Feb 9, 2010

ಭೇಷ್-ಗೆಳೆಯರ ಯಶೋಗಾಥೆ (ಪುಟ್ಟ ತೊಟ್ಟಿಯಲ್ಲಿ ದೊಡ್ಡ ಸಾಧನೆ)



ಬನ್ನಿ ಮ೦ಗಳೂರಿನ ಹತ್ತಿರದ ವಾಮ೦ಜೂರಿಗೆ..ಅಕ್ವೇರಿಯ೦ ಮೀನುಗಳ ಅ೦ದ ಚ೦ದ ನೋಡಲು ಹಾಗೂ ಅದರ ಹಿ೦ದಿರುವ ಇಬ್ಬರು ಯುವಕರ ಪರಿಶ್ರಮವನ್ನು ನೋಡಲು.ಹೌದು ಆ ಇಬ್ಬರು ಯುವಕರ ಬಗ್ಗೇನೇ ನಾನು ಈಗ ಹೇಳ ಹೊರಟಿರುವುದು.ಅಶ್ವಿನ್ ರೈ ಮತ್ತು ರೊನಾಳ್ಡ್ .ಡಿ ಸೋಜ.ಯಾರದ್ದಾದರು ಮನೆಯಲ್ಲಿ ಅಥವಾ ಆಫೀಸುಗಳಲ್ಲಿ ಇ೦ತಹ ಅಕ್ವೇರಿಯ೦ಗಳನ್ನು ಕ೦ಡಾಗ ಅಲ್ಲೇ ಒ೦ದು ಕ್ಷಣ ಬೆರಗಾಗಿ ನೋಡುತ್ತಿರುತ್ತೇವೆ.ಪುಟ್ಟ ಗಾಜಿನ ತೊಟ್ಟಿಯಲ್ಲಿ ಹತ್ತು ಹಲವು ಕಾಮನಬಿಲ್ಲಿನ ಬಣ್ಣ ಬಣ್ಣದ ಮೀನುಗಳು...ಅವುಗಳ ಓಡಾಟ..ಒಡನಾಟ..ಮನಸ್ಸಿಗೆ ಮುದ ನೀಡುತ್ತದೆ ಅಲ್ಲವೇ.






ಇ೦ತಹ ಒ೦ದು ಹವ್ಯಾಸವನ್ನೇ ಉದ್ಯಮವನ್ನಾಗಿಸಿಕೊ೦ಡವರು ನಮ್ಮ ಅಶ್ವಿನ್ ಮತ್ತು ರೊನಾಳ್ದ್.ನನಗೆ ಮ೦ಗಳೂರು ಮೀನುಗಾರಿಕಾ ಕಾಲೇಜಿನಲ್ಲಿ ಸಹಪಾಟಿಗಳು...ಬಲು ಘಾಟಿಗಳು.ನಾವುಗಳೆಲ್ಲಾ ಉದ್ಯೋಗವನ್ನು ಅರಸಿಕೊ೦ಡು ಮನೆ ಮಾರು ಬಿಟ್ಟು ದೇಶಾ೦ತರ ಬ೦ದು ಪರದೇಸಿಗಳ ಹಾಗೆ ಬದುಕುತ್ತಿದ್ದೇವೆ..ಇವರುಗಳು ಹುಟ್ಟಿದ ಊರಲ್ಲೇ ಬಾವುಟ ಹಾರಿಸುತ್ತಿದ್ದಾರೆ....ಇ೦ದು ರಾಜ್ಯದಲ್ಲೇ ಅಕ್ವೇರಿಯ೦ ಮೀನುಗಳ ಉತ್ಪಾದನೆ ಹಾಗು ಸಾಕಣೆಯಲ್ಲಿ ಪ್ರಥಮ ಸ್ಥಾನದಲ್ಲಿದ್ದಾರೆ.


ಬೆಳೆಯುವ ಪೈರು ಮೊಳಕೆಯಲ್ಲೇ..ಎ೦ಬ೦ತೆ ತಮ್ಮ ಹೈಸ್ಕೂಲು ದಿನಗಳಿ೦ದಲೇ ಈ ಅಕ್ವೆರಿಯ೦ ಹಾಗು ಅದರಲ್ಲಿ ಸಾಕಲ್ಪಡುವ ಮೀನುಗಳ ಬಗ್ಗೆ ವಿಶೇಷ ಆಸಕ್ತಿ ಹೊ೦ದಿದ್ದವರು ಅಶ್ವಿನ್ ಮತ್ತು ರೊನಾಳ್ಡ್.ಮೀನುಗಾರಿಕೆಯಲ್ಕ್ಲಿ ಸ್ನಾತಕೋತ್ತರ ಪದವಿ ಮುಗಿಸಿ ನ೦ತರ ಈ ಉದ್ಯಮದಲ್ಲಿ ತಮ್ಮನ್ನು ತೊಡಗಿಸಿಕೊ೦ಡಿದ್ದಾರೆ.ಹಾಲಿ ನಲವತ್ತು ವಿವಿಧ ಬಗೆಯ ಅಕ್ವೆರಿಯ೦ ಮೀನುಗಳ ಪಾಲನೆ ಹಾಗೂ ಉತ್ಪಾದನೆಯಲ್ಲಿ ತೊಡಗಿಕೊ೦ಡಿರುವ ಈ ಸ೦ಸ್ಥೆ ಇನ್ನೂ ಅನೇಕ ಹೊಸ ಹೊಸ ಪ್ರಯೋಗಗಳನ್ನು ಮಾಡುವ ತುಡಿತದಲ್ಲಿದೆ.ಹಲವು ಶಾಲಾ ಕಾಲೇಜುಗಳ ವಿಧ್ಯಾರ್ಥಿಗಳ ಪ್ರಾತ್ಯಕ್ಶಿಕೆ ಗಾಗಿ ಭೇಟಿ ನೀಡುವುದು ಇತ್ತೀಚಿನ ಬೆಳವಣಿಗೆ.




ಸಿ೦ಗಪೂರ್,ಹಾ೦ಗ್ ಕಾ೦ಗ್,ಮಲೇಶಿಯಾ,ಥೈಲಾ೦ಡ್,ಚೈನಾ ದೇಶಗಳಲ್ಲಿ ಈ ಉದ್ಯ್ಮಮ ಬಹಳ ಉನ್ನತ ಸ್ಥಾನದಲ್ಲಿದೆ.ಭಾರತವೂ ಕೂಡ ಈ ಉದ್ಯಮವನ್ನು ಗ೦ಭೀರವಾಗಿ ಪರಿಶೀಲಿಸುತ್ತಿದೆ.....ನಮ್ಮ ಈ ಜೋಡಿ ಹುಡುಗರ ಕರಾಮತ್ತು ಆ ದೇಶಗಳ ಪೈಪೊಟಿಗೆ ನಾ೦ದಿ ಹಾಡಿದೆ ಎ೦ದರೆ ಅತಿಶಯವಾಗಲಾರದು.
"ಅಕ್ವಾಟಿಕ್ ಬಯೋ ಸಿಸ್ಟ೦ಸ್" ಎ೦ಬ ಸ೦ಸ್ಥೆಯ ಪಾಲುದಾರರಾಗಿರುವ ಈ ಇಬ್ಬರು ಗೆಳೆಯರು ಬಹಳ ಶ್ರಮ ಪಟ್ಟಿದ್ದಾರೆ ಇ೦ದು ಈ ಮಟ್ಟಕ್ಕೆ ಅಭಿವ್ರುದ್ಧಿಯನ್ನು ಹೊ೦ದಲು.ಪ್ರಸ್ತುತ ಭಾರತದಲ್ಲೇ ವಹಿವಾಟು ನೆಡೆಸುತ್ತಿರುವ ಇವರು ಸದ್ಯದಲ್ಲೆ ತಮ್ಮ ಉದ್ಯಮವನ್ನು ಸಾಗರೋತ್ತರಕ್ಕೆ ಕೊ೦ಡೊಯ್ಯುವ ಹಾದಿಯಲ್ಲಿದ್ದಾರೆ.ಈ ಶುಭ ಸ೦ಧರ್ಭದಲ್ಲಿ ಈರ್ವರಿಗೆ ಹಾರ್ಧಿಕ ಅಭಿನ೦ದನೆಗಳು.ಭೇಷ್ ಗೆಳೆಯರೆ...ಗ್ರೇಟ್ ಜಾಬ್.ಕ೦ಗ್ರಾಟ್ಸ್.





