಿ. ಈಗ ಊರಿನಲ್ಲಿ ಜಿರಾಪಟಿ ಮಳೆ ಶುರುವಾಗಿರುವ ಹೊತ್ತು. ಒಂದು ಮಳೆಗಾಲಕ್ಕೆ ಸಿದ್ಧಗೊಳ್ಳುವ ಪರಿ ಅದ್ಭುತ. ಈಗೀಗ ಆಧುನಿಕ ಜೀವನ ಶೈಲಿ, ಮಿತ ಕುಟುಂಬಗಳೆಲ್ಲಾ ಆ ಸಂಭ್ರಮವನ್ನು ಕಡಿತಗೊಳಿಸಿರುವುದು ಸತ್ಯ. ಇದರರ್ಥ ಕುಟುಂಬ ಯೋಜನೆ ವಿರೋಧಿ ನಾನಲ್ಲ. ಆದರೆ ಎಲ್ಲರಿಗೂ ಎಂದು ಹಂಚಿಕೊಳ್ಳುವ ಸಂಭ್ರಮದ ಕ್ಷೀಣವಾಗುತ್ತಿದೆ. ಆಗಲೇ ಹೇಳಿದೆನಲ್ಲ, ಮಳೆಗಾಲಕ್ಕೆ ಸಿದ್ಧವಾಗುವ ಪರಿ. ಶಿವರಾಮ ಕಾರಂತರ “ಮರಳಿ ಮಣ್ಣಿಗೆ’ ಕಾದಂಬರಿ ಓದಬೇಕು.

ಅವನೂ ಮಳೆಗಾಲದ ಸಂಭ್ರಮವನ್ನು ತನ್ನೊಳಗೆ ತುಂಬಿಕೊಳ್ಳಲು ಹೊರಟಿದ್ದಾನೆ. ಜತೆಗೆ ನಾನೂ ಇದ್ದೇನೆ. ಒಂದೆರಡು ಮಳೆಯ ಹನಿಗಳನ್ನು ನನ್ನೊಳಗೆ ತುಂಬಿಕೊಂಡು ಬರುತ್ತೇನೆ ; ಜತೆಗೆ ಮಗನನ್ನು ಬಿಟ್ಟು ಇರಬೇಕೆಂಬ ಅನಿವಾರ್ಯದ ಅಗಲಿಕೆಯ ಎರಡು ಕಣ್ಣ ಹನಿಗಳೊಂದಿಗೂ…
ಅಂದ ಹಾಗೆ ನನ್ನ ಮಗನ ಹೆಸರು ಹೇಳಲು ಮರೆತಿದ್ದೆ… ಋತುಪರ್ಣ.

ನಾವಡ ರೆ,
ನಿಜವಾಗ್ಲೂ ಎ೦ತಾ ಕಾಕತಾಳೀಯ ಅ೦ತೀರ,ನನ್ನ ಮಗ ಸಮ್ರುಧ್ ಕೂಡ ನಿನ್ನೆಯೇ (ಜೂನ್ ೧೧) ಶಾಲೆಗೆ ಸೇರಿದ್ದು.ವ್ಯತ್ಯಾಸ ಇಷ್ಟೆ ನಿಮ್ಮ ಮಗ ಭರತ ಖ೦ಡದ ಕರ್ನಾಟಕ ರಾಜ್ಯದ ಬ್ರಹ್ಮಾವರದ ಸಾಲಿಕೇರಿಯ ಶಾಲೆಯಲ್ಲಿ,ನನ್ನ ಮಗ ಆಫ್ರಿಕಾ ಖ೦ಡದ ತಾ೦ಜಾನಿಯಾ ದೇಶದ ಮ್ವಾ೦ಜಾ ಎ೦ಬ ನಗರದ ಶಾಲೆಯಲ್ಲಿ.ಶಾಲೆ ಯಾವುದಾದರೇನು,ಮನಸ್ಸಿನ ಭಾವನೆಗಳು ಒ೦ದೇ ಅಲ್ಲವೇ.ನನಗಿ೦ತಾ ನನ್ನಾಕೆಗೆ ಮಗ ಶಾಲೆಗೆ ಹೋಗುತ್ತಿರುವುದ ಕ೦ಡು ಸ್ವರ್ಗಕ್ಕೆ ಮೂರೇ ಗೇಣು.ಅ೦ದ ಹಾಗೆ ನನ್ನ ಮಗನಿಗಿನ್ನೂ ಮೂರೇ ವರ್ಷ.ಮೊದಲ ದಿನ ಶಾಲೆಯಲ್ಲಿ ಬಿಟ್ಟ ನ೦ತರ ಬರೀ ಮೌನ.ನಿಮ್ಮ ಬರಹವನ್ನ ನೋಡಿದ ನ೦ತರ ನನ್ನ ಅನುಭವವನ್ನೂ ಬ್ಲಾಗಿಸುತ್ತಿದ್ದೇ ನೆ.ಬಿಡುವಾದಾಗ ಭೇಟಿ ಕೊಡಿ.Good luck to Rutuparna.

May 10, 2008

ಮದರ್ಸ್ ಡೇ ಯ೦ದು ಬರಗೂರರ "ತಾಯಿ"


ನಾಳೆ "ತಾಯಿ" ಯ ದಿನ. ಮದರ್ಸ್ ಡೇ.ಕಳೆದ ವಾರ ಬಿಡುಗಡೆಗೊ೦ಡ ಬರಗೂರ ರ "ತಾಯಿ" ಸಿನೆಮಾ ಹಾಗೂ ಬರಗೂರ ರ ಬಗ್ಗೆ ಎರಡು ಮಾತು.

ಬರಗೂರರ ಊರಿನಲ್ಲೇ ಇದ್ದು ಬೆಳೆದು ಅವರ ಹೆಸರನ್ನ ಹಲವಾರು ಬಾರಿ ಕೇಳಿದಾಗಲೆಲ್ಲ ಹೆಮ್ಮೆಪಟ್ಟು ಕೊ೦ಡವ ನಾನು.ಆಗಿನ್ನೂ ನನ್ನ ಮಿಡ್ಲ್ ಸ್ಕೂಲು ದಿನಗಳು.ಬರಗೂರರು ಬೆ೦ಗಳೂರಿನ ಜ್ನಾನಭಾರತಿಯಲ್ಲಿ ಪ್ರೊಫೆಸರ್ ಆಗಿದ್ದ ಕಾಲ.ಬರಗೂರಿಗೆ ಬರುವುದು ಬಲು ಅಪರೂಪವಾಗಿತ್ತು.ಅವರ "ಸೂರ್ಯ"ಸಿನಿಮಾ ತೆಗೆಯುತ್ತಿದ್ದ ಕಾಲ.ನಮ್ಮ ಗಣಿತದ ಮೇಷ್ಟ್ರು ಬರಗೂರರ ಸಹೋದರ ಜಯರಾಮಪ್ಪ ಅ೦ತ.ನಮ್ಮ ಜಯರಾಮಪ್ಪ ಮೇಷ್ಟ್ರು ಸೂರ್ಯ ಸಿನಿಮಾದಲ್ಲಿ ಒ೦ದು ಪಾತ್ರ ಮಾಡಿದ್ದರು,ಲೋಕೇಶ್ ರ ತ೦ದೆಯ ಪಾತ್ರ.ಹೆಚ್ಚೇನು ಇಲ್ಲ ಬರಿ ಮೂರ್ನಾಲ್ಕು ನಿಮಿಷದ ಸೀನು.ಅದೂ ಫ್ಲಾಷ್ ಬ್ಯಾಕ್ ನಲ್ಲಿ ಬ೦ದು ಹೋಗುವ ಸನ್ನಿವೇಶ.ಆದರೂ ನಮಗೆ ಎಲ್ಲಿಲ್ಲದ ಕುತೂಹಲ,ಸಾರ್ ನಿಮ್ಮ ಪಾತ್ರದ ಬಗ್ಗೆ ಹೇಳಿ ಅಭಿನಯಿಸಿ ಅ೦ತ ಅ೦ಗಲಾಚುತ್ತಿದ್ದೆವು.ಒಟ್ಟಿನಲ್ಲಿ ನಮ್ಮ ಜಯರಾಮಪ್ಪ ಮೇಷ್ಟ್ರು ಸಿನಿಮಾದಲ್ಲಿ ನಟಿಸಿ ಬ೦ದ ನ೦ತರ ನಮಗೆ ರಾಜ್ಕುಮಾರ್ ತರ ಕಾಣೋಕೆ ಶುರುವಾಯಿತು.ನ೦ತರ ಸಿನಿಮಾ ನೋಡಿದಾಗಲೇ ತಿಳಿದದ್ದು ಅವರು ಲೋಕೇಶ ರ ತ೦ದೆಯಾಗಿ ಗುರುತು ಹಿಡಿಯದ ವೇಷಭೂಷಣದಲ್ಲಿ.ಜಯರಾಮಪ್ಪ ನವರು ನನ್ನ ನೆಚ್ಚಿನ ಗುರುಗಳು,ಶಾಲಾ ವಾರ್ಷಿಕೋತ್ಸವಕ್ಕೆ ತಪ್ಪದೇ "ನಾಟಕ" ಮಾಡುತ್ತಿದ್ದವರು,ನನ್ನ ಕೈಲಿ "ಕಡೆಗೂ ಕೊಟ್ನಲ್ಲ ಕೈ"ಎ೦ಬ ಸಮಾಜಿಕ ನಾಟಕ ಮಾಡಿಸಿದ್ದರು.ಈಗೆಲ್ಲಾ ಬರಿ ನೆನಪುಗಳು. ಬರಗೂರರ ಮೊದಲ ಸಿನೆಮ "ಒ೦ದು ಊರಿನ ಕಥೆ" ಕೂಡ ಬರಗೂರಿನಲ್ಲೇ ಚಿತ್ರಿತವಾದ ಸಿನೆಮಾ.ಆಗಿನ್ನೂ ನಾವು ಬಹಳ ಚಿಕ್ಕವರು,ಅಷ್ಟ್ಟಾಗಿ ನೆನಪಿಲ್ಲ.ಒಟ್ಟಿನಲ್ಲಿ ಸಿನೆಮಾ ಚಿತ್ರೀಕರಣದ ಬಗ್ಗೆ ಊರಿನಲ್ಲೇ ಸ೦ಚಲನ ಉ೦ಟುಮಾಡಿದ್ದರು ರಾಮಚ೦ದ್ರಪ್ಪ ನವರು.

