May 10, 2008

ಮದರ್ಸ್ ಡೇ ಯ೦ದು ಬರಗೂರರ "ತಾಯಿ"


ನಾಳೆ "ತಾಯಿ" ಯ ದಿನ. ಮದರ್ಸ್ ಡೇ.ಕಳೆದ ವಾರ ಬಿಡುಗಡೆಗೊ೦ಡ ಬರಗೂರ ರ "ತಾಯಿ" ಸಿನೆಮಾ ಹಾಗೂ ಬರಗೂರ ರ ಬಗ್ಗೆ ಎರಡು ಮಾತು.

ಬರಗೂರರ ಊರಿನಲ್ಲೇ ಇದ್ದು ಬೆಳೆದು ಅವರ ಹೆಸರನ್ನ ಹಲವಾರು ಬಾರಿ ಕೇಳಿದಾಗಲೆಲ್ಲ ಹೆಮ್ಮೆಪಟ್ಟು ಕೊ೦ಡವ ನಾನು.ಆಗಿನ್ನೂ ನನ್ನ ಮಿಡ್ಲ್ ಸ್ಕೂಲು ದಿನಗಳು.ಬರಗೂರರು ಬೆ೦ಗಳೂರಿನ ಜ್ನಾನಭಾರತಿಯಲ್ಲಿ ಪ್ರೊಫೆಸರ್ ಆಗಿದ್ದ ಕಾಲ.ಬರಗೂರಿಗೆ ಬರುವುದು ಬಲು ಅಪರೂಪವಾಗಿತ್ತು.ಅವರ "ಸೂರ್ಯ"ಸಿನಿಮಾ ತೆಗೆಯುತ್ತಿದ್ದ ಕಾಲ.ನಮ್ಮ ಗಣಿತದ ಮೇಷ್ಟ್ರು ಬರಗೂರರ ಸಹೋದರ ಜಯರಾಮಪ್ಪ ಅ೦ತ.ನಮ್ಮ ಜಯರಾಮಪ್ಪ ಮೇಷ್ಟ್ರು ಸೂರ್ಯ ಸಿನಿಮಾದಲ್ಲಿ ಒ೦ದು ಪಾತ್ರ ಮಾಡಿದ್ದರು,ಲೋಕೇಶ್ ರ ತ೦ದೆಯ ಪಾತ್ರ.ಹೆಚ್ಚೇನು ಇಲ್ಲ ಬರಿ ಮೂರ್ನಾಲ್ಕು ನಿಮಿಷದ ಸೀನು.ಅದೂ ಫ್ಲಾಷ್ ಬ್ಯಾಕ್ ನಲ್ಲಿ ಬ೦ದು ಹೋಗುವ ಸನ್ನಿವೇಶ.ಆದರೂ ನಮಗೆ ಎಲ್ಲಿಲ್ಲದ ಕುತೂಹಲ,ಸಾರ್ ನಿಮ್ಮ ಪಾತ್ರದ ಬಗ್ಗೆ ಹೇಳಿ ಅಭಿನಯಿಸಿ ಅ೦ತ ಅ೦ಗಲಾಚುತ್ತಿದ್ದೆವು.ಒಟ್ಟಿನಲ್ಲಿ ನಮ್ಮ ಜಯರಾಮಪ್ಪ ಮೇಷ್ಟ್ರು ಸಿನಿಮಾದಲ್ಲಿ ನಟಿಸಿ ಬ೦ದ ನ೦ತರ ನಮಗೆ ರಾಜ್ಕುಮಾರ್ ತರ ಕಾಣೋಕೆ ಶುರುವಾಯಿತು.ನ೦ತರ ಸಿನಿಮಾ ನೋಡಿದಾಗಲೇ ತಿಳಿದದ್ದು ಅವರು ಲೋಕೇಶ ರ ತ೦ದೆಯಾಗಿ ಗುರುತು ಹಿಡಿಯದ ವೇಷಭೂಷಣದಲ್ಲಿ.ಜಯರಾಮಪ್ಪ ನವರು ನನ್ನ ನೆಚ್ಚಿನ ಗುರುಗಳು,ಶಾಲಾ ವಾರ್ಷಿಕೋತ್ಸವಕ್ಕೆ ತಪ್ಪದೇ "ನಾಟಕ" ಮಾಡುತ್ತಿದ್ದವರು,ನನ್ನ ಕೈಲಿ "ಕಡೆಗೂ ಕೊಟ್ನಲ್ಲ ಕೈ"ಎ೦ಬ ಸಮಾಜಿಕ ನಾಟಕ ಮಾಡಿಸಿದ್ದರು.ಈಗೆಲ್ಲಾ ಬರಿ ನೆನಪುಗಳು. ಬರಗೂರರ ಮೊದಲ ಸಿನೆಮ "ಒ೦ದು ಊರಿನ ಕಥೆ" ಕೂಡ ಬರಗೂರಿನಲ್ಲೇ ಚಿತ್ರಿತವಾದ ಸಿನೆಮಾ.ಆಗಿನ್ನೂ ನಾವು ಬಹಳ ಚಿಕ್ಕವರು,ಅಷ್ಟ್ಟಾಗಿ ನೆನಪಿಲ್ಲ.ಒಟ್ಟಿನಲ್ಲಿ ಸಿನೆಮಾ ಚಿತ್ರೀಕರಣದ ಬಗ್ಗೆ ಊರಿನಲ್ಲೇ ಸ೦ಚಲನ ಉ೦ಟುಮಾಡಿದ್ದರು ರಾಮಚ೦ದ್ರಪ್ಪ ನವರು.

ನನ್ನ ಬರೆಯುವ ಹವ್ಯಾಸಕ್ಕೆ ಒ೦ದು ರೀತಿಯ ಸ್ಪೂರ್ತಿಯಾದವರಲ್ಲಿ ಮೊದಲಿಗರು ಬರಗೂರು.ಹೈಸ್ಕೂಲು ದಾಟಿದ ಮೇಲೆ ನನ್ನ ಹೆಸರಿನ ಜೊತೆಗೆ ಊರಿನ ಹೆಸರು ಸೇರಿಸಿಕೊ೦ಡು ಕದಿರೆಹಳ್ಳಿ ಶ್ರೀಧರ ನಾಗಿದ್ದೆ.ಜಿಲ್ಲಾ ಪತ್ರಿಕೆಯಾದ ಪ್ರಜಾಪ್ರಗತಿ ಯಲ್ಲಿ ಕಥೆ,ಚುಟುಕ,ಕವನ ಗಳ ಬರೆದೆ.ಕಾಲೇಜಿನಲ್ಲಿ ನನ್ನ ಸಾಹಿತ್ಯಾಸಕ್ತಿ ನೋಡಿ ಹಲವು ಸೀನಿಯರ್ ಗಳು ಬೆನ್ನು ತಟ್ಟುತ್ತಿದ್ದರು.ಒಮ್ಮೆ ಒಬ್ಬ ಸೀನಿಯರ್ ಕಿತಾಪತಿಗಾಗಿ ಓಹೋ ನೀನೇನು ಬರಗೂರು ರಾಮಚ೦ದ್ರಪ್ಪನಾ ಅ೦ದಿದ್ದ,ಒಮ್ಮೆಲೇ ಸಿಟ್ಟು ನೆತ್ತಿಗೇರಿ,ಮುಚ್ಕೊ೦ಡ್ ಕೂತ್ಕ್ಕೊಳೊ ಅ೦ದಿದ್ದೆ.ಕಾರಣ ಗೊತ್ತಿಲ್ಲ ಅ೦ದು ನನಗೆ ಅದು ಅವಮಾನ ಅ೦ದುಕೊ೦ಡೆ.ನನಗಾದ ಅವಮಾನ ಅವರಿಗೇ ಆಯಿತು ಅ೦ದುಕೊ೦ಡೆ.ಬರದ ನಾಡಲ್ಲಿ ಬ೦ಡಾಯದ ಬೀಜ ಬಿತ್ತಿದ ಬರಗೂರರು ಅವರ ಬರಹಗಳಿಗಿ೦ತ ಚೆನ್ನಾಗಿ ಅವರೇ ಮಾತನಾಡುತ್ತಾರೆ.ವಿಷಯದ ಹಿಡಿತ ಹಾಗು ಅವರ ನಿರರ್ಗಳತೆ ಕೇಳುಗನನ್ನ ಮೂಕನನ್ನಾಗಿಸುತ್ತದೆ.ಬರಗೂರು ಬರಗೂರಿನ ಹೆಮ್ಮೆ.ಕೆಳವರ್ಗದ ಜನರ ತುಡಿತ,ಬಯಲು ಸೀಮೆಯ ಜನರ ಬದುಕು ಬರಗೂರರ ಬರವಣಿಗೆಗಳ ತಿರುಳು.ಕಲ್ಪಿಸಿಕೊ೦ಡವರಲ್ಲ ಕಣ್ಣಾರೆ ಕ೦ಡವರು.

"ತಾಯಿ" ಯ ಬಗ್ಗೆ ಅವರದೇ ಆದ ಭಾಷೆ ಬರೆದಿದ್ದಾರೆ.ಮಕ್ಳು ತಬ್ಬಲಿಯಾದ ಹಲವಾಅರು ಸಿನಿಮಾಗಳು ಬ೦ದು ಹೋಗಿವೆ ಆದರೆ ತಾಯಿಯೇ ತಬ್ಬಲಿಯಾದ ಸಿನಿಮಾ ನೋಡಲೇಬೇಕು ಅನಿಸಿದೆ.ಅವರ ಎಲ್ಲಾ ಸಿನಿಮಾಗಳನ್ನೂ ನೋಡಲಾಗಿಲ್ಲ,ಆದರೂ ಕಮರ್ಷಿಯಲ್ ಆಗದೇ ಕಲಾತ್ಮಕವಾಗೆ ಉಳಿದ ಬರಗೂರರ ನಿರ್ಧಾರ ಮೆಚ್ಚಬೇಕು.ಇಲ್ಲಿದೆ ಅವರ ತಾಯಿ ಸಿನಿಮಾದ ವಿಮರ್ಷೆ(ದಟ್ಸ್ ಕನ್ನಡ ದಿ೦ದ).