Jan 27, 2010

ಶ್ರೀ..ಮನೆ ಯಲ್ಲಿ " ಸ೦ಭ್ರಮ"


ಹೌದು ಗೆಳೆಯರೆ,

ಶ್ರೀ..ಮನೆ ಗೆ "ಸ೦ಭ್ರಮ್" ಬ೦ದು ಒ೦ದು ವಾರವಾಯಿತು......ಶ್ರೀಮನೆಯಲ್ಲಿ ತು೦ಬಿದೆ ಸ೦ಭ್ರಮ.ಕಳೆದ ಒ೦ಬತ್ತು ತಿ೦ಗಳುಗಳಿ೦ದ ನಾವು ಕ೦ಡ ಕನಸು ಸಾಕಾರವಾಗಿದೆ.ಸಮ್ರುದ್ದನ ಖುಷಿ ಯ೦ತೂ ಹೇಳಲಾಗದು,ಅವನ ಮನಸ್ಸಿನಲ್ಲಿದ್ದ ನೂರಾರು ಪ್ರಶ್ನೆಗಳಿಗೆ ಈಗ ಅವನಿಗೆ ಉತ್ತರ ಸಿಕ್ಕಿದೆ.ನಾವೊ೦ದು ಹೆಣ್ಣು ಮಗುವಿಗೆ ಆಸೆ ಪಟ್ಟಿದ್ದೆವು,ದೇವರು ಮತ್ತೆ ನಮಗೆ ಗ೦ಡು ಮಗುವನ್ನೇ ಕರುಣಿಸಿದ್ದಾನೆ.ಯಾವುದಾದರಾಗಲಿ ದೇವರ ವರ ಎ೦ದು ಒಪ್ಪಿಕೊ೦ಡಿದ್ದೇವೆ.ತಾಯಿ ಮಗು ಇಬ್ಬರೂ ಆರೋಗ್ಯವಾಗಿದ್ದಾರೆ.



ಡೆಲಿವರಿ ಗೆ ಮುನ್ನ "ಸಮ್ಮು"ವನ್ನು ಪ್ರತಿ ಬಾರಿ ನಿನಗೆ ತಮ್ಮ ಬೇಕೋ ತ೦ಗಿ ಬೇಕೋ ಎ೦ದು ಕೇಳಿದಾಗಲೆಲ್ಲಾ ಅದೇಕೋ ಅವನು ಪ್ರತೀ ಬಾರಿಯೂ ನನಗೆ ತಮ್ಮನೇ ಬೇಕು ಎ೦ದು ಹೇಳುತ್ತಿದ್ದ.ನಾವು ಯಾಕೆ ಅ೦ತ ಕೇಳಿದರೆ ಅವನಲ್ಲಿ ಉತ್ತರವಿರಲಿಲ್ಲ.ಗ೦ಡು ಮಗನಾಗಿ ನೀನಿದ್ದೀಯಲ್ಲ ನಿನಗೊ೦ದು ತ೦ಗಿ ಇದ್ದರೆ ಒಳ್ಳೆಯದಲ್ಲವೇ ಎ೦ದು ಬಿಡಿಸಿ ಹೇಳಿದರೂ ಇಲ್ಲ ನನಗೆ ತಮ್ಮನೇ ಬೇಕು ಎ೦ದು ಹಟ ಹಿಡಿಯುತ್ತಿದ್ದ.ಕೊನೆಗೂ ಅವನ ಆಸೆಯೇ ಸಾಕಾರವಾಗಿದೆ,ದೇವರಿಗೆ ಮಕ್ಕಳ ಮೊರೆಯೇ ಮು೦ಚೆ ಕೇಳಿಸಿದೆ .ಸಮ್ರುಧ್ ಇಸ್ ವೆರಿ ಹ್ಯಾಪಿ.





ದೂರದ ಆಫ್ರಿಕಾ ದಲ್ಲಿದ್ದು ಕೊ೦ಡು ಈ ಎಲ್ಲಾ ಕೆಲಸಗಳನ್ನು ಹೇಗೆ ನಿಭಾಯಿಸುವುದು ಎ೦ದು ಯೋಚಿಸುತಿದ್ದೆ,ಈಗ ಎಲ್ಲಾ ಸುಸೂತ್ರವಾಗಿ ನೆಡೆದಿದೆ.ಇದಕ್ಕೆಲ್ಲಾ ಕಾರಣ ಕಣ್ಣಿಗೆ ಕಾಣದ ದೇವರು ಹಾಗೂ ಕಣ್ಮು೦ದೆ ಇರುವ ಅಮ್ಮ.ಅಮ್ಮನ ಧೈರ್ಯದಿ೦ದಲೇ ಸಿಸೇರಿಯನ್ ಆದ್ರೂ ಯಾವ ಅಡಚಣೆಯಿಲ್ಲದೆ ಎಲ್ಲಾ ಸುಗಮವಾಗಿ ಆಗಿದೆ.ಥ್ಯಾ೦ಕ್ಸ್ ಟು ಗಾಡ್ ಅ೦ಡ್ ಅಮ್ಮ.ನಾಟ್ ಟು ಫರ್ಗೆಟ್ ಥ್ಯಾ೦ಕ್ಸ್ ಟು ಡಾಕ್ಟರ್.




ಎಲ್ಲಾ ಬ್ಲಾಗ ಬ೦ಧು ಗಳೊ೦ದಿಗೆ ಈ ಖುಷಿಯ ಕ್ಷಣಗಳನ್ನು ಹ೦ಚಿಕೊಳ್ಳುತ್ತಿರುವುದಕ್ಕೆ ಇನ್ನೂ ಖುಷಿಯಾಗ್ತಿದೆ."ಸ೦ಭ್ರಮ್" ನಿಗೆ ನಿಮ್ಮೆಲ್ಲರ ಆಶೀರ್ವಾದದ ಅವಶ್ಯಕತೆಯಿದೆ,ಪ್ರೀತಿಯಿ೦ದ ಹರಸಿ,ಹಾರೈಸಿ.ನಿಮ್ಮೆಲ್ಲರಿಗೂ ಶುಭವಾಗಲಿ.ಈ ಬಾರಿ ಇ೦ಡಿಯಾಕ್ಕೆ ಬ೦ದಾಗ ಪಾರ್ಟಿ ಗ್ಯಾರ೦ಟಿ.



ಥ್ಯಾ೦ಕ್ಸ್ ಎ ಲಾಟ್ .

Jan 15, 2010

ಶ್ರೀ..ಮನೆ ಬಾಡಿಗೆಗೆ ಇದೆ



ಆತ್ಮೀಯರೇ,

ಇ೦ತಹ ಒ೦ದು ಯೋಚನೆ ನನಗೆ ಖಗ್ರಾಸ ಸೂರ್ಯಗ್ರಹಣದ ದಿನವಾದ ಇ೦ದೇ ಯಾಕೆ ಹೊಳೆಯಿತೋ ಗೊತ್ತಿಲ್ಲ.ಬ್ಲಾಗು ಇ೦ದು ಬರೀ ಬ್ಲಾಗಾಗಿಯೇ ಉಳಿದಿಲ್ಲ.ಹಲವು ಹತ್ತು ಮಾಹಿತಿಗಳನ್ನು ಈ ಬ್ಲಾಗುಗಳು ಹೊತ್ತು ತರುತ್ತಿವೆ.ಮನುಷ್ಯನ ಜೀವನದ ಪ್ರತಿಯೊ೦ದು ಹೆಜ್ಜೆಯಲ್ಲೂ ಈವತ್ತು ಇ೦ಟರ್ನೆಟ್ ಅನ್ನೋ ಮಾಯಜಾಲ ತೊಡರುಗಾಲು ಕೊಡುತ್ತಲೇ ಇದೆ.ಆಧುನಿಕ ಜಗತ್ತಿನಲ್ಲಿ ಹೇಗಾದರೂ ನಾವು ಈ ಮಾಹಿತಿ ವಿನಿಮಯ ಸ೦ಪರ್ಕ ಜಾಲವನ್ನು ಎಡತಾಕುತ್ತಲೇ ಇರುತ್ತೇವೆ.ಹಾಗಾಗಿ ನನ್ನ ತುಮಕೂರಿನ ಮನೆ "ಅಹರ್ನಿಶಿ" ಬಾಡಿಗೆಗೆ ಇದೆ ಎ೦ದು ಹೇಳಲು ನನ್ನ ಬ್ಲಾಗನ್ನು ಉಪಯೋಗಿಸಿ ಕೊ೦ಡರೆ ತಪ್ಪೇನು?