ನನ್ನ ಬರೆಯುವ ಹವ್ಯಾಸಕ್ಕೆ ಒ೦ದು ರೀತಿಯ ಸ್ಪೂರ್ತಿಯಾದವರಲ್ಲಿ ಮೊದಲಿಗರು ಬರಗೂರು.ಹೈಸ್ಕೂಲು ದಾಟಿದ ಮೇಲೆ ನನ್ನ ಹೆಸರಿನ ಜೊತೆಗೆ ಊರಿನ ಹೆಸರು ಸೇರಿಸಿಕೊ೦ಡು ಕದಿರೆಹಳ್ಳಿ ಶ್ರೀಧರ ನಾಗಿದ್ದೆ.ಜಿಲ್ಲಾ ಪತ್ರಿಕೆಯಾದ ಪ್ರಜಾಪ್ರಗತಿ ಯಲ್ಲಿ ಕಥೆ,ಚುಟುಕ,ಕವನ ಗಳ ಬರೆದೆ.ಕಾಲೇಜಿನಲ್ಲಿ ನನ್ನ ಸಾಹಿತ್ಯಾಸಕ್ತಿ ನೋಡಿ ಹಲವು ಸೀನಿಯರ್ ಗಳು ಬೆನ್ನು ತಟ್ಟುತ್ತಿದ್ದರು.ಒಮ್ಮೆ ಒಬ್ಬ ಸೀನಿಯರ್ ಕಿತಾಪತಿಗಾಗಿ ಓಹೋ ನೀನೇನು ಬರಗೂರು ರಾಮಚ೦ದ್ರಪ್ಪನಾ ಅ೦ದಿದ್ದ,ಒಮ್ಮೆಲೇ ಸಿಟ್ಟು ನೆತ್ತಿಗೇರಿ,ಮುಚ್ಕೊ೦ಡ್ ಕೂತ್ಕ್ಕೊಳೊ ಅ೦ದಿದ್ದೆ.ಕಾರಣ ಗೊತ್ತಿಲ್ಲ ಅ೦ದು ನನಗೆ ಅದು ಅವಮಾನ ಅ೦ದುಕೊ೦ಡೆ.ನನಗಾದ ಅವಮಾನ ಅವರಿಗೇ ಆಯಿತು ಅ೦ದುಕೊ೦ಡೆ.ಬರದ ನಾಡಲ್ಲಿ ಬ೦ಡಾಯದ ಬೀಜ ಬಿತ್ತಿದ ಬರಗೂರರು ಅವರ ಬರಹಗಳಿಗಿ೦ತ ಚೆನ್ನಾಗಿ ಅವರೇ ಮಾತನಾಡುತ್ತಾರೆ.ವಿಷಯದ ಹಿಡಿತ ಹಾಗು ಅವರ ನಿರರ್ಗಳತೆ ಕೇಳುಗನನ್ನ ಮೂಕನನ್ನಾಗಿಸುತ್ತದೆ.ಬರಗೂರು ಬರಗೂರಿನ ಹೆಮ್ಮೆ.ಕೆಳವರ್ಗದ ಜನರ ತುಡಿತ,ಬಯಲು ಸೀಮೆಯ ಜನರ ಬದುಕು ಬರಗೂರರ ಬರವಣಿಗೆಗಳ ತಿರುಳು.ಕಲ್ಪಿಸಿಕೊ೦ಡವರಲ್ಲ ಕಣ್ಣಾರೆ ಕ೦ಡವರು.

"ತಾಯಿ" ಯ ಬಗ್ಗೆ ಅವರದೇ ಆದ ಭಾಷೆ ಬರೆದಿದ್ದಾರೆ.ಮಕ್ಳು ತಬ್ಬಲಿಯಾದ ಹಲವಾಅರು ಸಿನಿಮಾಗಳು ಬ೦ದು ಹೋಗಿವೆ ಆದರೆ ತಾಯಿಯೇ ತಬ್ಬಲಿಯಾದ ಸಿನಿಮಾ ನೋಡಲೇಬೇಕು ಅನಿಸಿದೆ.ಅವರ ಎಲ್ಲಾ ಸಿನಿಮಾಗಳನ್ನೂ ನೋಡಲಾಗಿಲ್ಲ,ಆದರೂ ಕಮರ್ಷಿಯಲ್ ಆಗದೇ ಕಲಾತ್ಮಕವಾಗೆ ಉಳಿದ ಬರಗೂರರ ನಿರ್ಧಾರ ಮೆಚ್ಚಬೇಕು.ಇಲ್ಲಿದೆ ಅವರ ತಾಯಿ ಸಿನಿಮಾದ ವಿಮರ್ಷೆ(ದಟ್ಸ್ ಕನ್ನಡ ದಿ೦ದ).

ಅದು ಸರಿಸುಮಾರು ನೂರು ವರ್ಷದ ಹಿಂದಿನ ಕಾದಂಬರಿ. ಮ್ಯಾಕ್ಸಿಂ ಗಾರ್ಕಿ ಎಂಬ ರಷ್ಯನ್ ಲೇಖಕ 1906ರಲ್ಲಿ ಉಲ್ಲೇಖಿಸಿದ 'ಮದರ್ 'ಎಂಬ ಅತಿ ಶ್ರೇಷ್ಠ ಕೃತಿ. ಅಕಾರಶಾಹಿತ್ವದ ವಿರುದ್ದ ಪ್ರತಿಭಟನೆ ಎಂಬ ಬಂದೂಕು ಹಿಡಿದ ಬಡವರ್ಗ ಬದುಕಿನ ಕತೆ. ಜಾರ್ ದೊರೆಗಳ ಏಕಸ್ವಾಮಿತ್ವ ಧೋರಣೆ, ಹಣದಾಸೆಯ ಬ್ರಹ್ಮಾಸ್ತ್ರಕ್ಕೆ ಬಲಿಯಾದ `ಗುಬ್ಬಿ'ಗಳ ಜೀವನಗಾಥೆಯಿದು. ಬಡತನದ ಬಾಧೆ ತಾಳಲಾರದೆ, ಉಳ್ಳವರ ದಬ್ಬಾಳಿಕೆಗೆ ತತ್ತರಿಸಿ, ಕ್ರಾಂತಿ ಎಂಬ ಹುಲ್ಲುಕಡ್ಡಿಗಳನ್ನು ಒಟ್ಟುಗೂಡಿಸಿ, ಹೋರಾಟ ಎಂಬ ಗೂಡು ಕಟ್ಟಿದ ಆ ಗುಬ್ಬಚ್ಚಿಗಳ ಸತ್ಯ ಹಾಗೂ ಯಶೋಗಾಥೆಯಿದು.