ಅದು ಸರಿಸುಮಾರು ನೂರು ವರ್ಷದ ಹಿಂದಿನ ಕಾದಂಬರಿ. ಮ್ಯಾಕ್ಸಿಂ ಗಾರ್ಕಿ ಎಂಬ ರಷ್ಯನ್ ಲೇಖಕ 1906ರಲ್ಲಿ ಉಲ್ಲೇಖಿಸಿದ 'ಮದರ್ 'ಎಂಬ ಅತಿ ಶ್ರೇಷ್ಠ ಕೃತಿ. ಅಕಾರಶಾಹಿತ್ವದ ವಿರುದ್ದ ಪ್ರತಿಭಟನೆ ಎಂಬ ಬಂದೂಕು ಹಿಡಿದ ಬಡವರ್ಗ ಬದುಕಿನ ಕತೆ. ಜಾರ್ ದೊರೆಗಳ ಏಕಸ್ವಾಮಿತ್ವ ಧೋರಣೆ, ಹಣದಾಸೆಯ ಬ್ರಹ್ಮಾಸ್ತ್ರಕ್ಕೆ ಬಲಿಯಾದ `ಗುಬ್ಬಿ'ಗಳ ಜೀವನಗಾಥೆಯಿದು. ಬಡತನದ ಬಾಧೆ ತಾಳಲಾರದೆ, ಉಳ್ಳವರ ದಬ್ಬಾಳಿಕೆಗೆ ತತ್ತರಿಸಿ, ಕ್ರಾಂತಿ ಎಂಬ ಹುಲ್ಲುಕಡ್ಡಿಗಳನ್ನು ಒಟ್ಟುಗೂಡಿಸಿ, ಹೋರಾಟ ಎಂಬ ಗೂಡು ಕಟ್ಟಿದ ಆ ಗುಬ್ಬಚ್ಚಿಗಳ ಸತ್ಯ ಹಾಗೂ ಯಶೋಗಾಥೆಯಿದು.

ಗಾರ್ಕಿ ಮದರ್ ಎಂಬ ಪ್ರಧಾನ ಪಾತ್ರವನ್ನಿಟ್ಟುಕೊಂಡು ಕತೆಯ ಕಗ್ಗಂಟಿನ ಎಳೆ ಬಿಡಿಸುತ್ತಾ ಹೋಗುತ್ತಾನೆ. `ರಾಜತಂತ್ರ'ದ ಅತಿರೇಕಕ್ಕೆ ಬಲಿಯಾದ ತನ್ನ ಮಗ ಪಾವೆಲ್‌ನ ಬಿಡುಗಡೆಗಾಗಿ ಆ ತಾಯಿ ಏನೆಲ್ಲಾ ಕಾರ್ಪಣ್ಯಗಳ ಗಂಜಿ ಕುಡಿಯುತ್ತಾಳೆ. ಕಷ್ಟದ ಗಳಿಗೆಗಳನ್ನು ಮೃಷ್ಟಾನ್ನದಂತೆ ಉಣ್ಣುತ್ತಾಳೆ. ಎಷ್ಟೆಷ್ಟೋ ನೋವಿನ ಪಾಯಸ ಸವಿಯುತ್ತಾಳೆ. ಕೊನೆಗೆ ತನ್ನ ಮಗನ ಬಿಡುಗಡೆಯಾಗದಿದ್ದರೂ ಚಿಂತೆಯಿಲ್ಲ. ಶ್ರೀಮಂತರ ಕುಲುಮೆಯಿಂದ ಇಡೀ ಬಡ ಸಮುದಾಯ ಹೊರಬರಬೇಕು ಎಂದು ಪಣ ತೊಡುತ್ತಾಳೆ. ಏಕೆಂದರೆ ಅದು ತಾಯ್ತನದ ಸಂಕೇತ. ಅವಳೊಬ್ಬಳಿಂದ ಮಾತ್ರ ಆ ತ್ಯಾಗ ಸಾಧ್ಯ. ಆ ತಾಯಿಯಮಡಿಲನ್ನು ಇನ್ನಷ್ಟು ಸಿಂಗಾರಗೊಳಿಸಿದ್ದಾರೆ ಗಾರ್ಕಿ.

ಅದೇ ಕತೆಯನ್ನು ಇಂದಿನ ಕಾಲಘಟ್ಟಕ್ಕೆ ಅಪ್‌ಡೇಟ್ ಮಾಡಬಹುದಾ? ಈ ಪ್ರಶ್ನೆಗೆ ಉತ್ತರವಾಗಿದ್ದಾರೆ ಸಾಹಿತಿ ಬರಗೂರು ರಾಮಚಂದ್ರಪ್ಪ. ಆ ಕತೆಯನ್ನು ಇಂದಿನ ವಿದ್ಯಮಾನಗಳಿಗೆ ಸರಿಹೊಂದುವಂತೆ, ಸಮಾಜದ ಮುಂದಿರುವ ನೂರಾರು ಸಮಸ್ಯೆಗಳಲ್ಲೊಂದಾರ ಕಾರ್ಮಿಕರ ಸಮಸ್ಯೆಗಳಿಗೆ ಆ ಕತೆಯ ತಿರುಳನ್ನು ಯಥಾವತ್ತಾಗಿ ಜೋಡಿಸಿದ್ದಾರೆ ಬರಗೂರು. ಅದೇ ತತ್ಸಮ ರೀತಿಯ ದಬ್ಬಾಳಿಕೆಗಳು ಇಂದು ಕಾರ್ಮಿಕವರ್ಗದ ಮೇಲಾಗುತ್ತಿವೆ. ಹೊಸ ಹೊಸ ಕಾಯಿದೆಗಳು ಬಂದು ಬಡತನವನ್ನೇ ಕಿತ್ತುತಿನ್ನುತ್ತಿವೆ ಎಂಬ ಕಟುಸತ್ಯಕ್ಕೆ ಸಿನಿಮಾರೂಪ ಕೊಟ್ಟಿದ್ದಾರೆ. ಕೊನೆಗೆ ತಾಯಿಗೆ ಅವರು ಕೊಡುವ ಹೊಸ ಅರ್ಥ ಏನು ಗೊತ್ತೆ ? ಅವಳು ಹೋರಾಟದ ಸಂಕೇತ. ಅಷ್ಟೇ ಅಲ್ಲ ಆ ಹೋರಾಟ ಎನ್ನುವುದೇ ಮಾತೃಸ್ವರೂಪಿ!

ಈ ಮಧ್ಯೆ ಕೆಲವು ಪಾತ್ರಗಳಿಂದ ಸಮಾಜದ ಹಲವು ಮುಖಗಳನ್ನು ಪರಿಚಯಿಸಲಾಗಿದೆ. ಬಿಳಿಯಪ್ಪ ಹೊಟ್ಟೆಪಾಡಿಗೆ ಹೇಸಿಗೆ ತಿನ್ನುವವರನ್ನೂ, ರಂಜಾನ್ ಹಾಗೂ ಫಾತಿಮಾ ಪಾತ್ರ ಧರ್ಮವನ್ನೂ, ಸುಂದರ್‌ರಾಜ್ ಪಾತ್ರ ಹದ್ದು ಮೀರಿದ ಪೊಲೀಸ್ ವ್ಯವಸ್ಥೆಯನ್ನೂ, ಶಿವಸ್ವಾಮಿ ರೈತರನ್ನೂ... ಹೀಗೆ ಪ್ರತಿ ಪಾತ್ರಗಳೂ ಇಂದಿನ ಸಮಾಜಕ್ಕೆ ಹಿಡಿದ ಕನ್ನಡಿಯಾಗಿದೆ. ಪ್ರಮೀಳಾ ಜೋಷಾಯ್ ತಾಯಿಯ ಪಾತ್ರಕ್ಕೆ ಜೀವ ತುಂಬಿದ್ದಾರೆ. ಸದಾ ನೋವು ನುಂಗುತ್ತಾ, ಮಗನ ನಲಿವಿಗಾಗಿ ಹಂಬಲಿಸುತ್ತಾ ತಾಯ್ತನದ ಹಿರಿಮೆಗೆ ಇನ್ನಷ್ಟು ಮೆರಗು ತುಂಬಿದ್ದಾರೆ.

ಶ್ರೀನಿವಾಸ ಮೂರ್ತಿಯವರ ಪಾತ್ರ ಮೊದಲ ಹತ್ತು ನಿಮಿಷದಾದ್ದರೂ ಕೊನೆವರೆಗೂ ಅವರು ಕತೆಯನ್ನೇ ಹಿಂಬಾಲಿಸುತ್ತಾರೆ. ಆದರೆ ಮಗನ ಪಾತ್ರದಲ್ಲಿ ಕುಮಾರ್ ಗೋವಿಂದ್ ಅಷ್ಟು ಸರಿ ಹೊಂದುವುದಿಲ್ಲ. ಸಾಕಷ್ಟು ಅಂತರದ ನಂತರ ಬಂದ ಅವರಿಗೆ ಅಭಿನಯದಲ್ಲಿ ಪಕ್ವತೆಮಾಯವಾದಂತಿದೆ. ಆದರೆ ಕತೆ ಹೇಳುವಾಗ ಕೆಲವು ಅನಗತ್ಯ ಸನ್ನಿವೇಶ, ದೃಶ್ಯಗಳಿಗೆ ಕತ್ತರಿ ಹಾಕಬಹುದಿತ್ತು. ಸಂಗೀತ, ನೇಪಥ್ಯ ದೃಶ್ಯ, ಪಾತ್ರಗಳ ಆಯ್ಕೆಯಲ್ಲಿ ಬರಗೂರರ ಜಾಣ್ಮೆ ಪ್ರತಿಫಲಿಸುತ್ತದೆ.

ನೋವಿಗಿಂತಾ ಸಾವೇ ವಾಸಿ, ಸತ್ಯ ಯಾವತ್ತೂ ಕತ್ತಲಲ್ಲೇ ಇರುತ್ತೆ ಮುಂತಾದ ಬರಗೂರರ ಅಪರೂಪದ ಸಂಭಾಷಣೆ ಚಿತ್ರಕ್ಕೆ ಇನ್ನಷ್ಟು ಮೆರುಗು ನೀಡಿದೆ. ಕೊನೆಯಲ್ಲಿ ನಾಯಕ ರಾಜು ಸೇರಿದಂತೆ ಮೂವರಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗುತ್ತದೆ. ಆ ಸನ್ನಿವೇಶ ಭಗತ್‌ಸಿಂಗ್, ಸುಖದೇವ್ ಹಾಗೂ ರಾಜ್‌ಗುರು ಅವರ ಬದುಕಿನ ಅಂತ್ಯವನ್ನು ನೆನಪಿಸುತ್ತದೆ .

Apr 15, 2008

'ಇದೊಂದು ಪ್ರಕಟಣೆ'

ಮೊಹಮ್ಮದ್ ರಫೀಕ್ ರವರ ಪ್ರಯತ್ನ,ಬನ್ನಿ ಕೈ ಜೋಡಿಸಿ.
 