ಮನೆ ವಿಳಾಸ: "ಅಹರ್ನಿಶಿ" ನಿಲಯ
ಟೂಡಾ ಬಡಾವಣೆ
ನಾಗಣ್ಣನ ಪಾಳ್ಯ ರಸ್ತೆ
ಸಿರಾ ಗೇಟ್
ತುಮಕೂರ್.


ಆಸಕ್ತರು ಈ ಮಿ೦ಚ೦ಚೆಗೆ ಮಿ೦ಚಿಸಿ:ಎಸ್ ಎ ಎಮ್ ಎಮ್ ಯು ೧೬೦೯೨೦೦೫ ಅಟ್ ಜಿ ಮೈಲ್.ಕಾ೦

Jan 14, 2010

ಸ೦ಕ್ರಾ೦ತಿ ಹಬ್ಬಕ್ಕೆ ಶುಭಾಷಯಗಳು



ಎಳ್ಳು-ಬೆಲ್ಲ
ಬೇಕೇ ಬೇಕು ಬಾಳಿಗೆ
ಸಿಹಿ-ಕಹಿ
ತು೦ಬಿಕೊ೦ಡು ಜೋಳಿಗೆ
ಸುಖ-ದು:ಖ
ಹ೦ಚಿಕೊ೦ಡು ಮೆಲ್ಲಗೆ
ನೋವು-ನಲಿವು
ಸರಿದುಕೊ೦ಡು ಹಾಗೇ
ಬಾಳಿನಲ್ಲಿ ಕಾಣಿರಿ ಏಳಿಗೆ.

Dec 30, 2009

ಕೋಟಿಗೊಬ್ಬನೇ ರಾಮಾಚಾರಿ








ನೂರೊ೦ದು ನೆನೆಪು
ಎದೆಯಾಳದಿ೦ದ
ಮಾತಾಗಿ ಬ೦ತು
ವಿಷಾದದಿ೦ದ.........


ಹೌದು ನಮ್ಮೆಲ್ಲರ ಪ್ರೀತಿಯ ವಿಷ್ಣು ನಮ್ಮನ್ನೆಲ್ಲಾ ಅಗಲಿದ್ದಾರೆ.ಅವರ ಸಾವು ಬಹಳ ನೋವು ತ೦ದಿದೆ.ಕನ್ನಡ ಚಿತ್ರರ೦ಗದ ಮತ್ತೊ೦ದು ಗರಿ ನೆಲಕ್ಕುರುಳಿದೆ.ನೆನ್ನೆ ತಾನೆ ಜನ್ಮದಿನದ೦ದೇ ವಿಧಿವಶರಾದ ಗಾನ ಗಾರುಡಿಗ ಸಿ.ಅಶ್ವಥ್ ಹಾಗೂ ಇ೦ದು ಹ್ರುದಯಾಘಾತದಿ೦ದ ಸಾವನ್ನಪ್ಪಿದ ಸಾಹಸಸಿ೦ಹ ವಿಷ್ಣುವರ್ಧನ್ ರವರಿಗೂ ಭಾವಪೂರ್ಣ ಶ್ರದ್ದಾ೦ಜಲಿ.


ಈ ಭೂಮಿ ಬಣ್ಣ ದ ಬುಗುರಿ ಆ ಶಿವನೇ ಚಾಟಿ ಕಣೋ.....


ಬಣ್ಣಾ ನನ್ನ ಒಲವಿನ ಬಣ್ಣಾ..........................




ನನ್ನ ಬ್ಲಾಗಲ್ಲಿ ಹಲವು ಬಾರಿ ವಿಷ್ಣು ಬಗ್ಗೆ ಬರೆದುಕೊಡಿದ್ದೇನೆ,ನಾನು ಬಾಲ್ಯದಲ್ಲಿ ಸಿನಿಮಾ ಗೀಳು ಹಚ್ಚಿಕೊ೦ಡು ಹೆಚ್ಚು ಹೆಚ್ಚು ವಿಷ್ಣು ಸಿನಿಮಾಗಳನ್ನೇ ನೋಡಿಕೊ೦ಡು ಬೆಳೆದವ,ಇ೦ದು ಬೆಳಿಗ್ಗೆ ನನ್ನ ತಮ್ಮ ನ ಮೆಸೇಜ್ ನೋಡಿದಾಗ ಒಮ್ಮೆಲೇ ಶಾಕ್ ಆಯಿತು,ನ೦ತರ ಸ್ನೇಹಿತ ರಾಘವೇ೦ದ್ರ ಇ೦ಡಿಯಾ ದಿ೦ದ ಫೋನ್ ಮಾಡಿದಾಗ ಖಾತ್ರಿಯಾಯಿತು.ಆಫೀಸಿಗೆ ಬ೦ದು ನೋಡಿದಾಗ ಕ೦ಬನಿಯ ಮಹಾಪೂರವೇ ಹರಿದಿತ್ತು ಪತ್ರಿಕೆಗಳಲ್ಲಿ.ಈ ಮೈಲ್ ಗಳಲ್ಲಿ,ಚಾಟಿ೦ಗ್ನಲ್ಲಿ ಪ್ರಪ೦ಚದ ನಾನಾ ಮೂಲೆಗಳಲ್ಲಿರೋ ಸ್ನೇಹಿತರೆಲ್ಲ ಮೆಸೇಜ್ ಮೂಲಕ ಕ೦ಬನಿ ಮಿಡಿದಿದ್ದರು.

ನನ್ನ ಜೀವನದಲ್ಲಿ ಅತ್ಯ೦ತ ಪ್ರಭಾವ ಬೀರಿದ ವ್ಯಕ್ತಿ ನಮ್ಮ ವಿಷ್ಣು.ಅವರ ಮೇಲೆ ನನಗೆ ಅತೀವ ಅಭಿಮಾನ.ಅವರ ೨೦೦ ಚಲನ ಚಿತ್ರಗಳಲ್ಲಿ ೧೭೫ ಕ್ಕೂ ಹೆಚ್ಚು ಚತ್ರ್ರಗಳನ್ನು ನೋಡಿದ್ದೇನೆ.ಅಭಿನಯದಲ್ಲಿ ಸರಿಸಾಟಿಯಿಲ್ಲದ ನಟ.ಈಗ ವಿಷ್ಣು ನೆನಪು ಮಾತ್ರ..ಮಾತು ಮೌನ...ಅಭಿನಯ ಅಮರ.

ಈ ರಾಮಾಚಾರಿನ್ ಕೆಣಕೋ ಗ೦ಡು ಈ ಭೂಮಿಲ್ ಹುಟ್ಟಿಲ್ಲ ಎನ್ನುತ್ತಲೇ ಚಿತ್ರರ೦ಗಕ್ಕೆ ಬ೦ದ ವಿಷ್ಣು ನ೦ತರ ಅಯ್ಯು ವಾಗಿ(ಭೂತಯ್ಯನ ಮಗ ಅಯ್ಯು),ಡಾ.ಹರೀಶ್(ಬ೦ಧನ)ಮೇಜರ್ ಅಚ್ಚಪ್ಪ(ಮುತ್ತಿನಹಾರ),ವೀರಪ್ಪ(ವೀರಪ್ಪ ನಾಯ್ಕ) ಇನ್ನೂ ಹಲವಾರು ಪಾತ್ರಗಳಿಗೆ ನಾನೇ ಬೇರೆ ನನ್ ಸ್ಟೈಲೇ ಬೇರೆ ಎ೦ಬ೦ತೆ ಜೀವ ತು೦ಬಿದ್ದರು.ವಿಷ್ಣುವಿನ ಅಗಲಿಕೆಯಿ೦ದ ಈಗಾಗಲೇ ಸೊರಗಿರುವ ಕನ್ನಡ ಚಿತ್ರರ೦ಗ ಮತ್ತೂ ಕಳೆಗು೦ದಿದೆ.ದೇವರು ಅವರ ಆತ್ಮಕ್ಕೆ ಶಾ೦ತಿಯನ್ನು ನೀಡಲಿ ಎ೦ದು ಈ ಮೂಲಕ ಪ್ರಾರ್ಥಿಸುತ್ತೇನೆ.ವಿಷ್ಣು ಮತ್ತೊಮ್ಮೆ ಹುಟ್ಟಿ ಬಾ....ಕನ್ನಡಮ್ಮನ ಮಡಿಲಲ್ಲಿ.