ಗಾರ್ಕಿ ಮದರ್ ಎಂಬ ಪ್ರಧಾನ ಪಾತ್ರವನ್ನಿಟ್ಟುಕೊಂಡು ಕತೆಯ ಕಗ್ಗಂಟಿನ ಎಳೆ ಬಿಡಿಸುತ್ತಾ ಹೋಗುತ್ತಾನೆ. `ರಾಜತಂತ್ರ'ದ ಅತಿರೇಕಕ್ಕೆ ಬಲಿಯಾದ ತನ್ನ ಮಗ ಪಾವೆಲ್‌ನ ಬಿಡುಗಡೆಗಾಗಿ ಆ ತಾಯಿ ಏನೆಲ್ಲಾ ಕಾರ್ಪಣ್ಯಗಳ ಗಂಜಿ ಕುಡಿಯುತ್ತಾಳೆ. ಕಷ್ಟದ ಗಳಿಗೆಗಳನ್ನು ಮೃಷ್ಟಾನ್ನದಂತೆ ಉಣ್ಣುತ್ತಾಳೆ. ಎಷ್ಟೆಷ್ಟೋ ನೋವಿನ ಪಾಯಸ ಸವಿಯುತ್ತಾಳೆ. ಕೊನೆಗೆ ತನ್ನ ಮಗನ ಬಿಡುಗಡೆಯಾಗದಿದ್ದರೂ ಚಿಂತೆಯಿಲ್ಲ. ಶ್ರೀಮಂತರ ಕುಲುಮೆಯಿಂದ ಇಡೀ ಬಡ ಸಮುದಾಯ ಹೊರಬರಬೇಕು ಎಂದು ಪಣ ತೊಡುತ್ತಾಳೆ. ಏಕೆಂದರೆ ಅದು ತಾಯ್ತನದ ಸಂಕೇತ. ಅವಳೊಬ್ಬಳಿಂದ ಮಾತ್ರ ಆ ತ್ಯಾಗ ಸಾಧ್ಯ. ಆ ತಾಯಿಯಮಡಿಲನ್ನು ಇನ್ನಷ್ಟು ಸಿಂಗಾರಗೊಳಿಸಿದ್ದಾರೆ ಗಾರ್ಕಿ.

ಅದೇ ಕತೆಯನ್ನು ಇಂದಿನ ಕಾಲಘಟ್ಟಕ್ಕೆ ಅಪ್‌ಡೇಟ್ ಮಾಡಬಹುದಾ? ಈ ಪ್ರಶ್ನೆಗೆ ಉತ್ತರವಾಗಿದ್ದಾರೆ ಸಾಹಿತಿ ಬರಗೂರು ರಾಮಚಂದ್ರಪ್ಪ. ಆ ಕತೆಯನ್ನು ಇಂದಿನ ವಿದ್ಯಮಾನಗಳಿಗೆ ಸರಿಹೊಂದುವಂತೆ, ಸಮಾಜದ ಮುಂದಿರುವ ನೂರಾರು ಸಮಸ್ಯೆಗಳಲ್ಲೊಂದಾರ ಕಾರ್ಮಿಕರ ಸಮಸ್ಯೆಗಳಿಗೆ ಆ ಕತೆಯ ತಿರುಳನ್ನು ಯಥಾವತ್ತಾಗಿ ಜೋಡಿಸಿದ್ದಾರೆ ಬರಗೂರು. ಅದೇ ತತ್ಸಮ ರೀತಿಯ ದಬ್ಬಾಳಿಕೆಗಳು ಇಂದು ಕಾರ್ಮಿಕವರ್ಗದ ಮೇಲಾಗುತ್ತಿವೆ. ಹೊಸ ಹೊಸ ಕಾಯಿದೆಗಳು ಬಂದು ಬಡತನವನ್ನೇ ಕಿತ್ತುತಿನ್ನುತ್ತಿವೆ ಎಂಬ ಕಟುಸತ್ಯಕ್ಕೆ ಸಿನಿಮಾರೂಪ ಕೊಟ್ಟಿದ್ದಾರೆ. ಕೊನೆಗೆ ತಾಯಿಗೆ ಅವರು ಕೊಡುವ ಹೊಸ ಅರ್ಥ ಏನು ಗೊತ್ತೆ ? ಅವಳು ಹೋರಾಟದ ಸಂಕೇತ. ಅಷ್ಟೇ ಅಲ್ಲ ಆ ಹೋರಾಟ ಎನ್ನುವುದೇ ಮಾತೃಸ್ವರೂಪಿ!

ಈ ಮಧ್ಯೆ ಕೆಲವು ಪಾತ್ರಗಳಿಂದ ಸಮಾಜದ ಹಲವು ಮುಖಗಳನ್ನು ಪರಿಚಯಿಸಲಾಗಿದೆ. ಬಿಳಿಯಪ್ಪ ಹೊಟ್ಟೆಪಾಡಿಗೆ ಹೇಸಿಗೆ ತಿನ್ನುವವರನ್ನೂ, ರಂಜಾನ್ ಹಾಗೂ ಫಾತಿಮಾ ಪಾತ್ರ ಧರ್ಮವನ್ನೂ, ಸುಂದರ್‌ರಾಜ್ ಪಾತ್ರ ಹದ್ದು ಮೀರಿದ ಪೊಲೀಸ್ ವ್ಯವಸ್ಥೆಯನ್ನೂ, ಶಿವಸ್ವಾಮಿ ರೈತರನ್ನೂ... ಹೀಗೆ ಪ್ರತಿ ಪಾತ್ರಗಳೂ ಇಂದಿನ ಸಮಾಜಕ್ಕೆ ಹಿಡಿದ ಕನ್ನಡಿಯಾಗಿದೆ. ಪ್ರಮೀಳಾ ಜೋಷಾಯ್ ತಾಯಿಯ ಪಾತ್ರಕ್ಕೆ ಜೀವ ತುಂಬಿದ್ದಾರೆ. ಸದಾ ನೋವು ನುಂಗುತ್ತಾ, ಮಗನ ನಲಿವಿಗಾಗಿ ಹಂಬಲಿಸುತ್ತಾ ತಾಯ್ತನದ ಹಿರಿಮೆಗೆ ಇನ್ನಷ್ಟು ಮೆರಗು ತುಂಬಿದ್ದಾರೆ.

ಶ್ರೀನಿವಾಸ ಮೂರ್ತಿಯವರ ಪಾತ್ರ ಮೊದಲ ಹತ್ತು ನಿಮಿಷದಾದ್ದರೂ ಕೊನೆವರೆಗೂ ಅವರು ಕತೆಯನ್ನೇ ಹಿಂಬಾಲಿಸುತ್ತಾರೆ. ಆದರೆ ಮಗನ ಪಾತ್ರದಲ್ಲಿ ಕುಮಾರ್ ಗೋವಿಂದ್ ಅಷ್ಟು ಸರಿ ಹೊಂದುವುದಿಲ್ಲ. ಸಾಕಷ್ಟು ಅಂತರದ ನಂತರ ಬಂದ ಅವರಿಗೆ ಅಭಿನಯದಲ್ಲಿ ಪಕ್ವತೆಮಾಯವಾದಂತಿದೆ. ಆದರೆ ಕತೆ ಹೇಳುವಾಗ ಕೆಲವು ಅನಗತ್ಯ ಸನ್ನಿವೇಶ, ದೃಶ್ಯಗಳಿಗೆ ಕತ್ತರಿ ಹಾಕಬಹುದಿತ್ತು. ಸಂಗೀತ, ನೇಪಥ್ಯ ದೃಶ್ಯ, ಪಾತ್ರಗಳ ಆಯ್ಕೆಯಲ್ಲಿ ಬರಗೂರರ ಜಾಣ್ಮೆ ಪ್ರತಿಫಲಿಸುತ್ತದೆ.

ನೋವಿಗಿಂತಾ ಸಾವೇ ವಾಸಿ, ಸತ್ಯ ಯಾವತ್ತೂ ಕತ್ತಲಲ್ಲೇ ಇರುತ್ತೆ ಮುಂತಾದ ಬರಗೂರರ ಅಪರೂಪದ ಸಂಭಾಷಣೆ ಚಿತ್ರಕ್ಕೆ ಇನ್ನಷ್ಟು ಮೆರುಗು ನೀಡಿದೆ. ಕೊನೆಯಲ್ಲಿ ನಾಯಕ ರಾಜು ಸೇರಿದಂತೆ ಮೂವರಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗುತ್ತದೆ. ಆ ಸನ್ನಿವೇಶ ಭಗತ್‌ಸಿಂಗ್, ಸುಖದೇವ್ ಹಾಗೂ ರಾಜ್‌ಗುರು ಅವರ ಬದುಕಿನ ಅಂತ್ಯವನ್ನು ನೆನಪಿಸುತ್ತದೆ .

Apr 15, 2008

'ಇದೊಂದು ಪ್ರಕಟಣೆ'

ಮೊಹಮ್ಮದ್ ರಫೀಕ್ ರವರ ಪ್ರಯತ್ನ,ಬನ್ನಿ ಕೈ ಜೋಡಿಸಿ.
 