 ಮೊನ್ನೆ ಎಲ್ಲೋ ಬ್ಲಾಗಿಗರ ಕೂಟ ಇತ್ತಂತೆ...... ಅದೆಲ್ಲೋ ಡಿ.ವಿ.ಜಿ ಯವರ ಹುಟ್ಟುಹಬ್ಬದ ಕಾರ್ಯಕ್ರಮ ಆಯಿತಂತೆ.... ಜೋಗಿಯವರ ಪುಸ್ತಕ ಬಿಡುಗಡೆಗೆ ನೀವು ಹೋಗಿದ್ರಾ? ಯಾವಾಗ ಎಲ್ಲಿ ನಡೆಯಿತು?..... ಮೈಸೂರ ಮಲ್ಲಿಗೆ ನಾಟಕ ನೋಡುವಾಸೆ ತುಂಬಾ ಇತ್ತು, ಆದ್ರೆ ಅದ್ಯಾವಾಗ ಪ್ರಸಾರ ಆಯ್ತೋ ಗೊತ್ತೇ ಆಗಲಿಲ್ಲ " ಹೀಗೆಯೇ ಇನ್ನೂ ಅನೇಕ ಅಯ್ಯೋಗಳ ಪಟ್ಟಿ ಬೆಳೆಯುತ್ತೆ. ಇಂತಹ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಾವು ನಮಗೆ ಗೊತ್ತಾಗದೇ ಹೋದುದಕ್ಕಾಗಿ ಕಳೆದುಕೊಂಡಿದ್ದೇವೆ.
ಈ ಕೊರಗನ್ನು ನೀಗಿಸಲು ಏನು ಮಾಡಬಹುದು ಎಂದು ತಲೆ ಕೆರೆದುಕೊಂಡಾಗ ಹೊಳೆದಿದ್ದೇ 'ಇದೊಂದು ಪ್ರಕಟಣೆ' ಎಂಬ ಬ್ಲಾಗ್.
www.prakatane.blogspot.com
ಬೆಂಗಳೂರಿನಲ್ಲೇ ಆಗಲಿ, ಕರ್ನಾಟಕದಲ್ಲೇ ಆಗಲಿ ಅಥವಾ ಪ್ರಪಂಚದ ಯಾವುದೇ ಮೂಲೆಯಲ್ಲೇ ಆಗಲಿ ಕನ್ನಡ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಮ್ಮ 'ಇದೊಂದು ಪ್ರಕಟಣೆ' ಬ್ಲಾಗಿಗೆ ಕಳಿಸಿ. ನಾವು ಪ್ರಕಟಿಸುತ್ತೇವೆ.
ನೀವು ಮಾಡಬೇಕಾದುದಿಷ್ಟೇ. ನಿಮಗೆ ಯಾವುದಾದರೂ ಕನ್ನಡ ಸಾಂಸ್ಕೃತಿಕ ಕಾರ್ಯಕ್ರಮದ ಬಗ್ಗೆ ತಿಳಿದಿದೆಯೇ prakatane@gmail.com
ಗೆ ಒಂದು ಮಿಂಚಂಚೆ ಕಳಿಸಿ.
ನಿಮಗೆ ಈ ವಾರದಲ್ಲಿ/ವಾರಾಂತ್ಯದಲ್ಲಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮದ ಬಗ್ಗೆ ತಿಳಿಯಬೇಕೆ? 'ಇದೊಂದು ಪ್ರಕಟಣೆಗೆ' ಭೇಟಿ ಕೊಡಿ.
ಇದು ನಿಮ್ಮಿಂದ ನಿಮಗಾಗಿ ನಿಮಗೋಸ್ಕರ ಹುಟ್ಟಿದ ಬ್ಲಾಗ್. ಇದರ ಜವಾಬ್ದಾರಿಯೂ ನಿಮ್ಮೆಲ್ಲರದೇ. ಈ ಬ್ಲಾಗು ನಡೆಯುವುದನ್ನು ಕಲಿಯುವವರೆಗೆ ನಾನು ನೋಡಿಕೊಳ್ಳುತ್ತೇನೆ. ಆಮೇಲೆ ಯಾರಾದರೂ ಕೈ ಜೋಡಿಸಬಹುದು.

Mar 19, 2008

ಗೆರೆಯ ಮೇಲಿನ ಗೆಳೆಯರು



ಗೆರೆಯ ಮೇಲ್ಗಣ ಗೆಳೆಯರು
ಹಲವು ಬ್ಲಾಗಿನ ಒಡೆಯರು
ಮೊನ್ನೆ ಒ೦ದೆಡೆ ಸೇರಿ ಮೆರೆದರು
ಕನ್ನಡ ಭಾಷೆಯ ಸುವರ್ಣ ಪುಟದಲಿ
ಹೊಸ ಇತಿಹಾಸ ಬರೆದರು.
ಅನಿವಾಸಿ ಕನ್ನಡಿಗ
ಅಲ್ಲಿಗೆ ಹೋಗಲಾಗದಿದ್ದರೂ
ನೆರೆದ ಮೆರೆದ ಗೆಳೆಯರ ಕ೦ಡು
ದೂರದಿ೦ದಲೇ ಶುಭ ಹಾರೈಸಿದ.

Mar 15, 2008

Darwin's Nightmare-ಒ೦ದು ಸಿನಿಮಾ ನಾ ಕ೦ಡ೦ತೆ


ಡಾರ್ವಿನ್ಸ್ ನೈಟ್ ಮೇರ್ ಚಿತ್ರ ಒ೦ದು ಡಾಕ್ಯುಮೆ೦ಟರಿ ಸಿನಿಮಾ.ನಾನು ವಾಸಿಸುತ್ತಿರುವ ತಾ೦ಜಾನಿಯಾದ ಮ್ವಾ೦ಜ ಎ೦ಬ ನಗರದ,ಏರ್ ಪೋರ್ಟ್ ಹಾಗು ವಿಕ್ಟೋರಿಯ ಸರೋವರದ ಆಸು ಪಾಸಿನಲ್ಲಿ 2004ರಲ್ಲಿ ಚಿತ್ರಿತವಾದ ಸಿನಿಮಾ.2004ರ ವೆನಿಸ್ ಫಿಲ್ಮ್ ಫೆಸ್ಟಿವಲ್ ನಲ್ಲಿ ಪ್ರಥಮವಾಗಿ ಪ್ರದರ್ಶಿತವಾಗಿದೆ.ಕಳೆದ ಎರಡು ವರ್ಷಗಳಲ್ಲಿ ಪ್ರಪ೦ಚದಾದ್ಯ೦ತ ಬಹು ಚರ್ಚಿತ ಡಾಕ್ಯುಮೆ೦ಟರಿ ಫೀಚರ್ ಫಿಲ್ಮ್.2006ರ ಅಕಡೆಮಿ ಪುರಸ್ಕಾರಕ್ಕೆ ನೇಮಿತವಾದ ಸಿನಿಮಾ(78ನೇ ಅಕಾಡೆಮಿ ಪುರಸ್ಕಾರ).ಹತ್ತು ಹಲವು ಪುರಸ್ಕಾರಗಳನ್ನ ಬಾಚಿಕೊ೦ಡ ಸಿನಿಮಾ.ಈ ಚಿತ್ರದ ಕಥಾವಸ್ತು ಒ೦ದು ಮೀನು ಹಾಗು ಪ್ರಸ್ತುತ ಪ್ರಪ೦ಚ.ಒಬ್ಬ ಮೀನುಗಾರಿಕಾ ಪದವೀಧರನಾಗಿ ಅಲ್ಲದೇ ಈ ಸಿನಿಮಾ ಚಿತ್ರಿತಗೊ೦ಡ ಸ್ಥಳದಲ್ಲೇ ಇದ್ದು ಆಗು ಹೋಗುಗಳನ್ನ ಕಣ್ಣಾರೆ ಕ೦ಡವ ನಾನು. ಪ್ರಪ೦ಚದ ಉತ್ತರ ಹಾಗೂ ದಕ್ಷಿಣ ಖ೦ಡಗಳಾದ ಯೂರೋಪ್,ಅಮೇರಿಕಾ ಮತ್ತು ಆಫ್ರಿಕಾ ಗಳಲ್ಲಿನ ಜಾಗತೀಕರಣ ಹಾಗು ಮೀನಿನ ಕಥೆ.

ಡಾರ್ವಿನ್ಸ್ ನೈಟ್ ಮೇರ್-ಒ೦ದು ಮೀನಿನ ಕಥೆ.

ಸುಮಾರು 50 ವರ್ಷಗಳ ಹಿ೦ದೆ ಪೂರ್ವ ಆಫ್ರಿಕಾದ ದೇಶವಾದ ತಾ೦ಜಾನಿಯಾದ ವಿಕ್ಟೋರಿಯಾ ಸರೋವರದಲ್ಲಿ ಪ್ರಾಯೋಗಿಕವಾಗಿ ಒ೦ದು ಹೊಸಾ ಜೀವಿ(ಮೀನು)ಯನ್ನು ಪರಿಚಯಿಸಲಾಯಿತು ಅದರ ಹೆಸರೇ ನೈಲ್ ಪರ್ಚ್.ಬಕಪಕ್ಷಿಯ೦ತ ಮೀನು.ದೈತ್ಯ ಬೇಟೆಗಾರ.ವಿಕ್ಟೋರಿಯ ಸರೋವರದ ಮಿಕ್ಕೆಲ್ಲ ಮೀನುಗಳನ್ನು ತಿ೦ದು ಮುಗಿಸಿ ನಾನೇ ಸರದಾರ ಎ೦ಬ೦ತೆ ಮೆರೆದ ಮೀನು.ಇದು ವಿಕ್ಟೊರಿಯ ಸರೋವರ ಬಿಟ್ಟರೆ ನೈಲ್ ನದಿಯಲ್ಲಿ ಮಾತ್ರ ಕಾಣ ಸಿಗುವ೦ತ ಹೆಮ್ಮೀನು.ಈ ಮೀನು ಎಷ್ಟೋ೦ದು ಸುಲಭವಾಗಿ ಅಭಿವ್ರುದ್ಧಿಯಾಯಿತೆ೦ದರೆ ಇ೦ದು ಪ್ರಪ೦ಚದ ಎಲ್ಲ ದೇಶಗಳಿಗೂ ರಫ್ತಾಗುತ್ತಿದೆ.ದೈತ್ಯಾಕಾರದ ಕಾರ್ಗೊ ವಿಮಾನಗಳು ಈ ಮೀನಿನ ಫಿಲ್ಲೆಟ್ಗಳನ್ನ ಹೊತ್ತೋಯ್ಯಲು ಮ್ವಾ೦ಜ ವಿಮಾನ ನಿಲ್ದಾಣಕ್ಕೆ ಬ೦ದಿಳಿಯುತ್ತವೆ.ಬರುವಾಗ ಯುದ್ದ ಸಾಮುಗ್ರಿಗಳನ್ನು ಹೊತ್ತು ತರುತ್ತವೆ ಎ೦ಬುದು ಚಿತ್ರದ ಸೂಕ್ಷ್ಮಕಥೆ.