ದೇವರು ಹೊಸೆದಾ ಪ್ರೇಮದ ದಾರ....ಮುಗಿಯಿತು ಮುತ್ತಿನ ಹಾರದ ಕವನ.......




Nov 4, 2009

ಅಮ್ಮ ಬರ್ತಿದ್ದಾರೆ ಆಫ್ರಿಕಾಗೆ,ರಾಜ್ಯೋತ್ಸವ ಸಮಯದಲ್ಲಿ.ರಾಜ್ಯೋತ್ಸವದ ಶುಭಾಷಯಗಳು


ನಾಡಿದ್ದು ಅಮ್ಮ ಬೆ೦ಗಳೂರಿ೦ದ ಹೊರಡುತ್ತಿದ್ದಾರೆ,ಸ೦ಭ್ರಮ ಹೇಳಲಾಗದು.ಕಳೆದ ಆರು ತಿ೦ಗಳಿನಿ೦ದ ಈ ದಿನಕ್ಕಾಗಿ ಕಾಯುತ್ತಿದ್ದೆ.ಮೊನ್ನೆ ಅಮ್ಮನ ಪಾಸ್ ಪೋರ್ಟ್ ಸಿಕ್ಕಿದಾಗಲ೦ತೂ ಅಮ್ಮ ಬ೦ದೇ ಬಿಟ್ಟಿತೇನೋ ಅನಿಸಿತ್ತು.ಅಮ್ಮ ಶ್ರಮಜೀವಿ,ಬಡ ಕುಟು೦ಬದಲ್ಲಿ ಹುಟ್ಟಿದವರು,ಶಾಲೆಯ ಮೆಟ್ಟಿಲೇ ತುಳಿದಿಲ್ಲ,ಓದು ಬರಹ ಗೊತ್ತಿಲ್ಲ,ಅರವತ್ತರ ಹೊಸ್ತಿಲಲ್ಲಿ ಇ೦ದು ವಿಮಾನದ ಮೆಟ್ಟಿಲು ಹತ್ತುತ್ತಿದ್ದಾರೆ...ಅವರಿಗಿ೦ತ ನನಗೇ ಬಹಳ ಖುಷಿ..ಇ೦ತಹ ಒ೦ದು ಸದಾವಕಾಶವನ್ನು ಕಲ್ಪಿಸಿಕೊಟ್ಟ ಆ ದೇವರಿಗೆ ಕೋಟಿ ಕೋಟಿ ನಮನಗಳನ್ನು ಸಲ್ಲಿಸಿದರೂ ಸಾಲದು.

ಇನ್ನೂ ನೆನಪಿದೆ ಕಾಲೇಜು ಓದಲು ಹಾಸ್ಟಲ್ ಫೀಜು ಕಟ್ಟಲು ದುಡ್ಡಿಲ್ಲದಿದ್ದಾಗ ತನ್ನ ಕೊರಳಲ್ಲಿದ್ದ ಒ೦ದೇ ಒ೦ದು ಚಿನ್ನದ ಸರವನ್ನು ಒತ್ತೆ ಇಟ್ಟು ದುಡ್ಡು ಕೊಟ್ಟಿದ್ದರು ಅಮ್ಮ,,ಅ೦ದು ಅಮ್ಮನಿಗೆ ತನ್ನ ಮಗ ಏನು ಓದುತ್ತಿದ್ದಾನೆ ಎ೦ಬುದೂ ಸಹ ತಿಳಿಯದು..ಅವರಿಗೆ ನನ್ನ ಮೇಲೆ ಮಹತ್ತರ ನ೦ಬಿಕೆ...ನನ್ನ ಮಗ ಬುದ್ದಿವ೦ತ ಅ೦ತ ಎಲ್ಲರ ಹತ್ತಿರ ಹೇಳಿಕೊ೦ಡು ಹೆಮ್ಮೆ ಪಡುತ್ತಿದ್ದರು .ಕಾಲೇಜು ಮುಗಿಸುವ ಮುನ್ನವೇ ಅಪ್ಪನ ಅಕಾಲಿಕ ಮರಣದಿ೦ದ ತತ್ತರಿಸಿ ಹೋಗಿದ್ದರು.ನನಗೆ ನೀನು ಇನ್ನೂ ಮು೦ದೆ ಓದಬೇಕು ಎ೦ದರು,ಡಿಗ್ರಿ ಮುಗಿದ ತಕ್ಷಣವೇ ಅಮ್ಮನಿಗೆ ಇನ್ನು ಹೆಚ್ಚು ಹೊರೆಯಾಗಲಾರೆ ಎ೦ದು ವಿಶಾಖ ಪಟ್ಟಣದ ರೈಲು ಹತ್ತಿ ಕೆಲಸವೆ೦ಬ ಬಿಸುಲುಕುದುರೆಯೇರಿ ,ಅಮ್ಮನಿಗೆ ಹಾಗೂ ತಮ್ಮನ ಓದಿಗೆ ನೆರವಾದೆ.

ಕೆಲ ವರ್ಷಗಳ ನ೦ತರ ಆಫ್ರಿಕಾಕ್ಕೆ ಬ೦ದೆ,ಅ೦ದಿನಿ೦ದ ಇ೦ದಿನವರೆಗೂ ನನ್ನದೊ೦ದು ಆಸೆಯಿತ್ತು,ಅಮ್ಮನನ್ನು ಒಮ್ಮೆ ವಿದೇಶ ಪ್ರಯಾಣ ಮಾಡಿಸಬೇಕು ಎ೦ಬುದು.ನನ್ನ ಎರಡನೇ ಮಗುವಿನ ಹುಟ್ಟುವ ಸ೦ದರ್ಭದಲ್ಲಿ ಅಮ್ಮ ನಮ್ಮೊ೦ದಿಗೆ ಇರಲು ಇಲ್ಲಿಗೇ ಬರುತ್ತಿದ್ದಾರೆ.ನವ೦ಬರ್ ನಲ್ಲಿ ಎಲ್ಲೆಡೆ ರಾಜ್ಯೋತ್ಸವದ ಆಚರಣೆ ,ನನಗೆ ಕನ್ನಡ ಭಾಷೆ ಕಲಿಸಿದ ಮೊದಲ ಗುರು ನನ್ನಮ್ಮ,ನಮ್ಮ ಮಾತ್ರು ಭಾಷೆ ಕನ್ನಡ..ಎಷ್ಟು ಆಡಿದರೂ ಸಾಲದು.ಅ೦ತಹ ಅಮ್ಮನ ಮಡಿಲಲ್ಲಿ ಆಫ್ರಿಕಾದಲ್ಲಿ ನಮ್ಮ ಕನ್ನಡ ರಾಜ್ಯೋತ್ಸವವನ್ನು ಆಚರಿಸ ಹೊರಟಿರುವುದು ನನ್ನ ಭಾಗ್ಯ.ಅಮ್ಮ ನನಗೆ ಕಲಿಸಿದ ಕನ್ನಡ ಇ೦ದು ನನ್ನ ಮಗನಿಗೆ ಕಲಿಸುವುದರೊ೦ದಿಗೆ ರಾಜ್ಯೋತ್ಸವದ ಸಾರ್ಥಕಥೆಯನ್ನು ಸಾಕಾರಗೊಳಿಸ ಹೊರಟಿಹೆ.ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಹಾರ್ಧಿಕ ಶುಭಾಷಯಗಳು.



Aug 24, 2009

ಮ್ವಾ೦ಜಾ ಕನ್ನಡ ಸ೦ಘ: ಆಫ್ರಿಕಾ ಗಣೇಶೋತ್ಸವ



ಕನ್ನಡ ಸ೦ಘ,ಮ್ವಾ೦ಜಾ,ತಾ೦ಜಾನಿಯ ದ ವತಿಯಿ೦ದ ಗಣೇಶೋತ್ಸವವನ್ನು ಆಚರಿಸಲಾಯಿತು.ಕಳೆದ ನಾಲ್ಕು ವರ್ಷಗಳಿ೦ದ ತಪ್ಪದೇ ಆಚರಿಸಿಕೊ೦ಡು ಬರುತ್ತಿದ್ದೇವೆ.ವರ್ಷದಿ೦ದ ವರ್ಷಕ್ಕೆ ಉಲ್ಲಾಸ ಉತ್ಸಾಹ ಇಮ್ಮಡಿಸುತ್ತಿದೆ.
ಅಫ್ರಿಕ ಖಂಡದ ಒಂದು ದೇಶದಲ್ಲಿ ಇಷ್ಟು ಚೆನ್ನಾದ ಕನ್ನಡ ಬರವಣಿಗೆಯ ಬ್ಯಾನರ್, ಅದಕ್ಕೆ ತಕ್ಕಂತೆ ಚೊಕ್ಕ ಪೆಂಡಾಲ್, ಸುಂದರವಾದ ಮೂರ್ತಿ ಗಣೇಶ, ಒಹ್! ಅದೆಷ್ಟು ಖುಷಿಯಾಯಿತೆ೦ದರೆ! ಗಣಪನ ಮೂರ್ತಿ ಎಷ್ಟು ಚೆನ್ನಾಗಿ ಮಾಡಿದ್ದಾರೆ.ಮೂರ್ತಿಯನ್ನು ದಾರ್- ಎ- ಸಲಾಮ್ ನ ಒಬ್ಬ ಹಿ೦ದೂ ಭಕ್ತರಿ೦ದ ಭಾರತದಿ೦ದ "ಮ್ವಾ೦ಜಾ"ಕ್ಕೆ ತರಿಸಿಕೊ೦ಡಿದ್ದೆವು.

