Jun 24, 2009

ಯಾರು ನೀನು???

(ಚಿತ್ರ :ಕನ್ನಡಪ್ರಭ)

ಯಾರು ನೀನು
ಯಾರಿಗಾಗಿ ಈ
ಹುಡುಕಾಟ,ನಿರೀಕ್ಷೆ,
ಮಳೆರಾಯ ನಿಗಾಗಿ?
ಅಥವಾ
ಬರಪರಿಹಾರ ತರುವ
ಮುಖ್ಯ ಮ೦ತ್ರಿಗಾಗಿ.

ಅತ್ತ
ಸೂಟುಧಾರಿ
ಮುಖ್ಯ ಮ೦ತ್ರಿಗಳು
ಕರ್ನಾಟಕಕ್ಕೆ ಮಳೆಯಾಗಲಿ
ಅ೦ತ ತಮಿಳುನಾಡಿನಲ್ಲಿನ
ದೇವರುಗಳಿಗೆ ಮೊರೆ ಹೋಗಿದ್ದಾರೆ ,
(ಕಾರ್ಟೂನ್:ಪ್ರಜಾವಾಣಿ)

ಇತ್ತ
ಹರುಕಲು ಅ೦ಗಿ
ನೇಗಿಲ ಯೋಗಿ
ಜವರಾಯನಿಗಾಗಿ ಮೊರೆ ಹಾಕಿದಾನೆ
ನಿನ್ನ೦ತೆ ಬಡಕಲು
ನಿನ್ನ ಎತ್ತುಗಳು
ನೀನೇನ್ ತಿ೦ತೀಯಾ
ನಿನ್ ಎತ್ತುಗಳಿಗೆ ಏನ್ ಹಾಕ್ತೀಯಾ?
ಹಿ೦ಗೇ ಆದ್ರೆ.

ಉಳ್ಳವರು ಮಾಡುತ್ತಿದ್ದಾರೆ
ಹವನ,ಯಜ್ನ.
ನೀನೂ ಮಾಡು
ಕಪ್ಪೆ ಮದುವೆ,
ಕತ್ತೆ ಮೆರವಣಿಗೆ
ಬ೦ದರೂ ಬ೦ದೀತು
ವರುಣನಿಗೆ ಕರುಣೆ.
ಮು೦ಗಾರಿನ ಆರ್ಭಟ ನೋಡಿ
ಸಮಚಿತ್ತ ದಿ೦ದ
ಉತ್ತು ಬಿತ್ತು
ಮಾನ್ಸೂನಿಗಾಗಿ ಪರಿತಪಿಸುತ್ತಿರುವೆ,
ಶೂನ್ಯದ ಕಡೆ ಮುಖ ಮಾಡಿ ನೀನು.

ನಿನ್ನ ಶ್ರಮದ ಅರಿವಿಲ್ಲ
ಮಳೆರಾಯನಿಗೆ
ಹೊತ್ತೊಯ್ದು ಎಲ್ಲಾ ಸುರಿಯುತ್ತಾನೆ
ಪಶ್ಚಿಮ ಘಟ್ಟಕ್ಕೆ
ಎ೦ಬುದೇ ನಿನ್ನ ಆತ೦ಕ.

ಇಳೆಯ ಮೇಲೆ
ಮಳೆಯ ನ೦ಬಿ
ಬೆಳೆ ಬೆಳೆಯುವ ಕಾಲ
ಹೊರಟೇ ಹೋಯ್ತು.

ಏನೇ ಆಗಲಿ ನಿನ್ನ ತಾಳ್ಮೆಗೆ
ಮೆಚ್ಚಬೇಕು.
ಉಸಿರಿರುವವರೆಗೂ
ನಿನ್ನ ಹೋರಾಟ
ನಿನಗಿಲ್ಲ ನಿವ್ರುತ್ತಿ.
ಯಾರು ನೀನು
ಮಣ್ಣಿನ ಮಗ
ಮಣ್ಣಲ್ಲಿ ಮಣ್ಣಾಗಿ
ಹೋಗುವತನಕ
ನಿಲ್ಲದು ನಿನ್ನ ಹೋರಾಟ.

9 comments:

ಜಲನಯನ said...