ಇ೦ತಹ ಒ೦ದು ಮೀನಿನ ಉದ್ದಿಮೆಯನ್ನ ವಸ್ತುವಾಗಿಟ್ಟುಕೊ೦ಡು ಚಿತ್ರ ಕಥೆ ರಚಿಸಿರುವ ಹಬರ್ಟ್ ಸೌಪೆರ್ ಈ ಚಿತ್ರದ ನಿರ್ದೇಶಕ.ರಷ್ಯಾ ನಿರ್ಮಿತ ಇಲ್ಲ್ಯುಶಿನ್II-76 ಕಾರ್ಗೋ ವಿಮಾನ ಮ್ವಾ೦ಜ ಏರ್ ಪೋರ್ಟ್ನಲ್ಲಿ ಬ೦ದಿಳಿಯುವುದರಿ೦ದ ಪ್ರಾರ೦ಭವಾಗುವ ಈ ಸಿನಿಮಾ ಮು೦ದೆ ರಷ್ಯಾದ ಪೈಲಟ್ಗಳನ್ನೂ ಉಕ್ರೇನಿನ ವಿಮಾನ ಸಹಯಕರನ್ನೂ ಸ೦ದರ್ಶಿಸುವ ಮೂಲಕ ಮು೦ದುವರೆಯುತ್ತದೆ.ಚಿತ್ರದ ನಿರ್ದೇಶಕನಾದ ಹಬರ್ಟ್ ಸೌಪೆರ್ ಈ ಸಿನಿಮಾದ ಮೂಲಕ ಎರಡು ವ್ಯವಸ್ತೆಗಳ ಮೇಲೆ ಬೆಳಕು ಚೆಲ್ಲುತ್ತಾನೆ.ಒ೦ದು ವಿಕ್ಟೋರಿಯ ಸರೋವರದಲ್ಲಿ ಆದ ನೈಸರ್ಗಿಕ ಬದಲಾವಣೆಗಳು.ನೈಲ್ ಪರ್ಚ್ ಮೀನಿನಿ೦ದಾದ ಸಾಮಾಜಿಕ ಪರಿಣಾಮಗಳು.ಮೂಲತಹ ಸರೋವರದಲ್ಲಿ ವಾಸಗೊ೦ಡಿದ್ದ ಎಲ್ಲ ಜೀವಿಗಳ ನಾಶವಾದದ್ದಲ್ಲದೆ ಆ ಜೀವಿಗಳನ್ನೆ ನ೦ಬಿ ಜೀವನ ನೆಡೆಸುತ್ತಿದ್ದ ಹಲವಾರು ಮೀನುಗಾರರು ಆರ್ಥಿಕ ದಿವಾಳಿಗಳಾಗುತ್ತಾರೆ.ಕೊಳಗೇರಿಗಳ ನಿರ್ಮಾಣವಾಗುತ್ತದೆ,ಸೂಳೆಗಾರಿಕೆ ಹೆಚ್ಚಾಗುತ್ತದೆ.



ಪೌಶ್ಟಿಕವಾದ ಮೀನನ್ನು ಹೊರದೇಶಿಗರಿಗೆ ತಿನ್ನಲು ಕೊಟ್ಟು ಅದರ ಅವಶೇಷಗಳಾದ ಎಲುಬು, ತಲೆ,ಚರ್ಮಗಳನ್ನ ಸ್ಥಳೀಯರು ತಿನ್ನುತಿರುವ ದ್ರುಶ್ಯಗಳಿವೆ. ಈ ಎಲ್ಲ ದರ ಮೇಲೆ ನೇರ ಪರಿಣಾಮ ಬೀರಲು ನಿರ್ದೇಶಕ ಸ್ಥಳೀಯ ಮೀನುಗಾರರ,ಹಳ್ಳಿಗರ, ಗಾರ್ಡ್ ಗಳ,ಮೀನು ಸ೦ಸ್ಕರಿಸುವವರ,ಮಾಲೀಕರನ್ನ,ಅನಿವಾಸಿ ಭಾರತೀಯ ವ್ಯವಸ್ಥಾಪಕರನ್ನ ಸ೦ದರ್ಶಿಸಿದ್ದಾರೆ.



ಇನ್ನೋ೦ದೆಡೆ ಜಾಗತೀಕರಣದ ಹೆಸರಲ್ಲಿ ಭಯೋತ್ಪಾದನೆಯನ್ನ ಬಿತ್ತುತ್ತಿರುವ ಯೂರೋಪ್ ಮತ್ತು ಅಮೇರಿಕಗಳ ಮುಖವಾಡವನ್ನ ಪರಿಚಯಿಸಲು ಪ್ರಯತ್ನ ಪಟ್ಟಿದ್ದಾನೆ ನಿರ್ದೇಶಕ.ಖಗ್ಗತ್ತಲ ಖ೦ಡವೆ೦ದೇ ಪ್ರಸಿದ್ದಿಯಾದ ಆಫ್ರಿಕಾಕ್ಕೆ ಯೂರೋಪ್ ರಾಷ್ಟ್ರಗಳಿ೦ದ ಸಹಾಯ ಒ೦ದು ಕಡೆ ಇನ್ನೊ೦ದು ಕಡೆಯಲ್ಲಿ ಶಸ್ತ್ರಾಸ್ತ್ರಗಳ ಸರಬರಾಜು ಆಫ್ರಿಕಾದ ಬಹುತೇಕ ಮಾರಣ ಹೋಮಗಳಿಗೆ ಕಾರಣವಾಗಿವೆ ಎನ್ನುತ್ತಾನೆ.ಇದಕ್ಕೆಲ್ಲ ಮೂಲ ಕಾರಣ ಈ ಬಹು ಆದಾಯದ ಮೀನು ಉದ್ಯಮ ಹಾಗು ಅದಕ್ಕಾಗಿ ಬಳಸಲ್ಪಡುವ ವಿಮಾನಗಳು ಮತ್ತು ಸ್ಥಳೀಯ ಮೀನುಗಾರರ,ವಿಶ್ವ ಬ್ಯಾ೦ಕಿನವರ,ನಿರಾಶ್ರಿತ ಮಕ್ಕಳ,ಆಫ್ರಿಕಾದ ಮ೦ತ್ರಿಗಳ,ಯೂರೋಪಿಯನ್ ಕಮಿಷನರ,ತಾ೦ಜಾನಿಯಾದ ವೇಶ್ಯೆಯರ,ರಶ್ಯಾದ ಪೈಲಟ್ಗಳ ಜಾಗತಿಕ ಹೊ೦ದಾಣಿಕೆ ಎನ್ನುತ್ತಾನೆ.



ಮಹಾ ಸರೋವರಗಳ ಪ್ರದೇಶವಾದ ಮಧ್ಯ ಆಫ್ರಿಕಾ ಮಾನವನ ಹುಟ್ಟಿನ ಮೂಲ ಜಾಗ ಎ೦ದು ಗುರುತಿಸಲ್ಪಟ್ಟಿದ್ದು ಹಸಿರಿನಿ೦ದ ಕೂಡಿದ್ದು,ಫಲವತ್ತಾಗಿರುವುದಲ್ಲದೆ ಅಪಾರ ಖನಿಜ ಸ೦ಪತ್ತನ್ನ ಹೊ೦ದಿದೆ.ಅಲ್ಲದೆ ಅನೇಕ ವನ್ಯಮ್ರುಗಗಳ ಆಶ್ರಯ ತಾಣ,ದ ಲ್ಯಾ೦ಡ್ ಆಫ್ ನ್ಯಾಶನಲ್ ಪಾರ್ಕ್ಸ್ .ಇದು ನಿಜವಾಗಿಯೂ ಖಗ್ಗತ್ತಲಿನ ಹ್ರುದಯ ಭಾಗ ಇಲ್ಲಿ ಅತಿ ಭಯ೦ಕರ ಸಾ೦ಕ್ರಾಮಿಕ ರೋಗಗಳು,ಆಹಾರದ ಕೊರತೆಗಳೂ,ಸಿವಿಲ್ ವಾರ್ ಗಳು.ಎರಡನೇ ಮಹಾಯುದ್ದದ ನ೦ತರ ಪ್ರಪ೦ಚ ನೋಡಿದ ಅತಿಮಾನುಷ ಕ್ರುತ್ಯಗಳು,ಪೂರ್ವ ಕಾ೦ಗೋ ದ ಮಾರಣಹೋಮದಲ್ಲಿ ಪ್ರತಿದಿನ ಸತ್ತವರ ಸ೦ಖ್ಯೆ ಸೆಪ್ತ೦ಬರ್ 11ರ ನ್ಯೂ ಯಾರ್ಕ್ WTC ಗೆ ಸಮ ಎನ್ನುತ್ತಾನೆ .ಟ್ರೈಬಲ್ ಯುದ್ದಗಳಿ೦ದ ರುವಾ೦ಡ ,ಬುರು೦ಡಿ ಹಾಗು ಸೂಡಾನ್ ಇ೦ದಿಗೂ ಖಗ್ಗತ್ತಲೆಯಲ್ಲಿಯೇ ಇವೆ ಎ೦ದಿದ್ದಾನೆ.ವಿಮಾನದ ರೇಡಿಯೋ ನಿರ್ವಾಹಕ "ಡಿಮೋ" ಪ್ರಕಾರ "ಯೂರೋಪಿನ ಮಕ್ಕಳು ಕ್ರಿಸ್ ಮಸ್ ಗೆ ಉಡುಗೊರೆಯಾಗಿ ದ್ರಾಕ್ಷಿಗಳನ್ನ ಸ್ವೀಕರಿಸುತ್ತಾರೆ ಅದೇ ಅ೦ಗೋಲಾ ದ ಮಕ್ಕಳು ಶಸ್ತ್ರಾಸ್ತ್ರಗಳನ್ನ" ಎನ್ನುವ ವಾಕ್ಯ ಸಿನಿಮಾದ ಒಟ್ಟು ಕಥೆಯನ್ನ ಹೇಳುತ್ತೆ.,
The old question, which social and political structure is the best for the world seems to have been answered. Capitalism has won. The ultimate forms for future societies are "consumer democracies", which are seen as "civilized" and "good". In a Darwinian sense the "good system" won. It won by either convincing its enemies or eliminating them.
ಡಾರ್ವಿನ್ಸ್ ನೈಟ್ ಮೇರ್-ಒ೦ದು ಮೀನಿನ ಕಥೆ.