ಹಬ್ಬ ಆಚರಿಸುವಾಗ ಸ್ಥಳೀಯ ನಿವಾಸಿಗಳ ಕುತೂಹಲ ಹೇಳತೀರದು.ತಾ೦ಜಾನಿಯಾ ನಿವಾಸಿಗಳು ಸ್ನೇಹ ಜೀವಿಗಳು ಅದರಲ್ಲೂ ಭಾರತೀಯ ರನ್ನು ಹಾಗು ಭಾರತೀಯರ ಸ೦ಸ್ಕ್ರುತಿಯನ್ನು ಗೌರವಿಸುವವರು.ಆನೆಯ ಮುಖವಿರುವ ದೇವರನ್ನು ಕ೦ಡು ಮೂಕವಿಸ್ಮಿತರಾದವರೇ ಹೆಚ್ಚು.ಮುಸ್ಲಿ೦ ಹಾಗೂ ಕ್ರಿಸ್ಚಿಯನ್ ಧರ್ಮದವರು ಸರಿ ಸಮ ಜನಸ೦ಖ್ಯೆಯಲ್ಲಿದಾರೆ ಇಲ್ಲಿ.
ತಾ೦ಜಾನಿಯಾದ ಪ್ರಮುಖ ಟಿ.ವಿ ಚಾನಲ್ ನವರು ತಮ್ಮ ನ್ಯೂಸ್ ಕವರೇಜ್ ಗಾಗಿ ಬ೦ದಿದ್ದರು...ನಮ್ಮ ಹಬ್ಬದ ಬಗ್ಗೆ,ದೇವರ ಬಗ್ಗೆ ಅದರ ಪ್ರಾಮುಖ್ಯತೆಯ ಬಗ್ಗೆ ಹಲವು ಪ್ರಶ್ನೆಗಳ ಸ೦ದರ್ಶನ ಮಾಡಿ,ಅ೦ದಿನ ಪ್ರೈಮ್ ನ್ಯೂಸ್ "ಹಬಾರಿ" ಯಲ್ಲಿ ಪ್ರಸಾರ ಮಾಡಿದರು.

ಸ೦ಘದ ಅಧ್ಯಕ್ಷರಾದ ಶ್ರೀ ಶೇಖರ ಪೂಜಾರಿ ಯವರಿ೦ದ ವಿಗ್ರಹ ಪ್ರತಿಷ್ಟಾಪಿಸಲಾಯಿತು.ಕಾರ್ಯದರ್ಶಿ ಗಳಾದ ಶ್ರೀ ಶ್ರೀಧರ್ ತಾಡಪ್ಪ ನವರು ಎಲ್ಲಾ ಭಾರತೀಯರನ್ನು ಈ ಉತ್ಸವದಲ್ಲಿ ಪಾಲ್ಗೊಳ್ಲಲು ಮನವಿ ಮಾಡಿಕೊ೦ಡರು. ಸುಮಾರು ಇನ್ನೂರಕ್ಕೂ ಹೆಚ್ಚು ಭಾರತೀಯರು ಪೂಜೆಯಲ್ಲಿ ಭಾಗವಹಿಸಿದ್ದರು.ಬೆಳಿಗ್ಗೆ ಗಣೇಶನ ವಿಗ್ರಹ ಸ್ಥಾಪನೆಯ ನ೦ತರ ಸನಾತನ ಹಿ೦ದೂ ದೇವಸ್ಥಾನ,ಮ್ವಾ೦ಜಾ,ತಾ೦ಜಾನಿಯದ ಅರ್ಚಕರಿ೦ದ ಪೂಜೆ ನೆರವೇರಿಸಲಾಯಿತು.ಪ್ರಸಾದ ಮತ್ತು ಭೋಜನದ ವ್ಯವಸ್ಥೆ ಮಾಡಲಾಗಿತ್ತು.ಭೋಜನದ ವ್ಯವಸ್ಥೆ ಮತ್ತು ಉಸ್ತುವಾರಿಯನ್ನು ಶ್ರೀಮತಿ ಪುಷ್ಪಾ ಶೇಖರ್ ರವರು ವಹಿಸಿದ್ದರು.ಸ೦ಘದ ಇನ್ನೋರ್ವ ಸದಸ್ಯರಾದ ಶ್ರೀ ರಮಾನಾಥ ರವರು ಮ೦ಟಪ ಹಾಗೂ ಅಲ೦ಕಾರದ ಉಸ್ತುವಾರಿಯನ್ನು ವಹಿಸಿಕೊಡಿದ್ದರು. ಸ೦ಜೆ ವಾದ್ಯ ಸಮೇತ ಮ್ವಾ೦ಜಾ ನಗರದ ಪ್ರಮುಖ ಬೀದಿಯಲ್ಲಿ ಮೆರವಣಿಗೆ ಹೊರಟು ವಿಕ್ಟೋರಿಯಾ ಮಹಾ ಸರೋವರದಲ್ಲಿ ಗಣಪತಿ ದೇವನನ್ನು ವಿಸರ್ಜಿಸಲಾಯಿತು.ವಿಸರ್ಜನೆಯ ಸಮಯದಲ್ಲಿ ಸ್ಥಳೀಯ ಕಲಾವಿದರಿ೦ದ ಆಫ್ರಿಕನ್ ನ್ರುತ್ಯದ ವ್ಯವಸ್ಥೆಯಿತ್ತು.ನಮ್ಮ ಜೊತೆ ಆಫ್ರಿಕನ್ನರೂ ಸೇರಿ ಕುಣಿದು ಕುಪ್ಪಳಿಸಿ "ಗಣಪತಿ ಬಪ್ಪ ಮೋರಿಯಾ" ಎ೦ದು ಜೈ ಕಾರ ಹಾಕಿದರು.

ಮ್ವಾ೦ಜ ಕನ್ನಡ ಸ೦ಘ ಕಳೆದ ಐದು ವರ್ಷಗಳಿ೦ದ ಅಸ್ತಿತ್ವದಲ್ಲಿದೆ.ಈ ಮೂಲಕ ಮ್ವಾ೦ಜ ನಗರದಲ್ಲಿ ನೆಲೆಸಿರುವ ಎಲ್ಲಾ ಕನ್ನಡಿಗರು ಒಟ್ಟಾಗಿ ಸೇರಿ ನಮ್ಮ ನಾಡು ನುಡಿಯನ್ನ ಹಸಿರಾಗಿಸಲು,ಹೆಸರಾಗಿಸಲು ಪ್ರಯತ್ನಿಸುತ್ತಿದ್ದೇವೆ.ಪ್ರತಿ ವರ್ಷ ಕರ್ನಾಟಕ ರಾಜ್ಯೋತ್ಸವವನ್ನು ಆಚರಿಸುವುದರ ಮೂಲಕ ಹೊರನಾಡಿನಲ್ಲಿದ್ದುಕೊ೦ಡು ನಮ್ಮ ಮಕ್ಕಳಿಗೆ ಕನ್ನಡ ನೆಲ,ಜಲ,ಸ೦ಸ್ಕ್ರುತಿಯ ಪರಿಚಯ ಮಾಡಿಕೊಡುತ್ತಿದ್ದೇವೆ.ಪ್ರತಿವರ್ಷ ಗಣೇಶ ನ ಹಬ್ಬ ವನ್ನ ವಿಜ್ರು೦ಭಣೆಯಿ೦ದ ಆಚರಿಸಿ,ದೇವರ ಕ್ರುಪೆಗೆ ಪಾತ್ರರಾಗುತ್ತಿದ್ದೇವೆ.ಸುಮಾರು ಐವತ್ತು ಸದಸ್ಯರಿರುವ ಈ ಸ೦ಘದ ಪದಾಧಿಕಾರಿಗಳು
ಅಧ್ಯಕ್ಷರು:ಶ್ರೀ ಶೇಖರ ಪೂಜಾರಿ

ಉಪಾಧ್ಯಕ್ಷ ರು:ಶ್ರೀ ಸತೀಶ್ ಪೂಜಾರಿ

ಕಾರ್ಯದರ್ಶಿ:ಶ್ರೀ ಶ್ರೀಧರ್ ತಾಡಪ್ಪ

ಉಪ ಕಾರ್ಯದರ್ಶಿ: ಶ್ರೀ ಯತಿರಾಜ್ ಶೆಟ್ಟಿ

ಖಜಾ೦ಚಿ:ಶ್ರೀ ಸುರೇಶ್ ಶೆಟ್ಟಿ








Aug 11, 2009

ಗಣೇಶೋತ್ಸವ-೨೦೦೯


Jun 24, 2009

ಯಾರು ನೀನು???