ಶ್ರೀಧರ್, ಚನ್ನಾಗಿ ಮೂಡಿಬಂದಿದೆ ನಿಮ್ಮ ಸಮಯೋಚಿತ ಮತ್ತು ಬಹು ಮಹತ್ತರ ಕವನ. ಹೇಳೋದು ರಾಜಕಾರಣಿ ಧರ್ಮ, ಕೇಳೋದು ಪ್ರಜೆಗಳ ಕರ್ಮ ಇನ್ನು ಗೋಳು ತಪ್ಪದ ಬಾಳು ರೈತ-ಅನ್ನದಾತನದ್ದು....ನಿಮ್ಮ ಈ ಕವನ ಎಲ್ಲವನ್ನೂ ಇಡಿಯಾಗಿ ಪ್ರತಿಬಿಂಬಿಸಿದೆ. ಹಾಂ..!! ಕುವೈತ್ ಈಗ ಬಿಸಿ..ಬಿಸಿ!!! ಟೆಂಪರೇಚರ್ ಬಿಸಿಗೆ ಥರ್ಮಾಮೀಟರ್ ಎಲ್ಲ ಒಡೆದು ಪಾದರಸದ ಮಳೆಯಾದರೂ ಅತಿಶಯವಲ್ಲ ಇಲ್ಲಿ.....ಹೇಗಿದೆ..ನಿಮ್ಮ ತಾಂಜ಼ಾನಿಯಾ ಬದುಕು...ಈ ಮಧ್ಯೆ..ಕೆಲವು vacany ಗಳು ಬರುತ್ತಿವೆ ನಾಡಿನಲ್ಲಿ...ಪ್ರಯತ್ನಿಸಿ...Good Luck

anu said...

ಉಳ್ಳವರೂ ಹವನ ಹೋಮ ಮಾಡುವುದಕ್ಕೆ ಕಾರಣ ಬೇಕಿಲ್ಲ. ಪ್ರತಿಯೊಂದಕ್ಕೂ ಮಾಡುತ್ತಾರೆ. ರಾಜಕಾರಣಿಗಳು ಜನರನ್ನು ಸೆಳೆಯಲೆಂದು ಮಾಡುತ್ತಾರೆ. ನಮ್ಮ ಮಂಗಳೂರಿನಲ್ಲಿ ಬಡವನಿಗೆ ಐದು ಪೈಸೆ ಕೊಡರು. ಹೋಮ ಹವನಗಳಿಗೆ ಮುಂಬಯಿಯ ಪಾಪದ ಹಣ ಎಷ್ಟು ಬೇಕಾದರೂ ಸುರಿಯುತ್ತಾರೆ. ಕವನ ಚೆನ್ನಾಗಿದೆ. ಬರಗಾಲದ ಬಿಸಿ ತಟ್ಟುವುದು ಬಡವನಿಗೆ ಮಾತ್ರ.

ಅಹರ್ನಿಶಿ said...

ಜಲನಯನ ಸರ್,
ಕವನ ವನ್ನು ಮೆಚ್ಚಿಕೊ೦ಡಿದ್ದಕ್ಕೆ ಧನ್ಯವಾದಗಳು.ಅನ್ನದಾತ ಸುಖೀಭವ:.

ಅಹರ್ನಿಶಿ said...

ಧ್ಯಾನ ಪ್ರಸಾದ್ ರೆ,

ಬ್ಲಾಗಿಗೆ ಬ೦ದಿದ್ದಕ್ಕೆ ತು೦ಬಾ ಸ೦ತೋಷ.ಕವನ ಮೆಚ್ಚಿಕೊ೦ಡಿದ್ದಕ್ಕೆ ಇನ್ನೂ ಸ೦ತೋಷ.ಬಡವನ ಕೋಪ ದವಡೆಗೆ ಮೂಲ ಅನ್ನೋ ಹಾಗೆ ರೈತನ ಪಾಡು ಹೇಳ ತೀರದು,ಯಾರೋ ಕಿತ್ತೋದ ವಳ (ಮಾಯವತಿ)ಪ್ರತಿಮೆ ಗಾಗಿ ಎರೆಡು ಸಾವಿರ ಕೋಟಿ ಮೀಸಲಿಟ್ಟಿದಾರೆ೦ದು ಓದಿ ಸಿಟ್ಟು ನೆತ್ತಿಗೇರಿತ್ತು.ಇದು ಭಾರತದ೦ತ ದೇಶದಲಿ ಮಾತ್ರ ಸಾಧ್ಯ.