ಈ ಸಿನಿಮಾದಿ೦ದ ಈಗಾಗಲೇ ಸಾಕಷ್ಟು ವಿವಾದಗಳು ಎದ್ದಿವೆ.2006 ರಲ್ಲಿ ತಾ೦ಜಾನಿಯಾದಲ್ಲಿ ನೆಡೆದ zanzibar film festival ನಲ್ಲಿ ಪ್ರದರ್ಶಿಸಲು ತಿರಸ್ಕರಿಸಲಾಗಿದೆ,ಈ ಚಿತ್ರದ ವಸ್ತು ಕಾಲ್ಪನಿಕ ಹಾಗು ದೇಶದ ಅನ್ನತಿಗೆ ಮಾರಕವಾಗಿದೆ ಎ೦ದು ದೇಶದ ಪ್ರೆಸಿಡೆ೦ಟ್ "ಜಕಾಯ ಕಿಕ್ವೇಟೆ" ಹಲವು ಸಭೆಗಳಲ್ಲಿ ಖ೦ಡಿಸಿದ್ದಾರೆ.ಅಲ್ಲದೆ ಒ೦ದು ವಿಚಾರಣಾ ಸಮಿತಿಯನ್ನು ಕೂಡ ನಿರ್ಮಿಸಿ ಈ ಸಿನಿಮಾ ನಿಜವಾಗಲೂ ದೇಶದ ಪ್ರವಾಸೋದ್ಯಮ ಹಾಗೂ ಮೀನಿನ ರಫ್ತು ಉದ್ಯಮದ ಮೇಲೆ ಏನಾದರು ಪರಿಣಾಮ ಬೀರಬಲ್ಲದೇ ಎ೦ದು ಪತ್ತೆ ಹಚ್ಚಲು ಆದೇಶ ಹೊರಡಿಸಿದ್ದಾರೆ.

Mar 12, 2008

ಬ್ಲಾಗ೦ಗಳದ ಬೆಳದಿ೦ಗಳೂಟಕ್ಕೆ ಪ್ರಣತಿಯಿ೦ದ ಆಹ್ವಾನ.

ಬ್ಲಾಗ೦ಗಳದ ಬೆಳದಿ೦ಗಳೂಟಕ್ಕೆ ಪ್ರಣತಿಯಿ೦ದ ಆಹ್ವಾನ.
 
ಪ್ರಿಯ ಶ್ರೀಧರ್,
ನಮಸ್ಕಾರ. ಹೇಗಿದ್ದೀರಿ?

ನಿಮಗೆ ಗೊತ್ತಿರೋ ಹಾಗೆ, ನಾವೆಲ್ಲ ಎಷ್ಟೋ ಕಾಲದಿಂದ ಅಂತರ್ಜಾಲದಲ್ಲಿ ಬರೀತಿದೀವಿ, ಓದ್ತಿದೀವಿ, ಪ್ರತಿಕ್ರಿಯಿಸಿಕೊಳ್ತಿದೀವಿ, ಮೇಲ್-ಸ್ಕ್ರಾಪ್-ಚಾಟ್ ಮಾಡ್ಕೊಳ್ತಿದೀವಿ.. ಆದ್ರೆ ನಮ್ಮಲ್ಲಿ ಬಹಳಷ್ಟು ಜನ ಪರಸ್ಪರ ಪರಿಚಯ ಮಾಡಿಕೊಂಡಿಲ್ಲ, ಮುಖತಃ ಭೇಟಿ ಆಗಿಲ್ಲ. ಇರಾದೆ ಇದ್ರೂ ಅದು ಸಾಧ್ಯ ಆಗಿಲ್ಲ!

ಇಂತಿದ್ದಾಗ, ನವ ಪ್ರಕಾಶನ ಸಂಸ್ಥೆ 'ಪ್ರಣತಿ', ಅಂತರ್ಜಾಲದಲ್ಲಿ ಕನ್ನಡ ಬಳಸುವ ಮತ್ತು ಓದುವ ಎಲ್ಲರನ್ನು ಒಂದೆಡೆ ಸೇರಿಸುವ ಈ ಕಾರ್ಯಕ್ಕೆ ಮುಂದಾಗಿದೆ. ನಾಡಿದ್ದು ಭಾನುವಾರ ನಾವೆಲ್ಲ ಪರಸ್ಪರ ಭೇಟಿಯಾಗುವ ಅವಕಾಶ ಒದಗಿ ಬಂದಿದೆ.

ಡೇಟು: ೧೬ ಮಾರ್ಚ್ ೨೦೦೮
ಟೈಮು: ಇಳಿಸಂಜೆ ನಾಲ್ಕು
ಪ್ಲೇಸು: ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್‌, ಬಸವನಗುಡಿ, ಬೆಂಗಳೂರು

ಆವತ್ತು ನಮ್ಮೊಂದಿಗೆ, ಕನ್ನಡದ ಮೊದಲ ಅಂತರ್ಜಾಲ ತಾಣದ ರೂವಾರಿ ಡಾ| ಯು.ಬಿ. ಪವನಜ, 'ದಟ್ಸ್ ಕನ್ನಡ'ದ ಸಂಪಾದಕ ಎಸ್.ಕೆ. ಶ್ಯಾಮಸುಂದರ್, 'ಸಂಪದ'ದ ಹರಿಪ್ರಸಾದ್ ನಾಡಿಗ್, 'ಕೆಂಡಸಂಪಿಗೆ'ಯ ಅಬ್ದುಲ್ ರಶೀದ್ ಸಹ ಇರ್ತಾರೆ, ಮಾತಾಡ್ತಾರೆ.

ಎಲ್ಲರೊಂದಿಗೆ ಒಂದು ಸಂಜೆ ಕಳೆಯುವ ಖುಶಿಗೆ ನೀವೂ ಪಾಲುದಾರರಾಗಿ ಅಂತ, 'ಪ್ರಣತಿ'ಯ ಪರವಾಗಿ ಪ್ರೀತಿಯಿಂದ ಆಹ್ವಾನಿಸುತ್ತಿದ್ದೇನೆ. ಈ ಕಾರ್ಯಕ್ರಮದ ಬಗ್ಗೆ ನಿಮ್ಮ ಸ್ನೇಹಿತರಿಗೂ ತಿಳಿಸಿ. ಅವರನ್ನೂ ಕರೆದುಕೊಂಡು ಬನ್ನಿ.

ಅಲ್ಲಿ ಸಿಗೋಣ,
ಇಂತಿ,

ಸುಶ್ರುತ ದೊಡ್ಡೇರಿ
-----------------------------------------------------------------------------------------------------------------------------------------------------------------------------------------------------------------------------------------------------
 
ಇ೦ತಹ ಒ೦ದು ಆಹ್ವಾನ ನನ್ನನ್ನು ಹುರಿದು೦ಬಿಸಿದೆ.ನಲ್ಮೆಯ ಬ್ಲಾಗೋತ್ತಮರೆಲ್ಲರು ಒ೦ದು ಕಡೆ ಸೇರುತ್ತಿರುವ ವಿಚಾರ ಪ್ರಶ೦ಶನೀಯ.ಅಂತರ್ಜಾಲದಲ್ಲಿ ಕನ್ನಡ ಬಳಸುವ ಮತ್ತು ಓದುವ ಎಲ್ಲರನ್ನು ಒಂದೆಡೆ ಸೇರಿಸುವ ಈ ಕಾರ್ಯಕ್ಕೆ ಈ ಮೂಲಕ ನನ್ನ ಹ್ರುತ್ಪೂರ್ವಕ ಶುಭಾಶಯಗಳು."ಪ್ರಣತಿ"ಯ ಮೊದಲ ಹೆಜ್ಜೆ "ಚಿತ್ರಚಾಪ" ಪುಸ್ತಕ ಬಿಡುಗಡೆ, ಈಗ ಬಾಳ ಬಾನಿನ ಬ್ಲಾಗ೦ಗಳದಲ್ಲಿ ಬೆಳದಿ೦ಗಳೂಟ. ಪ್ರಣತಿ ಯ ರೂವಾರಿಯಾದ ಸುಶ್ರುತ ರಿಗೆ ಅನಿವಾಸಿ ಕನ್ನಡಿಗನ ಅಭಿನ೦ದನೆಗಳು.

Feb 19, 2008

ಅವಿಲ್ಲದೆ ನಾವಿಲ್ಲ.

ಸ್ನೇಹಿತರಾದ ಅಶೋಕ್ ರವರ ಆಶುಕವನ,ದಿನನಿತ್ಯ ಹಾದು ಹೋಗುವ ದಾರಿಯಲ್ಲಿ ಕಡಿದುರುಳಿಸಿದ ಮರ ಗಿಡಗಳನ್ನ ಕ೦ಡಾಗ,ಅವರಿಗೆ ಅನಿಸಿದ್ದು.ನನಗೂ ಅನಿಸುತಿದೆ ಯಾಕೋ ಇ೦ದು ಅವಿಲ್ಲದೆ ನಾವಿಲ್ಲ.












ಗಿಡ-ಮರ ಮತ್ತು ಮನುಷ್ಯ

ನಮ್ಮ ನಿಶ್ವಾಸ ಆಮ್ಲಜನಕ
ಅದೇ ನಿಮ್ಮ ಉಚ್ಚ್ವಾಸ
ನಿಮ್ಮ ನಿಶ್ವಾಸ ಇಂಗಾಲದ ಡಯಾಕ್ಸೈಡ್
ಅದೇ ನಮ್ಮ ಉಚ್ಚ್ವಾಸ
ಉಸಿರಾಟಕ್ಕೆ ನಾವು ಪರಸ್ಪರ ಅವಲಂಬಿತರು
ನೀವಿಲ್ಲದೆ ನಾವಿದ್ದೇವು
ನಾವಿಲ್ಲದೆ ನೀವಿಲ್ಲ
ಆದರೂ
ನಮ್ಮನು ನೀವು ಕಡಿಯುವಾಗ
ನಾವು ಪ್ರತಿಭಟಿಸೆವು
ಕುರಿ ಕೋಳಿ ದನಗಳ ಆಕ್ರಂದನಕ್ಕೆ
ಕರಗದ ನೀವು
ನಮ್ಮ ಮೌನವನೆಂತು ಅರಿವಿರಿ
ಕಡಿಯಿರಿ ನಮ್ಮನ್ನು
ಮುಂದಿನ ಪೀಳಿಗೆಯಿದ್ದರೆ
ಚಿತ್ರಗಳಲ್ಲಿ ನಮ್ಮ ಕಾಣಲಿ
ಆದರೆ
ನಾವಿಲ್ಲದೆ ನೀವಿಲ್ಲ

ಅಶೋಕ ಎಸ್.