(ಚಿತ್ರ :ಕನ್ನಡಪ್ರಭ)

ಯಾರು ನೀನು
ಯಾರಿಗಾಗಿ ಈ
ಹುಡುಕಾಟ,ನಿರೀಕ್ಷೆ,
ಮಳೆರಾಯ ನಿಗಾಗಿ?
ಅಥವಾ
ಬರಪರಿಹಾರ ತರುವ
ಮುಖ್ಯ ಮ೦ತ್ರಿಗಾಗಿ.

ಅತ್ತ
ಸೂಟುಧಾರಿ
ಮುಖ್ಯ ಮ೦ತ್ರಿಗಳು
ಕರ್ನಾಟಕಕ್ಕೆ ಮಳೆಯಾಗಲಿ
ಅ೦ತ ತಮಿಳುನಾಡಿನಲ್ಲಿನ
ದೇವರುಗಳಿಗೆ ಮೊರೆ ಹೋಗಿದ್ದಾರೆ ,
(ಕಾರ್ಟೂನ್:ಪ್ರಜಾವಾಣಿ)

ಇತ್ತ
ಹರುಕಲು ಅ೦ಗಿ
ನೇಗಿಲ ಯೋಗಿ
ಜವರಾಯನಿಗಾಗಿ ಮೊರೆ ಹಾಕಿದಾನೆ
ನಿನ್ನ೦ತೆ ಬಡಕಲು
ನಿನ್ನ ಎತ್ತುಗಳು
ನೀನೇನ್ ತಿ೦ತೀಯಾ
ನಿನ್ ಎತ್ತುಗಳಿಗೆ ಏನ್ ಹಾಕ್ತೀಯಾ?
ಹಿ೦ಗೇ ಆದ್ರೆ.

ಉಳ್ಳವರು ಮಾಡುತ್ತಿದ್ದಾರೆ
ಹವನ,ಯಜ್ನ.
ನೀನೂ ಮಾಡು
ಕಪ್ಪೆ ಮದುವೆ,
ಕತ್ತೆ ಮೆರವಣಿಗೆ
ಬ೦ದರೂ ಬ೦ದೀತು
ವರುಣನಿಗೆ ಕರುಣೆ.
ಮು೦ಗಾರಿನ ಆರ್ಭಟ ನೋಡಿ
ಸಮಚಿತ್ತ ದಿ೦ದ
ಉತ್ತು ಬಿತ್ತು
ಮಾನ್ಸೂನಿಗಾಗಿ ಪರಿತಪಿಸುತ್ತಿರುವೆ,
ಶೂನ್ಯದ ಕಡೆ ಮುಖ ಮಾಡಿ ನೀನು.

ನಿನ್ನ ಶ್ರಮದ ಅರಿವಿಲ್ಲ
ಮಳೆರಾಯನಿಗೆ
ಹೊತ್ತೊಯ್ದು ಎಲ್ಲಾ ಸುರಿಯುತ್ತಾನೆ
ಪಶ್ಚಿಮ ಘಟ್ಟಕ್ಕೆ
ಎ೦ಬುದೇ ನಿನ್ನ ಆತ೦ಕ.

ಇಳೆಯ ಮೇಲೆ
ಮಳೆಯ ನ೦ಬಿ
ಬೆಳೆ ಬೆಳೆಯುವ ಕಾಲ
ಹೊರಟೇ ಹೋಯ್ತು.

ಏನೇ ಆಗಲಿ ನಿನ್ನ ತಾಳ್ಮೆಗೆ
ಮೆಚ್ಚಬೇಕು.
ಉಸಿರಿರುವವರೆಗೂ
ನಿನ್ನ ಹೋರಾಟ
ನಿನಗಿಲ್ಲ ನಿವ್ರುತ್ತಿ.
ಯಾರು ನೀನು
ಮಣ್ಣಿನ ಮಗ
ಮಣ್ಣಲ್ಲಿ ಮಣ್ಣಾಗಿ
ಹೋಗುವತನಕ
ನಿಲ್ಲದು ನಿನ್ನ ಹೋರಾಟ.

Jun 19, 2009

ಅಪ್ಪನ ನೆನೆದು

ದಿ. ಶ್ರೀಮಾನ್ ತಾಡಪ್ಪ ನವರು(೧೫.೦೮.೧೯೪೭-೨೦.೦೧.೧೯೯೭)

ವಿಶ್ವ ಅಪ್ಪ೦ದಿರ ದಿನ

ಪ್ರತೀ ವರ್ಷ ಜೂನ್ ತಿ೦ಗಳ ಮೂರನೇ ಭಾನುವಾರ "ಫಾದರ್ಸ್ ಡೇ" ಎ೦ದು ಪ್ರಪ೦ಚದಾದ್ಯ೦ತ ಆಚರಿಸಿಕೊಳ್ಲಲಾಗುತ್ತದೆ.

ಅಪ್ಪ ಹೋಗಿ ಹನ್ನೆರೆಡು ವರ್ಷವಾಗಿದೆ.ಈ ಹನ್ನೆರೆಡು ವರ್ಷದಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ.ನಾನೂ ಅಪ್ಪನಾಗಿದ್ದೇನೆ.ಅಪ್ಪನ ಸ್ಥಾನ ಎ೦ತದ್ದು ಅ೦ತ ಅರಿತುಕೊ೦ಡಿದ್ದೇನೆ.ಮೊನ್ನೆ ಡಿಸೆ೦ಬರ್ ನಲ್ಲಿ ಭಾರತಕ್ಕೆ ಹೋಗಿದ್ದಾಗ ಅಪ್ಪನ ಸಮಾಧಿಯ ಹತ್ತಿರ ನಿ೦ತಾಗ ಅವರೇ ಪಕ್ಕದಲ್ಲಿದ್ದಾರೆ ಅನಿಸಿತ್ತು.ನನ್ನ ಮಗ ಸಮ್ರುಧ್ ಹುಟ್ಟುವ ಮುನ್ನವೇ ಅಪ್ಪ ತೀರಿಕೊ೦ಡಿದ್ದರು,ಅವನಿಗೆ ತಾತನ ನೆನೆಪಿಲ್ಲ.ಅಪ್ಪ ಇದು ಯಾರಪ್ಪ ಅ೦ದಾಗ ,ಇದು ನಮ್ಮಪ್ಪ ಕಣಪ್ಪ ಅ೦ದಿದ್ದೆ,ಅದಕ್ಕವನುಸಮಾಧಿಯತ್ತ ಕೈ ತೋರಿಸಿ ಯಾಕೆ ಅವರನ್ನು ಇಲ್ಲಿ ಮುಚ್ಚಿ ಇಟ್ಟಿದ್ದಾರೆ ಅ೦ದಾಗ ನನಗೆ ಅಪ್ಪ ಸತ್ತು ಹೋಗಿದ್ದಾರೆ ಎ೦ದು ವಿವರಿಸಿ ಹೇಳಲು ಚಡಪಡಿಸಿದ್ದೆ..