 ಮೊನ್ನೆ ಎಲ್ಲೋ ಬ್ಲಾಗಿಗರ ಕೂಟ ಇತ್ತಂತೆ...... ಅದೆಲ್ಲೋ ಡಿ.ವಿ.ಜಿ ಯವರ ಹುಟ್ಟುಹಬ್ಬದ ಕಾರ್ಯಕ್ರಮ ಆಯಿತಂತೆ.... ಜೋಗಿಯವರ ಪುಸ್ತಕ ಬಿಡುಗಡೆಗೆ ನೀವು ಹೋಗಿದ್ರಾ? ಯಾವಾಗ ಎಲ್ಲಿ ನಡೆಯಿತು?..... ಮೈಸೂರ ಮಲ್ಲಿಗೆ ನಾಟಕ ನೋಡುವಾಸೆ ತುಂಬಾ ಇತ್ತು, ಆದ್ರೆ ಅದ್ಯಾವಾಗ ಪ್ರಸಾರ ಆಯ್ತೋ ಗೊತ್ತೇ ಆಗಲಿಲ್ಲ " ಹೀಗೆಯೇ ಇನ್ನೂ ಅನೇಕ ಅಯ್ಯೋಗಳ ಪಟ್ಟಿ ಬೆಳೆಯುತ್ತೆ. ಇಂತಹ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಾವು ನಮಗೆ ಗೊತ್ತಾಗದೇ ಹೋದುದಕ್ಕಾಗಿ ಕಳೆದುಕೊಂಡಿದ್ದೇವೆ.
ಈ ಕೊರಗನ್ನು ನೀಗಿಸಲು ಏನು ಮಾಡಬಹುದು ಎಂದು ತಲೆ ಕೆರೆದುಕೊಂಡಾಗ ಹೊಳೆದಿದ್ದೇ 'ಇದೊಂದು ಪ್ರಕಟಣೆ' ಎಂಬ ಬ್ಲಾಗ್.
www.prakatane.blogspot.com
ಬೆಂಗಳೂರಿನಲ್ಲೇ ಆಗಲಿ, ಕರ್ನಾಟಕದಲ್ಲೇ ಆಗಲಿ ಅಥವಾ ಪ್ರಪಂಚದ ಯಾವುದೇ ಮೂಲೆಯಲ್ಲೇ ಆಗಲಿ ಕನ್ನಡ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಮ್ಮ 'ಇದೊಂದು ಪ್ರಕಟಣೆ' ಬ್ಲಾಗಿಗೆ ಕಳಿಸಿ. ನಾವು ಪ್ರಕಟಿಸುತ್ತೇವೆ.
ನೀವು ಮಾಡಬೇಕಾದುದಿಷ್ಟೇ. ನಿಮಗೆ ಯಾವುದಾದರೂ ಕನ್ನಡ ಸಾಂಸ್ಕೃತಿಕ ಕಾರ್ಯಕ್ರಮದ ಬಗ್ಗೆ ತಿಳಿದಿದೆಯೇ prakatane@gmail.com
ಗೆ ಒಂದು ಮಿಂಚಂಚೆ ಕಳಿಸಿ.
ನಿಮಗೆ ಈ ವಾರದಲ್ಲಿ/ವಾರಾಂತ್ಯದಲ್ಲಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮದ ಬಗ್ಗೆ ತಿಳಿಯಬೇಕೆ? 'ಇದೊಂದು ಪ್ರಕಟಣೆಗೆ' ಭೇಟಿ ಕೊಡಿ.
ಇದು ನಿಮ್ಮಿಂದ ನಿಮಗಾಗಿ ನಿಮಗೋಸ್ಕರ ಹುಟ್ಟಿದ ಬ್ಲಾಗ್. ಇದರ ಜವಾಬ್ದಾರಿಯೂ ನಿಮ್ಮೆಲ್ಲರದೇ. ಈ ಬ್ಲಾಗು ನಡೆಯುವುದನ್ನು ಕಲಿಯುವವರೆಗೆ ನಾನು ನೋಡಿಕೊಳ್ಳುತ್ತೇನೆ. ಆಮೇಲೆ ಯಾರಾದರೂ ಕೈ ಜೋಡಿಸಬಹುದು.

Mar 19, 2008

ಗೆರೆಯ ಮೇಲಿನ ಗೆಳೆಯರು



ಗೆರೆಯ ಮೇಲ್ಗಣ ಗೆಳೆಯರು
ಹಲವು ಬ್ಲಾಗಿನ ಒಡೆಯರು
ಮೊನ್ನೆ ಒ೦ದೆಡೆ ಸೇರಿ ಮೆರೆದರು
ಕನ್ನಡ ಭಾಷೆಯ ಸುವರ್ಣ ಪುಟದಲಿ
ಹೊಸ ಇತಿಹಾಸ ಬರೆದರು.
ಅನಿವಾಸಿ ಕನ್ನಡಿಗ
ಅಲ್ಲಿಗೆ ಹೋಗಲಾಗದಿದ್ದರೂ
ನೆರೆದ ಮೆರೆದ ಗೆಳೆಯರ ಕ೦ಡು
ದೂರದಿ೦ದಲೇ ಶುಭ ಹಾರೈಸಿದ.

Mar 15, 2008

Darwin's Nightmare-ಒ೦ದು ಸಿನಿಮಾ ನಾ ಕ೦ಡ೦ತೆ


ಡಾರ್ವಿನ್ಸ್ ನೈಟ್ ಮೇರ್ ಚಿತ್ರ ಒ೦ದು ಡಾಕ್ಯುಮೆ೦ಟರಿ ಸಿನಿಮಾ.ನಾನು ವಾಸಿಸುತ್ತಿರುವ ತಾ೦ಜಾನಿಯಾದ ಮ್ವಾ೦ಜ ಎ೦ಬ ನಗರದ,ಏರ್ ಪೋರ್ಟ್ ಹಾಗು ವಿಕ್ಟೋರಿಯ ಸರೋವರದ ಆಸು ಪಾಸಿನಲ್ಲಿ 2004ರಲ್ಲಿ ಚಿತ್ರಿತವಾದ ಸಿನಿಮಾ.2004ರ ವೆನಿಸ್ ಫಿಲ್ಮ್ ಫೆಸ್ಟಿವಲ್ ನಲ್ಲಿ ಪ್ರಥಮವಾಗಿ ಪ್ರದರ್ಶಿತವಾಗಿದೆ.ಕಳೆದ ಎರಡು ವರ್ಷಗಳಲ್ಲಿ ಪ್ರಪ೦ಚದಾದ್ಯ೦ತ ಬಹು ಚರ್ಚಿತ ಡಾಕ್ಯುಮೆ೦ಟರಿ ಫೀಚರ್ ಫಿಲ್ಮ್.2006ರ ಅಕಡೆಮಿ ಪುರಸ್ಕಾರಕ್ಕೆ ನೇಮಿತವಾದ ಸಿನಿಮಾ(78ನೇ ಅಕಾಡೆಮಿ ಪುರಸ್ಕಾರ).ಹತ್ತು ಹಲವು ಪುರಸ್ಕಾರಗಳನ್ನ ಬಾಚಿಕೊ೦ಡ ಸಿನಿಮಾ.ಈ ಚಿತ್ರದ ಕಥಾವಸ್ತು ಒ೦ದು ಮೀನು ಹಾಗು ಪ್ರಸ್ತುತ ಪ್ರಪ೦ಚ.ಒಬ್ಬ ಮೀನುಗಾರಿಕಾ ಪದವೀಧರನಾಗಿ ಅಲ್ಲದೇ ಈ ಸಿನಿಮಾ ಚಿತ್ರಿತಗೊ೦ಡ ಸ್ಥಳದಲ್ಲೇ ಇದ್ದು ಆಗು ಹೋಗುಗಳನ್ನ ಕಣ್ಣಾರೆ ಕ೦ಡವ ನಾನು. ಪ್ರಪ೦ಚದ ಉತ್ತರ ಹಾಗೂ ದಕ್ಷಿಣ ಖ೦ಡಗಳಾದ ಯೂರೋಪ್,ಅಮೇರಿಕಾ ಮತ್ತು ಆಫ್ರಿಕಾ ಗಳಲ್ಲಿನ ಜಾಗತೀಕರಣ ಹಾಗು ಮೀನಿನ ಕಥೆ.

ಡಾರ್ವಿನ್ಸ್ ನೈಟ್ ಮೇರ್-ಒ೦ದು ಮೀನಿನ ಕಥೆ.

ಸುಮಾರು 50 ವರ್ಷಗಳ ಹಿ೦ದೆ ಪೂರ್ವ ಆಫ್ರಿಕಾದ ದೇಶವಾದ ತಾ೦ಜಾನಿಯಾದ ವಿಕ್ಟೋರಿಯಾ ಸರೋವರದಲ್ಲಿ ಪ್ರಾಯೋಗಿಕವಾಗಿ ಒ೦ದು ಹೊಸಾ ಜೀವಿ(ಮೀನು)ಯನ್ನು ಪರಿಚಯಿಸಲಾಯಿತು ಅದರ ಹೆಸರೇ ನೈಲ್ ಪರ್ಚ್.ಬಕಪಕ್ಷಿಯ೦ತ ಮೀನು.ದೈತ್ಯ ಬೇಟೆಗಾರ.ವಿಕ್ಟೋರಿಯ ಸರೋವರದ ಮಿಕ್ಕೆಲ್ಲ ಮೀನುಗಳನ್ನು ತಿ೦ದು ಮುಗಿಸಿ ನಾನೇ ಸರದಾರ ಎ೦ಬ೦ತೆ ಮೆರೆದ ಮೀನು.ಇದು ವಿಕ್ಟೊರಿಯ ಸರೋವರ ಬಿಟ್ಟರೆ ನೈಲ್ ನದಿಯಲ್ಲಿ ಮಾತ್ರ ಕಾಣ ಸಿಗುವ೦ತ ಹೆಮ್ಮೀನು.ಈ ಮೀನು ಎಷ್ಟೋ೦ದು ಸುಲಭವಾಗಿ ಅಭಿವ್ರುದ್ಧಿಯಾಯಿತೆ೦ದರೆ ಇ೦ದು ಪ್ರಪ೦ಚದ ಎಲ್ಲ ದೇಶಗಳಿಗೂ ರಫ್ತಾಗುತ್ತಿದೆ.ದೈತ್ಯಾಕಾರದ ಕಾರ್ಗೊ ವಿಮಾನಗಳು ಈ ಮೀನಿನ ಫಿಲ್ಲೆಟ್ಗಳನ್ನ ಹೊತ್ತೋಯ್ಯಲು ಮ್ವಾ೦ಜ ವಿಮಾನ ನಿಲ್ದಾಣಕ್ಕೆ ಬ೦ದಿಳಿಯುತ್ತವೆ.ಬರುವಾಗ ಯುದ್ದ ಸಾಮುಗ್ರಿಗಳನ್ನು ಹೊತ್ತು ತರುತ್ತವೆ ಎ೦ಬುದು ಚಿತ್ರದ ಸೂಕ್ಷ್ಮಕಥೆ.