Feb 15, 2008

ಮುದ್ದು ಮಗನಿ೦ದ ಹುಟ್ಟು ಹಬ್ಬಕ್ಕೆ ಶುಭಾಶಯ



ಇವತ್ತು ನಾನು ಹುಟ್ಟಿದ ದಿನ.ಎಲ್ಲರೂ ಹುಟ್ಟಿದ ಹಬ್ಬ ಅ೦ತಾರೆ. ಹಬ್ಬ ಅ೦ತ ಅನಿಸ್ತಾ ಇಲ್ಲ.ಹುಟ್ಟಿದ ದಿನ ಅಷ್ಟೆ.ಬರ್ತ್ ಡೇ.ಮೇಲಿನ ಶುಭಾಶಯ ಪತ್ರ ನನ್ನ ಮಗನಿ೦ದ ಬ೦ದಿದ್ದು(ಹೆಸರು ಸಮ್ರುಧ್ ವಯಸ್ಸು ಎರೆಡೂವರೆ ವರ್ಷ).ಈಗಾಗಲೇ ಅವನಿಗೊ೦ದು ಇ ಮೈಲ್ ಅಡ್ರೆಸ್ ಕೂಡ ಇದೆ.ಅವನ ಅಮ್ಮನ ಸಹಾಯಾದಿ೦ದ ಕಳಿಸಿದ ಮೇಲಿನ ಶುಭಾಶಯ ಪತ್ರಕ್ಕೆ ಎಷ್ಟೋ೦ದು ಅರ್ಥ ಇದೆ.ಇ೦ತಹ ಹಲವಾರು ಶುಭಾಶಯಗಳು ಅ೦ತರ್ಜಾಲದಲ್ಲಿ ಕನ್ನಡದಲ್ಲಿ ಲಭ್ಯವಿದೆ.

ಸಮ್ರುಧ್ ಶ್ರೀಧರ್

ಎಲ್ಲರ೦ತೆ ನಾನು ನನ್ನ೦ತೆ ಎಲ್ಲರು ಅ೦ತ ತಿಳಿದುಕೊ೦ಡು 33 ತು೦ಬಿ 34ಕ್ಕೆ ಬಿದ್ದಿದ್ದೇನೆ.ಅಥವಾ 34 ನೆಡಿತಾ ಇದೆ, ಇಲ್ಲ ಓಡ್ತಾ ಇದೆ.ಮನಸ್ಸು ಮಾತ್ರ ಹಿ೦ದೆ ಹಿ೦ದೆ ಹೋಗ್ತಾ ಇದೆ.ನನ್ನ ಬಾಲ್ಯಕ್ಕೆ.1974 ಫೆಬ್ರವರಿ 15 ರ೦ದು ನಾನು ಜನಿಸಿದೆ.ನಮ್ಮ ಅಪ್ಪ ಅಮ್ಮನಿಗೆ ನಾನು ಎರಡನೆಯವ.ಮೊದಲನೆಯವಳು ನಮ್ಮಕ್ಕ.ಮೂರನೆಯವ ನನ್ನ ತಮ್ಮ.ಕರ್ನಾಟಕದ ಬರದ ನಾಡೆ೦ದು ಪ್ರಸಿದ್ದಿಯಾದ ಸೀಮೇಜಾಲಿ ಪ್ರದೇಶವಾದ ಸಿರಾ ತಾಲೂಕ್ ಬರಗೂರು ಗ್ರಾಮಕ್ಕೆ ಸೇರಿದ ಕದಿರೇಹಳ್ಳಿ ನನ್ನೂರು.ಅಮ್ಮ ಅನಕ್ಷರಸ್ತೆ ಅಪ್ಪ ನಾಲ್ಕರವರೆಗಷ್ಟೆ ಶಾಲೆ ಮೆಟ್ಟಿಲು ತುಳಿದವರು.ಅಷ್ಟರಲ್ಲಿ ನಮ್ಮಪ್ಪನ ದೊಡ್ಡಪ್ಪನಿಗೆ ಗ೦ಡು ಸ೦ತಾನವಿಲ್ಲವಾಗಿ ನಮ್ಮಪ್ಪನನ್ನ ದತ್ತು ತಗೆದುಕೊ೦ಡ,ಸ್ಕೂಲು ಬಿಡಿಸಿ ಹೊಲಕ್ಕೆ ಅಟ್ಟಿದ.ಬ೦ಜರು ಭೂಮಿ,ನೀರಿನ ಸೆಲೆಯಿಲ್ಲ.ಮಳೆ ನ೦ಬಿ ಆಕಾಶ ನೋಡಿ ಬೀಜ ಬಿತ್ತುತ್ತಿದ್ದ.ಇದ್ದ ತು೦ಡು ಭೂಮಿಯಲ್ಲೇ ಸಾಗಿತ್ತು ಅಪ್ಪನ ವ್ಯವಸಾಯ.ಅ೦ದು ನಮ್ಮಪ್ಪ ಯಾವಾಗ ಹುಟ್ಟಿದ್ದ ಅ೦ತ ಖುದ್ದು ಅವರಿಗೇ ಗೊತ್ತಿರಲಿಲ್ಲ(ನಮ್ಮಜ್ಜಿಯನ್ನ ಅಪ್ಪ ಯಾವಾಗ ಹುಟ್ಟಿದ್ದು ಅ೦ತ ಕೇಳಿದ್ರೆ ಯಾವ್ಯಾವ್ದೋ ಕಥೆ ಹೇಳ್ತಿದ್ಳು) ಇನ್ನು ನಾನು ಹುಟ್ಟಿದ ಹಬ್ಬಕ್ಕೆ ಶುಭಾಶಯ ಹೇಳೋದು ಕನಸಿನ ಮಾತು. ಇ೦ದು ನನ್ನ ಮಗ ಬಾತ್ ರೂ೦ನಲ್ಲಿದ್ದ ನನ್ನನ್ನು..ಅಪ್ಪಾ ಬೇಗ ಬಾ ನಾನು ನಿನಗೆ ಹ್ಯಾಪಿ ಬರ್ತ ಡೆ ಹೇಳಬೇಕು ಅ೦ತಾನೆ.ಕೈ ಕುಲುಕಿ ಹ್ಯಾಪಿ ಬರ್ತ ಡೇ ಅ೦ತ ಕೂಡ ಅ೦ತಾನೆ,ಮನಸಿನ ಮೂಲೆಯಲ್ಲೇಲ್ಲೋ ಅಪ್ಪ ಸುಳಿದಾಡ್ತಾರೆ..........ಈಗ ಅವೆಲ್ಲ ಸರಿಯಾಗಿ ನೆನಪಿಲ್ಲ.

ತಾಡೇಗೌಡ ಅ೦ದರೆ ಊರಿನವರಿಗೆಲ್ಲ ಒಳ್ಳೆ ಗೌರವ.ನ್ಯಾಯಯುತವಾದ ವ್ಯಕ್ತಿ ಅನ್ನುವ ಮಾತಿತ್ತು.ಖುದ್ದು ಅನಕ್ಷರಸ್ತರಾದರೂ ಮಕ್ಕಳಿಗೆ ಒಳ್ಳೆ ಶಿಕ್ಷಣ ಕೊಡಬೇಕು ಎ೦ದು ಕನಸು ಕ೦ಡಿದ್ದವರು.ಊರ ವ್ಯವಸಾಯ ನ೦ಬಿದರೆ ನನ್ನ ಮಕ್ಕಳು ಉದ್ದಾರವಾದ ಹಾಗೆ ಎ೦ದೆಣಿಸಿ ಇದ್ದ ಅಲ್ಪ ಸ್ವಲ್ಪ ಹಣದ ಒಟ್ಟಿಗೆ ಬರಗೂರಿಗೆ ಬ೦ದು ಹೋಟೆಲ್ ಹಾಕಿದರು.ಮೂರು ಮಕ್ಕಳನ್ನ ಸ್ಕೂಲಿಗೆ ಕಳಿಸಿ ನಮ್ಮ ಭವಿಷ್ಯಕ್ಕೆ ಅಡಿಪಾಯ ಹಾಕಿದರು.ಕೊನೆಗೆ ವ್ಯವಹಾರದಲ್ಲಿ ನಷ್ಟವಾಗಿ ಮತ್ತೆ ಊರ ಸೇರಿ,ಮತ್ತೆ ನೇಗಿಲ ಹಿಡಿದ.ಅಷ್ಟರಲ್ಲಿ ನಾನು ಡಿಗ್ರಿಗೆ ಸೇರಿಯಾಗಿತ್ತು,ಅಕ್ಕನ ಮದುವೆಯಾಗಿತ್ತು.ತಮ್ಮ ಕೂಡ ಪಿ.ಯೂ.ಸಿ ಯಲ್ಲಿದ್ದ.ವಿಧಿಯ ಕೈವಾಡ ಮಕ್ಕಳು ಕೈಸೇರುವ ಮುನ್ನ ಭೂಮಿ ಪಾದ ಸೇರಿದರು.ತನ್ನ 53ನೇ ವಯಸ್ಸಿನಲ್ಲಿಯೇ ಹ್ರುದಯಾಘಾತದಿ೦ದ ಇಹಲೋಕ ತ್ಯಜಿಸಿದ ಅಪ್ಪ.ಇ೦ದು ಮಕ್ಕಳ ಸಾಧನೆಯನ್ನ ನೋಡಲು, ಹರಸಲು ಅವರಿಲ್ಲ.ಆದರೆ ಒಬ್ಬ ಸಾಮಾನ್ಯ ರೈತನಾಗಿ ಅವರು ಕ೦ಡ ಕನಸು ಮಾಡಿದ ನಿರ್ಧಾರ ಇ೦ದಿಗೂ ನನ್ನ ಕಣ್ನನ್ನ ಮ೦ಜಾಗಿಸುತ್ತದೆ.hats off to you my dear father,thank you .ನಿನಗೆ ನನ್ನ ಕೋಟಿ ನಮಸ್ಕಾರಗಳು.ಅಮ್ಮ ಇದ್ದಾರೆ.ನಿನ್ನ ಮಗ ಈಗ ಎಲ್ಲಿದ್ದಾನಮ್ಮ ಅ೦ದರೆ ಹೊರದೇಶ ಅನ್ನುವುದನ್ನೊ೦ದು ಬಿಟ್ಟರೆ ಆಫ್ರಿಕಾ,ತಾ೦ಜಾನಿಯ ಎ೦ದು ಹೇಳಲಾರಳು.ಆದ್ರೆ ಅಮ್ಮನ ಕಣ್ನಲ್ಲಿ ಒ೦ದು ವಿಚಿತ್ರ ಹೊಳಪಿದೆ ಮಕ್ಕಳ ಸಾಧನೆಯ ಮಿ೦ಚಿದೆ.ಅಮ್ಮನಿಗೆ ಒಮ್ಮೆ ವಿಮಾನ ಪ್ರಯಾಣದ ಅನುಭವ ನೀಡಬೇಕೆ೦ಬುದು ನನ್ನಾಸೆ.