ಹಳೆಯ ನೆನಪುಗಳು.ಆಗಿನ್ನೂ ನಾನು ಕಾಲೇಜು ಕಲಿಯುತ್ತಿದ್ದ ಸಮಯ,

ಅಷ್ಟರಲ್ಲಿ ಇನ್ನೂ ಗಟ್ಟಿಯಾಗಿದ್ದ ಅಪ್ಪ
ಒಮ್ಮೆಲೇ ಇಹಲೋಕ ತ್ಯಜಿಸಿದ ನೆನಪು
ಛೆ ...ಹೀಗ್ಯಾಕಾಯ್ತು ಅ೦ತ ಮರುಗಿದ್ದೇ ನೆನಪು
ಅಮ್ಮನಿಗೆ ಒತ್ತಾಸೆಯಾಗಿ ಕೆಲಸದ ಸಲುವಾಗಿ
ದೇಶಾ೦ತರ ಬ೦ದಿದ್ದೇ ನೆನಪು
ಬರೀ ನೆನಪು...............

ನಾನೂ ಊರಿಗೆ ಹೋಗೋ ಸ೦ಭ್ರಮದಲ್ಲಿ ನನ್ನ ಬಾಲ್ಯವನ್ನ ನೆನಪಿಸಿಕೊಳ್ತಾ ,ಅ೦ದು ಹೀಗೇ ಆಗುತ್ತೆ ಅ೦ತ ಅ೦ದುಕೊ೦ಡಿದ್ದೆನೆ....ಆಕಾಶದಲ್ಲಿ ಹಾರಾಡೋ ವಿಮಾನ ನೋಡೋದೆ ಒ೦ದು ಅದಮ್ಯ ಖುಶಿ ನನ್ನ ಬಾಲ್ಯದಲ್ಲಿ.....ಆರು ತಿ೦ಗಳಿಗೋ ಮೂರು ತಿ೦ಗಳಿಗೋ ಹವಾಮಾನ ವೈಪರಿತ್ಯದಿ೦ದ ಊಹಿಸಿದ್ದಕ್ಕಿನ್ನೂ ಕೆಳಮಟ್ಟದಲ್ಲಿ ಹಾರಾಟ ನೆಡೆಸುವ ವಿಮಾನ ವನ್ನ ಕ೦ಡ್ರೆ ಮೈಯೆಲ್ಲಾ ಪುಳಕ....ಅ೦ದು ವಿಮಾನ ಎ೦ಬೋದು ಬರೀ ಊಹೆಗೇ ನಿಲುಕಿದ ವಸ್ತು...ಇ೦ದು ನನ್ನ ಮೂವತ್ತನೆಯ ವಿಮಾನ ವನ್ನ ಏರುವ ಮುನ್ನ ಅಪ್ಪನ ನೆನಪಾಗುತ್ತೆ...ಅಪ್ಪ ಬದುಕಿದ್ದಿದ್ರೆ ಈ ಹೊತ್ತಿಗೆ ಆಕಾಶ ನೋಡ್ತಾ ಇರೋರು..ನನ್ನ ಮಗ ಬರ್ತಾನೆ ಇದೇ ವಿಮಾನದಲ್ಲಿ ಅ೦ತ.

ನಾಲ್ಕನೇ ಕ್ಲಾಸಿಗೆ ಹೋದ ಅಪ್ಪನನ್ನು ಅನಾಮತ್ತು ಎಳೆದುಕೊಂಡು ಹೋಗಿ ನಿನ್ಗ್ಯಾಕೋ ಓದು ಅಂತ ಹೊಲ ಕಾಯಲು ಬಿಟ್ಟಿದ್ದ ಅಜ್ಜ.ಹೆಣ್ಮಕ್ಕಳಿಗೆ ಯಾಕೆ ಬೇಕು ಸ್ಕೂಲು ಗೀಳು ಅಂತ ಅಮ್ಮನನ್ನು ಅಡಿಗೆ ಮನೆಯ ಹೊಗೆಯಲ್ಲಿ ಮುಳುಗಿಸಿದವರು ಅಜ್ಜಿ...ಅಂತವರ ಮಗನಾದ ನಾನು ಅವರಿಂದ ಇದಕ್ಕಿಂತ ಹೆಚ್ಚಿಗೆ ಏನು ಬಯಸಬಹುದು...ಹಠ ತೊಟ್ಟು ಅಪ್ಪ ನಮ್ಮನ್ನು ಓದಿಸಿದರು.........ಅಂದೇ ಅವರಿಗೆ ಅದು ಹೇಗೆ ತಿಳಿದಿತ್ತು ಮುಂದೊಂದು ದಿನ ಬರುತ್ತೆ ಈ ಭೂಮಿಯನ್ನು ನಂಬಿ ಬದುಕೋದು ಬಲು ಕಷ್ಟ ಅಂತ.ಅಪ್ಪ ಹೋಗಿ ಹನ್ನೆರೆಡು ವರ್ಷವಾಗಿದೆ.

ಟೊ೦ಕ ಕಟ್ಟಿಹೆ ಮಗನ
ಭವಿಷ್ಯಕ್ಕೆ
ಹೊರಟೇ ಹೋಗುತ್ತೆ ಮನಸ್ಸು
ಭೂತಕಾಲಕ್ಕೆ
ಅಪ್ಪ ಹೋಗಿ
ಹನ್ನೆರೆಡು ವರ್ಷವಾಗಿದೆ.

ಅಪ್ಪ ನೆನ್ನೆ,
ಬ್ಯಾ೦ಕು ಎ೦ದರೇನು
ತಿಳಿಯದವ.
ನಾನು ಇ೦ದು,
ಹತ್ತು ಬ್ಯಾ೦ಕುಗಳಲಿ
ಅಕೌ೦ಟ್ ಹೊ೦ದಿದವ.
ಮಗ ನಾಳೆ.

ನನ್ನ ಮಗನಿಗೆ
ನಾನೇ ಗಾಡ್ ಫಾದರ್
ನನ್ನ ಅಪ್ಪ ನನಗೆ
ಬರಿ ಫಾದರ್
ಮರೆತರೂ ಮರೆತ೦ತಾಗದೆ
ಸದಾ ನೆನೆಪಿನಲ್ಲೆ ಉಳಿಯುವ
ನನ್ನಪ್ಪ.

ಹೀಗೇ ಅಪ್ಪ ಆಗಾಗ ನೆನಪಾಗ್ತಾರೆ,ಬರಹಗಳಲ್ಲಿ,ಕವನಗಳಲ್ಲಿ.ಅಪ್ಪ ಬದುಕಿದ್ದಾಗ ಕ೦ಡ೦ತ ಕನಸುಗಳು ಇ೦ದು ಹೆಮ್ಮರವಾಗಿವೆ,ಆದರೆ ಅವರೇ ಇಲ್ಲ ಕಣ್ಣಾರೆ ನೋಡಿ ಆನ೦ದಿಸಲು.ವಿದ್ಯೆಯ ಮಹತ್ವವನ್ನು ಮಹತ್ತರವಾಗಿ ತಿಳಿದಿದ್ದ ಅಪ್ಪ,ಮಕ್ಕಳಿಗೆ ವಿದ್ಯೆ ಕಲಿಸಿದರೆ ಸಾಕು ಅವರೇ ಮು೦ದೆ ಮನುಷ್ಯರಾಗ್ತಾರೆ ಅ೦ತ ಆಳವಾಗಿ ಯೋಚಿಸಿದ್ದರು.ಖುದ್ದು ನಾಲ್ಕನೇ ಕ್ಲಾಸು ಕಲಿತಿದ್ದರೂ ಮಕ್ಕಳು ಹೆಚ್ಚು ಕಲಿಯಬೇಕು ಎ೦ದು ಕನಸು ಕ೦ಡು ಅದನ್ನು ಸಾಕಾರಗೊಳಿಸಿದವರು.ಇದ್ದ ನಾಲ್ಕೆಕರೆ ಜಮೀನು ನನ್ನ ಮಕ್ಕಳಿಗೆ ಅನ್ನ ನೀಡಲಾರದು ಎ೦ದು ಅ೦ದೇ ಆಲೋಚಿಸಿ,ತಾನು ಅರೆಬಟ್ಟೆ,,ಅರೆಹೊಟ್ಟೆಯಿ೦ದಿದ್ದು ನಮ್ಮನ್ನು ಶಾಲೆಗೆ ಕಳಿಸಿದ್ದರು.ಇವತ್ತು ಹಳ್ಳಿಯಲ್ಲಿ ತಾಡಪ್ಪನ ಮಕ್ಕಳು ಬುದ್ದಿವ೦ತರು,ಅಪ್ಪನ ಹೆಸರನ್ನು ಉಳಿಸಿದ್ದಾರೆ ಅ೦ತ ಮಾತಾಡಿಕೊಳ್ಳುವಾಗ ಅಪ್ಪನ ಪರಿಶ್ರಮ ನೆನಪಾಗುತ್ತೆ.ಅಪ್ಪನ ನೆನೆಪು ಮನದಲ್ಲಿ ಅಚ್ಚಳಿಯದ೦ತೆ ಉಳಿಯುತ್ತೆ.ಈಗಲೂ ಕಣ್ಣ ಮು೦ದೇ ಬರುತ್ತೆ..ಪ್ರತೀ ಉಗಾದಿಗೆ ,ದೀಪಾವಳಿಗೆ ಹೊಸ ಬಟ್ಟೆ ಕೊಡಿಸಿ ಖುದ್ದು ತಾನೇ ಉಡುದಾರ ಕಟ್ಟುತ್ತಿದ್ದರು ನಮ್ಮಪ್ಪ.ಆ ದಾರಕ್ಕೆ ಅ೦ತಾ ಶಕ್ತಿಯಿತ್ತು ಅ೦ತ ಈಗ ಅನಿಸುತ್ತಿದೆ.ಅದೇ ಉಡುದಾರವನ್ನು ಹಿಡಿದುಕೊ೦ಡು ಹೊಳೆಯಲ್ಲಿ ಈಜು ಕಲಿಸುತ್ತಿದ್ದುದು.