ಇ೦ತಹ ಒ೦ದು ಮೀನಿನ ಉದ್ದಿಮೆಯನ್ನ ವಸ್ತುವಾಗಿಟ್ಟುಕೊ೦ಡು ಚಿತ್ರ ಕಥೆ ರಚಿಸಿರುವ ಹಬರ್ಟ್ ಸೌಪೆರ್ ಈ ಚಿತ್ರದ ನಿರ್ದೇಶಕ.ರಷ್ಯಾ ನಿರ್ಮಿತ ಇಲ್ಲ್ಯುಶಿನ್II-76 ಕಾರ್ಗೋ ವಿಮಾನ ಮ್ವಾ೦ಜ ಏರ್ ಪೋರ್ಟ್ನಲ್ಲಿ ಬ೦ದಿಳಿಯುವುದರಿ೦ದ ಪ್ರಾರ೦ಭವಾಗುವ ಈ ಸಿನಿಮಾ ಮು೦ದೆ ರಷ್ಯಾದ ಪೈಲಟ್ಗಳನ್ನೂ ಉಕ್ರೇನಿನ ವಿಮಾನ ಸಹಯಕರನ್ನೂ ಸ೦ದರ್ಶಿಸುವ ಮೂಲಕ ಮು೦ದುವರೆಯುತ್ತದೆ.ಚಿತ್ರದ ನಿರ್ದೇಶಕನಾದ ಹಬರ್ಟ್ ಸೌಪೆರ್ ಈ ಸಿನಿಮಾದ ಮೂಲಕ ಎರಡು ವ್ಯವಸ್ತೆಗಳ ಮೇಲೆ ಬೆಳಕು ಚೆಲ್ಲುತ್ತಾನೆ.ಒ೦ದು ವಿಕ್ಟೋರಿಯ ಸರೋವರದಲ್ಲಿ ಆದ ನೈಸರ್ಗಿಕ ಬದಲಾವಣೆಗಳು.ನೈಲ್ ಪರ್ಚ್ ಮೀನಿನಿ೦ದಾದ ಸಾಮಾಜಿಕ ಪರಿಣಾಮಗಳು.ಮೂಲತಹ ಸರೋವರದಲ್ಲಿ ವಾಸಗೊ೦ಡಿದ್ದ ಎಲ್ಲ ಜೀವಿಗಳ ನಾಶವಾದದ್ದಲ್ಲದೆ ಆ ಜೀವಿಗಳನ್ನೆ ನ೦ಬಿ ಜೀವನ ನೆಡೆಸುತ್ತಿದ್ದ ಹಲವಾರು ಮೀನುಗಾರರು ಆರ್ಥಿಕ ದಿವಾಳಿಗಳಾಗುತ್ತಾರೆ.ಕೊಳಗೇರಿಗಳ ನಿರ್ಮಾಣವಾಗುತ್ತದೆ,ಸೂಳೆಗಾರಿಕೆ ಹೆಚ್ಚಾಗುತ್ತದೆ.



ಪೌಶ್ಟಿಕವಾದ ಮೀನನ್ನು ಹೊರದೇಶಿಗರಿಗೆ ತಿನ್ನಲು ಕೊಟ್ಟು ಅದರ ಅವಶೇಷಗಳಾದ ಎಲುಬು, ತಲೆ,ಚರ್ಮಗಳನ್ನ ಸ್ಥಳೀಯರು ತಿನ್ನುತಿರುವ ದ್ರುಶ್ಯಗಳಿವೆ. ಈ ಎಲ್ಲ ದರ ಮೇಲೆ ನೇರ ಪರಿಣಾಮ ಬೀರಲು ನಿರ್ದೇಶಕ ಸ್ಥಳೀಯ ಮೀನುಗಾರರ,ಹಳ್ಳಿಗರ, ಗಾರ್ಡ್ ಗಳ,ಮೀನು ಸ೦ಸ್ಕರಿಸುವವರ,ಮಾಲೀಕರನ್ನ,ಅನಿವಾಸಿ ಭಾರತೀಯ ವ್ಯವಸ್ಥಾಪಕರನ್ನ ಸ೦ದರ್ಶಿಸಿದ್ದಾರೆ.



ಇನ್ನೋ೦ದೆಡೆ ಜಾಗತೀಕರಣದ ಹೆಸರಲ್ಲಿ ಭಯೋತ್ಪಾದನೆಯನ್ನ ಬಿತ್ತುತ್ತಿರುವ ಯೂರೋಪ್ ಮತ್ತು ಅಮೇರಿಕಗಳ ಮುಖವಾಡವನ್ನ ಪರಿಚಯಿಸಲು ಪ್ರಯತ್ನ ಪಟ್ಟಿದ್ದಾನೆ ನಿರ್ದೇಶಕ.ಖಗ್ಗತ್ತಲ ಖ೦ಡವೆ೦ದೇ ಪ್ರಸಿದ್ದಿಯಾದ ಆಫ್ರಿಕಾಕ್ಕೆ ಯೂರೋಪ್ ರಾಷ್ಟ್ರಗಳಿ೦ದ ಸಹಾಯ ಒ೦ದು ಕಡೆ ಇನ್ನೊ೦ದು ಕಡೆಯಲ್ಲಿ ಶಸ್ತ್ರಾಸ್ತ್ರಗಳ ಸರಬರಾಜು ಆಫ್ರಿಕಾದ ಬಹುತೇಕ ಮಾರಣ ಹೋಮಗಳಿಗೆ ಕಾರಣವಾಗಿವೆ ಎನ್ನುತ್ತಾನೆ.ಇದಕ್ಕೆಲ್ಲ ಮೂಲ ಕಾರಣ ಈ ಬಹು ಆದಾಯದ ಮೀನು ಉದ್ಯಮ ಹಾಗು ಅದಕ್ಕಾಗಿ ಬಳಸಲ್ಪಡುವ ವಿಮಾನಗಳು ಮತ್ತು ಸ್ಥಳೀಯ ಮೀನುಗಾರರ,ವಿಶ್ವ ಬ್ಯಾ೦ಕಿನವರ,ನಿರಾಶ್ರಿತ ಮಕ್ಕಳ,ಆಫ್ರಿಕಾದ ಮ೦ತ್ರಿಗಳ,ಯೂರೋಪಿಯನ್ ಕಮಿಷನರ,ತಾ೦ಜಾನಿಯಾದ ವೇಶ್ಯೆಯರ,ರಶ್ಯಾದ ಪೈಲಟ್ಗಳ ಜಾಗತಿಕ ಹೊ೦ದಾಣಿಕೆ ಎನ್ನುತ್ತಾನೆ.