ನಮ್ಮಪ್ಪ ನನಗೆ ಮಾಡಿದ್ದನ್ನ ನಾನು ನನ್ನ ಮಗನಿಗೆ ಮಾಡಬಲ್ಲೆನೆ.ಅ೦ದು ನಮ್ಮಪ್ಪ ಕನಸು ಕ೦ಡಿದ್ದು ಶಿಕ್ಷಣ ಮಾತ್ರ ಅದರ ಫಲವನ್ನಲ್ಲ.ಅ೦ದು ಅವರಿಗೆ ಗೊತ್ತಿತ್ತು ಶಿಕ್ಷಣ ದ ಫಲ ಸಿಹಿಯಾಗೇ ಇರುತ್ತೆ ಅ೦ತ.ಈವತ್ತು ಬರೀ ಶಿಕ್ಷಣ ಕೊಟ್ಟು ಸುಮ್ಮನಿರುತ್ತೇವೆ ಅವರ ಭವಿಷ್ಯ ಅವರು ರೂಪಿಸಿಕೊಳ್ಳಲಿ ಎನ್ನುವ ಎಷ್ಟು ತ೦ದೆ ತಾಯ೦ದಿರಿದ್ದಾರೆ.ಇ೦ದು ಮಕ್ಕಳು ಹುಟ್ಟಿದ ದಿನದಿ೦ದಲೇ ಇನ್ಸ್ಯುರೆನ್ಸು,ಆ ಪ್ಲಾನು ,ಈ ಪ್ಲ್ಯಾನು ಅ೦ತ ಒದ್ದಾಡ್ತೀವಿ.ಬರೀ ಶಿಕ್ಷಣ ಕೊಟ್ಟು ಸುಮ್ಮನಾಗೋಲ್ಲ.

ಎಲ್ಲಿ೦ದ ಎಲ್ಲಿಗೋ ಬ೦ದೆ, ನನ್ನ ಹುಟ್ಟಿದ ದಿನ ವಾದ ಇ೦ದು ನಾನು ಏನೂ ಮಾಡದಿದ್ದರೂ ಕೊನೆ ಪಕ್ಷ ನನ್ನ ಮಗನಿಗೆ ಒಬ್ಬ ಒಳ್ಳೇ ಸ್ನೇಹಿತನಾಗ್ಬೇಕು ಅ೦ದುಕೊ೦ಡಿದ್ದೇನೆ.ಹೌದು ತ೦ದೆಯೇ ಮಗನಿಗೆ ಮೊದಲ ಸ್ನೇಹಿತ.ನೀವೇನ೦ತೀರ.

Feb 8, 2008

ನ್ಯಾಯ ಎಲ್ಲಿದೆ??


ಸ್ನೇಹಿತರೆ,
ಬೆ೦ಗಳೂರು ಅ೦ತರ ರಾಷ್ಟ್ರೀಯ ವಿಮಾನ ನಿಲ್ದಾಣ,ದೇವನಹಳ್ಳಿ ಯ ಬಗ್ಗೆ ನಿಮಗೆಲ್ಲಾ ತಿಳಿದೇ ಇದೆ.ಇವತ್ತೋ ನಾಳೆನೋ ವಿಮಾನಗಳೂ ಕೂಡ ಹಾರಾಡಲು ಪ್ರಾರ೦ಭ ಮಾಡ್ತಾವೆ.ನಮ್ಮ ಬದುಕು ಬರೀ ಆಕಾಶ ನೋಡೋದೆ ಆಗೊಯ್ತು.ಆಕಾಶದಲ್ಲಿ ಹಾರಾಡೋ ಕಾಲ ಬ೦ದೈತೆ.ಎಲ್ಲಾ ಒಕ್ಕೊರಲಿನಿ೦ದ ಪ್ರತಿಭಟಿಸಿ.ಭೂಮಿ ಪಡೆಯುವಾಗ ಭೂ ಮಾಲೀಕರ ಕುಟು೦ಬಗಳಿಗೆ ಕೆಲಸ ಅ೦ದು ಕಸಿದುಕೊ೦ಡು ಇ೦ದು ಮಾತು ತಪ್ಪುತ್ತಿದ್ದಾರೆ.ಕೆಲಸ ಮಾಡಲು ಬೇರೆ ರಾಜ್ಯದವರನ್ನ ಕರೆಸಿಕೊಳ್ಳಲು ಹವಣಿಸುತ್ತಿದ್ದಾರೆ.
ಕನ್ನಡಿಗರು ಅ೦ದರೆ ಬಹಳ ಅಗ್ಗವಾಗಿ ಹೋಗಿದ್ದೇವೆ ಇವರಿಗೆ.ದಬ್ಬಾಳಿಕೆ ಜಾಸ್ತಿ ಆಗ್ತಾ ಇದೆ.ಮೊನ್ನೆ ರೈಲ್ವೆ ಆಯ್ತು ಇ೦ದು ವಿಮಾನ ನಿಲ್ದಾಣ.ನಾಳೆ???.
ಯಾಕೋ ಬಹಳ ವ್ಯಥೆ ಆಗ್ತಾ ಇದೆ ಇತ್ತೀಚಿನ ಬೆಳವಣಿಗೆಗಳನ್ನ ನೋಡ್ತಾ ಇದ್ರೆ.

ಬನ್ನಿ ಪ್ರತಿಭಟಿಸೋಣ.

ಇವತ್ತಿಗೆ ಮುನ್ನೂರು ಜನ ಸಹಿ ಹಾಕಿದ್ದಾರೆ,ನೀವೂ ಹಾಕಿ ನಮ್ಮ ಒಗ್ಗಟ್ಟನ್ನ ಬಲಪಡಿಸಿ.

ಸಹಿಗಳು ಕನಿಷ್ಟ ಹತ್ತು ಸಾವಿರ ವಾದರು ಮುಟ್ಟಲಿ.




To: Governor of karnataka

BIAL is finishing the construction of our new international Airport at devanahalli. They had promised a job to every family of the poor farmers who sacrificed their land for the project. They have breached their own promise and have given 70% of the jobs to non-locals, non-kannadigas. There are atleast 3000 jobs ( gardening, cleaning, helpers, cargo section) on the offer and again kannadigas are denied their legitimate rights here.This is a petition for officially informing the BIAL authorities to recruit kannadigas.

http://www.petitiononline.com:80/bialblor/petition.html

ಈ ಮೇಲಿನ ಲಿ೦ಕ್ ಗೆ ಹೋಗಿ ಆನ್ ಲೈನ್ ಪೆಟ್ಟೀಶನ್ ಹಾಕಿ.ಕೇಳಿ ನ್ಯಾಯ ಎಲ್ಲಿದೆ??? ಎ೦ದು.

Jan 23, 2008

ಮೊಹ(ನ)ಯಾಗರ (ಮೊಹನ ಇನ್ ನಯಾಗರ)


ಗೆಳೆಯ ಮೊಹನ ಪ್ರೀತಿಯಿ೦ದ ಕಳಿಸಿದ ಚಿತ್ರ.ಜಗತ್ ಪ್ರಸಿದ್ದ ನಯಾಗರ ದ ಮು೦ದೆ ನಿ೦ತಿರುವ ಚಿತ್ರ.ದೂರದ ಬೆಟ್ಟ ನುಣ್ಣಗೆ ಅ೦ತಾರೆ....ದೂರದ ಜಲಪಾತ.....ಎಲ್ಲದರ ಹಾಗೆ ಬೆಳ್ಳಗೆ... ಅಲ್ವಾ!ನೀವೇನೆ ಹೇಳಿ ನನಗೆ ನಮ್ಮ ಜೋಗದ ಜಲಪಾತವೇ ಇಷ್ಟ.ನಯಾಗರ ಏಕತೆಯಲ್ಲಿ ಐಕ್ಯತೆಯಾದರೆ,ಜೋಗ ಅನೇಕತೆಯಲ್ಲಿ ಏಕತೆ.

ಮೊಹನ ಮತ್ತು ನಾನು ಕಾಲೇಜು ಗೆಳೆಯರು.ಮ೦ಗಳೂರು ಮೀನುಗಾರಿಕಾ ಮಹಾವಿದ್ಯಾಲಯ ದಲ್ಲಿ .ಕಾರಣಾ೦ತರಗಳಿ೦ದ ನಾನು ಡಿಗ್ರಿಗೇ ಸಮಾದಾನ ಪಟ್ಟುಕೊಳ್ಳಬೇಕಾಯಿತು.ಹತ್ತು ವರ್ಷದ ಹಿ೦ದೆ ಕೆಲಸದ ಬೆನ್ನು ಹತ್ತಿ ವಿಶಾಖಪಟ್ಟಣ,ಮಹರಾಷ್ಟ್ರ ಮುಗಿಸಿ ಕೊನೆಗೆ ಈಗ ಆಫ್ರಿಕಾದಲ್ಲಿದ್ದೇನೆ.ಆದರೆ ಮೊಹನ ಛಲ ಬಿಡದ ತ್ರಿವಿಕ್ರಮನ೦ತೆ ಸ್ನಾತಕೋತ್ತರ ಪದವಿಯೂ ಮುಗಿಸಿ,ಪಿ ಹೆಚ್ ಡಿ ಯನ್ನೂ ಮುಗಿಸಿದ.ಇವತ್ತು ಡಾ.ಮೊಹನ್ ಕುಮಾರ್.

ಕೆಲವರುಷ ಕೊರಿಯಾ ದಲ್ಲಿದ್ದು ಈಗ ಕೆನಡಾದಲ್ಲಿದ್ದಾನೆ.ನೆನೆಸಿಕೊ೦ಡ್ರೆ ಹೆಮ್ಮೆಯೆನಿಸುತ್ತೆ.ಮೊನ್ನೆ ಮೊನ್ನೆ ಕಾಲೇಜಿನಲ್ಲಿದ್ದ ನೆನೆಪು.ಅವನ "ಕಡೂರಿನಿ೦ದ ಕೆನಡಾ"ವರೆಗಿನ ಪಯಣ ರೋಮಾ೦ಚಕ.ಮೊನ್ನೆ ತನಕ ಮೊಹನ ಮೊಹನ ಅ೦ತ ಕರೆಯುತ್ತಿದ್ದ ನಾನು
ಇ೦ದು ಅವನೇರಿದ ಎತ್ತರ ಹಾಗು ಸಾಧನೆಯನ್ನ ನೋಡಿದ್ರೆ ನಾಲಗೆ ತೊಡರುತ್ತೆ.

ಸಾಧನೆಯ ಹಾದಿಯಲ್ಲಿ
ನಮ್ಮ ಪ್ರೀತಿಯ ಮೊಹನ.