ಮಲ್ಲಿಕಾರ್ಜುನ.ಡಿ.ಜಿ. said...

ಶ್ರೀಧರ್ ಸರ್,
ಸಮಯೋಚಿತ ಕವನ. ನಿಮ್ಮ ಕವನ ಆ ದೇವರಿಗೂ ಕೇಳಿಸಿರಬೇಕು. ಮಳೆರಾಯನನ್ನು ಕಳಿಸಿದ್ದಾನೆ!

ಧರಿತ್ರಿ said...

ಶ್ರೀಧರ್ ಸರ್..ಫೋಟೋಗೆ ತಕ್ಕ ಕವನ.
ದೇವಸ್ಥಾನಗಳೆಲ್ಲ ಸುತ್ತಾಡಿ, ಹೋಮ-ಹವನಗಳನ್ನು ಮಾಡಿ ಭಗವಂತ ಭಗವಂತ ಅನ್ನುತ್ತಿದ್ದ ಮಾನ್ಯ ಯಡಿಯೂರಪ್ಪ ಅವ್ರು ಜೋರು ಮಳೆಯಲ್ಲಿ ರಾಜ್ದದ ಬಹುತೇಕ ಭಾಗದ ಜನರ ಬದುಕು ನೀರಿನಲ್ಲಿ ಕೊಚ್ಚಿಹೋಗುತ್ತಿದ್ದರೆ ಯಡ್ಡಿ ಮಾತ್ರ ಮೌನವ್ರತ ಮಾಡುತ್ತಿದ್ದಾರೆ.
-ಧರಿತ್ರಿ

ಅಹರ್ನಿಶಿ said...

ಮಲ್ಲಿ ಯವರೆ,

ಅತಿವ್ರುಷ್ಟಿಯನ್ನ ತಡೆಯೋಕೆ ಸರ್ಕಾರದ ಕೈಲಾಗೊಲ್ಲ.ಅಲ್ವಾ.ಪರಿಹಾರ ಮಾತ್ರ ಕೊಡಬಹುದು.

ಅಹರ್ನಿಶಿ said...

ಧರಿತ್ರಿ ಮೇಡ೦,

ನಿಮ್ಮ ಕಾಮೆ೦ಟೂ ಸಮಯೋಚಿತವಾಗಿದೆ.ಕುರ್ಚಿಗಾಗಿ ಹವನ ಯಜ್ನ ಮಾಡಿದ ಮುಮ ಗಳು ರೈತರಿಗಾಗಿಯಲ್ಲ ಮಾಡಿದ್ದು ಹೋಮ,ತಮ್ಮ ಸ್ವಾರ್ಥಕ್ಕಾಗಿ.ಅತಿವ್ರುಷ್ಟಿಗೆ ಸರ್ಕಾರದ ಬಳಿ ಉತ್ತರವಿಲ್ಲ.ಕೈ ಚೆಲ್ಲಿ ಕೂಡುವುದು ಬಿಟ್ಟರೆ.ಧನ್ಯವಾದಗಳು.

Mohan said...

ಏನೇ ಆಗಲಿ ನಿನ್ನ ತಾಳ್ಮೆಗೆ
ಮೆಚ್ಚಬೇಕು.
ಉಸಿರಿರುವವರೆಗೂ
ನಿನ್ನ ಹೋರಾಟ
ನಿನಗಿಲ್ಲ ನಿವ್ರುತ್ತಿ.
ಯಾರು ನೀನು
ಮಣ್ಣಿನ ಮಗ
ಮಣ್ಣಲ್ಲಿ ಮಣ್ಣಾಗಿ
ಹೋಗುವತನಕ
ನಿಲ್ಲದು ನಿನ್ನ ಹೋರಾಟ.


ಹಂಗಂತ ಮು ಮ ಕೇಳಿದ್ರೆ ಯೋಗಿ ಪಡೆದುದು ಯೋಗಿಗೆ, ಜೋಗಿ ಪಡೆದುದು ಜೋಗಿಗೆ ಅನ್ಕೊಂದ್ರಂತೆ,

ಭೂಮಿ ತಾಯಿ ನಂಬಿ ಕೆಟವರಿಲಿವಾ?