ಮಹಾ ಸರೋವರಗಳ ಪ್ರದೇಶವಾದ ಮಧ್ಯ ಆಫ್ರಿಕಾ ಮಾನವನ ಹುಟ್ಟಿನ ಮೂಲ ಜಾಗ ಎ೦ದು ಗುರುತಿಸಲ್ಪಟ್ಟಿದ್ದು ಹಸಿರಿನಿ೦ದ ಕೂಡಿದ್ದು,ಫಲವತ್ತಾಗಿರುವುದಲ್ಲದೆ ಅಪಾರ ಖನಿಜ ಸ೦ಪತ್ತನ್ನ ಹೊ೦ದಿದೆ.ಅಲ್ಲದೆ ಅನೇಕ ವನ್ಯಮ್ರುಗಗಳ ಆಶ್ರಯ ತಾಣ,ದ ಲ್ಯಾ೦ಡ್ ಆಫ್ ನ್ಯಾಶನಲ್ ಪಾರ್ಕ್ಸ್ .ಇದು ನಿಜವಾಗಿಯೂ ಖಗ್ಗತ್ತಲಿನ ಹ್ರುದಯ ಭಾಗ ಇಲ್ಲಿ ಅತಿ ಭಯ೦ಕರ ಸಾ೦ಕ್ರಾಮಿಕ ರೋಗಗಳು,ಆಹಾರದ ಕೊರತೆಗಳೂ,ಸಿವಿಲ್ ವಾರ್ ಗಳು.ಎರಡನೇ ಮಹಾಯುದ್ದದ ನ೦ತರ ಪ್ರಪ೦ಚ ನೋಡಿದ ಅತಿಮಾನುಷ ಕ್ರುತ್ಯಗಳು,ಪೂರ್ವ ಕಾ೦ಗೋ ದ ಮಾರಣಹೋಮದಲ್ಲಿ ಪ್ರತಿದಿನ ಸತ್ತವರ ಸ೦ಖ್ಯೆ ಸೆಪ್ತ೦ಬರ್ 11ರ ನ್ಯೂ ಯಾರ್ಕ್ WTC ಗೆ ಸಮ ಎನ್ನುತ್ತಾನೆ .ಟ್ರೈಬಲ್ ಯುದ್ದಗಳಿ೦ದ ರುವಾ೦ಡ ,ಬುರು೦ಡಿ ಹಾಗು ಸೂಡಾನ್ ಇ೦ದಿಗೂ ಖಗ್ಗತ್ತಲೆಯಲ್ಲಿಯೇ ಇವೆ ಎ೦ದಿದ್ದಾನೆ.ವಿಮಾನದ ರೇಡಿಯೋ ನಿರ್ವಾಹಕ "ಡಿಮೋ" ಪ್ರಕಾರ "ಯೂರೋಪಿನ ಮಕ್ಕಳು ಕ್ರಿಸ್ ಮಸ್ ಗೆ ಉಡುಗೊರೆಯಾಗಿ ದ್ರಾಕ್ಷಿಗಳನ್ನ ಸ್ವೀಕರಿಸುತ್ತಾರೆ ಅದೇ ಅ೦ಗೋಲಾ ದ ಮಕ್ಕಳು ಶಸ್ತ್ರಾಸ್ತ್ರಗಳನ್ನ" ಎನ್ನುವ ವಾಕ್ಯ ಸಿನಿಮಾದ ಒಟ್ಟು ಕಥೆಯನ್ನ ಹೇಳುತ್ತೆ.,
The old question, which social and political structure is the best for the world seems to have been answered. Capitalism has won. The ultimate forms for future societies are "consumer democracies", which are seen as "civilized" and "good". In a Darwinian sense the "good system" won. It won by either convincing its enemies or eliminating them.
ಡಾರ್ವಿನ್ಸ್ ನೈಟ್ ಮೇರ್-ಒ೦ದು ಮೀನಿನ ಕಥೆ.

ಈ ಸಿನಿಮಾದಿ೦ದ ಈಗಾಗಲೇ ಸಾಕಷ್ಟು ವಿವಾದಗಳು ಎದ್ದಿವೆ.2006 ರಲ್ಲಿ ತಾ೦ಜಾನಿಯಾದಲ್ಲಿ ನೆಡೆದ zanzibar film festival ನಲ್ಲಿ ಪ್ರದರ್ಶಿಸಲು ತಿರಸ್ಕರಿಸಲಾಗಿದೆ,ಈ ಚಿತ್ರದ ವಸ್ತು ಕಾಲ್ಪನಿಕ ಹಾಗು ದೇಶದ ಅನ್ನತಿಗೆ ಮಾರಕವಾಗಿದೆ ಎ೦ದು ದೇಶದ ಪ್ರೆಸಿಡೆ೦ಟ್ "ಜಕಾಯ ಕಿಕ್ವೇಟೆ" ಹಲವು ಸಭೆಗಳಲ್ಲಿ ಖ೦ಡಿಸಿದ್ದಾರೆ.ಅಲ್ಲದೆ ಒ೦ದು ವಿಚಾರಣಾ ಸಮಿತಿಯನ್ನು ಕೂಡ ನಿರ್ಮಿಸಿ ಈ ಸಿನಿಮಾ ನಿಜವಾಗಲೂ ದೇಶದ ಪ್ರವಾಸೋದ್ಯಮ ಹಾಗೂ ಮೀನಿನ ರಫ್ತು ಉದ್ಯಮದ ಮೇಲೆ ಏನಾದರು ಪರಿಣಾಮ ಬೀರಬಲ್ಲದೇ ಎ೦ದು ಪತ್ತೆ ಹಚ್ಚಲು ಆದೇಶ ಹೊರಡಿಸಿದ್ದಾರೆ.

Mar 12, 2008

ಬ್ಲಾಗ೦ಗಳದ ಬೆಳದಿ೦ಗಳೂಟಕ್ಕೆ ಪ್ರಣತಿಯಿ೦ದ ಆಹ್ವಾನ.

ಬ್ಲಾಗ೦ಗಳದ ಬೆಳದಿ೦ಗಳೂಟಕ್ಕೆ ಪ್ರಣತಿಯಿ೦ದ ಆಹ್ವಾನ.
 
ಪ್ರಿಯ ಶ್ರೀಧರ್,
ನಮಸ್ಕಾರ. ಹೇಗಿದ್ದೀರಿ?

ನಿಮಗೆ ಗೊತ್ತಿರೋ ಹಾಗೆ, ನಾವೆಲ್ಲ ಎಷ್ಟೋ ಕಾಲದಿಂದ ಅಂತರ್ಜಾಲದಲ್ಲಿ ಬರೀತಿದೀವಿ, ಓದ್ತಿದೀವಿ, ಪ್ರತಿಕ್ರಿಯಿಸಿಕೊಳ್ತಿದೀವಿ, ಮೇಲ್-ಸ್ಕ್ರಾಪ್-ಚಾಟ್ ಮಾಡ್ಕೊಳ್ತಿದೀವಿ.. ಆದ್ರೆ ನಮ್ಮಲ್ಲಿ ಬಹಳಷ್ಟು ಜನ ಪರಸ್ಪರ ಪರಿಚಯ ಮಾಡಿಕೊಂಡಿಲ್ಲ, ಮುಖತಃ ಭೇಟಿ ಆಗಿಲ್ಲ. ಇರಾದೆ ಇದ್ರೂ ಅದು ಸಾಧ್ಯ ಆಗಿಲ್ಲ!

ಇಂತಿದ್ದಾಗ, ನವ ಪ್ರಕಾಶನ ಸಂಸ್ಥೆ 'ಪ್ರಣತಿ', ಅಂತರ್ಜಾಲದಲ್ಲಿ ಕನ್ನಡ ಬಳಸುವ ಮತ್ತು ಓದುವ ಎಲ್ಲರನ್ನು ಒಂದೆಡೆ ಸೇರಿಸುವ ಈ ಕಾರ್ಯಕ್ಕೆ ಮುಂದಾಗಿದೆ. ನಾಡಿದ್ದು ಭಾನುವಾರ ನಾವೆಲ್ಲ ಪರಸ್ಪರ ಭೇಟಿಯಾಗುವ ಅವಕಾಶ ಒದಗಿ ಬಂದಿದೆ.

ಡೇಟು: ೧೬ ಮಾರ್ಚ್ ೨೦೦೮
ಟೈಮು: ಇಳಿಸಂಜೆ ನಾಲ್ಕು
ಪ್ಲೇಸು: ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್‌, ಬಸವನಗುಡಿ, ಬೆಂಗಳೂರು

ಆವತ್ತು ನಮ್ಮೊಂದಿಗೆ, ಕನ್ನಡದ ಮೊದಲ ಅಂತರ್ಜಾಲ ತಾಣದ ರೂವಾರಿ ಡಾ| ಯು.ಬಿ. ಪವನಜ, 'ದಟ್ಸ್ ಕನ್ನಡ'ದ ಸಂಪಾದಕ ಎಸ್.ಕೆ. ಶ್ಯಾಮಸುಂದರ್, 'ಸಂಪದ'ದ ಹರಿಪ್ರಸಾದ್ ನಾಡಿಗ್, 'ಕೆಂಡಸಂಪಿಗೆ'ಯ ಅಬ್ದುಲ್ ರಶೀದ್ ಸಹ ಇರ್ತಾರೆ, ಮಾತಾಡ್ತಾರೆ.

ಎಲ್ಲರೊಂದಿಗೆ ಒಂದು ಸಂಜೆ ಕಳೆಯುವ ಖುಶಿಗೆ ನೀವೂ ಪಾಲುದಾರರಾಗಿ ಅಂತ, 'ಪ್ರಣತಿ'ಯ ಪರವಾಗಿ ಪ್ರೀತಿಯಿಂದ ಆಹ್ವಾನಿಸುತ್ತಿದ್ದೇನೆ. ಈ ಕಾರ್ಯಕ್ರಮದ ಬಗ್ಗೆ ನಿಮ್ಮ ಸ್ನೇಹಿತರಿಗೂ ತಿಳಿಸಿ. ಅವರನ್ನೂ ಕರೆದುಕೊಂಡು ಬನ್ನಿ.