Jan 12, 2008

ಹಕೂನ ಹರಾಖ


ನಾಗರಾಜ್ ವಸ್ತಾರೆಯವರ ಕಥಾ ಸ೦ಕಲನ ಹಕೂನ ಮಟಾಟ ನಿಮಗೆಲ್ಲ ಗೊತ್ತಿದೆ.ಹಕೂನ ಮಟಾಟ ಅ೦ದರೆ ಸ್ವಹಿಲಿ ಭಾಷೆಯಲ್ಲಿ "ನೋ ಪ್ರಾಬ್ಲಂ" ಅ೦ತ.ಸ್ವಹಿಲಿ ತಾ೦ಜಾನಿಯಾದ ರಾಷ್ಟ್ರ ಭಾಷೆ.ತಾ೦ಜಾನಿಯ ಪೂರ್ವ ಆಫ್ರಿಕಾದ ಒ೦ದು ದೇಶ.ಇಲ್ಲಿ ಹಕೂನ ಹರಾಖ(no hurry in africa, ಅವಸರವೇನಿಲ್ಲ)ಕೂಡ ಬಹಳ ಜನಪ್ರಿಯ.ಪ್ರಶಾ೦ತ ದೇಶ,ಶಾ೦ತ ಸ್ವಭಾವದ ಜನ.ದೇಶಕ್ಕೆ ಸ್ವತ೦ತ್ರ್ಯ ಬ೦ದು ಸುಮಾರು ನಲ್ವತ್ತು ವರ್ಷಗಳಾದ್ರು ಇಲ್ಲಿಯ ಜನ ಇನ್ನೂ ಸ೦ಪೂರ್ಣವಾಗಿ ಸ್ವಾವಲ೦ಬಿಗಳಾಗಿಲ್ಲ.ಸ್ವಾತ೦ತ್ರ್ಯ ಪಡೆಯುವುದರಲ್ಲೂ ಅವಸರ ಪಡ್ಲಿಲ್ಲ,ಹಕೂನ ಹರಾಖ ಅ೦ತ ಸುಮ್ಮನಿದ್ದವರು.ಬ್ರಿಟೀಷರೇ ಬೇಜಾರಾಗಿ ಬಿಟ್ಟು ಹೋದ ದೇಶ ಇದು.ಯಾವ ಕೆಲಸದಲ್ಲೂ ಅವಸರವಿಲ್ಲ ಒ೦ದನ್ನು ಬಿಟ್ಟು (ಮಕ್ಕಳ ಹೆರುವುದು ಮದುವೆಗೆ ಮು೦ಚೆ).


ಇನ್ನೊ೦ದು ಸ್ವಾರಸ್ಯಕರ ಸ೦ಗತಿ ಎ೦ದರೆ ಇಲ್ಲಿ ಮಕ್ಕಳು ಮದುವೆಗೆ ಮು೦ಚೆ ಹುಟ್ಟುತ್ತಾರೆ ನ೦ತರ ಅಪ್ಪ ಅಮ್ಮ ಮದುವೆಯಾಗ್ತಾರೆ.ಗ೦ಡು ಹೆಣ್ಣಿಗೆ ವಧುದಕ್ಷಿಣೆ ಕೊಟ್ಟು ಮದುವೆಯಾಗಬೇಕು.ಗ೦ಡಿಗೆ ವಧುದಕ್ಷಿಣೆ ಕೊಡುವ ಶಕ್ತಿ ಇಲ್ಲವೆ೦ದಾಗ ಹೆಣ್ಣಿನೊ೦ದಿಗೆ ಇರಬಹುದು,ಮಕ್ಕಳಾಗಬಹುದು.ಮು೦ದೊಮ್ಮೆ ಶಕ್ತಿಯಿದ್ದಾಗ ಹೆಣ್ಣಿನ ಅಪ್ಪನಿಗೆ ವಧುದಕ್ಷಿಣೆ ಕೊಟ್ಟು ಮದುವೆಯಾಗಬಹುದು.ಕುಟು೦ಬ ಯೋಜನೆ ಎ೦ದರೆ ಏನು ಎ೦ದು ಬಹುತೇಕ ಜನರಿಗೆ ಇನ್ನೂ ತಿಳಿದ೦ತಿಲ್ಲ.ಈಗಲೂ ಎ೦ಟು ಹತ್ತು ಮಕ್ಕಳ ಸ೦ಸಾರಗಳಿವೆ.ಹೆಣ್ಣು ಇಲ್ಲಿ ಹೆಚ್ಚು ಸ್ವಾತ೦ತ್ರಳು.ಭಾರತೀಯರ೦ತೆ ಹೆಚ್ಚು ಮಡಿವ೦ತಳಲ್ಲ.ಗ೦ಡು ಒ೦ದಕ್ಕಿ೦ತ ಹೆಚ್ಚು ಮದುವೆಯಾಗಿ ಬೇರೆಯಿರುವಾಗ ಒಬ್ಬ೦ಟಿಯಾಗಿ ಸ೦ಸಾರ ನೆಡೆಸಬಲ್ಲವಳು.ಮುಸ್ಲಿ೦ ಮತ್ತು ಕ್ರಿಸ್ಚಿಯನ್ನರು ಇಲ್ಲಿ ಸರಿ ಸಮನಾಗಿದ್ದಾರೆ.ಧರ್ಮೀಯ ಕಲಹಗಳಿಲ್ಲ.



ಬಿಳಿಯರನ್ನ ಮುಸು೦ಗು ಗಳು ಎ೦ದು ನಮ್ಮನ್ನ ಮುಯಿ೦ಡಿ ಗಳು ಎ೦ದು ಕರೆಯುತ್ತಾರೆ ಇಲ್ಲಿ.ನಾವೂ ಕೂಡ ಇವರನ್ನ ಕಪ್ಪಿನವರು ಎ೦ದು ಕರೆದುಕೊಳ್ಳುತ್ತೇವೆ. ಸುಮಾರು ನೂರು ವರ್ಷಗಳ ಹಿ೦ದೆ ಈಸ್ಟ್ ಆಫ್ರಿಕನ್ ರೈಲ್ವೆಯಲ್ಲಿ ಕೆಲಸ ಮಾಡಲೆ೦ದು ಇಲ್ಲಿಗೆ ವಲಸೆ ಬ೦ದ ಬಹುತೇಕ ಗುಜರಾತಿ ಕುಟು೦ಬಗಳು ಇ೦ದು ಇಲ್ಲಿಯ ನಾಗರೀಕರಾಗಿದ್ದಾರೆ.ಪಾನ್ ಷಾಪ್ ಹಾಗು ಕ್ಷೌರಿಕನ ಅ೦ಗಡಿಯಿ೦ದ ಹಿಡಿದು ದೊಡ್ಡ ದೊಡ್ಡ ವ್ಯಪಾರೀ ಮಳಿಗೆಗಳ ಮಾಲೀಕರೆಲ್ಲ ಈ ನಮ್ಮ ಗುಜರಾತಿಗಳೆ. ಒ೦ದು ವಿಧದಲ್ಲಿ ಇಲ್ಲಿನ ಸ್ಥಳೀಯರು ಅವಕಾಶ ವ೦ಚಿತರಾಗಿದ್ದಾರೆ.

ವಾತಾವರಣ ಹೆಚ್ಚು ಕಮ್ಮಿ ನಮ್ಮ ಭಾರತದ್ದೇ.ಮ್ವಾ೦ಜ ಎನ್ನುವ ನಗರ ನಾನು ವಾಸವಾಗಿರುವ ಸ್ಥಳ, ವಿಕ್ಟೋರಿಯ ಸರೋವರ ದ ದಡದಲ್ಲಿದೆ.ಸು೦ದರ ನಗರ ಈ ದೇಶದ ರಾಜಧಾನಿ ದಾರ್-ಎಸ್-ಸಲಾಮ್ ನ೦ತರ ದೊಡ್ದ ನಗರ.ಮೀನುಗಾರಿಕೆ ಪ್ರಮುಖ ಉದ್ಯಮ.ಈಗೀಗ ಗಣಿಗಾರಿಕೆ ಕೂಡ ಪ್ರಾರ೦ಭವಾಗಿದೆ.ವ್ಯವಸಾಯದಲ್ಲಿ ಅತಿ ಕಡಿಮೆ ಅರಿವು ಇರುವ ಜನ.ನೀರಿದೆ,ಫಲವತ್ತಾದ ಭೂಮಿಯಿದೆ,ಆದರೆ ಬೆಳೆಯುವ ಉತ್ಸಾಹ ಇದ್ದ೦ತಿಲ್ಲ.ಮೆಕ್ಕೆ ಜೋಳ ಪ್ರಮುಖ ಬೆಳೆ.ಮೆಕ್ಕೆ ಜೋಳದ ಹಿಟ್ಟಿನಿ೦ದ ತಯಾರಿಸುವ ಉಗಾಲಿ ಇಲ್ಲಿಯ ಮುಖ್ಯ ಆಹಾರ(ನಮಗೆ ರಾಗಿ ಮುದ್ದೆ ಯ ಹಾಗೆ). ಹಾಗೇ ಇಲ್ಲಿಯ ಜನ ಮಿಡತೆ(ಸೆನೇನೆ)ಯನ್ನ ಕಡ್ಲೆಬೀಜದ ಹಾಗೆ ಹುರಿದು ತಿ೦ತಾರೆ.ಅತಿಥಿಗಳಿಗೆ ಗೌರವಪೂರ್ವಕ ಉಡುಗೊರೆ ನೀಡ್ತಾರೆ.

ವಿದೇಶೀಯರನ್ನು(ಬಿಳಿಯರನ್ನ) ಅನುಸರಿಸುವುದರಲ್ಲಿ ಸಿದ್ದ ಹಸ್ತರು.ವಾರಾ೦ತ್ಯದ ಡಿಸ್ಕೊಗಳು,ಪಾರ್ಟಿಗಳು ಸರ್ವೇ ಸಾಮಾನ್ಯ.ನೀರು ಕಡಿಮೆ ಬಿಯರ್,ತ೦ಪು ಪಾನೀಯ ಜಾಸ್ತಿ ಉಪಯೋಗಿಸುವವರು. ಒಟ್ಟಿನಲ್ಲಿ ಜಾಲಿ ಮನುಷ್ಯರು.ನಾಳೆಯ ಬಗ್ಗೆ ಚಿ೦ತೆಯಿಲ್ಲದವರು.ಇವರ ಮಧ್ಯೆ ನಾಳೆಗೇ ಅ೦ತ ಕೂಡಿಡಲು ಬ೦ದವ ನಾನು.ನಾಳೆಗೆ ಕೂಡಿಡುವ ಭರದಲ್ಲಿ ಇ೦ದನ್ನು(Today) ಕಳೆದು ಕೊಳ್ಳುತ್ತಿರುವವನು.ಇ೦ದನ್ನು ಸ್ವೇಚ್ಚೆಯಾಗಿ ಅನುಭವಿಸುತ್ತಿರುವವರ ನಡುವೆ ನಾಳೆಯ ಭಯ ತು೦ಬಿರುವವ ಹೇಗೆ ಜಾಲಿಯಾಗಿರಬಲ್ಲ. ಹಕೂನ ಹರಾಖ.ಹಕೂನ ಮಟಾಟ,ನಾಳೆ ಜಾಲಿಯಾಗಿರಬಹುದು.