ಕೊನೆಯಲ್ಲಿ ಅಪ್ಪ ಸತ್ತಾಗ ನಾನು ಮ೦ಗಳೂರಿನಲ್ಲಿದ್ದೆ,ಶ್ರೀ ನಿಮ್ಮ ತ೦ದೆ ಸ್ವಲ್ಪ ಸೀರಿಯಸ್ ಆಗಿದ್ದಾರೆ,ನಿನ್ನನ್ನು ನೋಡಬೇಕ೦ತೆ ಅ೦ತ ಭಾವ ಫೋನ್ ಮಾಡಿದ್ರು,ಅಲ್ಲಿಯವರೆಗೆ ಅಪ್ಪ ಇಹಲೋಕ ತ್ಯಜಿಸಿಯಾಗಿತ್ತು,ಎ೦ದೂ ಸೀರಿಯಸ್ ಅ೦ತ ಮಲಗಿದವರಲ್ಲ,ಐವತ್ತರ ಪಾಸಿನ ವಯಸ್ಸು ಅವರದು.ಒಮ್ಮೆಲೇ ಅಪ್ಪ ಸೀರಿಯಸ್ ಅನ್ನೋದನ್ನ ಕೇಳಿ ನನಗ್ಯಾಕೋ ಅನುಮಾನ,ದೂರದಲ್ಲಿರುವವನಿಗೆ ನೇರವಾಗಿ ಹೋಗಿದ್ದಾರೆ ಅ೦ತ ಹೇಗೆ ತಿಳಿಸೋದು ಅ೦ತ ವದ್ದಾಡಿ,ಕೊನೆಗೆ ತಕ್ಷಣಾ ಹೊರಟು ಬಾ ಸೀರಿಯಸ್ ಅ೦ತ ಮಾತ್ರ ಹೇಳಿದ್ದರು. ಮ೦ಗಳೂರು ಬಸ್ ಸ್ಟಾ೦ಡಿನಲ್ಲಿ ರಾತ್ರಿ ಎ೦ಟಕ್ಕೆ ತುಮಕೂರಿನ ಬಸ್ಸಲ್ಲಿ ಕುಳಿತವನ ಎದೆಯಲ್ಲಿ ಅವಲಕ್ಕಿ ಕುಟ್ಟುತ್ತಿತ್ತು.ಮನಸ್ಸಿನ ತಲ್ಲಣ ಅಕ್ಷರಗಳಲ್ಲಿ ಬರೆಯಲು ಸಾಧ್ಯವಿಲ್ಲ,ಆದರೂ ಮನಸ್ಸು ತಡೆಯದೆ ಬೆ೦ಗಳೂರಿನಲ್ಲಿರುವ ನಮ್ಮ ಚಿಕ್ಕಮ್ಮನಿಗೆ ಫೋನ್ ಮಾಡಿದೆ,ಅವರು ದು:ಖ ತಡೆಯಲಾರದೇ ಅಪ್ಪ ಹೋಗಿರುವುದನ್ನು ಖಚಿತಪಡಿಸಿದರು.ಇನ್ನು ಎದುರಿಸುವ ಸರದಿ ನನ್ನದು.

ಬಹುಶಹ ಬಸ್ಸಿನಲ್ಲಿದ್ದ ಐವತ್ತು ಅರವತ್ತು ಪಯಣಿಗರಲ್ಲಿ ಯಾರಿಗೂ ಅರಿವಿರಲಿಲ್ಲ,ನಾನು ನನ್ನ ಜನ್ಮದಾತನನ್ನು ಕಳೆದುಕೊ೦ಡಿರುವೆ ಎ೦ದು.,ಮನಸ್ಸಿನಲ್ಲಿ ದು:ಖದ ದೈತ್ಯ ಮೂಟೆಯನ್ನೊತ್ತು ಆ ಹತ್ತು ಘ೦ಟೆಗಳನ್ನ ಆ ರಾತ್ರಿ ಕಳೆದೆ.ಅಳುವೇ ಬ೦ದಿರಲಿಲ್ಲ ಅಲ್ಲಿಯವರೆಗೂ,ಊರಿಗೆ ಹೋದ್ರೆ ಜನ ಜಾತ್ರೆ ಮನೆಮು೦ದೆ,ನನ್ನನ್ನು ನೋಡಿದ ಅಮ್ಮ ಒಡೋಡಿ ಬ೦ದು ಅಪ್ಪಿಕೊ೦ಡು ಗಳಗಳನೇ ಅಳಲು ಶುರು ಮಾಡಿದಳು.ಆಮೇಲೆ ಅಪ್ಪನ ಮುಖ ನೋಡಿ ಅಳು ತಡೆಯಲಾಗಲಿಲ್ಲ.ದು:ಖದ ಕಟ್ಟೆ ಒಡೆದು ಹೋಯಿತು. ಮನಸೊ ಇಚ್ಚೆ ಅಳುವುದನ್ನು ಬಿಟ್ಟು ಬೇರೇನೂ ಮಾಡಲಾಗಲಿಲ್ಲ.ಮಕ್ಕಳು ದುಡಿಯುವ೦ತಾಗುವ ಮುನ್ನವೇ ಅಪ್ಪ ಹೋಗಿ ಬಿಟ್ಟರು.ಅವರ ಸೇವೆ ಮಾಡುವ ಭಾಗ್ಯ ನಮಗೆ ಆ ದೇವರು ಕರುಣಿಸಿರಲಿಲ್ಲ.ರಾತ್ರಿ ಮಲಗಿದ್ದವರು ಬೆಳಗಿನ ಜಾವ ಬಹಿರ್ದೆಸೆಗೆ೦ದು ಹಿತ್ತಲಿಗೆ ಹೋದವರು ಅಲ್ಲೇ ಹ್ರುದಯಾಘಾತದಿ೦ದ ಕುಸಿದಿದ್ದರು.ಏನೇನು ಆಸೆಗಳಿದ್ದವೊ ಅವರದು.ಎಲ್ಲಾ ಅವರೊಟ್ಟಿಗೇ ಹೋಗಿ ಬಿಟ್ಟವು.

ಅಮ್ಮ ಈಗ ಪರಿಸ್ಥಿತಿಗೆ ಹೊ೦ದಿಕೊ೦ಡಿದ್ದಾರೆ.ಬೆ೦ಗಳೂರಿನಲ್ಲಿ ತಮ್ಮನೊಟ್ಟಿಗೆ ಇದ್ದಾರೆ,ಅಮ್ಮನ ಪಾಸ್ ಪೋರ್ಟ್ ಗೆ ಅರ್ಜಿ ಹಾಕಿಸಿದ್ದೇನೆ.ಅಮ್ಮನಿಗೆ ವಿದೇಶ ಪ್ರಯಾಣ ಮಾಡಿಸುವ ಚಿಕ್ಕ ಆಸೆ.ಅಮ್ಮ ಬರಲಿದ್ದಾರೆ ಆಫ್ರಿಕಾಕ್ಕೆ ಸದ್ಯದಲ್ಲೇ.ಅಪ್ಪನ ನೆನಪು ಅಪ್ಪ೦ದಿರ ದಿನದ೦ದು.ಅಪ್ಪಾ ನಿನಗೆ ಕೋಟಿ ನಮನಗಳು.