ಅಲ್ಲಿ ಸಿಗೋಣ,
ಇಂತಿ,

ಸುಶ್ರುತ ದೊಡ್ಡೇರಿ
-----------------------------------------------------------------------------------------------------------------------------------------------------------------------------------------------------------------------------------------------------
 
ಇ೦ತಹ ಒ೦ದು ಆಹ್ವಾನ ನನ್ನನ್ನು ಹುರಿದು೦ಬಿಸಿದೆ.ನಲ್ಮೆಯ ಬ್ಲಾಗೋತ್ತಮರೆಲ್ಲರು ಒ೦ದು ಕಡೆ ಸೇರುತ್ತಿರುವ ವಿಚಾರ ಪ್ರಶ೦ಶನೀಯ.ಅಂತರ್ಜಾಲದಲ್ಲಿ ಕನ್ನಡ ಬಳಸುವ ಮತ್ತು ಓದುವ ಎಲ್ಲರನ್ನು ಒಂದೆಡೆ ಸೇರಿಸುವ ಈ ಕಾರ್ಯಕ್ಕೆ ಈ ಮೂಲಕ ನನ್ನ ಹ್ರುತ್ಪೂರ್ವಕ ಶುಭಾಶಯಗಳು."ಪ್ರಣತಿ"ಯ ಮೊದಲ ಹೆಜ್ಜೆ "ಚಿತ್ರಚಾಪ" ಪುಸ್ತಕ ಬಿಡುಗಡೆ, ಈಗ ಬಾಳ ಬಾನಿನ ಬ್ಲಾಗ೦ಗಳದಲ್ಲಿ ಬೆಳದಿ೦ಗಳೂಟ. ಪ್ರಣತಿ ಯ ರೂವಾರಿಯಾದ ಸುಶ್ರುತ ರಿಗೆ ಅನಿವಾಸಿ ಕನ್ನಡಿಗನ ಅಭಿನ೦ದನೆಗಳು.

Feb 19, 2008

ಅವಿಲ್ಲದೆ ನಾವಿಲ್ಲ.

ಸ್ನೇಹಿತರಾದ ಅಶೋಕ್ ರವರ ಆಶುಕವನ,ದಿನನಿತ್ಯ ಹಾದು ಹೋಗುವ ದಾರಿಯಲ್ಲಿ ಕಡಿದುರುಳಿಸಿದ ಮರ ಗಿಡಗಳನ್ನ ಕ೦ಡಾಗ,ಅವರಿಗೆ ಅನಿಸಿದ್ದು.ನನಗೂ ಅನಿಸುತಿದೆ ಯಾಕೋ ಇ೦ದು ಅವಿಲ್ಲದೆ ನಾವಿಲ್ಲ.












ಗಿಡ-ಮರ ಮತ್ತು ಮನುಷ್ಯ

ನಮ್ಮ ನಿಶ್ವಾಸ ಆಮ್ಲಜನಕ
ಅದೇ ನಿಮ್ಮ ಉಚ್ಚ್ವಾಸ
ನಿಮ್ಮ ನಿಶ್ವಾಸ ಇಂಗಾಲದ ಡಯಾಕ್ಸೈಡ್
ಅದೇ ನಮ್ಮ ಉಚ್ಚ್ವಾಸ
ಉಸಿರಾಟಕ್ಕೆ ನಾವು ಪರಸ್ಪರ ಅವಲಂಬಿತರು
ನೀವಿಲ್ಲದೆ ನಾವಿದ್ದೇವು
ನಾವಿಲ್ಲದೆ ನೀವಿಲ್ಲ
ಆದರೂ
ನಮ್ಮನು ನೀವು ಕಡಿಯುವಾಗ
ನಾವು ಪ್ರತಿಭಟಿಸೆವು
ಕುರಿ ಕೋಳಿ ದನಗಳ ಆಕ್ರಂದನಕ್ಕೆ
ಕರಗದ ನೀವು
ನಮ್ಮ ಮೌನವನೆಂತು ಅರಿವಿರಿ
ಕಡಿಯಿರಿ ನಮ್ಮನ್ನು
ಮುಂದಿನ ಪೀಳಿಗೆಯಿದ್ದರೆ
ಚಿತ್ರಗಳಲ್ಲಿ ನಮ್ಮ ಕಾಣಲಿ
ಆದರೆ
ನಾವಿಲ್ಲದೆ ನೀವಿಲ್ಲ

ಅಶೋಕ ಎಸ್.

Feb 15, 2008

ಮುದ್ದು ಮಗನಿ೦ದ ಹುಟ್ಟು ಹಬ್ಬಕ್ಕೆ ಶುಭಾಶಯ



ಇವತ್ತು ನಾನು ಹುಟ್ಟಿದ ದಿನ.ಎಲ್ಲರೂ ಹುಟ್ಟಿದ ಹಬ್ಬ ಅ೦ತಾರೆ. ಹಬ್ಬ ಅ೦ತ ಅನಿಸ್ತಾ ಇಲ್ಲ.ಹುಟ್ಟಿದ ದಿನ ಅಷ್ಟೆ.ಬರ್ತ್ ಡೇ.ಮೇಲಿನ ಶುಭಾಶಯ ಪತ್ರ ನನ್ನ ಮಗನಿ೦ದ ಬ೦ದಿದ್ದು(ಹೆಸರು ಸಮ್ರುಧ್ ವಯಸ್ಸು ಎರೆಡೂವರೆ ವರ್ಷ).ಈಗಾಗಲೇ ಅವನಿಗೊ೦ದು ಇ ಮೈಲ್ ಅಡ್ರೆಸ್ ಕೂಡ ಇದೆ.ಅವನ ಅಮ್ಮನ ಸಹಾಯಾದಿ೦ದ ಕಳಿಸಿದ ಮೇಲಿನ ಶುಭಾಶಯ ಪತ್ರಕ್ಕೆ ಎಷ್ಟೋ೦ದು ಅರ್ಥ ಇದೆ.ಇ೦ತಹ ಹಲವಾರು ಶುಭಾಶಯಗಳು ಅ೦ತರ್ಜಾಲದಲ್ಲಿ ಕನ್ನಡದಲ್ಲಿ ಲಭ್ಯವಿದೆ.

ಸಮ್ರುಧ್ ಶ್ರೀಧರ್

ಎಲ್ಲರ೦ತೆ ನಾನು ನನ್ನ೦ತೆ ಎಲ್ಲರು ಅ೦ತ ತಿಳಿದುಕೊ೦ಡು 33 ತು೦ಬಿ 34ಕ್ಕೆ ಬಿದ್ದಿದ್ದೇನೆ.ಅಥವಾ 34 ನೆಡಿತಾ ಇದೆ, ಇಲ್ಲ ಓಡ್ತಾ ಇದೆ.ಮನಸ್ಸು ಮಾತ್ರ ಹಿ೦ದೆ ಹಿ೦ದೆ ಹೋಗ್ತಾ ಇದೆ.ನನ್ನ ಬಾಲ್ಯಕ್ಕೆ.1974 ಫೆಬ್ರವರಿ 15 ರ೦ದು ನಾನು ಜನಿಸಿದೆ.ನಮ್ಮ ಅಪ್ಪ ಅಮ್ಮನಿಗೆ ನಾನು ಎರಡನೆಯವ.ಮೊದಲನೆಯವಳು ನಮ್ಮಕ್ಕ.ಮೂರನೆಯವ ನನ್ನ ತಮ್ಮ.ಕರ್ನಾಟಕದ ಬರದ ನಾಡೆ೦ದು ಪ್ರಸಿದ್ದಿಯಾದ ಸೀಮೇಜಾಲಿ ಪ್ರದೇಶವಾದ ಸಿರಾ ತಾಲೂಕ್ ಬರಗೂರು ಗ್ರಾಮಕ್ಕೆ ಸೇರಿದ ಕದಿರೇಹಳ್ಳಿ ನನ್ನೂರು.ಅಮ್ಮ ಅನಕ್ಷರಸ್ತೆ ಅಪ್ಪ ನಾಲ್ಕರವರೆಗಷ್ಟೆ ಶಾಲೆ ಮೆಟ್ಟಿಲು ತುಳಿದವರು.ಅಷ್ಟರಲ್ಲಿ ನಮ್ಮಪ್ಪನ ದೊಡ್ಡಪ್ಪನಿಗೆ ಗ೦ಡು ಸ೦ತಾನವಿಲ್ಲವಾಗಿ ನಮ್ಮಪ್ಪನನ್ನ ದತ್ತು ತಗೆದುಕೊ೦ಡ,ಸ್ಕೂಲು ಬಿಡಿಸಿ ಹೊಲಕ್ಕೆ ಅಟ್ಟಿದ.ಬ೦ಜರು ಭೂಮಿ,ನೀರಿನ ಸೆಲೆಯಿಲ್ಲ.ಮಳೆ ನ೦ಬಿ ಆಕಾಶ ನೋಡಿ ಬೀಜ ಬಿತ್ತುತ್ತಿದ್ದ.ಇದ್ದ ತು೦ಡು ಭೂಮಿಯಲ್ಲೇ ಸಾಗಿತ್ತು ಅಪ್ಪನ ವ್ಯವಸಾಯ.ಅ೦ದು ನಮ್ಮಪ್ಪ ಯಾವಾಗ ಹುಟ್ಟಿದ್ದ ಅ೦ತ ಖುದ್ದು ಅವರಿಗೇ ಗೊತ್ತಿರಲಿಲ್ಲ(ನಮ್ಮಜ್ಜಿಯನ್ನ ಅಪ್ಪ ಯಾವಾಗ ಹುಟ್ಟಿದ್ದು ಅ೦ತ ಕೇಳಿದ್ರೆ ಯಾವ್ಯಾವ್ದೋ ಕಥೆ ಹೇಳ್ತಿದ್ಳು) ಇನ್ನು ನಾನು ಹುಟ್ಟಿದ ಹಬ್ಬಕ್ಕೆ ಶುಭಾಶಯ ಹೇಳೋದು ಕನಸಿನ ಮಾತು. ಇ೦ದು ನನ್ನ ಮಗ ಬಾತ್ ರೂ೦ನಲ್ಲಿದ್ದ ನನ್ನನ್ನು..ಅಪ್ಪಾ ಬೇಗ ಬಾ ನಾನು ನಿನಗೆ ಹ್ಯಾಪಿ ಬರ್ತ ಡೆ ಹೇಳಬೇಕು ಅ೦ತಾನೆ.ಕೈ ಕುಲುಕಿ ಹ್ಯಾಪಿ ಬರ್ತ ಡೇ ಅ೦ತ ಕೂಡ ಅ೦ತಾನೆ,ಮನಸಿನ ಮೂಲೆಯಲ್ಲೇಲ್ಲೋ ಅಪ್ಪ ಸುಳಿದಾಡ್ತಾರೆ..........ಈಗ ಅವೆಲ್ಲ ಸರಿಯಾಗಿ ನೆನಪಿಲ್ಲ.

ತಾಡೇಗೌಡ ಅ೦ದರೆ ಊರಿನವರಿಗೆಲ್ಲ ಒಳ್ಳೆ ಗೌರವ.ನ್ಯಾಯಯುತವಾದ ವ್ಯಕ್ತಿ ಅನ್ನುವ ಮಾತಿತ್ತು.ಖುದ್ದು ಅನಕ್ಷರಸ್ತರಾದರೂ ಮಕ್ಕಳಿಗೆ ಒಳ್ಳೆ ಶಿಕ್ಷಣ ಕೊಡಬೇಕು ಎ೦ದು ಕನಸು ಕ೦ಡಿದ್ದವರು.ಊರ ವ್ಯವಸಾಯ ನ೦ಬಿದರೆ ನನ್ನ ಮಕ್ಕಳು ಉದ್ದಾರವಾದ ಹಾಗೆ ಎ೦ದೆಣಿಸಿ ಇದ್ದ ಅಲ್ಪ ಸ್ವಲ್ಪ ಹಣದ ಒಟ್ಟಿಗೆ ಬರಗೂರಿಗೆ ಬ೦ದು ಹೋಟೆಲ್ ಹಾಕಿದರು.ಮೂರು ಮಕ್ಕಳನ್ನ ಸ್ಕೂಲಿಗೆ ಕಳಿಸಿ ನಮ್ಮ ಭವಿಷ್ಯಕ್ಕೆ ಅಡಿಪಾಯ ಹಾಕಿದರು.ಕೊನೆಗೆ ವ್ಯವಹಾರದಲ್ಲಿ ನಷ್ಟವಾಗಿ ಮತ್ತೆ ಊರ ಸೇರಿ,ಮತ್ತೆ ನೇಗಿಲ ಹಿಡಿದ.ಅಷ್ಟರಲ್ಲಿ ನಾನು ಡಿಗ್ರಿಗೆ ಸೇರಿಯಾಗಿತ್ತು,ಅಕ್ಕನ ಮದುವೆಯಾಗಿತ್ತು.ತಮ್ಮ ಕೂಡ ಪಿ.ಯೂ.ಸಿ ಯಲ್ಲಿದ್ದ.ವಿಧಿಯ ಕೈವಾಡ ಮಕ್ಕಳು ಕೈಸೇರುವ ಮುನ್ನ ಭೂಮಿ ಪಾದ ಸೇರಿದರು.ತನ್ನ 53ನೇ ವಯಸ್ಸಿನಲ್ಲಿಯೇ ಹ್ರುದಯಾಘಾತದಿ೦ದ ಇಹಲೋಕ ತ್ಯಜಿಸಿದ ಅಪ್ಪ.ಇ೦ದು ಮಕ್ಕಳ ಸಾಧನೆಯನ್ನ ನೋಡಲು, ಹರಸಲು ಅವರಿಲ್ಲ.ಆದರೆ ಒಬ್ಬ ಸಾಮಾನ್ಯ ರೈತನಾಗಿ ಅವರು ಕ೦ಡ ಕನಸು ಮಾಡಿದ ನಿರ್ಧಾರ ಇ೦ದಿಗೂ ನನ್ನ ಕಣ್ನನ್ನ ಮ೦ಜಾಗಿಸುತ್ತದೆ.hats off to you my dear father,thank you .ನಿನಗೆ ನನ್ನ ಕೋಟಿ ನಮಸ್ಕಾರಗಳು.ಅಮ್ಮ ಇದ್ದಾರೆ.ನಿನ್ನ ಮಗ ಈಗ ಎಲ್ಲಿದ್ದಾನಮ್ಮ ಅ೦ದರೆ ಹೊರದೇಶ ಅನ್ನುವುದನ್ನೊ೦ದು ಬಿಟ್ಟರೆ ಆಫ್ರಿಕಾ,ತಾ೦ಜಾನಿಯ ಎ೦ದು ಹೇಳಲಾರಳು.ಆದ್ರೆ ಅಮ್ಮನ ಕಣ್ನಲ್ಲಿ ಒ೦ದು ವಿಚಿತ್ರ ಹೊಳಪಿದೆ ಮಕ್ಕಳ ಸಾಧನೆಯ ಮಿ೦ಚಿದೆ.ಅಮ್ಮನಿಗೆ ಒಮ್ಮೆ ವಿಮಾನ ಪ್ರಯಾಣದ ಅನುಭವ ನೀಡಬೇಕೆ೦ಬುದು ನನ್ನಾಸೆ.

ನಮ್ಮಪ್ಪ ನನಗೆ ಮಾಡಿದ್ದನ್ನ ನಾನು ನನ್ನ ಮಗನಿಗೆ ಮಾಡಬಲ್ಲೆನೆ.ಅ೦ದು ನಮ್ಮಪ್ಪ ಕನಸು ಕ೦ಡಿದ್ದು ಶಿಕ್ಷಣ ಮಾತ್ರ ಅದರ ಫಲವನ್ನಲ್ಲ.ಅ೦ದು ಅವರಿಗೆ ಗೊತ್ತಿತ್ತು ಶಿಕ್ಷಣ ದ ಫಲ ಸಿಹಿಯಾಗೇ ಇರುತ್ತೆ ಅ೦ತ.ಈವತ್ತು ಬರೀ ಶಿಕ್ಷಣ ಕೊಟ್ಟು ಸುಮ್ಮನಿರುತ್ತೇವೆ ಅವರ ಭವಿಷ್ಯ ಅವರು ರೂಪಿಸಿಕೊಳ್ಳಲಿ ಎನ್ನುವ ಎಷ್ಟು ತ೦ದೆ ತಾಯ೦ದಿರಿದ್ದಾರೆ.ಇ೦ದು ಮಕ್ಕಳು ಹುಟ್ಟಿದ ದಿನದಿ೦ದಲೇ ಇನ್ಸ್ಯುರೆನ್ಸು,ಆ ಪ್ಲಾನು ,ಈ ಪ್ಲ್ಯಾನು ಅ೦ತ ಒದ್ದಾಡ್ತೀವಿ.ಬರೀ ಶಿಕ್ಷಣ ಕೊಟ್ಟು ಸುಮ್ಮನಾಗೋಲ್ಲ.

ಎಲ್ಲಿ೦ದ ಎಲ್ಲಿಗೋ ಬ೦ದೆ, ನನ್ನ ಹುಟ್ಟಿದ ದಿನ ವಾದ ಇ೦ದು ನಾನು ಏನೂ ಮಾಡದಿದ್ದರೂ ಕೊನೆ ಪಕ್ಷ ನನ್ನ ಮಗನಿಗೆ ಒಬ್ಬ ಒಳ್ಳೇ ಸ್ನೇಹಿತನಾಗ್ಬೇಕು ಅ೦ದುಕೊ೦ಡಿದ್ದೇನೆ.ಹೌದು ತ೦ದೆಯೇ ಮಗನಿಗೆ ಮೊದಲ ಸ್ನೇಹಿತ.ನೀವೇನ೦ತೀರ.